ಅಧ್ಯಾತ್ಮ ರಾಮಾಯಣ-26: ಸಮುದ್ರ ಸೇತುಬಂಧ; ರಾಮ-ರಾವಣರ ಯುದ್ಧಕ್ಕೆ ನಾಂದಿ

Upayuktha
0

ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ 




ಚಿತ್ರಗಳು: ನೀರ್ನಳ್ಳಿ ಗಣಪತಿ; ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ


ಸೇತುವೆಯನ್ನು ಕಟ್ಟಲಾರಂಭಿಸಿದಾಗ ಶ್ರೀರಾಮನು ಲೋಕಕಲ್ಯಾಣಕ್ಕಾಗಿ ರಾಮೇಶ್ವರ ಹೆಸರಿನಿಂದ ಶಿವನನ್ನು ಪ್ರತಿಷ್ಠಾಪಿಸಿದನು. "ಶ್ರೀರಾಮೇಶ್ವರನ ದರ್ಶನವನ್ನು ಮಾಡಿ ಸೇತುಬಂಧಕ್ಕೆ ನಮಸ್ಕರಿಸುವವನು ನನ್ನ ಅನುಗ್ರಹದಿಂದ ಬ್ರಹ್ಮಹತ್ಯಾದಿ ದೋಷಗಳಿಂದ ಮುಕ್ತನಾಗುವನು. ಸೇತುಬಂಧ ತೀರ್ಥದಲ್ಲಿ ಸ್ನಾನಮಾಡಿ ಪಾಪಹರನಾದ ರಾಮೇಶ್ವರನನ್ನು ಕಂಡು ಅನಂತರ ಸಂಕಲ್ಪಮಾಡಿ, ವಾರಾಣಸೀ ಕ್ಷೇತ್ರಕ್ಕೆ ಹೋಗಿ, ಅಲ್ಲಿಂದ ಗಂಗಾಜಲವನ್ನು ತಂದು ರಾಮೇಶ್ವರನಿಗೆ ಅಭಿಷೇಕ ಮಾಡಿದ ಮನುಷ್ಯರು ಎಲ್ಲ ಪಾಪಗಳ ಭಾರದಿಂದ ಮುಕ್ತರಾಗಿ ಬ್ರಹ್ಮವನ್ನು ಪಡೆಯುವರು" ಎಂದು ರಾಮೇಶ್ವರದ ಮಹತ್ತ್ವವನ್ನು ರಾಮನು ಹೇಳಿದ. 

 

ನಲನು ಸಮುದ್ರಸೇತುವೆಯನ್ನು ಮೊದಲ ದಿನ- 14 ಯೋಜನ, ಎರಡನೆಯ ದಿನ- 20 ಯೋಜನ, ಮೂರನೆಯ ದಿನ- 21 ಯೋಜನ, ನಾಲ್ಕನೆಯ ದಿನ- 22 ಯೋಜನ ಮತ್ತು 5ನೆಯ ದಿನ- 23 ಯೋಜನ- ಹೀಗೆ ಕೇವಲ ಐದು ದಿನಗಳಲ್ಲಿ ಒಂದುನೂರು ಯೋಜನಗಳ ಉದ್ದದ ಸೇತುವೆಯನ್ನು ರಚಿಸಿದನು. ಯುದ್ಧಕ್ಕೆ ಬಂದ ಅಸಂಖ್ಯಾತ ಕಪಿಗಳು ಅದನ್ನು ದಾಟಿ ಸುವೇಲಪರ್ವತವನ್ನು ಮುತ್ತಿದರು. ರಾಮ- ಲಕ್ಷ್ಮಣರು ಲಂಕೆಯನ್ನು ನೋಡುವಾಸೆಯಿಂದ ಹನುಮ- ಅಂಗದರ ಹೆಗಲೇರಿ ಪರ್ವತದ ತುದಿಗೆ ಹೋದರು. ವಿಸ್ತಾರವಾದ ಲಂಕೆಯನ್ನೂ, ಅಲ್ಲಿ ವಿರಾಜಮಾನನಾಗಿರುವ ರಾವಣನನ್ನೂ, ಅವನಿಗೆ ರಾಮನ ಸೇನಾಬಲದ ಮಾಹಿತಿಯನ್ನು ನೀಡುತ್ತಿರುವ ಶುಕನನ್ನೂ ನೋಡಿದರು.


ಶುಕನು ರಾವಣನಿಗೆ ತನಗಾದ ಅನುಭವವನ್ನು ಪೂರ್ಣವಾಗಿ ಹೇಳಿದ. "ರಾಮನ ಬಲವು ರಾಕ್ಷಸ- ದೇವತೆಗಳ ಸೇನಾಬಲಗಳಿಗಿಂತ ಭಿನ್ನ ಹಾಗೂ ಬಲಿಷ್ಠವಾದುದಾಗಿದೆ. ಅದಾಗಲೇ ಲಂಕೆಯೊಳಗೆ ನುಗ್ಗಲು ಸಿದ್ಧರಾಗಿದ್ದಾರೆ. ರಾಮನು ನನ್ನಲ್ಲಿ ನಿನಗೆ- ನಾಳೆ ಬೆಳಗಿನ ವೇಳೆಯಲ್ಲಿ ನಾವು ಲಂಕೆಗೆ ನುಗ್ಗಿ ನಿನ್ನನ್ನೂ ನಿನ್ನ ಸೇನೆಯನ್ನೂ ಸದೆಬಡಿಯಲಿದ್ದೇವೆ. ನೀನೂ ಯುದ್ಧಕ್ಕೆ ಸಿದ್ಧನಾಗು- ಎಂದು ತಿಳಿಸಲು ಹೇಳಿದ್ದಾನೆ. ರಾಮನಿಗೆ ಸೀತೆಯನ್ನೊಪ್ಪಿಸು ಇಲ್ಲವೇ ಅವನೊಂದಿಗೆ ಯುದ್ಧಕ್ಕೆ ಸಿದ್ಧನಾಗು" ಎಂದು ಶುಕನು ರಾವಣನಿಗೆ ಹೇಳಿದ. ಬಳಿಕ ರಾಮನ ಸೇನೆಯ ಪ್ರಮುಖ ವೀರರನ್ನು ಅವರ ಸಾಮರ್ಥ್ಯವನ್ನು ರಾವಣನಿಗೆ ಪರಿಚಯಿಸಿದ ಶುಕನು ರಾಮನಿಗೆ ಸೀತೆಯನ್ನೊಪ್ಪಿಸಿ ಲಂಕೆಯನ್ನುಳಿಸುವ ಸಲಹೆಯನ್ನಿತ್ತ. ರಾವಣನಿಗೆ ಶುಕನ ಮೇಲೆ ಅವನನ್ನು ಕೊಂದುಹಾಕುವಷ್ಟು ಕೋಪಬಂತು. ಆದರೆ ಅವನನ್ನು ಕೊಲ್ಲದೆ ಅಟ್ಟಿದನು.



ಶುಕನು ಹೊರಟು ಹೋದ ಮೇಲೆ ರಾವಣನ ಅಜ್ಜ (ತಾಯಿಯ ತಂದೆ) ಮಾಲ್ಯವಂತನು ರಾವಣನ ಸಮೀಪಕ್ಕೆ ಬಂದು ರಾಮನ ಅವತಾರ, ಅವನ ಶಕ್ತಿ- ಸಾಮರ್ಥ್ಯಗಳ ಬಗೆಗೆ ಹೇಳುತ್ತ ಸೀತೆಯನ್ನೊಪ್ಪಿಸಿ ಶರಣಾಗಲು ಹೇಳಿದ. ವಿನಾಶದತ್ತ ಸಾಗುತ್ತಿರುವ ರಾವಣನಿಗೆ ಮಾಲ್ಯವಂತನ ಮಾತುಗಳಿಂದಲೂ ಸಿಟ್ಟು ಬಂತು. ಮಾಲ್ಯವಂತನ ಹಿರಿತನದ ಮಾತುಗಳಿಗೆ ಬೆಲೆಕೊಡದೆ ಬಯ್ದು ಅಟ್ಟಿದನು. ಬಳಿಕ ಅರಮನೆಯ ಉಪ್ಪರಿಗೆಯನ್ನೇರಿ ರಾಮನನ್ನೂ ಅವನ ವಾನರ ಸೇನೆಯನ್ನೂ ನೋಡಿದನು. ರಾವಣನನ್ನು ಕಂಡದ್ದೇ ತಡ, ರಾಮನ ಸಿಟ್ಟು ನೆತ್ತಿಗೇರಿತು! ತನ್ನ ಬಿಲ್ಲಿಗೆ  ಒಂದೇ ಒಂದು ಬಾಣವನ್ನು ಹೂಡಿ ರಾವಣನ ಹತ್ತು ಕಿರೀಟಗಳನ್ನೂ ಕತ್ತರಿಸಿ ಹಾಕಿದನು! ನಾಚಿಗೊಂಡ ರಾವಣನು ಅರಮನೆಯೊಳಕ್ಕೆ ಹೋದನು.


ರಾವಣನು ತನ್ನ ಸೇನಾನಾಯಕರಿಗೆ ಯುದ್ಧಮಾಡಲು ಪ್ರೇರೇಪಿಸಿದನು. ಆದರೆ ಅದಕ್ಕಿಂತ ಮೊದಲೇ ವಾನರವೀರರು ಕೈಗೆ ಸಿಕ್ಕಿದ, ತಮಗೆ ಎಸೆಯಲು ಸಾಧ್ಯವಾಗುವ ಬಂಡೆ- ಪರ್ವತಶಿಖರಗಳನ್ನು ಹಿಡಿದುಕೊಂಡು ಲಂಕೆಯ ಕೋಟೆಯನ್ನು ಮುತ್ತಿ, ಬಾಗಿಲುಗಳ ಹೊರಗಡೆ ನಿಂತಿದ್ದರು. ರಾಕ್ಷಸರು ತಮ್ಮ ತಮ್ಮ ಆಯುಧಗಳೊಂದಿಗೆ ವಾನರರ ಮೇಲೆ ಆಕ್ರಮಣಮಾಡಲು ಹೊರಬರುತ್ತಿದ್ದಂತೆಯೇ ಅವರ ಮೇಲೆ ದಾಳಿಮಾಡಿ ಕೊಲ್ಲತೊಡಗಿದರು. ಎಚ್ಚೆತ್ತ ರಾಕ್ಷಸರು ಪ್ರತಿದಾಳಿ ಮಾಡಿ ವಾನರರನ್ನು ಸಂಹರಿಸತೊಡಗಿದರು. ಆ ಯುದ್ಧದಿಂದ ರಾಕ್ಷಸರ ಕಡೆಯಲ್ಲಿ ಹೆಚ್ಚಿನ ನಾಶವುಂಟಾಯಿತು. ರಾವಣನ ಒಟ್ಟುಬಲದ ಮುಕ್ಕಾಲು ಭಾಗ ರಕ್ಕಸರು ಅದಾಗಲೇ ಯಮಲೋಕವನ್ನು ಸೇರಿದ್ದರು. 


ತನ್ನವರು ಸಾಯುವುದನ್ನು ಕಂಡು ಕೋಪಗೊಂಡ ಇಂದ್ರಜಿತುವು ಮಾಯಾಯುದ್ಧಕ್ಕೆ ಮೊರೆಹೊಕ್ಕನು. ಆಗಸದಲ್ಲಿ ಯಾರ ಕಣ್ಣಿಗೂ ಕಾಣದಂತೆ ನಿಂತು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ವಾನರರ ಸಂಹಾರ ಕಾರ್ಯವನ್ನು ಮಾಡತೊಡಗಿದನು. ಬ್ರಹ್ಮಾಸ್ತ್ರಕ್ಕೆ ಗೌರವ ಕೊಡುವ ದೃಷ್ಟಿಯಿಂದ ಸ್ವಲ್ಪ ಹೊತ್ತು ಸುಮ್ಮನಿದ್ದ ರಾಮನು ಲಕ್ಷ್ಮಣನಲ್ಲಿ-" ಲಕ್ಷ್ಮಣಾ! ಧನುಸ್ಸನ್ನು ಕೊಡು. ಕ್ಷಣಮಾತ್ರದಲ್ಲಿ ಬ್ರಹ್ಮಾಸ್ತ್ರದಿಂದ ಈ ರಕ್ಕಸನನ್ನು ಸುಟ್ಟು ಬೂದಿಮಾಡುತ್ತೇನೆ" ಎಂದನು. ರಾಮನ ಮಾತುಗಳನ್ನು ಕೇಳಿದ ಇಂದ್ರಜಿತುವು ಯುದ್ಧವನ್ನು ನಿಲ್ಲಿಸಿ ತನ್ನ ನಗರಕ್ಕೆ ಹೋದನು.


ಇತ್ತ ರಾಮನು ಹನುಮನಲ್ಲಿ- "ಮಾರುತಿ! ನೀನು ಕೂಡಲೇ ಕ್ಷೀರಸಾಗರಕ್ಕೆ ಹೋಗಿ ಅಲ್ಲಿಂದ ಸರ್ವದಿವ್ಯೌಷಧಗಳಿರುವ ದ್ರೋಣಪರ್ವತವನ್ನು ಹೊತ್ತು ತಾ. ಸತ್ತಿರುವ ಕಪಿವೀರರನ್ನು ಬದುಕಿಸು, ಗಾಯಗೊಂಡಿರುವವರನ್ನು ಗುಣಪಡಿಸು. ಇದರಿಂದ ನಿನ್ನ ಕೀರ್ತಿಯು ಶಾಶ್ವತವಾಗಿ ಉಳಿಯುವುದು"- ಎಂದನು.


ಮುಂದುವರಿಯುವುದು....

- ವಿಶ್ವೇಶ್ವರ ಭಟ್ಟ ಉಂಡೆಮನೆ, ಬೆಳ್ತಂಗಡಿ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top