ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ
ಚಿತ್ರಗಳು: ನೀರ್ನಳ್ಳಿ ಗಣಪತಿ; ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ
ಯುದ್ಧಕಾಂಡ
"ಭೃತ್ಯಕಾರ್ಯಂ ಹನುಮತಾ ಕೃತಂ ಸರ್ವಮಶೇಷತಃ।
ಸುಗ್ರೀವಸ್ಯೇದೃಶೋ ಲೋಕೇ ನ ಭೂತೋ ನ ಭವಿಷ್ಯತಿ॥
ಸುಗ್ರೀವನ ಸೇವಕನಾದ ಹನುಮಂತನು ಸೇವಾಧರ್ಮವನ್ನು ಚೆನ್ನಾಗಿ ನಿರ್ವಹಿಸಿರುವನು. ಇಂತಹ ಸೇವಕನು ಭೂಮಿಯಲ್ಲಿ- ನ ಭೂತೋ ನ ಭವಿಷ್ಯತಿ- ಹಿಂದೆ ಇರಲಿಲ್ಲ, ಮುಂದೆ ಇರುವುದಿಲ್ಲ!"- ಇದು ಹನುಮಸಾಹಸದ ಕುರಿತಿರುವ ರಾಮನ ಹರ್ಷೋದ್ಗಾರ! ಹನುಮನಿಗೆ ಇನ್ನೇನು ಬೇಕು?
ಸಾಗರದ ಮಧ್ಯೆ ಇರುವ, ಈ ಭೂಮಿಯಿಂದ ನೂರುಯೋಜನ ದೂರದಲ್ಲಿರುವ ಲಂಕೆಯನ್ನು ಸೇರುವ ಬಗೆ ಹೇಗೆ?- ಎನ್ನುವ ಚಿಂತೆ ರಾಮನಿಗೆ ಬಂತು. ಸುಗ್ರೀವನಲ್ಲಿ ಇದನ್ನು ಹೇಳಿದಾಗ ಅವನು "ಪ್ರಭು, ನೀನು ನಿಶ್ಚಿಂತೆಯಿಂದ ಇರು. ನಮ್ಮ ಈ ಕಪಿವೀರರು ಸಮುದ್ರವನ್ನು ಹಾರಿ ದಾಟಿ, ರಕ್ಕಸರನ್ನು ಕೊಂದು ಬರುವಷ್ಟು ಸಾಮರ್ಥ್ಯವನ್ನು ಹೊಂದಿದ್ದಾರೆ. ನಾನು ಕಂಡ ಶುಭಶಕುನಗಳಂತೆ ನಮಗೆ ಜಯ ನಿಶ್ಚಿತ. ನಮ್ಮ ಸೇನೆಯು ಹೊರಡಲು ಅಪ್ಪಣೆ ಮಾಡು" ಎಂದು ರಾಮನಿಗೆ ಹೇಳಿದ. ರಾಮನು ಹನುಮನಲ್ಲಿ ಲಂಕೆಯ ಸುರಕ್ಷಾಚಿತ್ರಣವನ್ನು ನೀಡಲು ಹೇಳಿದ. ಹನುಮನು ಲಂಕೆಯ ನಾಲ್ಕು ಮಹಾದ್ವಾರಗಳಲ್ಲಿರುವ ರಕ್ಷಣಾವ್ಯವಸ್ಥೆಯನ್ನು ವಿವರಿಸಿದ. ಲಂಕೆಯ ಕೋಟೆಯ ಮೇಲಿರುವ ಎಲ್ಲ ಶಕ್ತಿಯುತವಾದ ಶತಘ್ನಿಗಳನ್ನು ಸಂಪೂರ್ಣವಾಗಿ ಹಾಳುಗೆಡವಿದ್ದೇನೆಂದೂ ಹೇಳಿದ. ರಾವಣನ ಒಟ್ಟು ಸೈನ್ಯದ ಕಾಲು ಭಾಗದಷ್ಟು ಸೈನಿಕರನ್ನು ಈಗಾಗಲೇ ಕೊಂದು ಬಂದಿರುವೆನೆಂದೂ ಹೇಳಿದ. ರಾಮನಿಗೆ ಹನುಮನ ಸಾಹಸವು ನವಚೇತನವನ್ನು ನೀಡಿತು.
ರಾಮನ ಆಣತಿಯಂತೆ ವಾನರ ಮಹಾಸೇನೆಯು ಲಂಕೆಗೆ ಸಮೀಪವಿರುವ ಸಮುದ್ರದ ತೀರದತ್ತ ನಡೆಯಿತು. ಹನುಮನ ಹೆಗಲೇರಿ ರಾಮ, ಅಂಗದನ ಹೆಗಲೇರಿ ಲಕ್ಷ್ಮಣ- ಇವರು ಸುಗ್ರೀವನೇ ಮೊದಲಾದ ಪ್ರಮುಖರೊಂದಿಗೆ ಎಲ್ಲರಿಗಿಂತ ಮುಂದೆ ಸಾಗುತ್ತಾ ಸಮುದ್ರದ ತೀರವನ್ನು ಸೇರಿದರು! ಸಾಗರದ ಕೊನೆಗಾಣದ ವಿಸ್ತಾರ-ಆಳ, ಭೋರ್ಗರೆಯುತ್ತಾ ಮೇಲಿನಿಂದ ಮೇಲೆ ದಡಕ್ಕೆ ಬಂದಪ್ಪಳಿಸುವ ಪರ್ವತಾಕಾರದ ಅಲೆಗಳು, ಕಡಲೊಳಗಿರುವ ಮೊಸಳೆ- ತಿಮಿಂಗಿಲಗಳನ್ನು ನೋಡಿದಾಗ ವಾನರರ ಎದೆ ಕಂಪಿಸಿತು! ದಾಟುವ ಬಗೆಯನ್ನು ಕಾಣದೆ ಕಪಿವೀರರು ತಲೆಯ ಮೇಲೆ ಕೈಯಿಟ್ಟು ಕುಳಿತರು! ರಾಮ-ಲಕ್ಷ್ಮಣ- ಸುಗ್ರೀವ- ಹನುಮ- ಜಾಂಬವಂತನೇ ಮೊದಲಾದ ಪ್ರಮುಖರು ಸಾಗರೋಲ್ಲಂಘನೆಯ ಕುರಿತು ಚಿಂತನೆ ನಡೆಸತೊಡಗಿದರು.
ಅತ್ತ ಲಂಕೆಯಲ್ಲಿ ಹನುಮನ ಸಾಹಸಿಕ ಕಿತಾಪತಿಯು ಅವರನ್ನು ಚಿಂತಿಸುವಂತೆ ಮಾಡಿತ್ತು. ರಾಮನು ದಂಡೆತ್ತಿ ಬರುವುದು ನಿಶ್ಚಿತವಾಗಿತ್ತು. ರಾಮನ ಸೈನ್ಯವನ್ನು ಎದುರಿಸುವ ಬಗೆಯ ಕುರಿತು, ಯುದ್ಧವ್ಯೂಹಗಳನ್ನು ರಚಿಸುವ ಕುರಿತು ರಾವಣನ ಆಸ್ಥಾನದಲ್ಲಿ ಚಿಂತನಾ ಸಭೆಯು ನಡೆಯುತ್ತಿತ್ತು. ಎಲ್ಲರೂ ಯುದ್ಧಮಾಡಿ ರಾಮನನ್ನು ಮತ್ತು ಅವನ ಸೇನೆಯನ್ನು ನಾಶಮಾಡುವ ಸಲಹೆಯನ್ನು ಕೊಟ್ಟರು. ಕುಂಭಕರ್ಣನು ರಾವಣನು ಮಾಡಿದ ಸೀತಾಪಹರಣದ ಕಾರ್ಯವನ್ನು ಖಂಡಿಸಿದನು. ಇದರಿಂದ ರಾಕ್ಷಸಕುಲವೇ ನಾಶವಾಗುವುದೆಂದು ಹೇಳಿದನು. ಬೇಕಿದ್ದರೆ ಆಗಿಹೋದ ಪ್ರಮಾದವನ್ನು ಸರಿಪಡಿಸುವುದಾಗಿಯೂ ಹೇಳಿದ. ಆದರೆ ಇದನ್ನೊಪ್ಪದ ಇಂದ್ರಜಿತುವು ತಾನೊಬ್ಬನೇ ಹೋಗಿ ರಾಮ- ಲಕ್ಷ್ಮಣ ಮತ್ತು ಸುಗ್ರೀವ ಸಹಿತ ಎಲ್ಲ ವಾನರರನ್ನು ಕೊಂದು ಬರುತ್ತೇನೆಂದು ಗರ್ಜಿಸಿದ.
ಹೀಗೆ ಚಿಂತನ- ಮಂಥನಗಳು ನಡೆಯುತ್ತಿರುವಾಗ ಅಲ್ಲಿಗೆ ಭಾಗವತೋತ್ತಮ, ವಿವೇಕಿ, ಬುದ್ಧಿವಂತ ಮತ್ತು ಶ್ರೇಷ್ಠನಾದ ವಿಭೀಷಣನು ಬಂದನು. ಅವನು- ಸೀತೆಯನ್ನು ರಾಮನಿಗೊಪ್ಪಿಸಿ, ಅಜೇಯನಾದ; ಮಹಾವಿಷ್ಣುವಿನ ಅವತಾರರೂಪಿಯಾದ ರಾಮನೊಡನೆ ಯುದ್ಧದ ಬದಲು ಸ್ನೇಹವನ್ನು ಬೆಳೆಸಿ ರಾಕ್ಷಸಕುಲವನ್ನು ಉಳಿಸುವ ಸಲಹೆಯನ್ನು- ನೀಡಿದನು. ರಾಮನಿಗೆ ಶರಣಾಗುವ ಮಾತನ್ನು ಕೇಳುತ್ತಲೇ ರಾವಣನು ಸಿಟ್ಟಿಗೆದ್ದನು. ವಿಭೀಷಣನನ್ನು ಕೃತಘ್ನ, ಹಿತಶತ್ರುವೆಂದು ಜರೆದು ಹೀಯಾಳಿಸಿದನು. ಯಾವ ಕಾರಣಕ್ಕೂ ರಾಮನಿಗೆ ಶರಣು ಹೋಗುವ ಮಾತಿಲ್ಲವೆಂದು ಹೇಳುತ್ತಾ ವಿಭೀಷಣನನ್ನು ಧಿಕ್ಕರಿಸಿದನು.
ವಿಭೀಷಣನು ಇನ್ನು ಇಲ್ಲಿರುವುದು ಹಿತವಲ್ಲವೆಂದು ನಿರ್ಧರಿಸಿದನು. ಕೈಯಲ್ಲಿ ಗದೆಯನ್ನು ಹಿಡಿದುಕೊಂಡು,ತನ್ನ ನಾಲ್ವರು ಮಂತ್ರಿಗಳೊಂದಿಗೆ ಆಗಸವನ್ನೇರಿ ಸಿಟ್ಟಿನಿಂದ-" ರಾವಣೇಶ್ವರ! ನೀನು ನನಗೆ ಹಿರಿಯಣ್ಣ, ತಂದೆಗೆ ಸಮಾನನು. ನಿನಗೆ ಹಿತವನ್ನೇ ಕೋರಿದೆ. ನೀನು ಎದುರಿಸುವ ರಾಮನು ನಿನಗೆ ಮೃತ್ಯುವಾಗಿದ್ದಾನೆ. ಅವನ ಪತ್ನಿ ಸೀತೆಯು ಮಹಾಶಕ್ತಿಸ್ವರೂಪಿಣಿ ಕಾಳಿಯಾಗಿದ್ದಾಳೆ. ತನ್ನ ಪತ್ನಿಯನ್ನು ಪಡೆಯಲು ನಿನ್ನ ಮಕ್ಕಳು, ಸೈನ್ಯ, ವಾಹನಾದಿಗಳೊಂದಿಗೆ ನಿನ್ನನ್ನೂ ಕೊಲ್ಲಲಿರುವನು. ರಾಮನು ನಿನ್ನನ್ನೂ, ರಾಕ್ಷಸವಂಶವನ್ನೂ ನಾಶಮಾಡುವುದನ್ನು ನಾನು ನೋಡಲಾರೆನು. ನಾನು ಅವನನ್ನೇ ಆಶ್ರಯಿಸುವೆನು. ನೀನು ಅರಮನೆಯಲ್ಲಿ ಸಕಲ ವೈಭವಗಳೊಂದಿಗೆ ಸುಖವಾಗಿರು" ಎಂದು ಹೇಳಿ ಲಂಕೆಯನ್ನು ತೊರೆದು ಶ್ರೀರಾಮನಿಗೆ ಶರಣಾಗಿ, ರಾಮಸೇವೆಗೈಯಲು ಹೊರಟನು.
ಮುಂದುವರಿಯುವುದು....
- ವಿಶ್ವೇಶ್ವರ ಭಟ್ಟ ಉಂಡೆಮನೆ, ಬೆಳ್ತಂಗಡಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ