ಭಾರತೀಯ ಆಚಾರ ವಿಚಾರ ಸಂಸ್ಕೃತಿಯಲ್ಲಿ ಮಹತ್ವದ ಬದಲಾವಣೆ: ಡಾ. ಸುಸಾನ್ ಹ್ಯಾಂಸೆಟ್

Upayuktha
0


ಹಾಸನ: 50 ವರ್ಷಗಳಲ್ಲಿ  ಭಾರತೀಯ ಸ್ಥಳೀಯ ಸಂಸ್ಕೃತಿ ಮತ್ತು ಆಚರಣೆಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಅವು ಪ್ರಗತಿಯ ಹಾದಿಯಲ್ಲಿವೆ ಎಂದು ಅಮೆರಿಕದ ಸಮಾಜ ವಿಜ್ಞಾನಿ ಡಾ. ಸುಸಾನ್  ಹ್ಯಾಂಸೆಟ್ ತಿಳಿಸಿದರು. 


ಅವರು ನಗರದ ಸರ್ಕಾರಿ ಸ್ವಾಯತ್ತ ಕಲಾ ಕಾಲೇಜಿನಲ್ಲಿ ಸಮಾಜ ಶಾಸ್ತ್ರ  ವಿಭಾಗದಿಂದ ಏರ್ಪಡಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


55 ವರ್ಷಗಳ ಹಿಂದೆ ತಮ್ಮ ಪತಿಯೊಂದಿಗೆ ಗ್ರಾಮೀಣ ಸಾಮಾಜಿಕ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನಕ್ಕಾಗಿ ಗೊರೂರು ಮತ್ತು ಪೊನ್ನಾಥಪುರವನ್ನು  ಆಯ್ಕೆ ಮಾಡಿಕೊಂಡು ಕ್ಷೇತ್ರ ಕಾರ್ಯ ಮಾಡಿದ   ಸಂದರ್ಭಕ್ಕೂ , ಪ್ರಸ್ತುತ ಸಂದರ್ಭಕ್ಕೂ ಆಚಾರ ವಿಚಾರ ಉಡುಗೆ ತೊಡುಗೆಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿದೆ. ನನ್ನ ವಿದೇಶಿ ಉಡುಪುಗಳನ್ನು ಕಂಡು ಸೀರೆಯನ್ನು ಉಡಲು ಒತ್ತಾಯಿಸಿದ ಅಂದಿನ ಸಂದರ್ಭ ಇಂದು ಬದಲಾಗಿದ್ದು ಬಹುತೇಕರು ಚೂಡಿದಾರ, ಸೆಲ್ವಾರ್ ಕಮೀಜ್ ನಂತಹ ಉಡುಪಿಗೆ ಬದಲಾಗಿರುವುದನ್ನು ಗಮನಿಸಿದ್ದೇನೆ .  ಜೊತೆಗೆ ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ಭಾರತದ ಸ್ತ್ರೀಯರ ಸ್ಥಾನಮಾನಗಳಲ್ಲಿ ಸಾಕಷ್ಟು ಸುಧಾರಣೆಗಳನ್ನು ಗಮನಿಸಿದ್ದೇನೆ ಎಂದರು. 


ಭಾರತದ ಸಮಾಜಶಾಸ್ತ್ರದ ಅಧ್ಯಯನ ಸಂಸ್ಕೃತಿಯ ಅಧ್ಯಯನಕ್ಕೆ ಸೀಮಿತವಾಗಿದ್ದರೆ ಅಮೆರಿಕದ ಸಮಾಜಶಾಸ್ತ್ರದ ಅಧ್ಯಯನ ಸಂಸ್ಕೃತಿ ಅಧ್ಯಯನವನ್ನು ಮೀರಿ  ರಾಜಕೀಯ ಚುನಾವಣೆ ಅವುಗಳ ಪ್ರಭಾವದ  ಅಧ್ಯಯನವನ್ನು ಒಳಗೊಂಡಿದೆ ಎಂದು ವಿವರಿಸಿದ  ಅವರು  ಪ್ರಸ್ತುತ ತಾವು ಭಾರತದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಅದರಲ್ಲೂ ಪಂಚಾಯತ್ ರಾಜ್ ಆಡಳಿತದಲ್ಲಿ ಸ್ತ್ರೀಯರ ಸ್ಥಾನಮಾನ ಕುರಿತಾಗಿ ಅಧ್ಯಯನ ಮಾಡಲು ಆಸಕ್ತರಾಗಿರುವುದಾಗಿ ತಿಳಿಸಿದರು. 


ಸಂಸ್ಥೆಯ ಪ್ರಾಂಶುಪಾಲರಾದ ಡಾ. ಎಂ ಡಿ ಇರ್ಷಾದ್ ರವರು ಮಾತನಾಡಿ, ಸ್ವತಂತ್ರ ಪೂರ್ವದಲ್ಲಿ ಶೆಟ್ಟಿಹಳ್ಳಿ ಹಾಸನ ಜಿಲ್ಲೆಯ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿದ್ದು ಟಿಪ್ಪುವಿನ ಕಾಲಕ್ಕೆ ಗೊರೂರು ಶೆಟ್ಟಿಹಳ್ಳಿ ಮಗ್ಗೆ ಮೂಲಕ ಸಕಲೇಶಪುರಕ್ಕೆ ಮಾರ್ಗ ಕಲ್ಪಿಸಲಾಗಿತ್ತು ಎಂದು ವಿವರಿಸಿದರು. 


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲೇಖಕ  ಗೊರೂರು ಶಿವೇಶ್ ಮಾತನಾಡಿ, ಜೀವಶಾಸ್ತ್ರದ ಅಧ್ಯಯನದಷ್ಟೇ ಸಮಾಜಶಾಸ್ತ್ರದ ಅಧ್ಯಯನವು ಬಹಳ ಮುಖ್ಯವಾದದ್ದು. ಸಂಸ್ಕೃತಿಯು ಆಚರಣೆಗಳ ಮೊತ್ತವಾಗಿದ್ದು ಪ್ರತಿಯೊಂದು ಪ್ರಾಂತದಲ್ಲೂ ಆಚರಣೆಯಲ್ಲಿರುವ ಹಬ್ಬಗಳು ಮದುವೆ  ಹುಟ್ಟು, ಸಾವುಗಳ ಆಚರಣೆಗಳು ವಿಭಿನ್ನವಾಗಿದ್ದು ಅವು ಆಯಾ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ ಎಂದು ವಿವರಿಸಿದರು.


ಲೇಖಕ ಗೊರೂರು ಅನಂತರಾಜು ಮಾತನಾಡಿ,  ಸುಸಾನ್  ಹ್ಯಾಂಸೆಟ್ ಅವರ ಪತಿ  ಸ್ಟ್ಯಾನ್ಲಿ ರಜೆಲ್ಸನ್ ರಚಿಸಿರುವ  ಸಂಶೋಧನಾ ಗ್ರಂಥ ಫುಡ್  ಕಮ್ಯುನಿಟಿ ಅಂಡ್ ಸ್ಪಿರಿಟ್ ವರ್ಲ್ಡ್  ಜಿಲ್ಲೆಯ ಮಲೆನಾಡಿನ ಸಂಸ್ಕೃತಿಯನ್ನು ವಿಭಿನ್ನ ನೆಲೆಯಲ್ಲಿ ಸಾಕ್ಷಾಧಾರಗಳ ಮೂಲಕ ಕಟ್ಟಿಕೊಡುವ ಕೃತಿಯಾಗಿದೆ ಎಂದು ತಿಳಿಸಿದರು. 


ಕರ್ನಾಟಕ ರಾಜ್ಯ ಬರಹಗಾರರ ಸಂಘದ ಜಿಲ್ಲಾ ಘಟಕ ಹಾಗೂ ಕಾಲೇಜಿನ ವತಿಯಿಂದ  ಸುಸಾನ್ ಹ್ಯಾಸೆಟ್ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರದ ವಿಭಾಗದ  ಮುಖ್ಯಸ್ಥರು  ವೆಂಕಟರಸಯ್ಯ ಹಾಗೂ  ಅಧೀಕ್ಷಕ ಸತ್ಯಮೂರ್ತಿ ಉಪಸ್ಥಿತರಿದ್ದರು.   ಧನಲಕ್ಷ್ಮಿ ಗೊರೂರು ಪ್ರಾರ್ಥಿಸಿದರು. ಡಾಕ್ಟರ್ ವನಿತಾರವರು ಕಾರ್ಯಕ್ರಮ ನಿರೂಪಿಸಿದರು . ಕರ್ನಾಟಕ ರಾಜ್ಯ ಬರಹಗಾರ ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್ಎಸ್ ಪ್ರತಿಮಾ ಹಾಸನ್ ಸ್ವಾಗತಿಸಿದರು. ನಿವೃತ್ತ ಶಿಕ್ಷಕಿ ಜಯಮ್ಮ, ಕಲಾವಿದ ಯಾಕೂಬ್ ಗೊರೂರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top