ಮನಸ್ಸೆಂಬ ಮಾಯಾಜಾಲವ ಬಲ್ಲವರು ಯಾರೂ ಇಲ್ಲ

Upayuktha
0

ಯಾವ ಯಾವ ಋತುವಿನಲ್ಲಿ ಯಾವ ಯಾವ ತಿನಿಸು ತಿನ್ನುವುದು ಎಂದು ಕೆಲವರಿಗೆ ಗೊತ್ತೇ ಇರುವುದಿಲ್ಲ. ಕೆಲವರಿಗೆ ಯಾಕೆ ಈಗಿನ ಕಾಲದಲ್ಲಿ ಯಾರಿಗೂ ಗೊತ್ತೇ ಇಲ್ಲ! ಚಳಿಗಾಲದಲ್ಲಿ ಸಾಮಾನ್ಯವಾಗಿ ಆರೋಗ್ಯ ಚೆನ್ನಾಗಿರುತ್ತದೆ. ಬೇಸಿಗೆ ಕಾಲದಲ್ಲಿ ಕಫ ಜಾಸ್ತಿ ಇರುತ್ತದೆ. ಯಾವುದು ತಿಂದರೆ ಯಾವ ರೀತಿಯಲ್ಲಿ ಮನೋಸ್ಥಿತಿ ಕೂಡ ಇರುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಇದು ದೇಹದ ಮಾತಾಯಿತು. ಮನಸ್ಸು ಸ್ವಾಸ್ಥ್ಯದಿಂದಿರಲು ಉಸಿರಾಟ ಕ್ರಿಯೆಯು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಶ್ವಾಸಕೋಶಗಳು ತುಂಬಾ ಜವಾಬ್ದಾರಿ ತೆಗೆದುಕೊಳ್ಳುತ್ತವೆ. ಕೆಲವೊಮ್ಮೆ ಸರಿಯಾಗಿ ಉಸಿರಾಟ ಮಾಡದೇ ಇರುವುದರಿಂದ ಕೊಳೆಯು ತುಂಬಿಕೊಳ್ಳುತ್ತದೆ. ಈ ಕೊಳೆಗಳನ್ನು ಹೊರ ಹಾಕಲು ಧ್ಯಾನ, ಪ್ರಾಣಾಯಾಮ, ವ್ಯಾಯಾಮಗಳು ಅತ್ಯವಶ್ಯಕವಾಗಿವೆ. ಆಗ ಒಳಗಿನ ಭಾವನೆಗಳು ಹತೋಟಿಗೆ ಬರುತ್ತವೆ. ಹಾಗೆ ಉಸಿರನ್ನು ಗಮನಿಸುತ್ತಾ ಇದ್ದಾಗ ಒಳಗಿನ ಚೇತನ ಅರಳಿದ ಹಾಗೆ ಭಾಸವಾಗುತ್ತದೆ. ಕೆಲವೊಮ್ಮೆ ವಿಕಸಿತಗೊಳ್ಳುವುದು ಮತ್ತು ಕೆಲವೊಮ್ಮೆ ಕುಗ್ಗುವುದು, ಇವುಗಳ ವ್ಯತ್ಯಾಸದ ಅರಿವು ಗೋಚರವಾಗುತ್ತದೆ. ಹಾಗಾಗಿ ಮೊದಲು ನಾವ್ಯಾರು ಅನ್ನುವುದನ್ನು ತಿಳಿದುಕೊಳ್ಳತಕ್ಕದ್ದು. ನಮ್ಮನ್ನು ನಾವು ಹತ್ತಿಯಂತೆ ಹಗುರಗೊಳಿಸುವುದೇ ಧ್ಯಾನ. ಅದು ನಿರಂತರ ಪ್ರತಿದಿನವೂ ಮಾಡುವ ಕ್ರಮವಾಗಬೇಕು. ಉಸಿರಿನ ಮೇಲೆ ಗಮನವಿಟ್ಟಾಗ ಧ್ಯಾನವಾಗುವುದು. ದುಃಖಿಗಳಾದಾಗ  ಯಾರೋ ನಮ್ಮನ್ನು ಅದುಮಿದ ಹಾಗಾಗುವುದು ಸಹಜ . ಅದೇ ರೀತಿ ಹೃದಯದಿಂದ ನಗುವುಕ್ಕಿ ಬಂದಾಗ ಒಳಗಿನ ಚೈತನ್ಯವು ಹಗುರವಾದಂತೆ ಭಾಸವಾಗುತ್ತದೆ. 


ಈ ದೇಶವನ್ನು ಕಾಪಾಡಲು ಸೈನಿಕರು ಇರುತ್ತಾರೆ. ಅವರ ಆ ದೇಶ ಭಕ್ತಿಯಂಥ ನಿಸ್ವಾರ್ಥ ಸೇವೆಗೆ ಅವರೊಳಗಿನ ಮನಸ್ಸು ಪ್ರೇರೇಪಿಸುವುದು. ನಮ್ಮೊಳಗನ್ನು ಕಾಪಾಡಿಕೊಳ್ಳಲು ಬಿ-ಕೋಶ ಮತ್ತು ಎನ್ ಕೆ -ಕೋಶಗಳು ತಕ್ಕಮಟ್ಟಿಗೆ ಇರುತ್ತವೆ. ಅದನ್ನು ಹೆಚ್ಚಿಸಿಕೊಳ್ಳಲು ಧ್ಯಾನವು ಅತೀ  ಅಗತ್ಯವಾಗಿದೆ. ಈ ದೇಹದೊಳಗೆ ಸುಮಾರು 72,000ಕ್ಕೂ ಹೆಚ್ಚು ನಾಡಿಗಳಿವೆ. ಮೆದುಳಿನ ಎಡಭಾಗದಲ್ಲಿ ತಾರ್ಕಿಕ ವಿಚಾರಗಳು, ಬಲಭಾಗದಲ್ಲಿ ರಚನಾತ್ಮಕವಾದಂತಹ ಅಂಶಗಳು ಅಥವಾ ಸೃಜನಾತ್ಮಕವಾಗಿರುವಂತವುಗಳು ನೆಲೆಯಾಗಿವೆ. ಧ್ಯಾನ ಮಾಡಬೇಕು ಎಂದೆಲ್ಲ  ಯೋಚಿಸುವವರು  ಸುಮ್ಮನೆ ಕಣ್ಣು ಮುಚ್ಚಿ ಕುಳಿತರಾಯಿತು. ಮನಸ್ಸು ಎಲ್ಲೆಲ್ಲೋ ತಿರುಗಾಡಿಕೊಂಡು ಬರಲು ಬಿಡಬೇಕು.

 

ಹಾಗಾಗಿ ಧ್ಯಾನ ಯಾರಿಗೆ ಬೇಕಾದರೂ ಮಾಡಬಹುದು. ಹಾಡು ಹೇಳುವುದಾದರೆ ಅಥವಾ ಪುಸ್ತಕಗಳನ್ನು ಓದುವುದಾದರೆ ಏಕಾಗ್ರತೆಯು ಬೇಕು.  ಸುಮ್ಮನಿರುವುದಕ್ಕೆ ಅದರ ಅಗತ್ಯವಿಲ್ಲ. ಧ್ಯಾನವು ಆಳವಾದ ವಿಶ್ರಾಂತಿಯೇ ಆಗಿದೆ. ಶರೀರವು ಯಾವುದೇ ಶ್ರಮವನ್ನು ಹೊಂದಿರಬಾರದು. ಕಸಿವಿಸಿ, ತಳಮಳ, ಬೇಸರವನ್ನು ಹೊರ ಹಾಕಬೇಕು. ಬಳಿಕ ಯಾವುದೇ ಭಾವನೆಗಳು ಬರುತ್ತಿರಲಿ ಅಥವಾ ಸಂವೇದನೆಗಳು ಇರಲಿ ಅದನ್ನು ಸ್ವೀಕರಿಸಿಕೊಂಡೇ ಧ್ಯಾನವನ್ನು ಮಾಡಬಹುದು. ನಮಗೆ ಆಳವಾದ ವಿಶ್ರಾಂತಿಯನ್ನು ನೀಡುವಲ್ಲಿ ಸಹಕರಿಸುತ್ತದೆ. ಆದರೆ ಮನಸ್ಸು ಜಾಗೃತವಾಗಿರುವುದು ಮುಖ್ಯವಾಗಿದೆ.  

  

ಒಂದು ಬೀಜವು ಹುಟ್ಟುತ್ತಾ ತನ್ನ ಸಾರ್ಥಕತೆಯನ್ನು ಹೆಚ್ಚಿಸಲೋಸುಗ ಬೆಳೆದು ಉಪಕಾರವಾಗುತ್ತದೆ. ಹೆಣ್ಣು ಕರುವೊಂದು  ಬೆಳೆದು ತಾನು ಕಾಮಧೇನುವಾಗಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳುತ್ತದೆ. ಅದೇ ರೀತಿ ನಾವು ಈ ಬದುಕಲ್ಲಿ ನಮ್ಮದೇ ವಿಶಿಷ್ಟತೆಗಳ ಮೂಲಕ ಸಾರ್ಥಕತೆಯನ್ನು ಪಡೆದುಕೊಳ್ಳಬೇಕು. ಈ ಬದುಕಿನ ಹೆಜ್ಜೆಯನ್ನು ಚೆನ್ನಾಗಿ ಯೋಚಿಸಿ ಮುಂದಡಿಯಿಡುತ್ತಿರಬೇಕು. ನಮ್ಮಿಂದ ಮನೆಗೆ, ಈ  ಸಮಾಜಕ್ಕೆ, ಬೀದಿಗೆ, ಊರಿಗೆ, ನಾಡಿಗೆ, ದೇಶಕ್ಕೆ ಏನು ಮಾಡಿದರೆ ಉಪಯೋಗ ಎಂಬ ಚಿಂತನಶೀಲ ಅರಿವನ್ನು ಒರೆಗೆ ಹಚ್ಚಿ ಒಳಿತಿನ ದಾರಿ ತುಳಿಯಬೇಕು.


ಒಂದು ಕಾಗೆಯು ಬೆಳ್ಳಂಬೆಳಗ್ಗೆ ಬಂದು ಅಂಗಳದಲ್ಲಿ ಇದ್ದ ಕಸ ಕಡ್ಡಿಗಳನ್ನು ಹೆಕ್ಕುವಾಗ ತನ್ನ ಬಳಗವನ್ನು ಕೂಗಿ ಕರೆಯುತ್ತದೆ. ಹಕ್ಕಿಗಳ ಚಿಲಿಪಿಲಿ ರವಳಿ ಕೇಳಿದಾಗ ಬೇರೆ ಬೇರೆ ತಳಿಯ ಹಕ್ಕಿಗಳು ಸೇರಿಕೊಳ್ಳುತ್ತವೆ. ಆ ಸಾಮರಸ್ಯವು ತಿಳುವಳಿಕೆ ಇರುವ ಮನುಷ್ಯನಿಗೂ ಇರಬೇಕು. ಸುಮ್ಮನೇ ಜಾತಿ ಮತ ತತ್ವಗಳನ್ನಾಧರಿಸಿ  ತಮ್ಮನ್ನು ಬೇರ್ಪಡಿಸಿಕೊಳ್ಳುವುದು ಸಲ್ಲದು. ಈಗ ನೋಡಿ ಮಳೆಯೂ ಜಾತಿ ಮತ ತತ್ವಗಳನ್ನು ಹೇರಿ ಮಾತ್ರ ಅಲ್ಲೋ ಇಲ್ಲೋ ಬರುತ್ತದೆಯೇನು? ವರುಣನ ಕೃಪೆಯಂತೂ ಈಗ ತುಂಬಾನೇ ಆಗಿದೆ. ವರುಣನಿಗೆ ಇಂತಹ ಜಾತಿ ನೀತಿಗಳು ಸಲ್ಲುವುದಿಲ್ಲವಲ್ಲ. ಇದ್ದಲ್ಲಿ  ಆಗೇನು ಮಾಡುವ ಹಾಗೂ ಇಲ್ಲ. ಅಲ್ಲಿ ನೆರೆ, ಇಲ್ಲಿ ಭೂಕುಸಿತ ಎಲ್ಲವೂ ಮಾನವನದೇ ಉಡುಗೊರೆಯೆನ್ನಬಹುದು!! ಭೂಮಿ ಚಪ್ಪಟೆಯೇನೂ  ಅಲ್ಲ ಎಂದು ತಿಳಿಯದಷ್ಟು ದಡ್ಡರು ನಾವಲ್ಲದಿದ್ದರೂ ಭೂಮಿಯ ಅಗೆಯುವಿಕೆ ನಿರಂತರ ನಡೆಯುತ್ತಿದೆ. ಬೆಟ್ಟ ಗುಡ್ಡಗಳನ್ನು ಕೊರೆದು ತರಿದು ಸಮತಟ್ಟು ಮಾಡಿ ಅಲಂಕಾರ ಹೆಚ್ಚು ಮಾಡುತ್ತೇವೆ! ನೀರು ಸಿಗಲಿಲ್ಲವೆಂದು ಕೊಳವೆ ರಂಧ್ರ ತೋಡಿಸುತ್ತೇವೆ. ಅಲ್ಲಿಗೆ ಭೂಮಿಯ ಹಿಡಿದಿಡುವಿಕೆಯನ್ನು ನಾಶಗೊಳಿಸಿದಂತೆ ಆಯಿತಲ್ಲವೇ? ಮತ್ತೆ ವರುಣನೊಂದಿಗೆ ಗೆಲ್ಲಲು ಹೇಗೆ ತಾನೇ ಸಾಧ್ಯವಾಗುತ್ತದೆ? ಒಬ್ಬ ಸೈನಿಕ ತನ್ನ ದೇಶದ ಗಡಿಯನ್ನು ಕಾಯುವಲ್ಲಿ ಅವನ ಯುಕ್ತಿಯೊಂದಿಗೆ ಶಕ್ತಿಯೂ ಅಷ್ಟೇ ಬೇಕಾಗುತ್ತದೆ. ಶಕ್ತಿಯೇ ಇಲ್ಲವೆಂದರೆ ಕಾಯುವಿಕೆಗೆ ಕೊಂಚ ತಡೆಯೇ ಆಗುವುದು. ಭೂಮಿಯ ಶಕ್ತಿಯನ್ನು ಕೊರೆದು ನಾಶ ಮಾಡುವಲ್ಲಿ ಪಳಗಿದವರು ಈಗ ವರುಣನ ಅಟ್ಟಹಾಸಕ್ಕೆ ಏನೂ ಮಾಡದ ಮೂರ್ಖರೇ ಆಗಿದ್ದೇವೆ.


ಈಗ ಬೆಟ್ಟ ಗುಡ್ಡಗಳಿರುವಲ್ಲಿ ಭೀತಿ, ದೊಡ್ಡ ಮರಗಳಿರುವಲ್ಲಿ ಆತಂಕ ಎದುರಾಗುತ್ತಿದೆ. ನಾವೇ ನಿರ್ಮಿಸಿಕೊಂಡ ಈ ಕೃತಕ ಆಧುನೀಕರಣಕ್ಕೆ ಪ್ರಕೃತಿ ಹೈರಾಣಾಗಿ ಹೋಗಿದ್ದಾಳೆ. ಅವಳ ಮೇಲೆ ನಿತ್ಯ ನಿರಂತರ ದಾಳಿಯೇ ನಡೆಯುತ್ತಿದೆಯೆಂದರೂ ತಪ್ಪಾಗಲಾರದು. ಮಣ್ಣಿನೊಡನೆ ಪ್ರೀತಿಯ ಹೆಜ್ಜೆ ಇಡಲು ಹೇಸುವವರೇ ಅಧಿಕವಾಗಿರುವಾಗ ಮಣ್ಣು ಮಣ್ಣಾಗಿ ನೆಲ ಸೇರುವುದು ಸಹಜವೇ ತಾನೇ? ನಮ್ಮೊಳಗಿನ ಅಂಧಾನುಕರಣೆ ಯಾವಾಗ ತೊಲಗುವುದೋ ಅಂದು ಭೂಮಿ ಹಾಗೂ ವರುಣ ಶಾಂತವಾಗುವರೇನೋ!!! ಈ ರುಬಾಯಿಯ ತೆರ ಈ ಬದುಕು ಹೀಗೇ ಆ ದೇವರ ಕರೆ ಬರುವ ತನಕ.


"ಮಳೆ ಬಂದರೂ ಹೆದರಿಕೆ

ಬಿಸಿಲಿಗೂ ಚಡಪಡಿಕೆ 

ಕೊನೆಗೆ ದೇವರೇ ಕಾಪಾಡು 

ಎಂಬ ಮುಗ್ಧ ಒಡಂಬಡಿಕೆ"    

ಅಷ್ಟೇ.


- ಮಲ್ಲಿಕಾ ಜೆ ಆರ್ ರೈ 

ದರ್ಬೆ ಪುತ್ತೂರು 

574202 ದ. ಕ.

8147541549


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top