ರಾಷ್ಟ್ರೀಯತೆ: ಒಂದು ಸಮಕಾಲೀನ ಅವಲೋಕನ

Upayuktha
0



- ಟಿ. ದೇವಿದಾಸ್


ಭಾರತೀಯರಿಗೆ ರಾಷ್ಟ್ರ ಪರಿಕಲ್ಪನೆಯೇ ಇರಲಿಲ್ಲವೆಂದೂ, ಪ್ರಸ್ತುತದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಗಳೆಲ್ಲವನ್ನು ಏಕರೂಪತೆಯ ಮೂಲಕ ಒಂದು ಸಿದ್ಧಮಾದರಿಯನ್ನು ನಮ್ಮನ್ನು ಗುಲಾಮರನ್ನಾಗಿಸಿದ ಬ್ರಿಟಿಷರು ನೀಡಿದರೆಂಬುದು ಎಡಪಂಥೀಯರ ಅಪಪ್ರಚಾರದ ಪ್ರತಿಫಲನ. We are still mob, yet to become nation– ಎಂ.ಎನ್. ರಾಯ್ ಅಂಥವರ ಅಪದ್ಧ. ನಮ್ಮ ಸಹಸ್ರ ವರ್ಷಗಳ ಇತಿಹಾಸ, ಧರ್ಮಗ್ರಂಥ, ಸಂಸ್ಕೃತಿ, ನಾಗರಿಕತೆಗಳ ಪರಿಚಯವಿಲ್ಲದವರು ಆಡುವ ಮಾತುಗಳಿವು. ರಾಮಾಯಣ, ಮಹಾಭಾರತ, ಶ್ರೀ ಭಾಗವತ, ಸ್ಮೃತಿಗ್ರಂಥಗಳು– ಇಲ್ಲೆಲ್ಲ ಬಂದಿರುವ ರಾಷ್ಟ್ರದ ಕಲ್ಪನೆ, ರಾಜ್ಯಾಂಗ, ಪ್ರಮಾಣವಚನ ಪದ್ಧತಿ– ಇವೆಲ್ಲವನ್ನೂ ದೂರೀಕರಿಸುವವರಲ್ಲಿ ನಮ್ಮ ಸಾಂಸ್ಕೃತಿಕ ರಾಷ್ಟ್ರಕಲ್ಪನೆ ಅರ್ಥವಾಗುವುದಾದರೂ ಹೇಗೆ? Cultural Nationalism ಹೊರತು ಭಾಷಾಧಾರಿತ, ಕೇವಲ ಭೌಗೋಳಿಕಾಧಾರಿತ, ಸೇನಾಡಳಿತದ ಮಾದರಿಯದ್ದಲ್ಲ.


ಈ ಸಾಂಸ್ಕೃತಿಕ ರಾಷ್ಟ್ರಕಲ್ಪನೆ ಸ್ವಯಾರ್ಜಿತ ಅಸ್ತಿತ್ವವೇ ವಿನಾ ಅನುಕರಣೆಯಲ್ಲ, ಅನುಸರಣೆಯಲ್ಲ. ಒಂದೇ ಸಂಸ್ಕೃತಿಯನ್ನು ಅನೇಕಾಂಶಗಳ ವೈವಿಧ್ಯದಲ್ಲೂ ಕಾಣಬಹುದಾದ ಸಾಮಾನ್ಯ ಗುರಿ, ಸಮುದಾಯ ಕ್ಷೇಮ– ಹಿತ, ವ್ಯಕ್ತಿವಿಕಾಸ, ಪುರುಷಾರ್ಥಗಳ ಸಮನ್ವಯದೇಕತೆ, ಜಗದಗಲದ ಜೀವಪ್ರಜ್ಞೆ ಮತ್ತು ಸಮದೃಷ್ಟಿ– ಇದು ನಮ್ಮ ವಿಶಾಲ ರಾಷ್ಟ್ರಪ್ರಜ್ಞೆಗೆ ಹೇತುವಾದುದು. ಈ ಹಿನ್ನೆಲೆಯಲ್ಲಿಯೇ ವಿಶಾಲವಾದ ಸಾಂಸ್ಕೃತಿಕ ವಿನ್ಯಾಸದ ಹರಹು ಮತ್ತು ಹರವು ವ್ಯಕ್ತವಾದರೂ ಭಾರತೀಯತೆ ಅನಾದಿಯಿಂದಲೂ ವೈರುಧ್ಯಗಳ ನಡುವೆಯೇ ಜೀವಂತವಾಗಿದೆ. ಯಾವ ರಾಷ್ಟ್ರೀಯತೆ ಸಾಂಸ್ಕೃತಿಕವಾದ ತಳಹದಿಯ ಮೇಲೆ ನಿಲ್ಲಲಿಲ್ಲವೋ ಅವು ಮಣ್ಣು ಮುಕ್ಕಿದವು. ಆದರೆ ಅಗಣಿತ ಪ್ರತಿಕೂಲತೆಯನ್ನೆದುರಿಸಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದು ನಮ್ಮ ರಾಷ್ಟ್ರೀಯತೆ ಮಾತ್ರ. ಕಾರಣ ಇಷ್ಟೆ: ನಮ್ಮವರು ನಿರ್ಮಿಸಿದ ರಾಷ್ಟ್ರೀಯತೆಯ ಭದ್ರವಾದ ತಳಪಾಯ. ಹಿಂದುತ್ತ್ವ ಎಂದೇ ಗುರುತಿಸಲಾದ ನಮ್ಮ ರಾಷ್ಟ್ರೀಯತೆಯಲ್ಲಿ ವೈಚಾರಿಕ ಕಾಠಿಣ್ಯವಿಲ್ಲ. ರಾಷ್ಟ್ರೀಯತೆಯಲ್ಲೂ ಜಾಗತೀಕರಣದಲ್ಲೂ ನಮ್ಮದು ವಿಶಾಲಪ್ರಜ್ಞೆ. ತ್ಯಾಗದ ಪ್ರಜ್ಞೆಯಿದೆಯೇ ಹೊರತು ಭೋಗದ ವಾಸನೆಯಿಲ್ಲ. ವಸುಧೈವ ಕುಟುಂಬಕಂ ಎನ್ನುವ  Universal Sense ಮನೋಧರ್ಮವಿದೆ. 


ನಮ್ಮ ಸಂಸ್ಕೃತಿ ಮತ್ತು ನಾಗರೀಕತೆಗಳು ಬೆಳೆದ ಪರಿ ಅನನ್ಯವಾದುದು. ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ಕ್ರೀಡೆ, ಮಾನವಿಕ– ಕ್ಷೇತ್ರಗಳಲ್ಲಿ ನಮ್ಮವರದು ಅತೀತವಾದ ಪ್ರಜ್ಞೆಯಿರುವುದರಿಂದ ವೈಜ್ಞಾನಿಕವಾಗಿ, ವೈಚಾರಿಕವಾಗಿ ಬದುಕನ್ನು ಕಟ್ಟಿಕೊಂಡು ಸಮಕಾಲೀನ ಸನ್ನಿವೇಶಗಳಲ್ಲೂ ವೈಚಾರಿಕತೆಯ ಭಾಗವಾಗಿರುವ ವ್ಯಾವಹಾರಿಕತೆಯ ಕಾಠಿಣ್ಯದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತ ವಿಶ್ವಸಂಸ್ಕೃತಿಯ ವಾರಸುದಾರರೆಂಬಂತೆ ಬದುಕುತ್ತಿದ್ದೇವೆ. “ನೀನು ಯಾರೇ ಆಗಿರು, ರಾಷ್ಟ್ರಕ್ಕೆ ನಿಷ್ಠೆಯಿರಲಿ; ಅದು ಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನ, ಸಂವಿಧಾನ, ದೇವವಂದನ, ರಾಷ್ಟ್ರೀಯ ಹಬ್ಬಗಳಲ್ಲಿ ಭಾಗಿಯಾಗುವಿಕೆ, ಪರಂಪರೆಯನ್ನು ಹಂಚಿಕೊಳ್ಳುವುದು, ಒಪ್ಪಿಕೊಳ್ಳುವುದು, Owning-Belonging– ಎಂಬುದು, ರಾಷ್ಟ್ರೀಯ ಉತ್ಸವಗಳಲ್ಲಿ, ಇತ್ಯಾದಿ ಸಾಂಕೇತಿಕ ಅಭಿವ್ಯಕ್ತಿಗಳಲ್ಲಿ ಎಲ್ಲರಿಗೂ ಅಭಯ ನೀಡಲಿ, ಅಪನಂಬಿಕೆ ತೊಲಗಲಿ, ಸಂಶಯ ನೀಗಲಿ“– ರಾಷ್ಟ್ರೀಯತೆಯ ಈ ಸೊಲ್ಲಲ್ಲಿ ತಪ್ಪೇನಿದೆ? ಪರಸ್ಪರ ಒಂದಾಗುವುದು, ಒದಗುವುದು, ಭಿನ್ನತೆಗಳನ್ನು ಮರೆತು ಸಹಕರಿಸುವುದು– ಇದು ರಾಷ್ಟ್ರೀಯತೆಯ ಪಾಠ. “ಇಂಡಿಯಾ ಬೇರೆಯಲ್ಲ; ಹಿಂದೂಸ್ತಾನ ಬೇರೆಯಲ್ಲ“– ಈ ನಂಬಿಕೆ ಮತ್ತು ಪ್ರಜ್ಞೆ ಬಲವಾಗುತ್ತ, ಸ್ಥಳೀಯತೆಯ ಅರಿವನ್ನು ದಾಟಿ ರಾಷ್ಟ್ರೀಯತೆಯ ಹರಹನ್ನು ವಿಸ್ತರಿಸಿಕೊಳ್ಳುತ್ತ, ಜಾತ್ಯತೀತ ಭಾವವನ್ನು ಉದ್ದೀಪನಗೊಳಿಸುವುದೇ ನಮ್ಮ ರಾಷ್ಟ್ರೀಯತೆ. ಭಾರತವಿದ್ದರೆ ನಾವು; ನಾವಿದ್ದರೆ ಭಾರತ ಎಂಬ ಅರಿವನ್ನು ಹೊಂದುವುದು. 


ಸಹಸ್ರ ವರ್ಷಗಳ ರಾಜಕೀಯ, ಸಾಂಸ್ಕೃತಿಕ, ಆಧ್ಯ್ಯಾತ್ಮಿಕ ಭವ್ಯಪರಂಪರೆಯುಳ್ಳ ಈ ರಾಷ್ಟ್ರೀಯತೆಯ ವಿಶಾಲವಾದ ಪ್ರಜ್ಞೆಯ ವಿನ್ಯಾಸಗಳು ಜಾತಿಯನ್ನು ಮೀರಿಯೇ ಅಸ್ತಿತ್ವಕ್ಕೆ ಬಂದವುಗಳು. ಹಿಂದುತ್ವವೆಂಬುದು ಮತೀಯ ಪರಿಕಲ್ಪನೆಯಲ್ಲ. ಹಿಂದೂ ರಾಷ್ಟ್ರವಾಚಕವಾದ ಮೇಲೆ ಹಿಂದುತ್ತ್ವ ಎಂಬುದು ಮತೀಯ ಅಥವಾ ಕೋಮು ಅಂತಾಗಲು ಹೇಗೆ ಸಾಧ್ಯ? ಕ್ರೈಸ್ತ, ಇಸ್ಲಾಂ, ಜೈನ್, ಪಾರಸೀ, ಗಾಣಪತ್ಯ, ಬೌದ್ಧ ಯಾವುದೇ ಮತ-ಧರ್ಮಗಳು ಈ ಬಗೆಯ ಅರ್ಥವ್ಯಾಪ್ತಿಯುಳ್ಳ ಹಿಂದುತ್ತ್ವವನ್ನು ಹೊಂದಲು ಸಾಧ್ಯವಾಗುವ ದಿನಗಳನ್ನು ಸ್ವಾತಂತ್ರ್ಯಪೂರ್ವೋತ್ತರ ದಿನಗಳಲ್ಲಿ, ಎಲ್ಲ ಬಗೆಯ ಗೊಂದಲಗಳಿಂದ ಮುಕ್ತರಾಗುವಂತೆ ಮಾಡಿ ಈ ರಾಷ್ಟ್ರವನ್ನು ಸಮರ್ಥವಾದ ಅಡಿಪಾಯದೊಂದಿಗೆ ಕಟ್ಟುವುದಕ್ಕೆ ಮುಂದಾಗಿದ್ದರೆ ಹಿಂದುತ್ತ್ವದ ಸಮಕಾಲೀನ ವಿನ್ಯಾಸಗಳು ಮತ್ತು ಇತರ ಮತೀಯ ವಿನ್ಯಾಸಗಳು ಪರಸ್ಪರ ಮುಖಾಮುಖಿಯಾಗಿ ಸಂಘರ್ಷಕ್ಕಿಳಿಯುತ್ತಿರಲಿಲ್ಲ. ನೆಹರೂಗೆ ಈ ಹೆಜ್ಜೆಯನ್ನಿಡುವುದಕ್ಕೆ ವಿಪುಲವಾದ ಅವಕಾಶವಿತ್ತು. ರಾಷ್ಟ್ರೀಯತೆಯನ್ನೇ ಮುಖ್ಯವಾಹಿನಿಗೆ ತಂದು ಯಾರನ್ನೂ ಓಲೈಸದಿದ್ದರೆ ಈ ಪರಿಯಲ್ಲಿ ಮತೀಯ ಸಂಘರ್ಷಗಳು ರಾಷ್ಟ್ರವನ್ನು ಕಾಡುತ್ತಿರಲಿಲ್ಲವೇನೋ! ಪಟೇಲರು ಇದನ್ನು ಬಯಸಿದ್ದರು. ಆದರೆ ನೆಹರೂ ಎಂಬ ನೆಗೇಷಿಯಸಂ ಇದಕ್ಕೆ ಅಡ್ಡಿಯಾಯಿತು. ಹಿಂದೂ ಸಾಂಸ್ಕೃತಿಕ ತಂತುಗಳನ್ನೆಲ್ಲ ಒಟ್ಟುಗೂಡಿಸಿ, ಹಿಂದೂಗಳ ಅಸ್ತಿತ್ವವನ್ನು ಸಮಗ್ರವಾಗಿ ಬಲಿಸಿ ಬೆಳೆಸಿದ್ದರೆ, ಅನಪೇಕ್ಷಿತ ರಾಜಕೀಯ ಫಲಗಳನ್ನು ಇಂದು ಕಾಣಲು ಸಾಧ್ಯವಾಗುತ್ತಿರಲಿಲ್ಲ.


ಜಾತಿದ್ವೇಷ ಏಕಿರಲಿಲ್ಲವೆಂದು ಹೇಳುತ್ತ ಸರ್ ಜಾರ್ಜ್ ಬರ್ಡ್ ವುಡ್ ನ ಈ ಮಾತುಗಳನ್ನು ನೆಹರೂ ಸಮರ್ಥಿಸುತ್ತಾರೆ. “ಜಾತಿ ಇರಲಿ, ಬಿಡಲಿ, ನಮ್ಮ ಸ್ಥಿತಿ ಹಾಗಾಗಿ ಬಿಟ್ಟಿದೆ. ಬರ್ಡ್ ವುಡ್ ಹೇಳಿದ್ದು ಒಂದು ದೃಷ್ಟಿಯಲ್ಲಿ ಸರಿಯೆಂದು ನೆಹರೂ ಹೇಳುತ್ತಾರೆ.  ಇಷ್ಟು ದೊಡ್ಡ, ಪ್ರಬಲ, ದೀರ್ಘ ಇತಿಹಾಸದ ವ್ಯವಸ್ಥೆಯು  ಕುಸಿದರೆ ನಮ್ಮ ಚೌಕಟ್ಟೇ ಹಾಳಾದೀತು. ಅನೈಕ್ಯ, ಜಗಳ, ಅಪಾರ ಜನಹಿಂಸೆ, ನೋವುನಲಿವು, ಬಹುಪ್ರಮಾಣದ ವಿಕೃತಿ, ವ್ಯಕ್ತಿ ಜೀವನದಲ್ಲೂ ಸಮಷ್ಟಿಯಲ್ಲೂ ಬರಬಾರದಾದರೆ ಈ ಜಾಗದಲ್ಲಿ ಬೇರೊಂದು ಸಮರ್ಥ ವ್ಯವಸ್ಥೆ ಬೇಕಾಗುತ್ತದೆ. ಅದು ನಮ್ಮ ಕಾಲಕ್ಕೂ ಭಾರತೀಯ ಜಾಯಮಾನಕ್ಕೂ ಒಗ್ಗುವಂತಾಗಿರಬೇಕಾದ್ದು ಮುಖ್ಯ. ಮುಂದರಿದು ನೆಹರು, ನಾವು  ಶೂನ್ಯವನ್ನು ಸೃಷ್ಟಿಸಲಾಗದು! ತುಂಬಬೇಕು. ಇಲ್ಲವಾದರೆ ನಮ್ಮ ಸರ್ವನಾಶದ ರೀತಿಯಲ್ಲಿ  ಅದು ತನ್ನನ್ನು ತುಂಬಿಕೊಂಡೀತು.


ಸ್ವತಃ ಆಡಿದ ಎಚ್ಚರಿಕೆಯ ಮಾತುಗಳನ್ನೇ ನೆಹರೂ ಅನುಸರಿಸಲಾರದೇ ಹೋದರು. ಅವರು ನಡೆಸಿದ ರಾಜಕೀಯ ಪಕ್ಷವೇ ಮತೀಯ ಕಲ್ಪನೆಗಳ ಆ(ವಿ)ಕೃತಿಗಳನ್ನು ಹುಟ್ಟಿಸಿ, ಬೆಳೆಸಿ, ಪೋಷಿಸಿ, ಇತರರಿಗೆ ಮಾದರಿಯಾಗಿ ಹಿಂದುತ್ತ್ವ ಮತ್ತು ಭಾರತೀಯತೆಯನ್ನು ವೋಟಿಗಾಗಿ ಅಪಮೌಲ್ಯ ಗೊಳಿಸಿತು. ಡಾ. ಆರ್.ಸಿ.ಮಜುಂದಾರ್, ಶ್ರೀ ಗುರುಮೂರ್ತಿಯಂಥ ಇತಿಹಾಸ ತಜ್ಞರನ್ನು ಹೊರಗಿಟ್ಟು ಸ್ವಾತಂತ್ರ್ಯೋತ್ತರದ ದಿನಗಳಲ್ಲಿ ಭಾರತದ ಹೊಸ ಇತಿಹಾಸ ರಚನೆಗೆ ನೆಹರೂ ಮುಂದಾದರು. ಅಂದಿನಿಂದಲೇ ತುಷ್ಟೀಕರಣವನ್ನು ಚಿಗುರೊಡೆಸಿ ಬಹು ಮತ್ತು ಅಲ್ಪಸಂಖ್ಯಾತರೆಂದು ವಿಭಾಗಿಸಿ ಬಹುತ್ತ್ವದ ಭಾರತದ ಅಸ್ತಿತ್ತ್ವವನ್ನೇ ತುಂಡುಮಾಡಿ ನಿರಂತರ ಸಂಘರ್ಷಕ್ಕೆ ಬುನಾದಿ ಹಾಕಿ, ಇಂಡಿಯಾ ಬೇರೆ, ಭಾರತ ಬೇರೆ ಅಂತೆಲ್ಲ ಅಪಕಲ್ಪನೆಗಳ ವಿಷಬೀಜವನ್ನು ಬಿತ್ತಿ, ಮೊಳಕೆ ಬರಿಸಿ ಹೆಮ್ಮರವಾಗಿಸಿ ನೀರುಣಿಸಿ ಪೋಷಿಸಿದುದರ ಫಲವಾಗಿ ಭಾರತೀಯ ಪರಂಪರೆಯ ಬಹುತ್ತ್ವವೇ ನಾಶವಾಗುತ್ತಿದೆ.


ಸ್ವಾತಂತ್ರ್ಯ ಬಂದ ದಿನಗಳಲ್ಲಿ ಈ ರಾಷ್ಟ್ರವಾಸಿಗಳಲ್ಲಿ ಭವ್ಯ ಭವಿತವ್ಯದ ಕನಸು ಸಹಜವಾಗೇ ಹುಟ್ಟಿಕೊಂಡಿತ್ತು. ಏನು ಬಂದರೇನು, ಬಿಟ್ಟರೇನು ನಮ್ಮ ಸುಖ-ದುಃಖಗಳು ನಮಗೆ ತಪ್ಪಿದ್ದಲ್ಲ ಎಂಬವರೂ ಇದ್ದರು. ಮತ್ತು ಈಗಲೂ ಇದ್ದಾರೆ. ತಾವು ದುಡಿದುದನ್ನು ದುಡಿಮೆಗೇ ಉಪಯೋಗಿಸುವ ಇಂಥವರು ಜಾತಿ-ಮತ-ಧರ್ಮಗಳಿಗೆ ಬೆಲೆಕೊಟ್ಟವರಲ್ಲ. ಅವರಿಗೆ ರಾಷ್ಟ್ರದ ಚಿಂತನೆಗಿಂತ ಬದುಕು ಮುಖ್ಯವಾಗಿತ್ತು. ಹಾಗಂತ ನಾವೊಂದು ರಾಷ್ಟ್ರವಾಗಿ ಬದುಕುತ್ತಿದ್ದೇವೆಂಬ ಢಾಳ ಅರಿವು ಅವರಲ್ಲಿತ್ತು. ಯಾವುದೋ ದೈವ ಸಾಕ್ಷಾತ್ಕಾರದ ಹಂಬಲದಲ್ಲಿ, ಅದೇ ನಂಬಿಕೆಯಲ್ಲಿ ದೈವದತ್ತವಾದ ಬದುಕನ್ನು ಸಾಗಿಸುತ್ತ, ಇಷ್ಟದೈವಕ್ಕೆ ಹರಕೆಗಳನ್ನು ಒಪ್ಪಿಸುತ್ತ, ನದಿಸಮುದ್ರಗಳಲ್ಲಿ ಮಿಂದುಟ್ಟು, ಬರಿಗಾಲಲ್ಲಿ ನಡೆದು ದೇವರಲ್ಲಿ ಯಥಾನುಶಕ್ತಿ ವಿನಿಯೋಗಗಳನ್ನು ಮಾಡಿ, ದೇವನನ್ನು ಕಾಣುವ ಬಲವಾದ ಹಂಬಲದಲ್ಲಿಯೂ, ಕಂಡೆನೆನ್ನುವ ಪುನೀತಭಾವದಲ್ಲೂ ಜಾತ್ರೆಗಳಲ್ಲಿ ಪಾಲುಗೊಂಡು, ಹಬ್ಬಹರಿದಿನಗಳನ್ನು ಆಚರಿಸುತ್ತ ತಮ್ಮ ಸುತ್ತ ಒಂದು ಸಾತ್ವಿಕರೂಪದ ಮಾನಸಿಕ ಸುಖದ ಪ್ರಭೆಯನ್ನು ಕಟ್ಟಿಕೊಂಡು ಬದುಕುವವರಲ್ಲಿ ಯಾವುದೇ ಮತಸಂಘರ್ಷದ ವಾಸನೆಯೂ ಇರಲಿಲ್ಲ. ಜಾತಿವಾದದ ಪ್ರಶ್ನೆ ಇಂಥವರಲ್ಲಿ ಹುಟ್ಟಿಕೊಳ್ಳುವುದು ರಾಷ್ಟ್ರೀಯತೆಯ ವಿಚಾರದಲ್ಲಲ್ಲ. ಜಾತಿವ್ಯವಸ್ಥೆಯಲ್ಲಿ ಮಾತ್ರ. ಆದರಿಂದ ರಾಷ್ಟ್ರೀಯತೆಗೆ ಅಪಾಯವಿರಲಿಲ್ಲ. ನಾನು ನನ್ನ ಜಾತಿ-ಧರ್ಮಗಳಲ್ಲೇ ಬದುಕುತ್ತ ಈ ರಾಷ್ಟ್ರವನ್ನು ಪ್ರೀತಿಸಬಹುದೆಂಬುದನ್ನು ಸರ್ಕಾರದ ನೀತಿಯಲ್ಲಿ ನೆಹರೂ ಅಭಿವ್ಯಕ್ತಿಸಿದ್ದರೆ ಸಮಕಾಲೀನ ರಾಷ್ಟ್ರೀಯತೆ ಪರಿಕಲ್ಪನೆಯಲ್ಲಿ ಈ ಬೃಹತ್ ಪ್ರಮಾಣದ ಒಡಕುಗಳು ಕಾಣಿಸುತ್ತಿರಲಿಲ್ಲ. ಕ್ರಮೇಣ ಭಾರತೀಯ ಸ್ವಾಭಿಮಾನದ ಅಲೆಗಳ ಬದಲಾಗಿ ಅಭಾರತೀಯ ನಾಸ್ತಿಕತೆ ಬೆಳೆದು ನೈಜ ಭಾರತೀಯತ್ವ ಕ್ಷೀಣಿಸುತ್ತ ಬಂತು. ಕಲೆ, ಸಾಹಿತ್ಯ, ಸಂಗೀತ, ಜನಪದ, ನೃತ್ಯ, ಅಧ್ಯಾತ್ಮ, ಹಬ್ಬಗಳ ಆಚರಣೆಯಲ್ಲಿ ನೆಹರೂಗೆ ನಂಬಿಕೆ ಕಾಣದಿರುವುದು ವಿಪರ್ಯಾಸ೧! 


ಸಿಂಧೂ ತೀರದ ನಾಗರೀಕತೆಯೇ ಬೆಳೆದ ನಾವು ಹಿಂದೂಗಳಾಗದಿರಲು ಹೇಗೆ ಸಾಧ್ಯ? ಸಿಂಧೂ ರೂಪಾಂತರವಲ್ಲವೇ ಹಿಂದೂ? ಈ ನೆಲ-ಜಲ-ವಾಯು-ಸಂಸ್ಕೃತಿ-ಪರಂಪರೆಯ ಜತೆ, ನೈಸರ್ಗಿಕ ಸಂಪತ್ತನ್ನು ರೂಢಿಸಿ, ಋಣಹೊತ್ತು  ಬೆಳೆದವರೆಲ್ಲ ಭಾರತೀಯರೂ ಹೌದು, ಹಿಂದೂಗಳೂ ಅಹುದು. ಇದೊಂದು ಸುದೀರ್ಘ ಸಾಂಸ್ಕೃತಿಕ ಪರಂಪರೆ. ಧರ್ಮವಲ್ಲ. ಈ ರಾಷ್ಟ್ರವಾಸಿಗಳೆಲ್ಲ ಹಿಂದೂಗಳೇ. ರಕ್ತ, ಮಾಂಸಗಳಲ್ಲಿ ಪರಸ್ಪರ ಸಂಸ್ಕೃತಿಯನ್ನು ಹಂಚಿಕೊಂಡವರೇ. ಯಾರದೋ ಒತ್ತಾಯಕ್ಕೆ ಮತಾಂತರ ಹೊಂದಿ ಬದುಕು, ಆಚರಣೆ ಬೇರೆಯಾಗಿರಬಹುದು. ಅದು ಮುಖ್ಯವಲ್ಲ. ನಾವು ಹಿಂದೂಗಳೇ ಅಲ್ಲ ಎಂಬುದು, ಹಿಂದೂ ಪದವನ್ನು ಧರ್ಮವಾಚಕವಾಗಿ ಬಳಸಿದುದರ ದುಷ್ಟ ಫಲವಷ್ಟೆ. ಒಪ್ಪಿ ಸ್ವೀಕರಿಸಿ ಬದುಕಲು ಏನು ಅಡ್ಡಿ? ಭಾರತ ಬೇಕು, ಭಾರತೀಯತೆ ಬೇಡ ಅಂದರೆ.....? 


ರಾಷ್ಟ್ರೀಯತೆ ಪದದ ಅರ್ಥವೇ ಒಂದು ರಾಜಕೀಯ ಪಕ್ಷದ, ಸಂಘಟನೆಯ, ಅಥವಾ ಗುಂಪಿಗೆ ಮಾತ್ರ ಸೀಮಿತವಾಗಿಸಿ ಘಟಿಸಬಾರದ ಅನಾಹುತಗಳಾಗಿ ಪದೇಪದೇ ದ್ವೇಷವನ್ನು ಹರಡುವ ಮಾತುಗಳನ್ನಾಡುತ್ತ, ಕೆಸರೆರಚಿಕೊಳ್ಳುತ್ತ ದುರಂತಕ್ಕೆ ಇಳಿಯುತ್ತಿದ್ದೇವೆ. ರಾಷ್ಟ್ರೀಯತೆಯ ಅರಿವನ್ನು ಸ್ವಾತಂತ್ರ್ಯಾನಂತರದಲ್ಲಿ ಪಠ್ಯಗಳಲ್ಲಿ ಅಳವಡಿಸಿ ಬೋಧಿಸುತ್ತ ಬಂದಿದ್ದರೆ ರಾಷ್ಟ್ರೀಯತೆಯ ಬಗ್ಗೆ ಅಪಧ್ವನಿಗಳು, ಅಪವ್ಯಾಖ್ಯಾನಗಳು ಹುಟ್ಟುತ್ತಿರಲಿಲ್ಲ. ನಮ್ಮನ್ನೆಲ್ಲ ಒಟ್ಟುಗೂಡಿಸುವ, ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂಬ ರಾಷ್ಟ್ರೀಯತೆ ಪ್ರಜ್ಞೆ ಜಾಗೃತವಾಗಬೇಕಾಗಿದೆ. ರಾಜಕಾರಣಿಗಳು, ರಾಜಕೀಯ ಮುಖಂಡರು, ಹಣವಂತರು ಮಾತ್ರವಲ್ಲದೆ ಧಾರ್ಮಿಕ ಮುಖಂಡರು, ಜನಸಾಮಾನ್ಯರು, ಆಯಾ ಮತ ಸಮುದಾಯಗಳ ನೇತಾರರು ನಿಜಾರ್ಥದ ರಾಷ್ಟ್ರೀಯತೆಯನ್ನು ನಿರ್ವಚಿಸಬೇಕು. ತತ್ತ್ವಜ್ಞಾನಿಗಳು ಧರೆಯನ್ನಾಳುವ ದೊರೆಗಳಾಗಬೇಕು ಎಂದವ ಪ್ಲೇಟೋ. ರಾಜಕಾರಣ ಬೇರೆ , ರಾಜಕೀಯ ಬೇರೆ. ಆದರೆ ರಾಷ್ಟ್ರ ಮತ್ತು ರಾಷ್ಟ್ರೀಯತೆ ನಾಣ್ಯದೆರಡು ಮುಖಗಳು. ರಾಷ್ಟ್ರಗೀತೆಯ ವಿಷಯವಾಗಲಿ, ಕಾಶ್ಮೀರವಾಗಲಿ, ರಾಷ್ಟ್ರಭಾಷಾ ವಿಷಯವಾಗಲಿ, ರಾಷ್ಟ್ರಧ್ವಜವಾಗಲಿ, ಗೋವಧೆ ನಿಷೇಧದ ವಿಷಯವಾಗಲಿ, ಏಕತಾ ಕಾನೂನಿನ ವಿಷಯವಾಗಲಿ– ಅವರ ದಾರಿ ಅವರಿಗೆ, ಹಿಂದೂಗಳದ್ದು ಹಿಂದೂಗಳಿಗೆ ಎಂಬ ಗಾಂಧಿಯ ನಿಲುವು ಯಾವ ಭಾರತೀಯನಲ್ಲಿ ರಾಷ್ಟ್ರೀಯತೆಯನ್ನು ಉದ್ದೀಪಿಸೀತು? 


ಹಿಂದೂ ದೇವಳಗಳ ಉತ್ಸವದಲ್ಲಿ ಭಾಗಿಯಾಗಿ ಪಲ್ಲಕ್ಕಿಯನ್ನು ಹೊತ್ತು, ಜಪ–ಯಾಗಗಳನ್ನು ಮಾಡಿಸಿ ಹರಕೆ ತೀರಿಸಿಕೊಳ್ಳುವ ಮುಸ್ಲಿಮರಿಲ್ಲಿದ್ದಾರೆ. ಮುಸ್ಲಿಮ್ ದರ್ಗಾಗಳಿಗೆ ಹೋಗುವ ಹಿಂದೂಗಳಿದ್ದಾರೆ. ಹಿಂದೂ ದೇವ–ದೇವತೆಗಳ ಸ್ತುತಿಸುವ ಮುಸ್ಲಿಮರಿದ್ದಾರೆ. ಪಾಕಿಸ್ತಾನದ ಪ್ರಧಾನಿಗಳ ಸಮ್ಮುಖದಲ್ಲೇ ಗಾಯತ್ರೀಯನ್ನು ಮುಸ್ಲಿಂ ಯುವತಿಯೊಬ್ಬಳು ರಾಗಬದ್ಧವಾಗಿ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾಳೆ. ಭಗವದ್ಗೀತೆಯನ್ನು ಕಂಠಪಾಠ ಮಾಡಿದ ಮುಸ್ಲಿಮರಿದ್ದಾರೆ. ಪ್ರಾಣವೇ ಹೋಗುವಂಥ  ಪರಿಸ್ಥಿತಿಯಲ್ಲಿ ಶುಶ್ರೂಷೆಮಾಡುವ ವೈದ್ಯನ  ಜಾತಿ, ಧರ್ಮ, ಮತ ಯಾವುದಾದರೇನು? ನಾನು ಹಿಂದೂ, ನಾನು ಮುಸ್ಲಿಮ್, ನಾನು ಕ್ರೈಸ್ತ ಅನ್ನದೆ ನಾನು ಮನುಷ್ಯ ಅಂದರೆ ಅನ್ನ ಸಿಕ್ಕೀತು! ಬಡತನ, ಹಸಿವು, ಬೆವರು, ದುಃಖ, ನೋವು, ಅವಮಾನಗಳಿಗೆ ಜಾತಿಧರ್ಮಗಳಿವೆಯೇ? ಮತ-ಧರ್ಮಗಳ ಹಂಗನ್ನು ಬಿಟ್ಟು ಭಾರತೀಯತೆಯ ಗುಂಗಿನಲ್ಲಿ ಬದುಕಬೇಕಿದೆ. ಯಾವುದೂ ಶ್ರೇಷ್ಠವಲ್ಲ, ಯಾವುದೂ ಕನಿಷ್ಠವಲ್ಲ. ಅವರವರ ನಂಬಿಕೆ-ಆಚರಣೆಗಳು ಪ್ರಜಾಸತ್ತಾತ್ಮಕವಾದ ಒಕ್ಕೂಟದ ಇತಿಮಿತಿಗಳಲ್ಲಿರಬೇಕು. ಮತ–ಧರ್ಮದ ಬಗ್ಗೆ ವಿಡಂಬನೆ ಮಾಡಿ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸಬಾರದು. ರಾಷ್ಟ್ರೀಯತೆಗೆ ದ್ರೋಹಗೈದವರು ಕಾನೂನಿಗೊಳಪಡಲೇಬೇಕು. ಒಂದು ರಾಷ್ಟ್ರದ ಪ್ರಜೆಗಳಾಗಿ ರಾಷ್ಟ್ರೀಯತೆಯನ್ನು ಬೇರೆಬೇರೆ ಮತ, ಧರ್ಮಗಳಲ್ಲಿದ್ದೂ ಅಭಿವ್ಯಕ್ತಿಸಲು ಏನು ಅಡ್ಡಿ? ತತ್ತ್ವ ಸಿದ್ಧಾಂತಗಳು ಬೇರೆ, ಬದುಕು ಬೇರೆ. ಅವುಗಳನ್ನು ಬಿಟ್ಟ ಬದುಕು ಬದುಕಾಗಿರಲು ಸಾಧ್ಯವಿಲ್ಲ. ಇದರಲ್ಲಿ ವಂಚನೆ ಸಲ್ಲ. ರಾಜಕಾರಣವು ಧರ್ಮವನ್ನು ವ್ಯಾಖ್ಯಾನಿಸಬಾರದು. ಒಂದು ರಾಷ್ಟ್ರದಲ್ಲಿದ್ದೇವೆಂಬಲ್ಲಿ ರಾಷ್ಟ್ರೀಯತೆಯ ಆಂತರಿಕ ವಿನ್ಯಾಸಗಳು ರಾಷ್ಟ್ರಕ್ಕೆ ಪೂರಕವಾಗಿ ಇದ್ದರೇನೇ ತಾನೆ ಆಂತರ್ಯದಲ್ಲಿ ರಾಷ್ಟ್ರ ಪ್ರಬಲವಾಗುವುದು. ಎಲ್ಲ ಮತ-ಧರ್ಮಗಳ ಮುಖ್ಯಧ್ಯೇಯ ರಾಷ್ಟ್ರೀಯ ಹಿತಾಸಕ್ತಿಯುಳ್ಳ ರಾಷ್ಟ್ರಚಿಂತನೆಯಾಗಿರಬೇಕು. ನಿತ್ಯದ ಬದುಕಿನ ಎಲ್ಲ ಸ್ತರಗಳಲ್ಲೂ ರಾಷ್ಟ್ರೀಯತೆಯೇ ಪ್ರಧಾನವಾಗಿರಬೇಕು. 


ಜಗತ್ತಿನ ಬಹುರಾಷ್ಟ್ರಗಳು ಮುಸ್ಲಿಂ ಭಯೋತ್ಪಾದನೆಯನ್ನು ಶಂಕಿಸಿವೆ, ಆರೋಪಿಸಿವೆ, ಆಪಾದಿಸಿವೆ. ದೊಡ್ದ ದೊಡ್ದರಾಷ್ಟ್ರಗಳು ಕಟ್ಟಾ ವಿರೋಧಿಯಾಗಿದೆ. ಟರ್ಕಿ, ಪಾಕಿಸ್ತಾನ, ಬಾಂಗ್ಲಾ ಮತ್ತಿತರ ರಾಷ್ಟ್ರಗಳು ಅನುಭವಿಸುತ್ತಿರುವ ಪಾಡೇನು? ಎಲ್ಲ ಬಗೆಯ ಭಯೋತ್ಪಾದನೆಯನ್ನು ಬಿಟ್ಟು ರಾಷ್ಟ್ರೀಯತೆಯಡಿಯಲ್ಲಿ ಕೂಡಿ ಬದುಕುವ, ಕೂಡಿ ಶ್ರಮಿಸುವ, ಆವಶ್ಯದ ಸೋದರ ಭಾವವನ್ನು ಬೆಳೆಸಿಕೊಳ್ಳುವ, ರಾಷ್ಟ್ರೀಯತೆಗೆ ಭಂಗ ತರುವ ದುಷ್ಟಶಕ್ತಿಗಳ ವಿರುದ್ಧ ಹೋರಾಡುವ, ಪರಸ್ಪರರ ಹಿತಾಸಕ್ತಿಗಳಲ್ಲೇ ಬೆರೆಯುವ, ರಾಷ್ಟ್ರದ ಸಾಂಸ್ಕೃತಿಕ ಸಂಪತ್ತನ್ನು ಗೌರವಾದರದಿಂದ ಕಾಣುವ, ಆ ಸತ್ಯದ ಬೆಳಕಿನಲ್ಲಿ ಬಾಳುವ, ಐಕ್ಯತೆಗೆ ಭಂಗತರುವ ಕೂಟಗಳನ್ನು ವಿರೋಧಿಸುವ ದೊಡ್ಡ ಮನೋದಾರ್ಢ್ಯ ಮತ್ತು ಮನೋಶಕ್ತಿಗಳನ್ನು ಹೊಂದುವ ಮೂಲಕ ಈ ಬಹುತ್ತ್ವದ ರಾಷ್ಟ್ರವನ್ನು ಉತ್ಕರ್ಷದೆಡೆಗೆ ಒಯ್ಯುವ ಸಂಕಲ್ಪವನ್ನು ನಾವು ಒಂದಾಗಿ ಮಾಡಬೇಕಿದೆ. ದುಷ್ಟ ರಾಜಕೀಯದ ಬಲೆಯಿಂದ ಪಾರಾದರೆ ನಮ್ಮೆಲ್ಲರ ರಾಷ್ಟ್ರೀಯತೆ ಒಂದೇ ಆಗುತ್ತದೆ. ತುಷ್ಟೀಕರಣವನ್ನು ತುಚ್ಛೀಕರಿಸಿ ಭಾರತೀಯರಾಗಬೇಕಿದೆ. ಸಾಹಿತ್ಯ-ಸಂಗೀತಕ್ಕೆ, ನಿತ್ಯಜೀವನ ಕ್ರಮಕ್ಕೆ, ಉಡುಗೆ-ತೊಡುಗೆಗಳಿಗೆ ಜಾತಿಯಿದೆಯೆ? ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ– ಶ್ರೇಷ್ಠ ವಿಚಾರಗಳು ವಿಶ್ವದೆಲ್ಲೆಡೆಯಿಂದ ನಮಗೆ ಬರಲಿ ಎಂದೂ, ವಿಶ್ವದೊಳಿತನ್ನು ಬಯಸುವ ಗುಣೌದಾರ್ಯ ಮತ್ತು ಜಗತ್ತಿನಲ್ಲೇ ಅಧ್ಯಾತ್ಮದಲ್ಲಿ ಬೇರುಬಿಟ್ಟ ನಾಗರಿಕತೆ ನಮ್ಮದು ಮಾತ್ರ. ಸರ್ವೇ ಜನಾಃ ಸುಖಿನೋ ಭವಂತು ಎಂದ ವಿಶ್ವದೇಕೈಕ ಸನಾತನಧರ್ಮ ಈ ನೆಲದ್ದು. ಇಲ್ಲಿನ ರಾಷ್ಟ್ರೀಯತೆಯ ಮೂಲಸ್ರೋತವೇ ಇದು. ವೇದೋಪನಿಷತ್ತುಗಳು- ಪುರಾಣ-ಗೀತೆ-ವೇದಾಂಗಗಳಲ್ಲಿ ಇಲ್ಲದ್ದು ಏನಿದೆ, ಎಲ್ಲಿದೆ? ನಮ್ಮದ್ದನ್ನು ನಮಗೆ ತಿರುಗಿ ಯಾರೇ ಕೊಟ್ಟರೂ ಸ್ವೀಕರಿಸಿದ ಹಿರಿತನವು ನಮ್ಮ ಔದಾರ್ಯವೇ ಹೊರತು ದೌರ್ಬಲ್ಯವಲ್ಲ. 


 -ಟಿ. ದೇವಿದಾಸ್




Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top