ಜೀವನ ಶಿಕ್ಷಣ: ನಾವು ಪೋಷಕರು ಬದಲಾಗಬೇಕಿದೆ

Upayuktha
0


- ಟಿ. ದೇವಿದಾಸ್


ಶಾಲೆ ಅಂದರೆ ದೇಗುಲ, ಶಿಕ್ಷಕರು ಅಂದರೆ ಗುರುಗಳು (ಶಿಕ್ಷಕ, ಟೀಚರ್ ಅರ್ಥದಲ್ಲಲ್ಲ)  ಅಂತ ಭಾವಿಸಿದ ಕಾಲದಲ್ಲಿ ಓದಿದ ತಲೆಮಾರಿನವರು ಸರಿಹೊತ್ತಿನ‌ ಮಿತಿಮೀರಿದ ಆಧುನಿಕತೆಯಲ್ಲೂ, ಸಾರ್ವಜನಿಕ ಬದುಕೇ ಶುದ್ಧಾತಿಶುದ್ಧ ವ್ಯವಹಾರವಾದ ಸಂದರ್ಭದಲ್ಲೂ ಅಂಥ ಪಲ್ಲಟಗಳು ಏನೂ ಆಗದೆ ಅದೇ ಪವಿತ್ರ ಭಾವದಲ್ಲಿ ಬದುಕುತ್ತಿದ್ದಾರೆ. ಅವರು ತಮ್ಮ ಮಕ್ಕಳಿಗೆ ಕಲಿಸುವ‌ ಶಿಕ್ಷಕರ ಬಗ್ಗೆ ತಮ್ಮ ಪೋಷಕರು ತಮ್ಮ ಶಿಕ್ಷಕರ ಮೇಲೆ ಯಾವ ಭಾವವನ್ನು ಹೊಂದಿದ್ದರೋ ಅದೇ ಭಾವವನ್ನೇ ಈಗಲೂ ಉಳಿಸಿಕೊಂಡಿದ್ದಾರೆ. ಅವರ ಧೋರಣೆಯಲ್ಲಿ ಅಂಥಾದ್ದೇನೂ ಬದಲಾವಣೆಯಾಗಿಲ್ಲ. ಆದರೆ, ಈ ಕಾಲದಲ್ಲಿ ಶಾಲೆಗಳು ಕಮರ್ಷಿಯಲ್ ಕೇಂದ್ರಗಳಾಗಿವೆ. ಹೆಚ್ಚು ಫೀಸು ತಗೊಳ್ಳುವ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳು ಶಿಕ್ಷಣವನ್ನು ಕಾರ್ಪೋರೇಟ್ ಪ್ರಪಂಚದ ಹಣ ಮಾಡುವ ಸರಕನ್ನಾಗಿ ಬದಲಾಯಿಸಿದೆ. ಇದಕ್ಕೆ ಪೂರಕವೋ ಎಂಬಂತೆ ಕಾಲಕಾಲಕ್ಕೆ ಜಾರಿಗೆ ಬರುವ ಸರ್ಕಾರದ ಶಿಕ್ಷಣ ನೀತಿಗಳು ಕೂಡ ಶಿಕ್ಷಣವನ್ನು ಶಿಕ್ಷಕರನ್ನು ದುರ್ಬಲಗೊಳಿಸುತ್ತಲೇ ಬಂದಿವೆ. ಅಂದರೆ ಸರ್ಕಾರಿ ಶಾಲೆಗಳು ಬಲಗೊಳ್ಳದೆ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳು ಬಲಗೊಳ್ಳುತ್ತಲೇ ಸರ್ಕಾರಿ ಶಾಲೆಗಳು ಬಲಹೀನಗೊಂಡು ಮುಚ್ಚುತ್ತಿವೆ ಎಂದರೆ ಅಚ್ಚರಿಯೇನಲ್ಲ.


ಸರ್ಕಾರದ ಕಾಯ್ದೆ ಕಾನೂನುಗಳನ್ನು ಪೋಷಕರು ತಮಗೆ ಬೇಕಾದ ಹಾಗೆ, ತಮ್ಮ‌ ಮಕ್ಕಳ ಕಲಿಕೆಯ ಕುರಿತಾದ ಸಮಸ್ಯೆಗಳಿಗೆ ಪರಿಹಾರ ಎನ್ನುವ ರೀತಿಯಲ್ಲಿ ಬಳಸಿಕೊಳ್ಳುವ ಅಪರೋಕ್ಷ ಪ್ರವೃತ್ತಿ ಹೆಚ್ವುತ್ತಿರುವುದರಿಂದ ಅವರದೇ ಮಕ್ಕಳ ಕಲಿಕೆ ಕುಂಠಿತಗೊಳ್ಳುತ್ತಿದೆ. ಮೊದಲೆಲ್ಲ ಶಾಲೆಗಳಲ್ಲಿ ಏಕರೂಪ ಶಿಕ್ಷಣ ನೀತಿ‌ನಿಯಮಗಳು ಇರುವಂತೆಯೇ ಶಾಲೆಗಳ ಅಸ್ತಿತ್ವ ಕೂಡ ಒಂದೇ ತೆರನಾಗಿತ್ತು. ಬೋಧನೆಯಲ್ಲಿ ಸ್ವಲ್ಪಮಟ್ಟಿಗಿನ ವ್ಯತ್ಯಾಸವಿದ್ದರೂ (ಈಗಲೂ ನೀತಿನಿಯಮಗಳು ಒಂದೇ ತೆರನಾದದ್ದು. ಆದರೆ ಕಲಿಕೆ ಮತ್ತು ಬೋಧನೆಗೆ ಸಂಬಂಧಿಸಿದಂತೆ ತುಂಬಾ ವ್ಯತ್ಯಾಸವಿದೆ. ಸಹಪಠ್ಯವಂತೂ ಸಂಪೂರ್ಣ ಭಿನ್ನವೆಂದರೂ ತಪ್ಪಲ್ಲ) ಬದುಕಿಗೆ ಬೇಕಾದ ಮೌಲ್ಯಗಳನ್ನು ಹೇಳಿಕೊಡುವಲ್ಲಿ ಯಾವ ವ್ಯತ್ಯಾಸವೂ ಶಾಲೆಗಳಲ್ಲಿ ಇಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಅಂದರೆ, ಮೌಲ್ಯ ಬೋಧನೆ ಅಂದಿನ ದಿನಮಾನಗಳಲ್ಲಿ ಎಲ್ಲ ಶಾಲೆಗಳಲ್ಲೂ ಒಂದೇ ತೆರನಾಗಿತ್ತು.


ಮುಖ್ಯವಾಗಿ, ಬದುಕಿನ ಕುರಿತಾದ ಭವಿಷ್ಯದ ಚಿಂತನೆಯಲ್ಲಿ ಅತಿಯಾಗಿ ದುಡ್ಡು ಮಾಡಬೇಕೆನ್ನುವ ಲೋಭದ ಮತ್ತು ಸ್ವಾರ್ಥ ವಾಸನೆ ಇರುತ್ತಿರಲಿಲ್ಲ. ಬದುಕಿಗಾಗಿ ಬೇಕಾದಷ್ಟು ಸಂಪಾದಿಸಬೇಕಾದ ಹಣದ ವಾಸನೆ ಇದ್ದರೂ ಮೌಲ್ಯಗಳನ್ನು ಬಲಿಕೊಟ್ಟು ಹಣಮಾಡುವ ಸ್ವಭಾವ ಪೋಷಕರಲ್ಲೂ ಇಲ್ಲವಾಗಿತ್ತು. ಅವರು ತಮ್ಮ ಮಕ್ಕಳನ್ನೂ ಅದೇ ತೆರನಾದ ಮನೋಧರ್ಮದಲ್ಲಿ ಬೆಳೆಸಿದರು. ಎಲ್ಲಕ್ಕಿಂತ ಮುಖ್ಯವಾಗಿ, ಅಂದಿನ ಪೋಷಕರು ಮಕ್ಕಳನ್ನು ಸರಿಯಾಗಿ ಬೆಳೆಸದೇ ಸಹಜವಾಗಿ ಬೆಳೆಸಿದವರು. ಇಂದಿನ ಪೋಷಕರಿಗೆ ತಮ್ಮ ಮಕ್ಕಳನ್ನು ಸಹಜವಾಗಿ ಬೆಳೆಸುವ ಬಗೆ ಗೊತ್ತಿಲ್ಲ. ಅದಕ್ಕಾಗಿ ಮಕ್ಕಳ ಸ್ವಭಾವದಲ್ಲಿ ವ್ಯತಿರಿಕ್ತವಾದ ಲಕ್ಷಣಗಳು ಮನೆಯಲ್ಲೂ ಶಾಲೆಯಲ್ಲೂ ಸಾರ್ವಜನಿಕ ಸ್ಥಳದಲ್ಲೂ ಅಭಿವ್ಯಕ್ತಿಯಾಗುತ್ತದೆ. ಮಾಧ್ಯಮಗಳಲ್ಲಿ ಇದನ್ನು ನೋಡುತ್ತಲೇ ಇರುತ್ತೇವೆ. ಅದಕ್ಕೆ ಪೋಷಕರೇ ಪ್ರಮುಖ ಕಾರಣವೆಂದರೆ ಪೂರ್ಣಸತ್ಯವಾಗುವುದಿಲ್ಲ. ಆದರೂ ಪೋಷಕರ ಹೊಣೆಗಾರಿಕೆಯೇ ಪ್ರಧಾನವಾಗಿರುತ್ತದೆ. ಅಂದರೆ ಉತ್ತಮ ಸಂಸ್ಕಾರವನ್ನು ಸಂಸ್ಕೃತಿಯನ್ನು ಮಕ್ಕಳ ಎಳವೆಯಲ್ಲೇ ಪೋಷಕರು ರೂಢಿಸಬೇಕು. ಆರಂಭದಲ್ಲೇ ಶಿಸ್ತಿನ ಜೀವನಕ್ಕೆ ಅಣಿಗೊಳಿಸಬೇಕು. ಒಳ್ಳೆಯದು ಮತ್ತು ಕೆಟ್ಟದ್ದನ್ನು ಅರ್ಥೈಸಬೇಕು. 


ಯಾವುದೇ ವಿಚಾರದಲ್ಲೂ ಬಲವಂತದ ಆಗ್ರಹವೆಂಬುದು ಪೋಷಕರಲ್ಲಿ ಸಹಜವೆಂಬಂತೆಯೂ, ಗೀಳಾಗಿಯೂ ಅದು ತಮ್ಮ ಮಕ್ಕಳ ಮುಂದೆಯೇ ಶಾಲೆಗಳಲ್ಲಿ ಧಾರ್ಷ್ಟ್ಯದ ಅಭಿವ್ಯಕ್ತಿಯಾಗಿ ಕಾಣುತ್ತಿರುವುದು ಎಲ್ಲರ ಗೊತ್ತಿರುವ ಸಂಗತಿ. ಅದು ಖಾಸಗಿ ಶಾಲೆಗಳಲ್ಲಿ ನಿತ್ಯದ ವರ್ತಮಾನವಷ್ಟೇ ಅಲ್ಲ, ಗೋಳು ಕೂಡ. ಮನೆಯ ಪಾಠ ಸರಿಯಾಗಿದ್ದರೆ ಶಾಲೆಯ ಪಾಠವನ್ನು ಮಕ್ಕಳು ಗಮನವಿಟ್ಟು ಕೇಳುತ್ತಾರೆ. ಮನೆಗೆ ಕೊಡುವ ಪಾಠಕ್ಕಿಂತ ಮನೆಯಲ್ಲಿ ಕಲಿಸುವ ಪಾಠವೇ ಅತ್ಯಂತ ಮಹತ್ವವೂ, ಅನಿವಾರ್ಯವೂ, ಅತ್ಯಗತ್ಯವೂ ಆದುದ್ದಾಗಿದೆ. ಆದ್ದರಿಂದ ಮಗುವಿನ ಒಟ್ಟೂ ಬೆಳವಣಿಗೆಯಲ್ಲಿ ಪೋಷಕರೇ ಪಾತ್ರವೇ ಅತೀ ಮಹತ್ವದ್ದು. ಪೋಷಕತ್ವ ಎಂಬುದು ನಿರಂತರವಾಗಿ ವಿಕಸನಗೊಳ್ಳುತ್ತಿ ರುವ ಪ್ರಕ್ರಿಯೆಯೇ ಹೊರತು ಕೇವಲ ಮಗುವಿನ ಮೂಲಭೂತ ಪೋಷಣೆ ಮತ್ತು ಅಗತ್ಯಗಳನ್ನು ಒದಗಿಸುವುದಕ್ಕೆ ಮಾತ್ರ ಸೀಮಿತವಲ್ಲ. ಉತ್ತಮ ಪೋಷಕರು ಶಾಲೆಯ ಮತ್ತು ಅದರಾಚೆಯ ಯಶಸ್ಸಿಗೆ ಬೇಕಾದ ಅರಿವು ಮತ್ತು ಸಾಮಾಜಿಕ ಕೌಶಲ್ಯಗಳ ಅಭಿವೃದ್ಧಿಗೆ ಮಕ್ಕಳಿಗೆ ಆಧಾರವಾಗಿ ನಿಲ್ಲುತ್ತಾರೆ.


ಮಕ್ಕಳ ಕಲಿಕೆಯ ವಿಚಾರದಲ್ಲಿ ಮಾತ್ರವಲ್ಲ ಎಲ್ಲ ವಿಚಾರಗಳಲ್ಲೂ ನಾವು ಪೋಷಕರು ಬದಲಾಗಬೇಕಿದೆ. ಮಕ್ಕಳಿಗೆ ಶಿಕ್ಷಣ ನೀಡುವ ಶಾಲೆಯದ್ದೇ ಸಂಪೂರ್ಣ ಜವಾಬ್ದಾರಿಯಲ್ಲ ಎಂಬುದನ್ನು ಮೊದಲು ಪೋಷಕರು ಅರ್ಥಮಾಡಿಕೊಳ್ಳಬೇಕು. ಶಿಕ್ಷಣವು ಆರಂಭವಾಗುವುದು ಮನೆಯಿಂದಲೇ! ಮಕ್ಕಳ ಗುಣ ಸ್ವಭಾವ, ಅಭ್ಯಾಸಗಳು, ಭಾವನಾತ್ಮಕ ಬೆಳವಣಿಗೆ, ಅಲೋಚನೆಯ ಮನಸ್ಥಿತಿ, ಅಭಿವ್ಯಕ್ತಿ, ವರ್ತನೆ ಇತ್ಯಾದಿ ಎಲ್ಲವೂ ರೂಪುಗೊಳ್ಳುವುದು ಮನೆಯಲ್ಲಿ ಎಂಬ ವಾಸ್ತವ ಪೋಷಕರಿಗೆ ತಿಳಿದಿರಬೇಕು. ಪೋಷಕರದೇ ಇಲ್ಲಿ ನಿರ್ಣಾಯಕ ಪಾತ್ರವಾಗಿರುತ್ತದೆ. ವಿದ್ಯಾರ್ಥಿಯ ಭವಿಷ್ಯದ ಯಶಸ್ಸಿನ ಅಡಿಪಾಯ ಮನೆಯೇ ಹೊರತು ಶಾಲೆಯಲ್ಲ. ಮಕ್ಕಳ ಯಶಸ್ಸಿಗೆ ಶಾಲೆ ಸೂಕ್ತವಾದ ಸಮರ್ಥ ವೇದಿಕೆಯಷ್ಟೇ. ಅಡಿಪಾಯವನ್ನು ಭದ್ರಗೊಳಿಸಿ ವೇದಿಕೆ ಏರುವುದಕ್ಕೆ ಸಿದ್ಧತೆಗಳೆಲ್ಲ ಮನೆಯಲ್ಲೇ ಆಗಬೇಕು. ಪೋಷಕರೇ ಆ ಜವಾಬ್ದಾರಿಯನ್ನು ನಿರ್ವಹಿಸಬೇಕು. ಶಾಲೆಯೊಂದಿಗೆ ಆರೋಗ್ಯಯುತವಾದ ಸಂಬಂಧವನ್ನು ಸಂಪರ್ಕವನ್ನು ಪೋಷಕರು ಹೊಂದಿರುವುದು ಎರಡೂ ನೆಲೆಯಲ್ಲಿ ಅತೀ ಅಗತ್ಯ ಮತ್ತು ಆವಶ್ಯಕವಾದುದು. ಮಗುವಿನ ಶಿಕ್ಷಣದಲ್ಲಿ ಪೋಷಕರ ಪಾಲ್ಗೊಳ್ಳುವಿಕೆಯ ಪ್ರಮಾಣವು ವಿದ್ಯಾರ್ಥಿಯ ಯಶಸ್ಸಿನ ಅತ್ಯುತ್ತಮ ಮುನ್ಸೂಚಕ ಎಂದು ಸಂಶೋಧನೆ ಹೇಳಿದೆ.

ಪೋಷಕರು ತಮ್ಮ ಮಕ್ಕಳ ಪ್ರತಿಭಾ ಸಾಮರ್ಥ್ಯ, ದೌರ್ಬಲ್ಯ ಮತ್ತು ಆಸಕ್ತಿಯ ಬಗ್ಗೆ ಹೆಚ್ಚು ತಿಳಿದಿರುತ್ತಾರೆ. ಅದರಿಂದಾಗಿ ಮಗುವಿನ ಕಲಿಕೆ ಮತ್ತಿತರ ಸಂಗತಿಗಳಿಗೆ ಮತ್ತು ನಿತ್ಯ ಬದುಕಿನ ವಾಸ್ತವಗಳಿಗೆ ಉತ್ತಮವಾದ ಸಂಬಂಧ ಹೊಂದಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ನಾವು ಪೋಷಕರು ಬದಲಾಗಲು ಗಮನಿಸಬೇಕಾದ ಸಂಗತಿಗಳು ಯಾವುವೆಂದರೆ;

1. ನಿಮ್ಮ ಮಕ್ಕಳು ಅನುಸರಿಸಲು ಯೋಗ್ಯವಾದ ಮಾದರಿಯಾಗುವುದು. ಮುಖ್ಯವಾಗಿ, ನಡೆನುಡಿಗಳಲ್ಲಿ, ವ್ಯವಹಾರಗಳಲ್ಲಿ, ಸಂಬಂಧಗಳ ಘನತೆಯನ್ನು ಕಾಪಿಡುವಲ್ಲಿ, ಒಳ ಮತ್ತು ಹೊರ ಸಭ್ಯತೆಯಲ್ಲಿ, ಬಳಸುವ ಭಾಷೆಯಲ್ಲಿ, ವಿನಯ ಮತ್ತು ಪ್ರಾಮಾಣಿಕತೆಯಲ್ಲಿ ಮಕ್ಕಳಿಗೆ ಮಾದರಿಯಾಗುವುದು.

2. ಮಕ್ಕಳ ಓದು ಬರೆಹ ಮತ್ತಿತರ ಚಟುವಟಿಕೆಗಳಲ್ಲಿ ನಿತ್ಯವೂ ಅನುಸಂಧಿಸುವುದು.

3. ಮನೆಯಲ್ಲಿ ಕಲಿಕೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು.

4. ಮಕ್ಕಳನ್ನು ಪ್ರೋತ್ಸಾಹಿಸುವುದು, ಬೆಂಬಲಿಸುವುದು, ಸ್ವೀಕರಿಸುವುದು, ಸಕಾರಾತ್ಮಕವಾಗಿ ಭಾವನಾತ್ಮಕವಾಗಿ ಬಲಪಡಿಸುವುದು, ವಿಫಲಗೊಂಡಾಗ ಧೈರ್ಯ ತುಂಬುವುದು, ಪ್ರೀತಿ ಮತ್ತು ಮುಕ್ತತೆಯ ವಾತಾವರಣವನ್ನು ಕಲ್ಪಿಸುವುದು.


5. ಶೈಕ್ಷಣಿಕ ಪ್ರಗತಿಯ ಮೇಲೆ ನಿಗಾ ಇರಿಸಿ ನಿತ್ಯದ ಅಧ್ಯಯನಕ್ಕೆ ಸ್ಪಂದಿಸುವುದು.

6. ಶಾಲೆಯಲ್ಲಿ ಆದ ಬೋಧನೆ, ಕಲಿಕೆ, ಮನೆಗೆಲಸ, ಪಠ್ಯ ಮತ್ತು ಪಠ್ಯೇತರ ವಿದ್ಯಮಾನಗಳ ಬಗ್ಗೆ ಚರ್ಚಿಸುವುದು, ಮಕ್ಕಳ ಜ್ಞಾನಾನುಭವಗಳೊಂದಿಗೆ ಪೋಷಕರು ತಮ್ಮ ಅನುಭವವನ್ನು ಮಕ್ಕಳೊಂದಿಗೆ ಹಂಚಿಕೊಳ್ಳುವುದು.

7. ಮನೆಯಲ್ಲಾಗಲಿ, ಶಾಲೆಯಲ್ಲಾಗಲಿ ಮಕ್ಕಳು ಯಾವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಗೊತ್ತುಮಾಡಿಕೊಳ್ಳುವುದು.

8. ಪೋಷಕರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮಕ್ಕಳನ್ನು ಒಳಗೊಳ್ಳಿಸಿಕೊಳ್ಳುವುದು.

9. ಬದುಕಿಗೆ ಬೇಕಾಗುವ ಕೌಶಲಗಳು ತಮ್ಮ ಮಕ್ಕಳಲ್ಲಿ ಬೆಳೆಯುವಂತೆ ಅವರನ್ನು ವಾರಕ್ಕೆ ಎರಡು ಸಲವಾದರೂ ಬೇರೆ ಬೇರೆ ಕಾರ್ಯಗಳಲ್ಲಿ ತೊಡಗಿಸುವುದು.

10. ಕಲಿಕೆಯ ಗತಿ, ಪ್ರಗತಿ, ಸಲಹೆ ಸೂಚನೆಗಳಿಗಾಗಿ ಕನಿಷ್ಠ ತಿಂಗಳಿಗೊಮ್ಮೆಯಾದರೂ ಮಕ್ಕಳ ಶಿಕ್ಷಕರೊಂದಿಗೆ ಮುಕ್ತವಾಗಿ ಚರ್ಚಿಸುವುದು.


11. ಶಿಕ್ಷಕರು ಸೂಚಿಸಿದ್ದನ್ನು ಮಕ್ಕಳಲ್ಲಿ ಪ್ರತಿಬಿಂಬಿಸಿ ಮತ್ತು ಅದರ ವ್ಯತ್ಯಾಸಗಳನ್ನು ಖಚಿತಪಡಿಸಿಕೊಳ್ಳುವುದು.

12. ಕಲಿಕೆಗೆ ತೀರಾ ಅನಿವಾರ್ಯ ಮತ್ತು ಅಗತ್ಯ ಎನಿಸಿದರೆ ಮಾತ್ರ ಮೊಬೈಲ್, ಟಿವಿಗಳನ್ನು ಕೊಟ್ಟು ಬಳಸುವ ಸಂದರ್ಭದಲ್ಲಿ ಖುದ್ದು ಎಚ್ಚರವನ್ನು ವಹಿಸಿ. ಪೂರಕ ಜ್ಞಾನವನ್ನು ಪಡೆಯುವಲ್ಲಿ ಅವರೊಂದಿಗೆ ಸಹಕರಿಸುವುದು.

 13. ಬಿಡುವಿನಲ್ಲಿ ಸಾಧ್ಯವಾದಷ್ಟೂ ಆಟ-ಪಾಠಗಳಲ್ಲಿ, ರಾಮಾಯಣ, ಮಹಾಭಾರತವನ್ನು, ಸಾಧಕರ ವ್ಯಕ್ತಿಚಿತ್ರಣವನ್ನು, ಕಥಾ ಪುಸ್ತಕಗಳನ್ನು, ದಿನಪತ್ರಿಕೆಗಳನ್ನು, ವಿಶೇಷಾಂಕಗಳನ್ನು ಓದುವಂತೆ ರೂಢಿಗೊಳಿಸುವುದು.

14. ವ್ಯಾಯಾಮ, ಆಹಾರ, ಆರೋಗ್ಯದ ಬಗ್ಗೆ ಸ್ವಕಾಳಜಿಯ ಮಹತ್ವವನ್ನು ಮಕ್ಕಳಲ್ಲಿ ಮೂಡಿಸುವುದು.

 15.. ಮಕಳಿಗಾಗಿ ಒಂದು ಹಂತದವೆರೆಗೆ ದಿನಚರಿಯನ್ನು ಸ್ಥಾಪಿಸಿ. ಅದನ್ನು ಪಾಲಿಸುವ ಜವಾಬ್ದಾರಿ ಪ್ರಜ್ಞೆಯನ್ನು ಬೆಳೆಸುವುದು.

16. ದಿನದಿನದ ಶೈಕ್ಷಣಿಕ ಪ್ರಗತಿಯನ್ನು ಅವಲೋಕಿಸಿ. ಹೋಮ್ ವರ್ಕ್, ಅಸೈನ್ ಮೆಂಟ್, ಪರೀಕ್ಷಾ ಫಲಿತಾಂಶಗಳನ್ನು ನಿಯಮಿತವಾಗಿ ಪರಿಶೀಲಿಸುವುದು. ಸುಧಾರಣೆಯ ಅಗತ್ಯವಿರುವ ಯಾವುದೇ ಕಾಳಜಿ ಅಥವಾ ಕ್ಷೇತ್ರಗಳನ್ನು ಚರ್ಚಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿ ಅವರ ಸಾಧನೆಗಳನ್ನು ಆಚರಿಸುವುದು.

17. ಸಕಾರಾತ್ಮಕ ನಡವಳಿಕೆಯನ್ನು ಬಲಪಡಿಸುವುದು. ಗೌರವ, ಜವಾಬ್ದಾರಿ ಮತ್ತು ಪರಿಶ್ರಮದಂತಹ ಮೌಲ್ಯಗಳನ್ನು ಕಲಿಸುವುದು. ಶೈಕ್ಷಣಿಕ ಬದ್ಧತೆಗಳು, ಹೋಮ್ ವರ್ಕ್ ಪೂರ್ಣಗೊಳಿಸುವಿಕೆ ಮತ್ತು ತರಗತಿಯ ನಡವಳಿಕೆಯ ಬಗ್ಗೆ ಸ್ಪಷ್ಟವಾದ ನಿರೀಕ್ಷೆಗಳು ಮತ್ತು ಗಡಿಗಳನ್ನು ನಿರ್ದಿಷ್ಟ ಪಡಿಸುವುದು.


18. ಮಕ್ಕಳ ತರಗತಿ ಮತ್ತು ವಿಷಯ ಶಿಕ್ಷಕರುಗಳ ಬಗ್ಗೆ ತಿಳಿದುಕೊಳ್ಳಿ. ಅವರೊಂದಿಗೆ ಮುಕ್ತ ಸಂವಹನ ನಡೆಸಿ, ಪೋಷಕ- ಶಿಕ್ಷಕರ ಸಭೆಗಳಿಗೆ ಹಾಜರಾಗಿ, ಇಮೇಲ್ ಅಥವಾ ಫೋನ್ ಮೂಲಕ ಸಂವಹನ ಮಾಡಿ. ಶಾಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ. ನಿಮ್ಮ ಮಗುವಿನ ಸಾಮರ್ಥ್ಯಗಳು, ದೌರ್ಬಲ್ಯಗಳು ಅಥವಾ ಅವರ ಕಲಿಕೆಯ ಮೇಲೆ ಪರಿಣಾಮ ಬೀರಬಹುದಾದ ವೈಯಕ್ತಿಕ ಸಂದರ್ಭಗಳ ಕುರಿತು ಸಂಬಂಧಿತ ಮಾಹಿತಿಯನ್ನು ಹಂಚಿಕೊಳ್ಳುವುದು.

19. ಮಕ್ಕಳ ಶಿಕ್ಷಣದಲ್ಲಿ ಶಿಕ್ಷಕರನ್ನು ಪಾಲುದಾರರಾಗಿಸುವುದು. ಅವರ ಪ್ರಯತ್ನಗಳಿಗೆ ಮೆಚ್ಚುಗೆ ಮತ್ತು ಶೈಕ್ಷಣಿಕ ಪ್ರಗತಿಯನ್ನು ಬೆಂಬಲಿಸುವ ತಂತ್ರಗಳನ್ನು ಬೆಂಬಲಿಸುವುದು. ಪರಿಣಾಮಕಾರಿ ಕಲಿಕೆಯ ತಂತ್ರಗಳು ಅಥವಾ ಪ್ರಯೋಜನಕಾರಿಯಾದ ಹೆಚ್ಚುವರಿ ಸಂಪನ್ಮೂಲಗಳ ಕುರಿತು ಮಾರ್ಗದರ್ಶನವನ್ನು ಪಡೆದುಕೊಳ್ಳುವುದು.

20. ಶಾಲೆಯ ಚಟುವಟಿಕೆಗಳಲ್ಲಿ ಭಾಗವಹಿಸಿ. ಶಾಲೆಯ ಘನತೆಯನ್ನು ಗೌರವಿಸುವುದು. ಬದ್ಧತೆಯೊಂದಿಗೆ ಶಾಲೆಯ ಬಾಂಧವ್ಯವನ್ನು ಬಲಪಡಿಸಿಕೊಳ್ಳುವುದು.


21. ಭೌತಿಕ ಶಿಸ್ತು, ಪರೀಕ್ಷೆ, ಬೋಧನೆ, ಶಾಲಾ ನಿಯಮಗಳು, ಅಧ್ಯಯನದಲ್ಲಿ ಒಳಗೊಳ್ಳುವಿಕೆ, ಅಂಕಗಳಿಕೆ (ನೀವು ಕೇಳಿದಷ್ಟು ಫೀಸು ಕೊಡುತ್ತೇವೆ. ಅದಕ್ಕೆ ಸಮನಾಗಿ ಅಂಕ ಕೊಡಬೇಕು. ಕಡ್ದಾಯವಾಗಿ ಇಂತಿಷ್ಟು ಅಂಕಗಳನ್ನು ಕೊಟ್ಟು ಪಾಸು ಮಾಡಬೇಕು), ಫೀಸ್ ವಿಚಾರದಲ್ಲಿ ಚೌಕಾಸಿ,  ವೈಯಕ್ತಿಕ ಕಾಳಜಿಗೆ ಸಂಬಂಧಿಸಿ ಸಮಸ್ಯೆಗಳು ಉದ್ಭವಿಸಿದರೆ, ಗೌರವಯುತವಾಗಿ ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಯವರೊಂದಿಗೆ ಸಂವಹನ ಮಾಡಿ. ಶೈಕ್ಷಣಿಕ ಅನುಭವಕ್ಕೆ ಅನುಕೂಲವಾಗುವ ಪರಿಹಾರಗಳನ್ನು ಹುಡುಕಲು ಒಟ್ಟಾಗಿ ಕೆಲಸ ಮಾಡುವುದು.

22. ಮಕ್ಕಳ ಕಲಿಕೆ ಮತ್ತು ಬೌದ್ಧಿಕ ಕುತೂಹಲಕ್ಕಾಗಿ ಪ್ರೀತಿಯನ್ನು ಪ್ರದರ್ಶಿಸಿ. ಪುಸ್ತಕಗಳು, ಘಟನೆಗಳು, ಆಸಕ್ತಿದಾಯಕ ವಿಷಯಗಳಲ್ಲಿ ತೊಡಗಿಸಿಕೊಳ್ಳಿ. ಶಾಲೆಯ ಹೊರಗೆ ಮಕ್ಕಳ ಆಸಕ್ತಿಗಳನ್ನು, ಹವ್ಯಾಸಗಳನ್ನು, ಪಠ್ಯೇತರ ಅನ್ವೇಷಣೆಗಳನ್ನು ಬೆಂಬಲಿಸಿ ಉತ್ತೇಜನ ನೀಡುವುದು.

23. ಮಗುವಿನ ಪ್ರಯತ್ನ, ಪ್ರಗತಿ ಮತ್ತು ಸಾಧನೆಗಳನ್ನು ಆಚರಿಸಿ ಸಂಭ್ರಮಿಸುವಾಗ ಬಹುಮಾನದ ರೂಪದಲ್ಲಿ ಪುಸ್ತಕಗಳನ್ನು ನೀಡುವುದು. ಈ ಧನಾತ್ಮಕ ಬಲವರ್ಧನೆಯು ಶಿಕ್ಷಣದ ಮೌಲ್ಯವನ್ನು ಬಲಪಡಿಸುತ್ತದೆ ಮತ್ತು ಯಶಸ್ಸಿಗೆ ಶ್ರಮಿಸುವುದನ್ನು ಪ್ರೇರೇಪಿಸುತ್ತದೆ.

24. ಶಾಲೆ, ಶಿಕ್ಷಕರು, ಸಹಪಾಠಿಗಳನ್ನು, ಬೋಧನೆ ಮತ್ತು ಕಲಿಕೆಯನ್ನು ಪ್ರೀತಿಸುವಂತೆಯೂ, ಎಲ್ಲರಲ್ಲೂ ವಿಧೇಯರಾಗಿರುವುದನ್ನು, ವಿನಯರಾಗಿರುವುದನ್ನು, ಪ್ರಾಮಾಣಿಕರಾಗಿರುವುದನ್ನು ಹೇಳೀಕೊಡುವುದು.

25. ತಮ್ಮ ಪ್ರಭಾವವನ್ನು ಶಾಲೆಯ ಮೇಲಾಗಲಿ, ತಮ್ಮ ಕಲಿಕೆಯ ಮೇಲಾಗಲಿ ಬೀಳುವಂತೆ ತಾವು ಮಾಡುವುದಿಲ್ಲ ಎಂಬ ಎಚ್ಚರ ತಮ್ಮ ಮಕ್ಕಳಲ್ಲಿರುವಂತೆ ಮಾಡುವುದು.


ಮುಖ್ಯವಾಗಿ, ಎಲ್ಲರನ್ನೂ ಗೌರವಿಸುವ, ಹಿರಿತನಕ್ಕೆ ಮರ್ಯಾದೆ ನೀಡುವ, ಅವರಲ್ಲಿರುವ ಗುಣಸ್ವಭಾವವನ್ನು ಆದರಿಸಿ ಅಳವಡಿಸಿಕೊಳ್ಳುವ ಉತ್ತಮ ಶಿಕ್ಷಣ ಮನೆಯಲ್ಲಿ ನೀಡಬೇಕು. ಉತ್ತಮ ವಾತಾವರಣವನ್ನು ಕಲ್ಪಿಸಬೇಕು. ಶ್ರಮ ಸಂಸ್ಕೃತಿಯನ್ನು ಘನತೆಯಿಂದ ಕಾಣುವುದನ್ನು ಕಲಿಸಬೇಕು. ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹಿಸಬೇಕು. ಧರ್ಮ ಮತ್ತು ನಂಬಿಕೆಯ ಅರಿವನ್ನು ಮೂಡಿಸಬೇಕು. ಸಾಧಕರ ಬದುಕನ್ನು ತಿಳಿಸಬೇಕು. ಒಳ್ಳೆಯತನವನ್ನು ಬೆಳೆಸುವಂತೆ ಅವರ ವರ್ತನೆಯ ಮೇಲೆ ನಿಗಾ ಇಡಬೇಕು. ರಾಮಾಯಣ ಮಹಾಭಾರತದ ಪಾತ್ರಗಳನ್ನು ಸನ್ನಿವೇಶಗಳನ್ನು ಕಥೆಯ ರೂಪದಲ್ಲಿ ಪರಿಚಯಿಸುತ್ತಲೇ ಅವರನ್ನು ಸಭ್ಯರನ್ನಾಗಿಸುವ ಮಹತ್ವದ ಜವಾಬ್ದಾರಿ ಪೋಷಕರದ್ದು ಮತ್ತು ಮನೆಯ ಸದಸ್ಯರದ್ದು. ಇವೆಲ್ಲ ಆಗಬೇಕು ಎಂದು ಪೋಷಕರು ಆಗ್ರಹವೇನೋ ಹೊಂದಿರಬೇಕು ಎಂಬುದು ಸತ್ಯ. ಆದರೆ ಯಾವುದೂ ಬಲವಂತದ ಆಗ್ರಹವಾಗಿರಬಾರದು. ಆದರ್ಶಗಳನ್ನು ಹೇಳುವುದರಿಂದ ಮಕ್ಕಳು ಕಲಿಯುವುದಿಲ್ಲ. ದೊಡ್ಡವರು ತಮ್ಮ ನಡೆನುಡಿಯಲ್ಲಿ ಅದನ್ನು ಅಭಿವ್ಯಕ್ತಿಸಿದರೆ ಮಕ್ಕಳಲ್ಲಿ ಅರಿವು ತಾನಾಗಿಯೇ ಬೆಳೆಯುತ್ತದೆ.  


- ಟಿ. ದೇವಿದಾಸ್


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top