ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರು ಮತ್ತು ಶಿಷ್ಯರ ನಡುವಣ ಸಂಬಂಧಗಳಿಗೆ ವಿಶೇಷವಾದ ಅರ್ಥವಿದೆ. "ಆಚಾರ್ಯ ದೇವೋ ಭವ" ಎಂಬ ಮಾತಿನಂತೆ ಗುರುವಿನಲ್ಲಿ ಭಗವಂತನ ಸ್ವರೂಪವನ್ನು ಕಾಣುವ ನಮ್ಮ ದೇಶದಲ್ಲಿ ಈ ಸಂಬಂಧ ಅತ್ಯಂತ ಪವಿತ್ರವಾದುದು.
ಪ್ರೇಮಪೂರ್ಣವಾದುದು. ಗುರುದಕ್ಷಿಣೆಯಾಗಿ ತನ್ನ ಹೆಬ್ಬೆರಳನ್ನೇ ಕತ್ತರಿಸಿಕೊಟ್ಟ ಏಕಲವ್ಯನ ಕಥೆ ಹೃದಯಸ್ಪರ್ಶಿಯಾದುದು. ಯಾವ ರೀತಿ ಉತ್ತಮ ಗುರುವನ್ನು ಪಡೆಯಲು ಶಿಷ್ಯನು ಕಾತರಿಸುತ್ತಿರುತ್ತಾನೋ ಅದೇ ರೀತಿ ಉತ್ತಮ ಶಿಷ್ಯ ವರ್ಗವನ್ನು ಪಡೆಯುವ ಆಕಾಂಕ್ಷೆ ಎಲ್ಲ ಗುರುಗಳಿಗಿರುತ್ತದೆ. ನಾವು ಜೀನವದಲ್ಲಿ ಮೇಲೆ ಬಂದಾಗ ಇಲ್ಲವೇ ಒಳ್ಳೆಯ ಸಾಧನೆಗಳನ್ನು ಗೈದಾಗ ಮನಃಪೂರ್ವಕವಾಗಿ ಸಂತೋಷ ಪಡುವವರು ಹಾಗೂ ಹೆಮ್ಮೆ ಪಡುವವರೆಂದರೆ ಇಬ್ಬರೇ -ನಮ್ಮ ಹೆತ್ತ ತಂದೆ ತಾಯಿಗಳು ಮತ್ತು ಪಾಠ ಕಲಿಸಿದ ನಮ್ಮ ಗುರುಗಳು. ನಮ್ಮ ಯಶಸ್ಸನ್ನು ಕಂಡು ಗೆಳೆಯರಾದರೂ ಮತ್ಸರಿಸಿಯಾರು. ಆದರೆ ಹೆತ್ತವರು ಮತ್ತು ಗುರುಗಳು ಎಂದೆAದೂ ಮತ್ಸರಿಸಲಾರದು. ಹೆತ್ತವರಿಗೆ "ತಮ್ಮ ಕರುಳ ಕುಡಿ ಮೇಲೆ ಬಂತಲ್ಲ" ಎಂಬ ಎಲ್ಲಿಲ್ಲದ ಆನಂದ, ಗುರುಗಳಿಗೆ ಎಷ್ಟಾದರೂ ನಾನು ಕಲಿಸಿದ ವಿದ್ಯಾರ್ಥಿಯಲ್ಲವೇ" ಎಂಬ ಎಲ್ಲಿಲ್ಲದ ಹೆಮ್ಮೆ ಹಾಗೂ ಹೆಗ್ಗಳಿಕೆ ಹಾಗೂ ಸಂತೋಷ.
ಒಂದು ಘಟ್ಟದ ನಂತರ ಗುರು ತನ್ನ ಶಿಷ್ಯರನ್ನು ಗೆಳೆಯರಂತೆ ಕಾಣಬೇಕಂತೆ. ಗುರುಕುಲ ಪರಂಪರೆಯಲ್ಲಿ ಶಿಕ್ಷಣ ಕೊನೆಗೊಂಡಾಗ ಗುರು ಶಿಷ್ಯನನ್ನು ಹೃತ್ಪೂರ್ವಕವಾಗಿ ಆಶೀರ್ವದಿಸಿ ಒಳ್ಳೆಯ ಉಪದೇಶಗಳನ್ನಿತ್ತು ಕಳುಹಿಸುತ್ತಾನೆ. ಇದನ್ನೇ ಉಪನಿಷತ್ತಿನಲ್ಲಿ ಭವ್ಯವಾಗಿ ವರ್ಣಿಸಲಾಗಿದೆ.
"ಸಹನಾ ವವತು ಸಹನೌ ಭುನಕ್ತು ಸಹವೀರ್ಯಂ ಕರವಾವಹೈ ತೇಜಸ್ವಿನಾವಧೀತಮಸ್ತು, ಮಾ ವಿದ್ವಿಶಾವಹೈ, ಓಂ ಶಾಂತಿಃ ಶಾಂತಿಃ ಶಾಂತಿಃ" ಅರ್ಥಾತ್ "ನಮಗಿಬ್ಬರಿಗೂ ರಕ್ಷಣೆ ಇರಲಿ, ಇಬ್ಬರೂ ಸೇರಿ ಕೆಲಸ ಮಾಡುವ ಶಕ್ತಿ ಬರಲಿ, ನಾವು ಕಲಿತ ವಿದ್ಯೆ ಉಜ್ವಲವಾಗಲಿ, ನಾವು ಒಬ್ಬರನ್ನೊಬ್ಬರು ದ್ವೇಷಿಸುವಂತಾಗದಿರಲಿ. ಎಲ್ಲೆಲ್ಲೂ ಶಾಂತಿ ಇರಲಿ. "ಈ ಸ್ತೋತ್ರದಲ್ಲಿ ಗುರುವಿಗೆ ಅಧಿಕಾರದ ಅಮಲಲ್ಲಿ ಸ್ವಾರ್ಥದ ಸೋಂಕಿಲ್ಲ. ಗುರುಶಿಷ್ಯರಿಬ್ಬರೂ ಸಮಾನರು ಎಂಬ ಸಮತಾಭಾವ ಈ ಪ್ರಾರ್ಥನೆಯುದ್ಧಕ್ಕೂ ಹರಿಯುತ್ತದೆ. "ಒಬ್ಬರನ್ನೊಬ್ಬರು ದ್ವೇಷಿಸದಿರಲಿ" ಎಂಬ ಮಾತುಗಳಂತೂ ಮುತ್ತಿನ ಮಣಿಗಳು. ಇದು ನಮ್ಮ ಪುರಾತನ ಭಾರತದಲ್ಲಿ ಕಂಡು ಬರುವ ಗುರು-ಶಿಷ್ಯ ಸಂಬಂಧದ ಒಂದು ಸುಂದರ ಚಿತ್ರಣ.
ಈ ಆದರ್ಶ ಚಿತ್ರಣದ ಹಿನ್ನೆಲೆಯಲ್ಲಿ ಇಂದಿನ ಗುರು-ಶಿಷ್ಯ ಸಂಬಂಧಗಳನ್ನು ನೆನೆದಾಗ ದುಃಖವೂ, ವಿಷಾದವೂ ಒಟ್ಟಿಗೆ ಉಕ್ಕುತ್ತದೆ. ಹಿಂದಿನ ಕಾಲದಲ್ಲಿ ಗುರುಗಳೆಂದರೆ ಭಯ ಭಕ್ತಿಯಿತ್ತು, ಗೌರವವಿತ್ತು. ಆದರೆ ಇಂದು ವಿದ್ಯಾರ್ಥಿಗಳೆಂದರೆ ಗುರುಗಳೇ ಗಡಗಡ ನಡಗುತ್ತಾರೆ. ಯುಗದಿಂದ ಯುಗಕ್ಕೆ ಬದಲಾಗುತ್ತಿರುವ ಗುರು-ಶಿಷ್ಯ ಸಂಬಂಧವನ್ನು ಹೀಗೆ ಚಿತ್ರಿಸಲಾಗಿದೆ.
"ಕೃತಯೋಗದೊಳು ಗುರುವು ಶಿಷ್ಯಂಗೆ ಹೊಡೆದು ಬಡಿದು ಕಲಿಸಿದೊಡೆ ಶಿಷ್ಯನು ಗುರುವಿಗೆ ಆಗಲಿ, ಮಹಾ ಪ್ರಸಾಸವೆಂದನಯ್ಯ ತ್ರೇತಾಯುಗದೊಳು ಗುರುವು ಶಿಷ್ಯಂಗೆ ಬೈದು ಕಲಿಸಿದೊಡೆ ಶಿಷ್ಯನು ಗುರುವಿಂಗೆ ಆಗಲಿ, ಮಹಾ ಪ್ರಸಾದವೆಂದನಯ ದ್ವಾಪರಾಯುಗದೊಳು ಗುರುವು ಶಿಷ್ಯಂಗೆ ರಮಿಸಿ ಕಲಿಸಿದೊಡೆ ಶಿಷ್ಯನುಗುರುವಿಗೆ ಆಗಲಿ, ಮಹಾಪ್ರಸಾದವೆಂದನಯ್ಯ ಆದರೆ ಕಲಿಯುಗದೊಳು ಗುರುವು ಶಿಷ್ಯಂಗೆ ನಮಿಸಿ ಕಲಿಸಿದೊಡೆ ಗುರುವು ಶಿಷ್ಯಂಗೆ ಮಹಾಪ್ರಸಾದವೆಂದನಯ್ಯ."
ಹಿAದಿನ ಕಾಲದ ಶಿಷ್ಯರು "ಗುರುವೇ ನಮಃ" ಎನ್ನುತ್ತಿದ್ದರೆ ಇಂದಿನ ಕಾಲದವರು "ಗುರುವೇನು ಮಹಾ?" ಎಂಬುದಾಗಿ ಪ್ರಶ್ನಿಸುತ್ತಾರೆ. ವಿದ್ಯಾರ್ಥಿಗಳು ಪಾಶ್ಚಾತ್ಯ ಸಂಸ್ಕೃತಿಗೆ ಹೆಚ್ಚು ಹೆಚ್ಚಾಗಿ ಒಳಗಾಗಿರುವುದು ಇದಕ್ಕೆ ಒಂದು ಕಾರಣವಾಗಿರಬಹುದು. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಗುರುವಿಗೆ ವಿಶೇಷವಾದ ಸ್ಥಾನಮಾನಗಳಿಲ್ಲ. ಗುರು ಶಿಷ್ಯರ ಸಂಬಂಧ ಇಲ್ಲಿ ಕೇವಲ ವ್ಯಾವಹಾರಿಕ ಮಾತ್ರ. ಅಧ್ಯಾಪಕರೆಂದರೆ ನಾವು ತೆರುವ ಶುಲ್ಕದಿಂದ ಸಂಬಳವನ್ನು ಪಡೆದು ದುಡಿಯುವ ನೌಕರರೆಂಬ ಕಲ್ಪನೆ ಇವರದು. "ನೀನು ಪಡೆಯುವ ಸಂಭಾವನೆಗನುಸಾರವಾಗಿ ಪಾಠ ಒದರುವುದಷ್ಟೇ ನಿನ್ನ ಕೆಲಸ" ಎಂಬ ದೃಷ್ಟಿಯಿಂದ ಶಿಷ್ಯರು ತಮ್ಮ ಗುರುಗಳನ್ನು ಕಾಣುತ್ತಾರೆ. ತಮ್ಮ ವೈಯುಕ್ತಿಕ, ಸ್ವಾತಂತ್ರ್ಯದಲ್ಲಿ ಜೀವನದಲ್ಲಿ ಮೂಗು ಹಾಯಿಸುವ ಹಕ್ಕು ಅವರಿಗಿಲ್ಲವೆಂಬುದು ಪಾಶ್ಚಾತ್ಯ ವಿದ್ಯಾರ್ಥಿಗಳ ಸಿದ್ಧಾಂತ. ಅಲ್ಲಿ ಗುರುಭಕ್ತಿ ಎಂಬ ಭಾವನಾತ್ಮಕ ಅಂಶಗಳಿಗೆ ಅವಕಾಶವಿಲ್ಲ. ಬೆಂಚಲ್ಲಿ ಕೂತ ವಿದ್ಯಾರ್ಥಿಗಳು ಕಾಲ ಮೇಲೆ ಕಾಲು ಹಾಕಿ ಅಥವಾ ತಮ್ಮ ಕಾಲುಗಳನ್ನು ಗುರುವಿಗೆ ಎದುರಾಗಿ ಮೇಜು ಮೇಲೆ ಇರಿಸಿ ಚುಯಿಂಗಮ್ ಚಪ್ಪರಿಸುತ್ತಾ ಇಲ್ಲವೇ ಸಿಗರೇಟ್ ಸೇದುತ್ತಾ ಪಾಠಗಳನ್ನು ಕೇಳುವ ದೃಶ್ಯಗಳು ಅಪರೂಪವೇನಲ್ಲ. ತಪ್ಪು ಮಾಡಿದ ವಿದ್ಯಾರ್ಥಿಗಳನ್ನು ಬಯ್ಯುವ ಇಲ್ಲವೇ ಹೊಡೆಯುವ ಕ್ರಮ ಆ ದೇಶಗಳಲ್ಲಿ ಕಾನೂನಿಗೆ ವಿರುದ್ಧ. ಹಾಗೇನಾದರೂ ವರ್ತಿಸಿದಲ್ಲಿ ಗುರು ಕಠಿಣ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಇಲ್ಲವೇ ಬಹು ಮೊತ್ತದ ದಂಡವನ್ನು ತೆರಬೇಕಾಗುತ್ತದೆ. ಒಟ್ಟಿನಲ್ಲಿ ಶಿಷ್ಯರನ್ನು ತಿದ್ದುವ ಇಲ್ಲವೇ ಅವರ ಮೇಲೆ ಅಧಿಕಾರ ಚಲಾಯಿಸುವ ಹಕ್ಕು ಗುರುಗಳಿಗೆ ಅಲ್ಲಿಲ್ಲ. ತಮ್ಮ ಗುರುಗಳನ್ನು ವಿದ್ಯಾರ್ಥಿಗಳು ಹೆಸರಿನಿಂದ ಏಕವಚನದಲ್ಲಿ ಸಂಬೋಧಿಸುವ ಕ್ರಮ ಅಲ್ಲಿ ಸರ್ವೇ ಸಾಮಾನ್ಯ.
ನಮ್ಮ ಯುವಕರ ಮೇಲೆ ಆಗುತ್ತಿರುವ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವವೋ ಎಂಬAತೆ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಕೂಡ ಗುರು-ಶಿಷ್ಯ ಸಂಬಂಧಗಳು ಕದಡಿ ಹೋಗಿದ್ದು ಶಿಕ್ಷಕರು ತಮ್ಮ ಸ್ಥಾನಮಾನಗಳನ್ನು ಗೌರವಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕಿಲಾಡಿ ಹುಡುಗರಂತೂ "ಗುರುಗಳೇ ನಿಮ್ಮ ಪಾದದ ಧೂಳಿ ಹಣೆಯ ಮೇಲಿರಲಿ, ಆದರೆ ಅದು ಕಣ್ಣೊಳಗೆ ಬೀಳದಿರಲಿ" ಎಂಬುದಾಗಿ ವ್ಯಂಗವಾಡುತ್ತಿರುತ್ತಾರೆ. ಇವತ್ತಿನ ವಿಜ್ಞಾನ, ತಂತ್ರಜ್ಞಾನದ ಯುಗದಲ್ಲಿ "ಗುರುಭಕ್ತಿ, ಗುರುವಂದನೆ" ಇತ್ಯಾದಿ ಪದಗಳು ತೀರಾ ಭಾವನಾತ್ಮಕವೆನಿಸಿದೆ. ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಗುರು ಸ್ಥಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾ ಬಂದಿದ್ದೇವೆ. ಗುರುಶಿಷ್ಯ ಸಂಬಂಧವಾಗಿ ಅನೇಕ ಪೌರಾಣಿಕ ಕತೆಗಳೂ ಪ್ರಚಲಿತದಲ್ಲಿವೆ.
ಗುರುವಿನ ಅನುಗ್ರಹಕ್ಕಾಗಿ ಕಲಿಯುವ ಅವಕಾಶಕ್ಕಾಗಿ ಶಿಷ್ಯರು ಚಾತಕಪಕ್ಷಿಗಳಂತೆ ಕಾಯುತ್ತಾ ಗುರು ಮನೆಯಲ್ಲಿ ಅವರ ಪರಿಚಾರಿಕೆ ಮಾಡುತ್ತ ಇದ್ದಂಥ ಒಂದು ಕಾಲವಿತ್ತು. ಕಲಿಸುವ ಗುರುಗಳೂ ಕಲಿಯುವ ಶಿಷ್ಯರೂ ತೀರಾ ಮಿತ ಸಂಖ್ಯೆಯಲ್ಲಿ ಇರುತ್ತಿದ್ದುದು ಒಂದು ಕಾರಣವಾದರೆ ಕಲಿಯಬೇಕೆಂಬ ಹಂಬಲ, ಜಿಜ್ಷಾಸೆಗಳು ಪ್ರಬಲವಾಗಿದ್ದಂಥವರು ಮಾತ್ರವೇ ಗುರುಕುಲಗಳಲ್ಲಿ ಪ್ರವೇಶ ಪಡೆದು ಯೋಗ್ಯ ಶಿಷ್ಯರಿಂದ ಮುಂದುವರಿಯುತ್ತಿತ್ತು. ಆದರೆ ಈಗಿನ ಪರಿಸರದಲ್ಲಿ ಆ ರೀತಿಯ ಕಲಿಕೆ ಸಾಧ್ಯವಿಲ್ಲ. ಗುರು ಸಂಬಂಧವಾಗಿ ಪ್ರಚಲಿತವಿರುವ "ಗುರು ಬ್ರಹ್ಮ ಗುರುರ್ವಿಷ್ಣು ಗುರುದೇವೋ ಮಹೇಶ್ವರಃ" "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ", `ಕಲಿಸಿದಾತಂ ವರ್ಣ ಮಾತ್ರಂ ಗುರು’ ಎಂಬ ಉಕ್ತಿಗಳು ಅಪರೂಪವಾಗಿವೆ.
ಗುರುವಿನ ಮೇಲೆ ಶಿಷ್ಯರಿಗೆ ಇರಬೇಕಾದ ಗೌರವವಾಗಲೀ ಭಕ್ತಿಯಾಗಲಿ ಕಾಣಿಸುವುದಿಲ್ಲ. ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣ ಹಂತದವರೆಗೆ ವಿದ್ಯಾರ್ಥಿ ಅಧ್ಯಾಪಕರ ನಡುವೆ ತಕ್ಕ ಮಟ್ಟಿಗೆ ವಿನಯ, ವಿಧೇಯತೆಗಳಿಂದಾಗಿ ಸೌಹಾರ್ದ ನೆಲೆಸಿದೆ.
ಆದರೆ, ಕಾಲೇಜು ಹಂತಕ್ಕೆ ಬಂದಾಗ ವಿದ್ಯಾರ್ಥಿಗಳು ತಮ್ಮ ವಯಸ್ಸಿನಿಂದಾಗಿ ಮತ್ತು ಪರಿಸರದಿಂದಾಗಿ ಬದಲಾಗುತ್ತಾರೆ. ಭಯ, ಭಕ್ತಿಗಳನ್ನು ಕೈಬಿಡುತ್ತಾರೆ. ಮೇಲಾಗಿ ಇವತ್ತಿನ ಯುವ ಜನಾಂಗ ಸಾಕಷ್ಟು ಮುಂದುವರಿದ ಪ್ರಗತಿಪರ ವಿಚಾರಗಳನ್ನು ಹೊಂದಿರುವುದರ ಜೊತೆಗೆ ಬೌದ್ಧಿಕವಾಗಿ ಪ್ರಬುದ್ಧರಾಗಿದ್ದಾರೆ. ಜ್ಞಾನದ ಗಳಿಕೆಗೆ ವಿಷಯ ಸಂಬಂಧಿ ಮಾಹಿತಿ ಪಡೆಯುವುದಕ್ಕೆ ಅಧ್ಯಾಪಕರನ್ನೇ ನೆಚ್ಚಿಕೊಂಡು ಇರಬೇಕಾದ ಅಗತ್ಯವಿಲ್ಲ. ದಿನಪತ್ರಿಕೆಗಳು, ಆಕಾಶವಾಣಿ, ದೂರದರ್ಶನ ಮುಂತಾದ ಸಮೂಹ ಮಾಧ್ಯಮಗಳಲ್ಲದೇ ಗ್ರಂಥಾಲಯಗಳು, ಕಂಪ್ಯೂಟರ್ನಂಥ ಅದ್ಭುತ ಯಂತ್ರ ವ್ಯವಸ್ಥೆಗಳು ತಿಳಿಯ ಬಯಸುವವರಿಗೆ ಜಗತ್ತನ್ನೇ ತಲುಪಿಸಿಬಿಡುತ್ತದೆ. ಆದರೂ ಶಿಕ್ಷಣ ವ್ಯವಸ್ಥೆಯಲ್ಲಿ ಬೋಧನೆಗಳಯ ತರಗತಿಗಳಲ್ಲಿ ಗುರುಗಳ ಮುಖೇನವೇ ನಡೆಯಬೇಕಾದುದು ಸೂಕ್ತ. ಓದಿನಲ್ಲಿ ಆಸಕ್ತಿ ಇಲ್ಲದಿರುವ ವಿದ್ಯಾರ್ಥಿಗಳು ತರಗತಿಗಳಲಿ ಗದ್ದಲ ಮಾಡುತ್ತ ಗುರುಗಳಿಗೆ ತೊಂದರೆ ಮಾಡುವುದೂ ಉಂಟು. ಎಲ್ಲ ವಿದ್ಯಾರ್ಥಿಗಳಲ್ಲಿ ಈ ಬಗೆಯ ಅಶಿಸ್ತು ಇಲ್ಲವಾದರೂ ದಿನೇ ದಿನೇ ವಿದ್ಯಾರ್ಥಿ ಸಮುದಾಯದಲ್ಲಿ ಅಶಿಸ್ತು, ಅಸಮಾಧಾನ, ನಿರಾಸಕ್ತಿ, ಪ್ರತಿಭಟನಾ ಮನೋಧರ್ಮ ಮುಂತಾದವು ಹೆಚ್ಚಾಗುತ್ತಿದೆ.
ಪರಿಪಕ್ವಗೊಳ್ಳುತ್ತಿರುವ ಪ್ರಕ್ರಿಯೆಯಲ್ಲಿರುವ ಮನಸ್ಸು ಇನ್ನೂ ಸಾಕಷ್ಟು ಪ್ರಬುದ್ಧವಾಗಿ ರೂಪುಗೊಂಡಿಲ್ಲವಾದ ಕಾರಣ ಸುಲಭವಾಗಿ ಪ್ರಚೋದನೆಗಳಿಗೆ ಆಕರ್ಷಣೆಗಳಿಗೆ ಒಳಗಾಗಿ ಅಧ್ಯಾಪಕರ ವಿಚಾರದಲ್ಲಿ ವಿದ್ಯಾರ್ಥಿಗಳು ಉದ್ಧಟವಾಗಿ ವರ್ತಿಸುತ್ತಾರೆ. ಮಾತು ಮಾತಿಗೂ ಸೆಟೆದುನಿಂತು ಹಕ್ಕುಗಳ ಕುರಿತು ಮಾತನಾಡುತ್ತಾರೆ. ಅಧಿಕ ಅಂಕಗಳಿಗಾಗಿ, ತಮ್ಮನ್ನು ಉತ್ತೀರ್ಣಗೊಳಿಸುವುದಕ್ಕಾಗಿ ಅಧ್ಯಾಪಕರಿಗೆ ಬೆದರಿಕೆ ಹಾಕುತ್ತಾರೆ. ವಿದ್ಯಾರ್ಥಿ ದೆಸೆಯಲ್ಲಿಯೇ ಮರಿ ರಾಜಕಾರಣಿಗಳಂತೆ ವರ್ತಿಸುತ್ತಾರೆ. ಕಾಲೇಜ್ಗಳಲ್ಲಿ ವಿದ್ಯಾರ್ಥಿ ಸಂಘಗಳಿಗಾಗಿ ನಡೆಯುವ ಚುನಾವಣೆಗಳು ಶಾಸನಸಭೆ, ಸಂಸತ್ತಿನ ಚುನಾವಣೆಗಳಷ್ಟೇ ಭರದಿಂದ ನಡೆಯುತ್ತವೆ. ರಾಜಕಾರಣಿಗಳು ಕೂಡ ಪರೋಕ್ಷವಾಗಿ ಇವನ್ನು ಬೆಂಬಲಿಸಿ ಪ್ರೋತ್ಸಾಹಿಸುತ್ತಾರೆ. ಈ ಚಳಿವಳಿಗಳ ಹಾವಳಿ ಎಷ್ಟೊಂದು ವ್ಯಾಪಿಸಿದೆಯೆಂದರೆ ವಿದ್ಯಾರ್ಥಿಗಳು ಕೇವಲ ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚಳುವಳಿಗಳನ್ನು ಸೀಮಿತವಾಗಿಸಿಕೊಳ್ಳದೆ, ರಾಜಕೀಯ ಚಳುವಳಿ, ಜಾತಿ-ಕೋಮು ಚಳುವಳಿ ಇತ್ಯಾದಿಯಾಗಿ ಯಾವುದೇ ಚಳುವಳಿಯಾದರೂ ಅದರಲ್ಲಿ ತೊಡಗಿಬಿಡುತ್ತಾರೆ.
ಇಂದಿನ ವಿದ್ಯಾರ್ಥಿ ಸಮುದಾಯದಲ್ಲಿ ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಹತಾಶೆ, ಅಶಾಂತಿ, ಅಸಮಾಧಾನಗಳಿಗೆ, ಅಧ್ಯಾಪಕರಿಂದ ಸಿಗಬೇಕಾದ ಸರಿಯಾದ ಮಾರ್ಗದರ್ಶನದ ಕೊರತೆ ಕೂಡಾ ಕಾರಣವಾಗಿದೆ. ಅಧ್ಯಾಪಕ, ವಿದ್ಯಾರ್ಥಿಗಳ ನಡುವೆ ಇರಬೇಕಾದ ಸೌಹಾರ್ದ ಸ್ನೇಹ, ಆತ್ಮೀಯತೆಗಳು ಮಾಯವಾಗಿವೆ. ವಿದ್ಯಾರ್ಥಿಗಳ ನಡವಳಿಕೆಗೆ ವಿದ್ಯಾರ್ಥಿಗಳು ಎಷ್ಟು ಕಾರಣವೋ, ಅಧ್ಯಾಪಕರೂ ಅಷ್ಟೇ ಕಾರಣವಾಗಿದ್ದಾರೆ. ಪಾಠ ಮಾಡುವುದನ್ನು ಕೇವಲ ಕರ್ತವ್ಯವೆಂದು ಮುಗಿಸಿಬಿಡುವ, ನಿಗದಿತ ಪಠ್ಯವನ್ನಷ್ಟೇ ಮುಗಿಸುವುದರಿಂದ ತನ್ನ ಕೆಲಸ ಆಯಿತೆಂದು ಭಾವಿಸುವ, ಯಾಂತ್ರಿಕವಾಗಿ ಭಾವನಾತ್ಮಕವಾಗಿ ಸ್ಪರ್ಶವಿಲ್ಲದೆ ಪಾಠಗಳನ್ನು ಬೋಧಿಸುವ, ಪಾಠದಾಚೆ ಯಾವುದೂ ತನಗೆ ಸಂಬಂಧಿಸಿದ್ದಲ್ಲ ಎಂದು ಭಾವಿಸುವ, ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ವಿಚಾರಿಸದಿರುವ, ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಪಠ್ಯೇತರ ಚಟುವಟಿಕೆಗಳಲ್ಲೂ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಆಟೋಟಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸದ, ಅಧ್ಯಾಪಕರು ಹೆಚ್ಚುತ್ತಿರುವ ಈ ದಿನಗಳಲ್ಲಿ ವಿದ್ಯಾರ್ಥಿಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲುಸುವುದು ಎಷ್ಟು ಸಮಂಜಸ? ಸಮಯ ಪಾಲನೆ, ಕರ್ತವ್ಯ ನಿಷ್ಠೆ, ಪಾಠಗಳಿಗೆ ಬೇಕಾದ ಪೂರ್ವಸಿದ್ಧತೆ, ಪ್ರಾಮಾಣಿಕತೆ, ವಿದ್ಯಾರ್ಥಿ ಸಮುದಾಯದ ಬಗ್ಗೆ ಆಸಕ್ತಿ, ಕಾಳಜಿಗಳು, ಮೊದಲಾದ ಅಂಶಗಳು ಒಬ್ಬ ಆದರ್ಶ ಅಧ್ಯಾಪಕನಿಗೆ ಇರಬೇಕಾದುದು ಅನಿವಾರ್ಯ. ಅವರು ಸರಿಯಾಗಿಲ್ಲದ್ದಲ್ಲಿ, ಸಮರ್ಥವಾಗಿ ಪಾಠ ಮಾಡಬಲ್ಲವರಾಗಿದ್ದಲ್ಲಿ ಅಂಥವರಿಗೆ ವಿದ್ಯಾರ್ಥಿಗಳು ಎಂದು ಸಮಸ್ಯೆಯಾಗುವುದಿಲ್ಲ. ಆದುದರಿಂದ ಮೊದಲು ಅಧ್ಯಾಪಕರಾಗಿರುವವರು ತಮ್ಮ ಆತ್ಮ ವಿಶ್ಲೇಷಣೆ ಮಾಡಿಕೊಂಡು ತಮ್ಮಲ್ಲಿರಬಹುದಾದ ಲೋಪದೋಷಗಳನ್ನು ತಿದ್ದಿಕೊಳ್ಳಬೇಕು.
ವಿದ್ಯಾಪೀಠಗಳು ಏಕೆ ಕುರುಕ್ಷೇತ್ರವಾಗುತ್ತಿವೆ? ವಿದ್ಯಾರ್ಥಿಗಳು ಏಕೆ ಉನ್ಮತ್ತರಾಗುತ್ತಿದ್ದಾರೆ? ಅಧ್ಯಾಪಕರು ಯಾಕೆ ಅಸಮರ್ಥರಾಗುತ್ತಿದ್ದಾರೆ? ಅಧ್ಯಯನವು ಅಧ್ವಾನವಾಯಿತೇಕೆ? ಮುಂತಾದ ಪ್ರಶ್ನೆಗಳಿಗೆ ಯೋಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ರಾಜಕೀಯ ಉದ್ದೇಶಗಳಿಗೆ ವಿದ್ಯಾರ್ಥಿಗಳ ದುರ್ಬಳಕೆ ನಿಲ್ಲಬೇಕು. ಸಂಸ್ಕಾರದ ಶಿಕ್ಷಣ ಮನೆಯಿಂದಲೇ ಆರಂಭವಾಗಬೇಕು. ಜಾತಿ ಮತಗಳ ಚೆಲ್ಲಾಟ ಸಂಪೂರ್ಣವಾಗಿ ನಿಂತು ಪ್ರತಿಭೆಗೆ ಸರ್ವಮಾನ್ಯತೆಯಿರಬೇಕು. ಇದಕ್ಕೆ ಹೆತ್ತವರ, ಪೋಷಕರ, ಅಧ್ಯಾಪಕ ವರ್ಗದವರ, ಸಮಾಜ ಸುಧಾರಕರ ಹೀಗೆ ಎಲ್ಲರ ಸಹಕಾರವಿರಬೇಕು. ಆಗ ಮಾತ್ರ ಗುರು-ಶಿಷ್ಯರ ಸಂಬಂಧಗಳು ಮತ್ತೆ ಚಿಗುರಲು ಸಾಧ್ಯ. ವಿದ್ಯಾರ್ಥಿಗಳಿಗೆ ಜೀವನದಲ್ಲಿ "ಹಿಂದೆ ಗುರು, ಮುಂದೆ ಗುರಿ" ಇರಬೇಕಾದುದು ಸಹಜವಾದ ಅವಶ್ಯಕತೆ. ಅಂತೆಯೇ ಗುರುಪರಂಪರೆ "ಕೇವಲ ಪಾಠವನ್ನು ಹೇಳುವ ಯಂತ್ರವಲ್ಲ. ತನ್ನ ಜೀವನವನ್ನು ರೂಪುಗೊಳಿಸುವ, ಸಂಸ್ಕರಿಸುವ ಒಂದು ಮಹಾಚೇತನ ಶಿಲ್ಪಿ, ದಿವ್ಯಶಕ್ತಿ" ಎಂಬ ಭಾವನೆ ವಿದ್ಯಾರ್ಥಿಗಳಲ್ಲಿರಬೇಕು. ಅಂತೆಯೇ, ಗುರುಗಳಾದವನಿಗೆ `ಬೋಧನೆಯೇ ತನ್ನ ಜೀವನದ ಅತ್ಯಂತ ಸಂತಸದ ಕ್ಷಣ. ಉತ್ತಮ ವಿದ್ಯಾರ್ಥಿಗಳನ್ನು ತಯಾರು ಮಾಡಿ ಸಮಾಜಕ್ಕೆ ನೀಡುವುದೇ ನನ್ನ ಬದುಕಿನ ಧ್ಯೇಯ. ಉತ್ತಮ ವಿದ್ಯಾರ್ಥಿಗಳೇ ನನ್ನ ಬಾಳಿನ ಆಸ್ತಿ’ ಎಂಬ ಭಾವನೆಯಿರಬೇಕು- ಆಗ ಮಾತ್ರ ಗುರು-ಶಿಷ್ಯ ಸಂಬಂಧ ಉತ್ತಮಗೊಳ್ಳಲು ಸಾಧ್ಯ.
(ಆಸಕ್ತರು ಹೆಚ್ಚಿನ ಮಾಹಿತಿಗೆ ಇದೇ ಲೇಖಕರ ಪ್ರಣವ ಮೀಡಿಯಾ ಹೌಸ್ ಪ್ರಕಾಶನ ಪ್ರಕಟಿಸಿರುವ ‘ವಂದೇ ಗುರು ಪರಂಪರಾಂ’ ಪುಸ್ತಕ ನೋಡಬಹುದು)
- ಡಾ. ಗುರುರಾಜ ಪೋಶೆಟ್ಟಿಹಳ್ಳಿ,
ಸಂಸ್ಕೃತಿ ಚಿಂತಕರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ