ಬೆಳ್ತಂಗಡಿ: ಸರಕಾರಿ ಪ ಫೂ ಕಾಲೇಜ್ ಇಲ್ಲಿ ಶನಿವಾರ (ಜು.27) ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ, ವಕೀಲರ ಸಂಘ (ರಿ) ಹಾಗೂ ಸ.ಪ.ಪೂ ಕಾಲೇಜ್ ನಡ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಕಾಲೇಜು ಸಭಾಂಗಣದಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮವನ್ನು ವಿಜಯೇಂದ್ರ ಟಿ ಹೆಚ್ (ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ ಬೆಳ್ತಂಗಡಿ) ಇವರು ಗಿಡಕ್ಕೆ ನೀರನ್ನು ಎರೆಯುವುದರ ಮೂಲಕ ವಿನೂತನವಾಗಿ ಉದ್ಘಾಟಿಸಿದರು. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಕಾನೂನಿನ ಅರಿವು ನಮ್ಮ ಯುವ ಪೀಳಿಗೆಗೆ ಅತ್ಯಗತ್ಯ. ಸಾಮಾಜಿಕ ಜಾಲತಾಣ ಮತ್ತು ಅಂತರ್ಜಾಲಗಳಿಗೆ ಬಲಿಯಾಗಿ ಎಳವೆಯಲ್ಲೇ ಮುರುಟಿ ಹೋಗುವ ಅನೇಕ ಉದಾಹರಣೆಗಳು ನಮ್ಮ ಸಮಾಜದಲ್ಲಿವೆ. ಆದ್ದರಿಂದ ಯುವ ಜನತೆ ಈ ಸಂಕೋಲೆಗಳಿಂದ ಹೊರಬಂದು ಆತ್ಮವಿಶ್ವಾಸದಿಂದ ಬದುಕಬೇಕು ಅದಕ್ಕೆ ಕಾನೂನು ನೆರವಾಗಬಲ್ಲದು ಎಂದು ನುಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ ಹಿರಿಯ ವಕೀಲರು ಬೆಳ್ತಂಗಡಿ ಇವರು ಫೋಕ್ಸೊ ಕಾಯಿದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕುರಿತು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಮಾತನಾಡಿದರು. ಕಾನೂನು ಬಂಧನದಲ್ಲಿಲ್ಲ, ಅದು ನಮಗೆ ರಕ್ಷಣೆ ಮಾತ್ರ. ದೌರ್ಜನ್ಯಕ್ಕೊಳಗಾದ ಮಕ್ಕಳನ್ನು ಕಾನೂನಿನ ಚೌಕಟ್ಟು ಹೇಗೆ ಕಾಯಬಲ್ಲದು ಮತ್ತು ಮಕ್ಕಳ ಆರೈಕೆ, ಸುರಕ್ಷತೆಯ ಕಾರಣದಿಂದ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಕವಿ ದಿನಕರ ದೇಸಾಯಿಯವರ ಚುಟುಕುಗಳು ಮತ್ತು ಮಂಕುತಿಮ್ಮನ ಕಗ್ಗಗಳ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು.
ಮುಖ್ಯ ಅತಿಥಿಗಳಾಗಿ ವಸಂತ ಮರಕಡ (ಅಧ್ಯಕ್ಷರು ವಕೀಲ ಸಂಘ ಬೆಳ್ತಂಗಡಿ) ಮತ್ತು ನವೀನ್ ಬಿ.ಕೆ (ಪ್ರಧಾನ ಕಾರ್ಯದರ್ಶಿಗಳು ವಕೀಲರ ಸಂಘ ಬೆಳ್ತಂಗಡಿ) ಇವರು ಕಾನೂನಿನ ಅರಿವನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಪದವಿ ಪೂರ್ವ ಕಾಲೇಜು ನಡ ಇಲ್ಲಿನ ಪ್ರಾಂಶುಪಾಲರಾದ ಚಂದ್ರಶೇಖರ್ ಅವರು ವಹಿಸಿದ್ದರು. ಶ್ರೀಮತಿ ಲಿಲ್ಲಿ ಪಿ.ವಿ ಅವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವಸಂತಿ ಪಿ ಅಭ್ಯಾಗತರನ್ನು ಸ್ವಾಗತಿಸಿ, ಶ್ರೀಮತಿ ಶಿಲ್ಪಾ ಡಿ ಇವರು ವಂದನಾರ್ಪಣೆಗೈದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ