1958ರಲ್ಲಿ 'ಶ್ರೀ ಕೃಷ್ಣ ಗಾರುಡಿ' ಚಲನಚಿತ್ರದ ಬಿಡುಗಡೆ. ನನಗಾಗ 7 ವರ್ಷ. ನನ್ನ ತಂದೆ-ತಾಯಿ ವಾಮನ್ ಧಾರವಾಡ ಆಕಾಶವಾಣಿಯಲ್ಲಿ ಸೇವೆಯಲ್ಲಿದ್ದರು. ನಮ್ಮ ಕೊಪ್ಪದ ಕೆರೆಯ ಬಳಿಯಿದ್ದ ಚಿಕ್ಕ ಮನೆಗೆ ಚಿತ್ರತಂಡ ಆಗಮಿಸಿ ತಿಂಡಿ-ಊಟ ಮಾಡಿತ್ತು. ಊಟದ ನಂತರ ರಾಜಕುಮಾರ್ ಅಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ವಿಜಯಾ ಟಾಕೀಸಿನಲ್ಲಿ ಆ ಚಲನಚಿತ್ರ ಆರಂಭ. ಆ ಟಾಕೀಸಿನ ಮ್ಯಾನೇಜರ್ ನಾಡಿಗೇರ್ ಅವರು ನಮ್ಮ ಮನೆಗೆ ಧಾವಿಸಿ ಬಂದರು. ಮ್ಯಾಟ್ನಿ ಶೋಗೆ ರಾಜಕುಮಾರ್ ಅವರನ್ನು ನನ್ನ ತಂದೆ ಕರೆದೊಯ್ಯಬೇಕಿತ್ತು. ಮ್ಯಾನೇಜರ್ ಅವರಿಗೆ, ತಂಡದವರಿಗೆ, ಮಲಗಿರೋ ರಾಜಕುಮಾರ್ ಅವರನ್ನು ಹೇಗೆ ಎಬ್ಬಿಸೋದು ಅನ್ನೋ ಸಂಕೋಚ. ಆದರೆ ತಮ್ಮ ಅಪ್ತ ಬಾಂಧವ್ಯದ ಹಿನ್ನೆಲೆಯಲ್ಲಿ ನನ್ನಪ್ಪ ವಾಮನ್ ರಾಜಕುಮಾರ್ ಅವರನ್ನ ಎಬ್ಬಿಸಿ, ಥಿಯೇಟರ್ಗೆ ಕರೆದೊಯ್ದರು. ಪಾರ್ವತಮ್ಮ ಇಂದ್ರನ ಹೆಂಡತಿ ಶಚಿಯಾಗಿ ನಟಿಸಿರುವ ಏಕೈಕ ಚಿತ್ರ ನಟಿಸಿರುವ ಏಕೈಕ ಚಿತ್ರ 'ಶ್ರೀ ಕೃಷ್ಣ ಗಾರುಡಿ' ಈ ದಂಪತಿಗಳೊಂದಿಗೆ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಹಾಗೂ ಇತರ ಕಲಾವಿದರೆಲ್ಲ ಬಂದಿದ್ದರು. ಆಗ ವಿಜಯಾ ಟಾಕೀಸಿನಲ್ಲಿ ಚಿತ್ರವೀಕ್ಷಣೆಗೆ ಬಂದಿದ್ದ ಪ್ರೇಕ್ಷಕರಿಂದ ಭಾರೀ ಚಪ್ಪಾಳೆ -ಶೀಟಿ-ಅಭಿಮಾನದ ಪ್ರದರ್ಶನ.
ಮುಂದೆ ಮೈಸೂರಿನ ಸಿ.ಎಫ್.ಟಿ.ಆರ್.ಐ ದಲ್ಲಿ 'ವಿಧಿವಿಲಾಸ' ಚಲನಚಿತ್ರದ ಶೂಟಿಂಗ್. ವಿಷ್ಣುವರ್ಧನ್ ತಂದೆ ಹೆಚ್.ಎಲ್ ನಾರಾಯಣರಾವ್ ಅವರ ಸಂಭಾಷಣೆ. ಮುಖ್ಯ ಕಟ್ಟಡದ ಮುಂದೆ ಕಾಣುವ ಕಾರಂಜಿ ಬಳಿ ರಾಜಕುಮಾರ-ಲೀಲಾವತಿ ನೃತ್ಯದ ಚಿತ್ರೀಕರಣವಿತ್ತು. ಆ ಸಂದರ್ಭದ ಚಿತ್ರಗೀತೆಯ ಹಾಡಿನ ಒಂದೊಂದು ಸಾಲನ್ನು ರಿಕಾರ್ಡರ್ ಪ್ಲೇ ಮಾಡುತ್ತಿದ್ದಾಗ, ನೃತ್ಯ ನಿರ್ದೇಶಕರು-ನಿರ್ದೇಶಕರ ಅಣತಿಯಂತೆ ರಾಜಕುಮಾರ-ಲೀಲಾವತಿ. ರಾಜನ ಮಗ ಹಾಗೂ ಪ್ರೇಮಿಯಾಗಿ, ಆ ನೃತ್ಯ ಮಾಡಬೇಕಿತ್ತು. ಒಳಗಿನಿಂದ ಬಂದು, ಕಟ್ಟಡದ ಕಂಬವನ್ನು ಹಿಡಿದು ಮೆಟ್ಟಿಲಿಳಿದು ಈ ಪ್ರೇಮಿಗಳನ್ನು ಕಂಡು ವ್ಯಾಘ್ರನಾಗುವ ರಾಜನ ಪಾತ್ರದಲ್ಲಿದ್ದರು ಅಶ್ವಥ್.
ಆ ದೃಶ್ಯದ ಸೀಕ್ವೆನ್ಸ್ ಅಂದಿನ ಕಾಲಕ್ಕೆ ಲಭ್ಯವಿದ್ದ ತಂತ್ರಜ್ಞಾನ, ನಿರ್ದೇಶಕ-ಛಾಯಾಗ್ರಾಹಕರ ಸಿಬ್ಬಂದಿಯ ಜ್ಞಾನ ಹಾಗೂ ಅನುಭವದ ಹಿನ್ನೆಲೆಯಲ್ಲಿ ಬಹಳ ನಿಧಾನವಾಗಿ ನಡೆಯಿತು. ಬೆಳಗಿನಿಂದ ಸಂಜೆಯವರೆಗೆ ನೃತ್ಯಗೀತೆ ಚಿತ್ರೀಕರಣ ಮಿಗಿಯಲೇ ಇಲ್ಲ. ನನ್ನ ತಂದೆ ವಾಮನ್, ನನ್ನ ತಾಯಿ ಗಿರಿಜಾ, ನಾನು ನನ್ನ ತಮ್ಮ ಬಾಲಚಂದ್ರ, ನನ್ನ ತಾತ ಶ್ರೀನಿವಾಸ ಅಯ್ಯರ್, ಅಜ್ಜಿ ತಂಗಮ್ಮ ಬಂದಿದ್ದರು. ತಾತನಿಗೆ ನಿಧಾನವಾಗಿ ಚಿತ್ರೀಕರಣ ಕ್ರಿಯೆ ಬೇಸರ ತಂದಿತ್ತು.
ನಾನು ಆಶ್ಚರ್ಯದಿಂದ ಪಿಳಿಪಿಳಿ ಕಣ್ಣ ಬಿಟ್ಟು ಬೆಳಕು ಪ್ರತಿಫಲನಕ್ಕಾಗಿ ಇಟ್ಟಿದ್ದ ದೊಡ್ಡ ತಗಡು ಫಲಕಗಳು, ಹಾಡು ಬರ್ತಿದ್ದ ರೆಕಾರ್ಡರ್, ಕ್ಯಾಮರಾ, ಚಲನವಲನ, ನಿರ್ದೇಶಕರ Action-cut ಆದೇಶಗಳು, ಕಲಾವಿದರಿಗೆ, ನೃತ್ಯ ನಿರ್ದೇಶಕರ ನಿರ್ದೇಶನ, ಎಲ್ಲಾ ಗಮನಿಸುತ್ತಿದ್ದೆ. ಆ ಕಲಾವಿದರು, ಬಿಸಿಲಿನಲ್ಲಿ ಪಡುತ್ತಿದ್ದ ಪಾಡು ನೋಡಿದವರು ಅನುಭವಿಸಿದವರೇ ಬಲ್ಲರು. ಅಂತಿಮವಾಗಿ ಟಾಕೀಸಿನಲ್ಲಿ ಚಲನಚಿತ್ರದ ಪರದೆಯ ಮೇಲೆ 5 ನಿಮಿಷ ಮೂಡಿಬರುವ ಒಂದು ಚಿತ್ರಗೀತೆಯ ಚಿತ್ರೀಕರಣಕ್ಕೆ ಎಷ್ಟೊಂದು ಗಂಟೆಗಳು- ದಿನಗಳ ಶ್ರಮ!?. ಬೆಳ್ಳಿ ಪರದೆ ಮೇಲೆ ನಾಯಕನ ಶೃಂಗಾರ, ವೀರ, ಹಾಸ್ಯ ನೋಡಿ ಆನಂದಿಸುವ ಪ್ರೇಕ್ಷಕರಿಗೆ ತೆರೆಯ ಹಿಂದಿನ ಚಡಪಡಿಕೆ, ಚಿತ್ರೀಕರಣದ ವಿವಿಧ ಹಂತಗಳಾದ, ಸ್ಕ್ರಿಪ್ಟ್ ಚಿತ್ರ, ನಾಟಕ, ಕಲಾವಿದರ ಆಯ್ಕೆ ಹಾಡು-ಸಂಭಾಷಣೆ, ಸಂಗೀತ ನಿರ್ದೇಶನ, ಚಿತ್ರೀಕರಣದಲ್ಲಿ ನಿರ್ದೇಶಕರು, ನೃತ್ಯ ಸಾಹಸ ನಿರ್ದೇಶಕರು, ಲೈಫ್ ಬಾಯ್ಗಳು, ಕ್ಯಾಮರಾ Focus ಆಗುವ space ಅಷ್ಟರಲ್ಲೇ ಕ್ಯಾಮರಾಗೆ ಎದುರಾಗಿ ಕಲಾವಿದರು ಹೇಳಬೇಕಾದ ಸಂಭಾಷಣೆ, ಅಂಗಿಕ ಮುಖ ಅಭಿನಯ ಇವೆಲ್ಲವುಗಳ ವಿಶಾಲ ಪರಿಚಯ ಇರುವುದಿಲ್ಲ.
ಮುಂದೆ ಲಗ್ನಪತ್ರಿಕೆ ಶೂಟಿಂಗ್ ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿತ್ತು. ಆಗ ನಾನೂ ನನ್ನ ತಮ್ಮ ಬಾಲಚಂದ್ರ ಅಲ್ಲಿಗೆ ಹೋಗಿದ್ದೆವು. ರಾಜಕುಮಾರ್ ಇನ್ನೂ ಸಾದಾ ಉಡುಪಿನಲ್ಲಿ ಇದ್ದರು. ಮೇಕಪ್ ಆಗಿರಲಿಲ್ಲ. ಆ ಸೆಟ್ನಲ್ಲಿ ರಾಜಕುಮಾರ, ನರಸಿಂಹರಾಜು, ಜಯಂತಿ, ಜಯಶ್ರೀ ಎಲ್ಲಾ ಇದ್ದರು. ನಿರ್ದೇಶಕ ರವಿ ಇದ್ದರು. ಆಗ ಸುತ್ತ ನೋಡಲೂ ಯಾರೂ ಬಂದಿರಲಿಲ್ಲ. ಒಂದೂವರೆ ಗಂಟೆ ಆ ದಿನ ರಾಜಕುಮಾರ ಅವರನ್ನು ವಿರಾಮದಲ್ಲಿ ಮಾತಾಡಿಸಿ, ಶೂಟಿಂಗ್ ಇಡೀ ದಿನ ನೋಡಿ ಬಂದಿದ್ದೆವು.
ಮುಂದೆ ಮೈಸೂರಿನ ಶಂಕರಮಠದಲ್ಲಿ ಕೆ.ಎಸ್ ಅಶ್ವಥ್ ಅವರ ಮಗನ ಮದುವೆ ಅಲ್ಲಿಗೂ ರಾಜಕುಮಾರ್ ಬಂದಿದ್ದರು. ಆಗ ನಾನು, ನಮ್ಮ ಕುಟುಂಬದವರು ಅವರೊಂದಿಗೆ ಆತ್ಮೀಯವಾಗಿ ಮಾತಾಡಿ ಫೋಟೋ ತೆಗೆಸಿಕೊಂಡಿದ್ದೆವು. ಮುಂದೆ ಮೈಸೂರಿನ ಅನಾಥಾಲಯದಲ್ಲಿ ನನ್ನ ತಂದೆ ವಾಮನ್ ಅವರ ತಂಗಿ ರತ್ನಾ ಮಗಳ ಮದುವೆಗೂ ರಾಜಕುಮಾರ್ ಬಂದಿದ್ದರು.
ಆನಂತರ ಮೈಸೂರಿನಲ್ಲಿದ್ದ ಡಾ. ದೊಡ್ಡನಾಗಪ್ಪ ಅವರ ಶಾಪ್ಗೆ ನಾನು ನನ್ನ ತಂದೆ 4-5 ಬಾರಿ ಮಧುಮೇಹ ತಪಾಸಣೆಗೆ ಹೋದಾಗ, ಅಲ್ಲಿಗೆ ಪಾರ್ವತಮ್ಮ, ಉದಯಶಂಕರ್ ಸಹ ಬಂದಿದ್ದು, ಅವರೊಂದಿಗೆ ಮಾತಾಡಿದ್ದೆವು. 1981ರಲ್ಲಿ ರಾಜಕುಮಾರ್ ಅವರನ್ನು ಧಾರವಾಡ ಆಕಾಶವಾಣಿಯಲ್ಲಿ ಸಂದರ್ಶಿಸಿದ್ದ ವಾಮನ್, ಮಹೇಂದ್ರಕರ್ ಚಾಳ್ದಲ್ಲಿದ್ದ ನಮ್ಮ ಮನೆಗೂ ಕರೆತಂದಿದ್ದರು.
ಮುಂದೆ ಡಾ. ರಾಜಕುಮಾರ್ ಅವರು 80ರ ದಶಕದಲ್ಲಿ ಕವಿರತ್ನ ಕಾಳಿದಾಸ ಚಲನಚಿತ್ರದಲ್ಲಿ ಭೋಜರಾಜನ ಅಸ್ಥಾನ ಪಂಡಿತ ಭವಭೂತಿ ಪಾತ್ರಕ್ಕೆ ತಮ್ಮ ಆರಂಭದ ಕಲಾಜೀವನದ ನಾಟಕದ ಗುರು ಎನ್.ಎಸ್.ವಾಮನ್ ಅವರನ್ನು ಶೂಟಿಂಗ್ ನಡೆಯುತ್ತಿದ್ದ ಚೆನೈ ಸ್ಟೂಡಿಯೋಗೆ ಕರೆಸಿದ್ದರು.
ಮುಂದೆ ರಾಜಕುಮಾರ್ ಅವರನ್ನು ನಾನು ಭೇಟಿಯಾಗಿದ್ದು, 1985ರಲ್ಲಿ. ನಾನು ಮೈಸೂರು ಆಕಾಶವಾಣಿಯಲ್ಲಿ ಪ್ರಸಾರ ನಿರ್ವಾಹಕನಾಗಿದ್ದಾಗ ಸೋರಟ್ ಅಶ್ವಥ್ ಅವರ ಮಗಳು ಜ್ಯೋತಿಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಜಗನ್ಮೋಹನ ಅರಮನೆಯಲ್ಲಿ ಅಲ್ಲಿಯ ಗ್ರೀನ್ರೂಂನಲ್ಲಿ ದಿಢೀರೆಂದು ಅವರನ್ನು ವಿನಂತಿಸಿ, ರಾಜಕುಮಾರ್ ಹಾಗೂ ಶಿವರಾಜಕುಮಾರ್ ಅವರನ್ನು ಸಂದರ್ಶಿಸಿ, ಮೈಸೂರು ಆಕಾಶವಾಣಿಯಿಂದ ಪ್ರಸಾರ ಮಾಡಿದ್ದೆ.
ಮುಂದೆ ರಾಜ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಬಂದಾಗ, ನಾಡಿನಾದ್ಯಂತ ಅವರಿಗೆ ಸನ್ಮಾನ, ಆಗ ನಾನು ಭಧ್ರಾವತಿ ಆಕಾಶವಾಣಿಯಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿದ್ದೆ. ಶಿವಮೊಗ್ಗ ದಲ್ಲಿ ಪಾರ್ವತಮ್ಮ ಅವರ ಮೂಲಕ ರಾಜ್ ಅವರನ್ನು ಗೆಸ್ಟ್ ಹೌಸ್ನಲ್ಲಿ 1 ಗಂಟೆ ಸಂದರ್ಶನ ಮಾಡಿದೆ. ಎರಡು ದಿನಗಳ ನಂತರ ಚಿಕ್ಕಮಗಳೂರಿನಲ್ಲಿ ಅವರಿಗೆ ಸನ್ಮಾನ. ಆ ದಿನ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದ್ದನ್ನು ಧ್ವನಿಮುದ್ರಿಸಿದೆ. ಅಲ್ಲಿ ರಾಜ್ ಅವರನ್ನು ಮತ್ತೆ ಭೇಟಿ ಮಾಡಿ, ಸಂದರ್ಶನ ಧ್ವನಿಮುದ್ರಿಸಿದೆ. ಭದ್ರಾವತಿ ಆಕಾಶವಾಣಿ ಕೇಂದ್ರದಿಂದ ಅದನ್ನು 1 ಗಂಟೆ ಪ್ರಸಾರ ಮಾಡಿದಾಗ, 12 ಸಾವಿರ ಶ್ರೋತೃಗಳ ಮೆಚ್ಚುಗೆ ಪತ್ರಗಳು ಬಂದವು. ರಾಯಚೂರಿಗೆ ಒಮ್ಮೆ ರಾಜ್ ಬಂದಾಗ, ಭೇಟಿ ಮಾಡಿದ್ದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ