ಕೇಂದ್ರ ಬಜೆಟ್: ದೇಶದ ಸರ್ವಾಂಗೀಣ ಅಭಿವೃದ್ಧಿಯ ಅಕ್ಷಯಪಾತ್ರೆ

Upayuktha
0

ಹಣಕಾಸಿನ ಶಿಸ್ತು ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಗೆ ದಾರಿ ಮಾಡಿಕೊಡಲಿರುವ ಬಜೆಟ್





ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಯಲ್ಲಿ 2024-25 ನೇ ಸಾಲಿನ ಬಜೆಟ್‌ ಮಂಡನೆ ಮಾಡಿದರು. ನರೇಂದ್ರ ಮೋದಿ ಸರ್ಕಾರದ ಐತಿಹಾಸಿಕ ಮೂರನೇಯ  ಅವಧಿಯ ಮೊದಲ ಬಜೆಟ್‌ ಇದಾಗಿದ್ದು, ಇದೇ ಮೋದಿ ಸರ್ಕಾರದಲ್ಲಿ ನಿರ್ಮಲಾ ಸೀತಾರಾಮನ್‌ 7 ಬಾರಿ ಬಜೆಟ್‌ ಮಂಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.


ಸರ್ವಾಂಗೀಣ ಏಳಿಗೆಗೆ ಏಣಿ 

ಬಜೆಟ್ ಮಂಡನೆ ಕುರಿತು ಟ್ವಿಟರ್ ನಲ್ಲಿ ಸಂದೇಶ ನೀಡಿರುವ ಪ್ರಧಾನಿ ಮೋದಿ, 'ದೇಶದ ಸರ್ವಾಂಗೀಣ ಏಳಿಗೆಗೆ ಈ ಬಜೆಟ್‌ ಏಣಿಯಾಗಿದ್ದು, ದೇಶದ ಎಲ್ಲ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್‌ ಮಂಡಿಸಲಾಗಿದೆ. ಯುವಕರಿಗೆ ಉದ್ಯೋಗ, ಬಡವರಿಗೆ ಮನೆ ನಿರ್ಮಾಣ, ಸಣ್ಣ ಉದ್ಯಮಗಳು, ಶಿಕ್ಷಣ ಸೇರಿ ಎಲ್ಲ ಕ್ಷೇತ್ರಗಳ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಲಾಗಿದೆ.


ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಬಜೆಟ್ ದೇಶದ ಸರ್ವಾಂಗೀಣ ಏಳಿಗೆಗೆ ಅಕ್ಷಯಪಾತ್ರೆಯಾಗಿದ್ದು, ಮಧ್ಯಮ ವರ್ಗಕ್ಕೆ ಶಕ್ತಿ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತವು ಮೂಲ ಸೌಕರ್ಯ ಉತ್ಪಾದಿಸುವಲ್ಲಿ ಜಾಗತಿಕ ಮಳಿಗೆಯಾಗುತ್ತದೆ. ಭಾರತದ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ. ಅಷ್ಟರಮಟ್ಟಿಗೆ, ಪ್ರಸಕ್ತ ಸಾಲಿನ ಬಜೆಟ್ ದೇಶದ ಏಳಿಗೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ.


ವಿಕಸಿತ ಭಾರತ

ಮೋದಿ ಸರ್ಕಾರದ ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ನಲ್ಲೇ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. 2047ರ ವೇಳೆಗೆ ವಿಕಸಿತ ಭಾರತ ಸಾಧನೆಗೆ ಅಡಿಪಾಯ ಹಾಕಲಿದ್ದು, ಮಧ್ಯಮ ವರ್ಗಕ್ಕೆ ತೆರಿಗೆ ರಿಲೀಫ್‌, ಉದ್ಯೋಗ ಸೃಷ್ಟಿ, ಕೃಷಿ, ಆರೋಗ್ಯ, ಮಹಿಳೆಯರು ಮತ್ತು ಯುವಕರಿಗೆ ಆದ್ಯತೆ, ಮೂಲಸೌಕರ್ಯ ಹಾಗೂ ಆರೋಗ್ಯಕ್ಕೆ ಒತ್ತು ನೀಡಲಿದೆ.


ಸಂಸತ್ತಿನ ಅಧಿವೇಶನದಲ್ಲಿ ತಮ್ಮ ಮೊದಲ ಭಾಷಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಮುಂಬರುವ ಬಜೆಟ್ ಐತಿಹಾಸಿಕ ಘೋಷಣೆಗಳನ್ನು ಮಾಡಲಿದೆ. ಈ ಮೂಲಕ ದೇಶದ ಬೆಳವಣಿಗೆಗೆ ‘ಭವಿಷ್ಯದ ದೃಷ್ಟಿಕೋನ’ವನ್ನು ಪ್ರಸ್ತುತಪಡಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದರು.


ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಅಭಿವೃದ್ಧಿಯಲ್ಲ. ವಿಕಸಿತ ಭಾರತದ ಕಲ್ಪನೆಯು ಬಹು ಆಯಾಮಗಳೊಂದಿದೆ ವಿಶಾಲವಾಗಿದೆ. ವಿಕಸಿತ ಭಾರತ ಎಂದರೆ ಆರ್ಥಿಕ ಪ್ರಗತಿ, ಸಾಮಾಜಿಕ ಪ್ರಗತಿ, ಪರಿಸರ ಸಮತೋಲನೆ ಹಾಗೂ ಉತ್ತಮ ಆಡಳಿತವನ್ನು ಕಾಣಬೇಕು ಎಂದು ಪ್ರಧಾನಿಯವರು ಪ್ರತಿಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿಯನ್ನು ಒಳಗೊಂಡ ಸಾಮಾಜಿಕ ವಲಯದ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.


ಒಂಬತ್ತು ಆದ್ಯತೆಗಳು

ಪಟ್ಟಿ ಮಾಡಿದೆ. ಇವುಗಳಲ್ಲಿ ಉತ್ಪಾದಕತೆ ಮತ್ತು ಕೃಷಿ, ಉದ್ಯೋಗ ಮತ್ತು ಕೌಶಲ್ಯ, ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ನ್ಯಾಯ, ಉತ್ಪಾದನೆ ಮತ್ತು ಸೇವೆಗಳು, ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲಭೂತಸೌಕರ್ಯ, ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ(ಆರ್&ಡಿ}; ಮತ್ತು ಮುಂದಿನ ಪೀಳಿಗೆಯ ಸುಧಾರಣೆಗಳು. ಇದು ಉದ್ಯೋಗ ಸೃಷ್ಟಿ ಮತ್ತು ಬಳಕೆಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ, ಸಂಭಾವ್ಯವಾಗಿ ಗ್ರಾಹಕ ಸರಕುಗಳು, ರಿಯಲ್ ಎಸ್ಟೇಟ್ ಮತ್ತು ಆಟೋ ವಲಯಗಳಿಗೆ ಪ್ರಯೋಜನವನ್ನು ನೀಡುತ್ತದೆ.


ವೈಯಕ್ತಿಕ ಆದಾಯ ತೆರಿಗೆ

ವೈಯಕ್ತಿಕ ಆದಾಯ ತೆರಿಗೆಯಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ. ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ತೆರಿಗೆ ಸ್ಲ್ಯಾಬ್‌ಗಳನ್ನು ಪರಿಷ್ಕರಿಸಲಾಗಿದೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 50,000 ರೂ.ನಿಂದ 75,000 ರೂ.ಗೆ ಹೆಚ್ಚಿಸಲಾಗಿದೆ. ಅಲ್ಲದೆ 5% ತೆರಿಗೆ ದರದ ತೆರಿಗೆ ಸ್ಲ್ಯಾಬ್ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಬದಲಾಯಿಸಲಾಗಿದೆ. 17,000 ರೂ ವರೆಗೆ ಉಳಿತಾಯವನ್ನು ಒದಗಿಸುವ ಸಾಧ್ಯತೆಯಿದೆ. ಆದರೆ, ಹಳೆಯ ಪದ್ದತಿ ಅಡಿ ಆದಾಯ ತೆರಿಗೆ ಫೈಲ್ ಮಾಡುವವರಿಗೆ ಯಾವುದೇ ರಿಲೀಫ್ ಸಿಕ್ಕಿಲ್ಲ. ಎಲ್ಲವೂ ಎಂದಿನಂತೆಯೇ ಮುಂದುವರೆದಿದೆ.


ಯಾವುದು ಅಗ್ಗ-ಯಾವುದು ದುಬಾರಿ

ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಕೆಲವು ವಸ್ತುಗಳ ಸುಂಕದಲ್ಲಿ ಏರಿಳಿತ ಮಾಡುವ ಹೊತ್ತಲ್ಲಿ ಪರಿಸರ ಸ್ನೇಹಿ ನಿಲುವನ್ನು ಅನುಸರಿಸಿದೆ. ಅದರಲ್ಲೂ ಪರಿಸರಕ್ಕೆ ಮಾರಕವಾದ, ಮರು ಬಳಕೆ ಮಾಡಲು ಸಾಧ್ಯವೇ ಆಗದ ಪ್ಲಾಸ್ಟಿಕ್ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಸರ್ಕಾರ ಪರಿಸರ ಸ್ನೇಹಿ ನಿಲುವು ಅನುಸರಿಸಿದೆ. ಜೊತೆಯಲ್ಲೇ ಸೌರ ವಿದ್ಯುತ್ ಬಳಕೆ ಪ್ರೋತ್ಸಾಹಿಸುವ ಸಲುವಾಗಿ ಅವುಗಳ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ.

ಈ ಬಾರಿಯ ಬಜೆಟ್‌ನಲ್ಲಿ ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಮೊಬೈಲ್ ಉದ್ಯಮಕ್ಕೆ ತೆರಿಗೆ ಕಡಿತ ಮಾಡಲಾಗಿದ್ದು, ಮೊಬೈಲ್ ಫೋನ್ ಹಾಗೂ ಚಾರ್ಜರ್‌ಗಳ ಬೆಲೆ ಕಡಿಮೆಯಾಗಿದೆ. ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂಗಳ ಆಮದು ಸುಂಕ ಕಡಿಮೆ ಆಗಿದೆ. ಮೀನುಗಳಿಗೆ ನೀಡುವ ಆಹಾರ ವಸ್ತುಗಳ ಬೆಲೆಯಲ್ಲಿ ಇಳಿಕೆ ಆಗಲಿದೆ. ವಿದ್ಯುತ್ ಉಪಕರಣಗಳ ಬೆಲೆಯಲ್ಲಿ ಇಳಿಕೆ ಆಗಲಿದೆ. ಜೊತೆಯಲ್ಲೇ ಪ್ಲಾಸ್ಟಿಕ್ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.


ಉದ್ಯಮಸ್ನೇಹಿ ಪರಿಸರ

ಉದ್ದಿಮೆಗಳಿಗೆ ಭಾರತದ ಪ್ರೋತ್ಸಾಹ ಕ್ರಮಗಳು ಸಾಗರೋತ್ತರ ಹೂಡಿಕೆದಾರರು ಭಾರತದ ಬಗ್ಗೆ ಹೊಂದಿದ್ದ ಸಂದೇಹ ಭಾವನೆಯನ್ನು ದೂರವಾಗಿಸುವಲ್ಲಿ ನೆರವಾಗಿದೆ. ಕಳೆದ ಒಂದು ದಶಕದಲ್ಲಿ ಭಾರತವು ವಿಶ್ವದಲ್ಲಿ ಉತ್ತಮ ಸ್ಥಾನ ಗಳಿಸಿದೆ ಮತ್ತು ಜಾಗತಿಕ ಬೆಳವಣಿಗೆಯಲ್ಲಿ ಇಂದು ಮುಂಚೂಣಿ ಸ್ಥಾನ ಗಳಿಸಿದೆ.


ಭಾರತವು ಹೂಡಿಕೆಗೆ ಮಾತ್ರವಲ್ಲದೆ ವ್ಯಾಪಾರ ಮಾಡಲು ಸಹ ಅತ್ಯಂತ ಆಕರ್ಷಕ ತಾಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ನಮ್ಮ ಪ್ರಯತ್ನಗಳು ಕೇವಲ ಉದ್ಯಮಸ್ನೇಹಿ ವಾತಾವರಣವನ್ನು ನಿರ್ಮಿಸಲು ಅಗತ್ಯವಾದ ಬದ್ಧತೆಯ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗದೆ ಉದ್ಯಮಗಳ ಬೆಳವಣಿಗೆ ನಮ್ಮ ಆರ್ಥಿಕತೆಯ ಸದೃಡ ಬೆಳವಣಿಗೆಗೆ ಪೂರಕವಾಗುವಂತಹ ಯೋಚನೆ ಹಾಗೂ ಯೋಜನೆಗಳು ಈ ಬಜೆಟಿನಲ್ಲಿದೆ.


ಉದ್ಯೋಗದ ಮೇಲೆ ಒತ್ತು ನೀಡಲು 5 ಯೋಜನೆಗಳನ್ನು ಘೋಷಿಸಿದ್ದು 4.1 ಕೋಟಿ ಯುವಕರ ಉದ್ಯೋಗ ಮತ್ತು ಕೌಶಲ್ಯದ 5 ಯೋಜನೆಗಳಿಗೆ ಎರಡು ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಲಾಗಿದೆ. ಉದ್ಯೋಗ, ಕೌಶಲ, ಎಸ್‌ಎಂಇಗಳು ಮತ್ತು ಮಧ್ಯಮ ವರ್ಗದ ಮೇಲೆ ಒತ್ತು ನೀಡಲಾಗಿದೆ. ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಕ್ಕಾಗಿ 1.48 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.


ಏಂಜೆಲ್ ಟ್ಯಾಕ್ಸ್ ರದ್ದತಿಯು ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಗೆ ಒಂದು ಹೆಗ್ಗುರುತು ನಿರ್ಧಾರವಾಗಿದೆ. ಸ್ಟಾರ್ಟ್-ಅಪ್‌ಗಳು ಭಾರತದಲ್ಲಿ ನಾವೀನ್ಯತೆಯ ಬೆನ್ನೆಲುಬಾಗಿದೆ ಮತ್ತು ಈ ನಿರ್ಧಾರವು ಹೂಡಿಕೆಯನ್ನು ಉತ್ತೇಜಿಸುತ್ತದೆ.


ಬಂಡವಾಳ ಲಾಭಗಳ ಮೇಲಿನ ತೆರಿಗೆ ದರದಲ್ಲಿ ಹೆಚ್ಚಳ 

ಬಂಡವಾಳ ಮಾರುಕಟ್ಟೆಯ ಸಮತೋಲಿತ ಮತ್ತು ಕ್ರಮಬದ್ಧ ಬೆಳವಣಿಗೆಯೊಂದಿಗೆ ಸುಸ್ಥಿರ ಹೂಡಿಕೆಯನ್ನು ಉತ್ತೇಜಿಸುವ ಗುರಿಯೊಂದಿಗೆ ದೀರ್ಘಾವಧಿಯ ಬಂಡವಾಳ ಲಾಭಗಳ ಮೇಲಿನ ತೆರಿಗೆ ದರದಲ್ಲಿ ಹೆಚ್ಚಳ ಮತ್ತು ಈಕ್ವಿಟಿ ಮೇಲಿನ ಅಲ್ಪಾವಧಿಯ ಬಂಡವಾಳ ಲಾಭಗಳು, ಭವಿಷ್ಯದ ಮತ್ತು ಆಯ್ಕೆಗಳ ಮೇಲಿನ ಸೆಕ್ಯುರಿಟೀಸ್ ವಹಿವಾಟು ತೆರಿಗೆ (STT)ಯನ್ನು ಘೋಷಿಸಲಾಗಿದೆ. ಈ ಹೆಜ್ಜೆಗಳು ಪ್ರಸ್ತುತ ಗರಿಕೆದರಿದ ಚಟುವಟಿಕೆಯ ಮಟ್ಟವನ್ನು ಮಧ್ಯಮಗೊಳಿಸುವುದರೊಂದಿಗೆ ಬಂಡವಾಳ ಮಾರುಕಟ್ಟೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.


ಮೂಲಸೌಕರ್ಯ ಅಭಿವೃದ್ಧಿ:

ಮೂಲಸೌಕರ್ಯಕ್ಕಾಗಿ ಜಿಡಿಪಿಯ ಶೇ.3.4 (ರೂ.11 ಲಕ್ಷ 11 ಸಾವಿರ ಕೋಟಿ)ಹಂಚಿಕೆಯಾಗಿರುವುದು ಇದುವರೆಗಿನ ಅತಿ ಹೆಚ್ಚು ಹಂಚಿಕೆಯಾಗಿದೆ. ಹೊಸ ಕೈಗಾರಿಕಾ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ಮತ್ತು ಉತ್ಪಾದನೆಗೆ ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಬಜೆಟ್ ಕೇಂದ್ರೀಕರಿಸುತ್ತದೆ. ಉದ್ಯೋಗ ಸೃಷ್ಟಿಯ ಮೇಲೆ ಕೇಂದ್ರೀಕರಿಸಿದ ಬಜೆಟ್ ಮತ್ತು ನಗರ ಹಾಗೂ ಉದ್ಯಮ ಕ್ಷೇತ್ರವನ್ನು ಉತ್ತೇಜಿಸುವ ಮೂಲಕ ಮತ್ತು ಗುಣಮಟ್ಟದ ಮೂಲಸೌಕರ್ಯವನ್ನು ಒದಗಿಸುವ ಆಶಯ ಹೊಂದಿದೆ. ಇದು ಭಾರತದ ಉತ್ಪಾದನಾ ಕ್ಷೇತ್ರದ ಸ್ಪರ್ಧಾತ್ಮಕತೆಯನ್ನು ಸಕ್ರಿಯಗೊಳಿಸುವಲ್ಲಿ ನಿರಂತರ ಗಮನವನ್ನು ಪ್ರತಿಬಿಂಬಿಸುತ್ತದೆ.


ಆರ್ಥಿಕ ಮತ್ತು ಸಾರಿಗೆ ಯೋಜನೆಗಳ ಮೇಲಿನ ಗಮನವು ನಗರಗಳು ಆರ್ಥಿಕ ಬೆಳವಣಿಗೆಯ ಎಂಜಿನ್‌ಗಳಾಗಿ ಮುಂದುವರಿಯಲು ಮತ್ತು ದೇಶದ ಬೆಳವಣಿಗೆಯ ಆಕಾಂಕ್ಷೆಗಳನ್ನು ಪೂರೈಸಲು ಅನುವು ಮಾಡಿಕೊಡುತ್ತದೆ.


ಹವಾಮಾನ ಹಣಕಾಸು ಟ್ಯಾಕ್ಸಾನಮಿ (climate finance taxonom)

ಹವಾಮಾನ ಹಣಕಾಸು ಟ್ಯಾಕ್ಸಾನಮಿಗಳನ್ನು ಅಭಿವೃದ್ಧಿಪಡಿಸುವ ಭಾರತದ ಉದ್ದೇಶವನ್ನು ಬಜೆಟ್ ಘೋಷಿಸಿದೆ. ಇದು 'ಹಸಿರು' ಹೂಡಿಕೆಗಳ ಸ್ಪಷ್ಟ, ಪಾರದರ್ಶಕ, ಸ್ಥಿರ ಮತ್ತು ಪ್ರಮಾಣಿತ ವ್ಯಾಖ್ಯಾನಗಳನ್ನು ಒದಗಿಸುತ್ತದೆ. ಇದು ಅವರ ಹವಾಮಾನ-ಸಂಬಂಧಿತ ಚಟುವಟಿಕೆಗಳಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಕಾರಣವಾಗುತ್ತದೆ. ಹವಾಮಾನ ಬದಲಾವಣೆಯ ವಿರುದ್ಧ ಚೇತರಿಸಿಕೊಳ್ಳುವ ಮೂಲಸೌಕರ್ಯವನ್ನು ಯೋಜಿಸಲು ಮತ್ತು ಅಭಿವೃದ್ಧಿಪಡಿಸಲು ಇದು ದೇಶಕ್ಕೆ ಸಹಾಯ ಮಾಡುತ್ತದೆ. ಇದು ಭಾರತವು ತನ್ನ ಹವಾಮಾನ ಬದ್ಧತೆಗಳು ಮತ್ತು ಹಸಿರು ಪರಿವರ್ತನೆಯನ್ನು ಸಾಧಿಸಲು ಸಹಾಯ ಮಾಡುತ್ತದೆ.


ಧಾರ್ಮಿಕ ಪ್ರವಾಸೋದ್ಯಮ 

ಧಾರ್ಮಿಕ ಪ್ರವಾಸೋದ್ಯಮ ಮತ್ತು ದೇವಾಲಯದ ಕಾರಿಡಾರ್‌ಗಳ ಮೇಲಿನ ಗಮನವು ಭಾರತವು ಧಾರ್ಮಿಕ ಪ್ರವಾಸೋದ್ಯಮದ ನಾಯಕನಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಅಲ್ಲದೆ, ಐತಿಹಾಸಿಕ ಸ್ಥಳಗಳಾದ ನಳಂದಾ ಮತ್ತು ಒರಿಸ್ಸಾದಂತಹ ರಾಜ್ಯಗಳ ಮೇಲೆ ಕೇಂದ್ರೀಕರಿಸುವುದರಿಂದ ಪ್ರವಾಸೋದ್ಯಮದಲ್ಲಿ ಹೊಸ ಹೂಡಿಕೆಗಳನ್ನು ಸಕ್ರಿಯಗೊಳಿಸುತ್ತದೆ.


ಕೃಷಿ ವಲಯಕ್ಕೆ ಭರ್ಜರಿ ಕೊಡುಗೆ

ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಮುಂದಿನ ವರ್ಷಗಳಲ್ಲಿ ಒಂದು ಕೋಟಿ ರೈತರನ್ನು ನೈಸರ್ಗಿಕ ಕೃಷಿ ಮಾಡಲು ಉತ್ತೇಜನ ನೀಡುವ ಗುರಿ ಹೊಂದಲಾಗಿದೆ. ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳಲ್ಲಿ ಸ್ವಾವಲಂಬನೆಗಾಗಿ ಸರ್ಕಾರವು ಉತ್ಪಾದನೆ, ಸಂಗ್ರಹಣೆ, ಮಾರುಕಟ್ಟೆಯನ್ನು ಬಲಪಡಿಸಲು ಯೋಜನೆ ಹೊಂದಿದೆ. ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು 80 ಕೋಟಿಗೂ ಹೆಚ್ಚು ಜನರಿಗೆ 5 ವರ್ಷಗಳವರೆಗೆ ವಿಸ್ತರಿಸಲಾಗಿದೆ.


ಯುವಜನತೆಗೆ ಕೊಡುಗೆ

ಭಾರತೀಯ ಕಾರ್ಮಿಕ ಮಾರುಕಟ್ಟೆಯ ಸೂಚಕಗಳು ಕಳೆದ ಆರು ವರ್ಷಗಳಲ್ಲಿ ಸುಧಾರಿಸಿದೆ, ನಿರುದ್ಯೋಗ ದರವು 2022-23 ರಲ್ಲಿ ಶೇಕಡಾ 3.2 ಕ್ಕೆ ಇಳಿಕೆಯಾಗಿದೆ. ಹೆಚ್ಚುತ್ತಿರುವ ಉದ್ಯೋಗಿಗಳನ್ನು ಪೂರೈಸಲು ಅಥವಾ ಅವರಿಗೆ ಕೆಲಸ ಒದಗಿಸಲು ಭಾರತೀಯ ಆರ್ಥಿಕತೆಯು ಕೃಷಿಯೇತರ ವಲಯದಲ್ಲಿ 2030 ರವರೆಗೆ ವಾರ್ಷಿಕವಾಗಿ ಸುಮಾರು 78.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವಿದೆ.


ದೇಶೀಯ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ 10 ಲಕ್ಷ ರೂ.ವರೆಗಿನ ಸಾಲಕ್ಕೆ ಸರ್ಕಾರ ಆರ್ಥಿಕ ನೆರವು ನೀಡಲಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ದೇಶದಾದ್ಯಂತ 500 ಉನ್ನತ ಕಂಪನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವ ಯೋಜನೆಯನ್ನು ಪ್ರಕಟಿಸಲಾಗಿದೆ. ಈ ಅವಕಾಶವು ತಿಂಗಳಿಗೆ ರೂ 5000 ಇಂಟರ್ನ್‌ಶಿಪ್ ಭತ್ಯೆ ಜೊತೆಗೆ ರೂ 6000 ಒಂದು ಬಾರಿ ಸಹಾಯದೊಂದಿಗೆ ಬರುತ್ತದೆ. ಹೆಚ್ಚುವರಿಯಾಗಿ, ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಸುಮಾರು 12 ಕೈಗಾರಿಕಾ ಪಾರ್ಕ್‌ಗಳನ್ನು ಮಂಜೂರು ಮಾಡಲಾಗಿದೆ. ಮುಂದಿನ ಐದು ವರ್ಷದಲ್ಲಿ 4.1 ಕೋಟಿ ಯುವಕರಿಗೆ ಉದ್ಯೋಗಕ್ಕೆ ಯೋಜನೆ ರೂಪಿಸಲಾಗಿದೆ.


'ಪೂರ್ವೋದಯ' 

ಬಜೆಟ್‌ನಲ್ಲಿ ಪೂರ್ವದ ರಾಜ್ಯಗಳ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಲಾಗಿದೆ ಎಂದು ಘೋಷಿಸಲಾಗಿದೆ, ಇದು ಈ ರಾಜ್ಯಗಳಲ್ಲಿ ಹೆಚ್ಚಿನ ಆದಾಯ ಮತ್ತು ಅವಕಾಶಗಳು ಹಿಂದುಳಿದಿರುವುದರಿಂದ ಇದು ಅನಿವಾರ್ಯವಾಗಿದೆ. ಇದು ಇತರ ರಾಜ್ಯಗಳೊಂದಿಗೆ ಆದಾಯದ ಅಂತರವನ್ನು ಕಡಿಮೆ ಮಾಡಲು ಈ ರಾಜ್ಯಗಳಿಗೆ ಪೂರಕತೆಯನ್ನು ಒದಗಿಸುತ್ತದೆ ಮತ್ತು ಅಂತರ್ಗತ ಅಭಿವೃದ್ಧಿಯ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ.


ಇಳಿಯುತ್ತಿರುವ ವಿತ್ತೀಯ ಕೊರತೆ

ಈ ಹಣಕಾಸು ವರ್ಷದಲ್ಲಿ ಒಟ್ಟು ಸ್ವೀಕೃತಿಗಳು ರೂ.32.07 ಲಕ್ಷ ಕೋಟಿ ಹಾಗೂ ಒಟ್ಟು ವೆಚ್ಚ ರೂ.48.21 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ನಿವ್ವಳ ತೆರಿಗೆ ಸ್ವೀಕೃತಿಗಳು ರೂ.25.83 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಒಟ್ಟು ಮಾರುಕಟ್ಟೆ ಸಾಲವನ್ನು ರೂ.14.01 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.


2024-25 ರ ವಿತ್ತೀಯ ಕೊರತೆಯು ಜಿಡಿಪಿಯ ಶೇ.4.9 ಎಂದು ಅಂದಾಜಿಸಲಾಗಿದೆ ಹಾಗೂ 2025-26ರಲ್ಲಿ ವಿತ್ತೀಯ ಕೊರತೆಯನ್ನು ಶೇ. 4.5 ಕ್ಕೆ ತಗ್ಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಲಾದ ಶೇ.5.1 ರ ಗುರಿಗಿಂತ ಗಮನಾರ್ಹವಾಗಿ ಇಳಿಸಿರುವುದು ಶ್ಲಾಘನೀಯ ಹೆಜ್ಜೆಯಾಗಿದೆ. ಇದು ಹಣಕಾಸಿನ ಶಿಸ್ತು ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ವಿತ್ತೀಯ ಕೊರತೆಯು ಸರ್ಕಾರದ ಒಟ್ಟು ಆದಾಯ ಮತ್ತು ಒಟ್ಟು ವೆಚ್ಚದ ನಡುವಿನ ವ್ಯತ್ಯಾಸವಾಗಿದೆ. ಇದು ಸರ್ಕಾರಕ್ಕೆ ಬೇಕಾಗಬಹುದಾದ ಒಟ್ಟು ಸಾಲಗಳ ಸೂಚನೆಯಾಗಿದೆ.


ಉದಯೋನ್ಮುಖ ಆರ್ಥಿಕತೆ

ಇಂದು ವೇಗವಾಗಿ ಬೆಳೆಯುತ್ತಿರುವ ಉದಯೋನ್ಮುಖ ಆರ್ಥಿಕತೆಯಾಗಿ ಭಾರತವು ಮೂಡಿ ಬಂದಿದೆ. ವಿಶಾಲ-ಆಧಾರಿತ ಕೈಗಾರಿಕಾ ಬೆಳವಣಿಗೆಯೊಂದಿಗೆ ಕೈಗಾರಿಕಾ ಸಾಮರ್ಥ್ಯದ ಬಳಕೆಯ ಸುಧಾರಣೆ ಮತ್ತು ಹಾನಿಕಾರಕವಲ್ಲದ ಹಣದುಬ್ಬರದ ನಿರೀಕ್ಷೆಗಳು ಭಾರತದ ಮುಂದಿನ ದಶಕಗಳ ಬೆಳವಣಿಗೆಯ ಸಾಮರ್ಥ್ಯದ ಕೈಗನ್ನಡಿಯಾಗಿದೆ. 


ಮೂಲತಃ, ಬೆಳವಣಿಗೆ ಮತ್ತು ಬೇಡಿಕೆಗೆ ಋಣಾತ್ಮಕ ಪ್ರಚೋದನೆಯನ್ನು ನೀಡದೆಯೇ ಹಣಕಾಸುಗಳನ್ನು ಕ್ರೋಢೀಕರಿಸುವ ಗುರಿಯನ್ನು ಬಜೆಟ್ ಹೊಂದಿದೆ. ಹಣಕಾಸಿನ ಬಲವರ್ಧನೆ ಮತ್ತು ಸ್ಥೂಲ ಸ್ಥಿರತೆಯನ್ನು ಮುಂದುವರೆಸುವುದರ ಮೇಲೆ ಕೇಂದ್ರ ಬಜೆಟ್‌ ಗಮನವನ್ನು ಕೇಂದ್ರೀಕರಿಸಿದೆ. ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಮೇಲಿನ ಪ್ರಚೋದನೆಯು ದೀರ್ಘಾವಧಿಯಲ್ಲಿ ಧನಾತ್ಮಕವಾದ ಬದಲಾವಣೆಗಳಿಗೆ ನಾಂದಿಯಾಗಲಿದೆ. ಪ್ರತಿಕೂಲ ಸನ್ನಿವೇಶಗಳ ಮಧ್ಯೆ ಪ್ರಸಕ್ತ ಸಾಲಿನ ಅಂಕಿ ಅಂಶಗಳು ಹಾಗೂ ದೂರದರ್ಶಿತ್ವದ ಬಜೆಟ್ ಆರ್ಥಿಕ ಬೆಳವಣಿಗೆಯ ಭರವಸೆಯನ್ನು ನೀಡುತ್ತಿರುವುದು ಸ್ವಾಗತಾರ್ಹ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top