ಬೀಳಗಿ: ಪತ್ರಿಕೋದ್ಯಮವು ಸಮಾಜದಲ್ಲಿನ ಜನಸಾಮಾನ್ಯರ ಆಗು-ಹೋಗುಗಳಿಗೆ ಸ್ಪಂದಿಸಿ ಸರ್ಕಾರ ಮತ್ತು ಜನರ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಎಸ್. ಆರ್. ಪಾಟೀಲ ಹೇಳಿದರು.
ತಾಲೂಕಿನ ಬಾಡಗಂಡಿ ಗ್ರಾಮದಲ್ಲಿನ ಎಸ್ ಆರ್ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ಬೀಳಗಿ ತಾಲ್ಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಪತ್ರಿಕೆಗಳು ವಿಶ್ವದಲ್ಲಿ ನಡೆಯುವ ಪ್ರಸ್ತುತ ಸುದ್ದಿಗಳು, ರಾಜಕೀಯ ಬೆಳವಣಿಗೆಗಳು, ಆವಿಷ್ಕಾರಗಳು ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಮಾಹಿತಿಯನ್ನು ಸ್ಪಷ್ಟವಾಗಿ ಸತ್ಯಾಸತ್ಯತೆಯೊಂದಿಗೆ ಕೊಡುವ ಕಾರ್ಯ ಮಾಡುತ್ತಿದೆ. ಇದರಿಂದ ಎಲ್ಲರಿಗೂ ಜ್ಞಾನಾರ್ಜನೆ ಹಾಗೂ ಮಾಹಿತಿಗಳು ತಲುಪುತ್ತಿವೆ ಎಂದರು.
ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿ ದೇಶದ ಮತ್ತು ಅಂತರಾಷ್ಟ್ರೀಯ ಮಟ್ಟದ ಸುದ್ದಿಗಳನ್ನು ಕ್ಷಣಮಾತ್ರದಲ್ಲಿ ಮುಟ್ಟಿಸುವ ಪತ್ರಿಕಾರಂಗ, ವಸ್ತುನಿಷ್ಟ ಸುದ್ದಿಗಳ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದುವ ಹಕ್ಕು ಪ್ರತಿಯೊಬ್ಬ ಪತ್ರಕರ್ತನಿಗಿದೆ. ಆ ದಿಸೆಯಲ್ಲಿ ತಾಲೂಕಿನ ಕಾನಿಪ ಬಳಗ ಕಾರ್ಯನಿರ್ವಹಿಸುತ್ತಿರುವುದು ಸಂತಸದ ವಿಷಯ ಪ್ರತಿದಿನ ಹೊಸತನ್ನು ಕಲಿಯಲು ಪತ್ರಿಕೋದ್ಯಮ ಪ್ರೇರೇಪಿಸುತ್ತದೆ. ಯಾವುದೇ ರೀತಿಯ ಸವಾಲನ್ನು ಎದುರಿಸಲು ಧೈರ್ಯವನ್ನು ತುಂಬುವ ಶಕ್ತಿ ಪತ್ರಿಕೋದ್ಯಮ ಕ್ಷೇತ್ರಕ್ಕಿದೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಉದಯವಾಣಿ ಜಿಲ್ಲಾ ವರದಿಗಾರ ಶ್ರೀಶೈಲ ಬಿರಾದಾರ ಮಾತನಾಡಿ, ಪತ್ರಕರ್ತರು ಸಮಾಜಕ್ಕೆ ಚಿಕಿತ್ಸೆ ನೀಡುವ ವೈದ್ಯರಿದ್ದಂತೆ, ಪತ್ರಕರ್ತರಾದವರು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು. ಪತ್ರಿಕೋದ್ಯಮದ ಪರಿಚಯ, ಅದರ ಹಿನ್ನೆಲೆ, ಕಾಲಕಾಲಕ್ಕೆ ತಕ್ಕಂತೆ ಆದ ಬದಲಾದ ವೈಖರಿ ಹಾಗೂ ಪ್ರಸ್ತುತ ವೃತ್ತಿಯಲ್ಲಿ ತೊಡಗಿಕೊಂಡವರು ಮಾಡಿಕೊಳ್ಳಬೇಕಾದ ಬದಲಾವಣೆ ಕುರಿತು ಅವಲೋಕನ ಮಾಡಿಕೊಳ್ಳುವುದು ಅವಶ್ಯಕ ಎಂದು ಹೇಳಿದರು.
ಸಾನಿಧ್ಯ ವಹಿಸಿದ ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಎಸ್ಆರ್ ಪಾಟೀಲ್ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಎಂ ಎನ್ ಪಾಟೀಲ್ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಕಿರಣ ಬಾಳಗೋಳ ಆಶಯ ನುಡಿ ಹೇಳಿದರು.
ಸಂದರ್ಭದಲ್ಲಿ ಎಸ್.ಆರ್.ಪಾಟೀಲ ಮೆಡಿಕಲ್ ಕಾಲೇಜಿನ ಡೀನ್ ಧರ್ಮರಾಯ ಇಂಗಳೆ, ಯುವ ಉದ್ಯಮಿ ಆನಂದ ಇಂಗಳಗಾಂವಿ, ಬಾಗಲಕೋಟೆ ಡಿ.ಎಸ್.ಎಸ್ ಸಂಚಾಲಕ ಮಹಾದೇವ ಹಾದಿಮನಿ, ಬಿಇಓ ಆರ್.ಎಸ್.ಆದಾಪೂರ, ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯರಾದ ಚನ್ನಬಸು ಚಲವಾದಿ, ವಿರೂಪಾಕ್ಷಯ್ಯ ಹಿರೇಮಠ, ಕಾನಿಪ ತಾಲೂಕ ಅಧ್ಯಕ್ಷ ಸುಭಾಸ ರಾಠೋಡ, ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮತ್ತಿತರರು ಇದ್ದರು.
ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಶೇಖರ ಗೋಳಸಂಗಿ ನಿರೂಪಿಸಿದರು, ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಎಂ. ಸಾಹುಕಾರ ಸ್ವಾಗತಿಸಿದರು.
ಪ್ರತಿಭಾ ಪುರಸ್ಕಾರ: ಎಸ್ಸೆಸ್ಸೆಲ್ಸಿಯಲ್ಲಿ ನಿಖಿತಾ ಹಂಡಗಿ, ಗುರು ಸಾವಕಾರ, ಜಯಾ ಸಾವಕಾರ, ಪಿಯುಸಿಯಲ್ಲಿ ಅಕ್ಷತಾ ಚಲವಾದಿ, ಸುಕೃತಾ ಸುಣಗಾರ, ದೀಪಾ ಗಚ್ಚಿನಮನಿ ಹೆಚ್ಚು ಅಂಕಗಳನ್ನು ಪಡೆದ ಪ್ರಯುಕ್ತ ಸನ್ಮಾನಿಸಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ