ಬೆಂಗಳೂರು: ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಷಾಢ ಶುದ್ಧ ಪ್ರಥಮ "ಏಕಾದಶಿ" ಪ್ರಯುಕ್ತ ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನಧೀಶ್ವರರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ ಶ್ರೀಮನ್ ಮೂಲ ರಾಮಚಂದ್ರ ದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿದರು.
ಶ್ರೀ ಸುದರ್ಶನ ಹೋಮದೊಂದಿಗೆ ವಿಶೇಷವಾಗಿ ಶಯನಿ ಪ್ರಥಮ ಏಕಾದಶಿ ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಮುಂಭಾಗದ ಬಂಗಾರದ ತೊಟ್ಟಿಲನಲ್ಲಿ ಶ್ರೀಮನ್ ಮೂಲ ರಾಮಚಂದ್ರ ದೇವರಿಗೆ ತೊಟ್ಟಿಲ ಸೇವೆಯನ್ನು ನೆರವೇರಿಸಿ ಮಹಾಮಂಗಳಾರತಿಯೊಂದಿಗೆ ಪ್ರಾರ್ಥನೆಯನ್ನು ಸಲ್ಲಿಸಿ ತಾವು "ತಪ್ತ ಮುದ್ರಾಧಾರಣ"ವನ್ನು ಸ್ವೀಕರಿಸಿ, ತದನಂತರ ಶ್ರೀಮಠದ ಸಹಸ್ರಾರು ಶಿಷ್ಯರಿಗೆ ಮತ್ತು ಭಕ್ತರಿಗೆ ನಿರಂತರವಾಗಿ ತಪ್ತಮುದ್ರಾ ಧಾರಣವನ್ನು ನೆರೆವೇರಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ಪಂಡಿತರಿಂದ ಭಾಗವತ ಪ್ರವಚನ ಮಾಲಿಕೆಯ ಉಪನ್ಯಾಸವೂ ನೆರವೇರಿತು. ಈ ತಪ್ತಮುದ್ರಾ ಧಾರಣೆ ಸ್ವೀಕರಿಸಲು ಸಹಸ್ರಾರು ಶಿಷ್ಯ ಭಕ್ತರಿಗೆ ಅಚ್ಚುಕಟ್ಟಾದ ಸರದಿ ಸಾಲಿನಲ್ಲಿ ಬರುವ ಹಾಗೆ ವಯೋವೃದ್ಧರಿಗೆ ಮತ್ತು ವಿಕಲಚೇತನರಿಗೆ ಪ್ರತ್ಯೇಕದ ವ್ಯವಸ್ಥೆಯನ್ನು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರ ನೇತೃತ್ವದಲ್ಲಿ ಸಿಬ್ಬಂದಿಗಳ ಸಹಕಾರದೊಂದಿಗೆ ವ್ಯವಸ್ಥೆ ಮಾಡಲಾಗಿತ್ತು.
ಶ್ರೀ ಮಠದ ಪ್ರಕಾರ ಪೂಜಾ ಮಂದಿರ ರಾಯರ ಹೊರಬಾಗಿಲಿನಿಂದ ಶಾಲಿನಿ ಆಟದ ಮೈದಾನದವರೆಗೆ ತಪ್ತಮುದ್ರಾ ಧಾರಣಗಾಗಿ ಸಹಸ್ರಾರು ಶಿಷ್ಯ- ಭಕ್ತ ಸಮೂಹವು ಎದ್ದು ಕಾಣುತ್ತಿತ್ತು. ಬೆಳಗ್ಗೆಯಿಂದಲೇ ನಿರಂತರವಾಗಿ ರಾತ್ರಿ 10 ಗಂಟೆಯವರೆಗೆ ತಪ್ತ ಮುದ್ರಾಧಾರಣಾ ಕಾರ್ಯಕ್ರಮವೂ ಮುಂದುವರೆಯಿತು. ಶ್ರೀ ಮಠದ ಶಿಷ್ಯರು ಮತ್ತು ಭಕ್ತರು ಭಗವಂತನ ಚಿಹ್ನೆಗಳಾದ ಚಕ್ರ ಶಂಖವನ್ನು ಧರಿಸಿ ಕೊಂಡು ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ