ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ
ಚಿತ್ರಗಳು: ನೀರ್ನಳ್ಳಿ ಗಣಪತಿ; ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣಸುಗ್ರೀವ ಪುನೀತನಾದ. ರಾಮಕಾರ್ಯಕ್ಕೆ ಸುಗ್ರೀವನನ್ನು ಸಜ್ಜಾಗಿಸಲು, ಜಗತ್ತಿಗೆ ತಿಳಿಯಪಡಿಸಲು ನೆವವೊಂದು ಬೇಕಿತ್ತು. "ವಾಲಿಗೆ ಮೋಕ್ಷ- ಸುಗ್ರೀವನಿಗೆ ಪಟ್ಟ- ಸೀತಾನ್ವೇಷಣೆಗೆ ಸುಗ್ರೀವನ ಸಹಾಯ" ಈ ಸಂಗತಿಗಳ ಹಿನ್ನೆಲೆಯೊಂದಿಗೆ ವಾಲಿಯನ್ನು ಸುಗ್ರೀವನು ಸಿಂಹನಾದ ಮಾಡುವ ಮೂಲಕ ಯುದ್ಧಕ್ಕೆ ಕರೆದನು. ಅವರಿಬ್ಬರು ಯುದ್ಧ ಮಾಡುತ್ತಿರುವ ಸಂದರ್ಭದಲ್ಲಿ ರಾಮನು ಮರೆಯಲ್ಲಿ ನಿಂತು ಬಾಣಪ್ರಯೋಗಿಸಿ ವಾಲಿಯನ್ನು ಸಂಹರಿಸುವುದು ಅವರ ಯೋಜನೆಯಾಗಿತ್ತು. ವಾಲಿಯು ಸುಗ್ರೀವನ ಕರೆಯನ್ನು ಕೇಳಿ ಕೋಪೋದ್ರಿಕ್ತನಾಗಿ ಯುದ್ಧಕ್ಕೆ ಬಂದನು. ಇಬ್ಬರೂ ಮುಷ್ಟಿಯುದ್ಧವನ್ನು ಮಾಡುತ್ತಿದ್ದರು. ವಾಲೀಯದು ಮೇಲುಗೈಯಾಗತೊಡಗಿತು. ಸುಗ್ರೀವನದು ಸೋಲುಗೈಯಾಗ ತೊಡಗಿತು. ಅವರಿಬ್ಬರೂ ಒಂದೇ ರೀತಿಯ ಶರೀರವನ್ನು ಹೊಂದಿದ್ದರಿಂದ ಅವರ ನಡುವಿನ ವ್ಯತ್ಯಾಸ ತಿಳಿಯದೆ, ಗೊಂದಲವುಂಟಾಗಿ ರಾಮನು ಬಾಣಪ್ರಯೋಗಿಸಲಿಲ್ಲ. ಸುಗ್ರೀವನು ನಿರಾಶನಾಗಿ, ಸಾಯುವುದನ್ನು ತಪ್ಪಿಸಲು ರಾಮನತ್ತ ಓಡಿ ಬಂದ. "ರಾಮಾ, ಹೀಗೂ ನೀನು ಕೊಟ್ಟ ಮಾತಿಗೆ ತಪ್ಪುವುದೇ? ಸಾವಿನತ್ತ ನನ್ನನ್ನು ನೂಕುವುದೇ?"- ಎಂದು ನೋವಿನಿಂದ ಆಕ್ಷೇಪಿಸಿದ. ಆಗ ರಾಮನು ತನಗುಂಟಾದ ಗೊಂದಲವನ್ನು ಹೇಳಿ 'ಉಪಕಾರ ಮಾಡಲು ಹೋಗಿ ಅಪಕಾರವಾಗಬಾರದು' ಎಂದು ಬಾಣವನ್ನು ಬಿಡಲಿಲ್ಲ ಎಂದನು. ಇಬ್ಬರ ನಡುವೆ ವ್ಯತ್ಯಾಸವನ್ನು ತಿಳಿಯಲು ಅರಳಿದ ಹೂಗಳ ಮಾಲೆಯನ್ನು ಸುಗ್ರೀವನು ಧರಿಸಿ ಯುದ್ಧ ಮಾಡುವುದೆಂದು ನಿರ್ಧರಿಸಿದರು. ಲಕ್ಷ್ಮಣನು, ಸುಗ್ರೀವನ ಕೊರಳಿಗೆ ಅಣ್ಣನ ಆಣತಿಯಂತೆ ಹೂಮಾಲೆಯನ್ನು ತೊಡಿಸಿದನು. ಸುಗ್ರೀವನು ಹೊಸಹುರುಪಿನಿಂದ ಮತ್ತೊಮ್ಮೆ ಅಣ್ಣ ವಾಲಿಯನ್ನು ಯುದ್ಧಕ್ಕೆ ಕರೆದನು.
ವಾಲಿಯು ಯುದ್ಧಕ್ಕೆ ಸಿದ್ಧನಾದನು. ಆದರೆ ಅವನ ಪತ್ನಿ ತಾರೆಗೆ ಈ ಸಲದ ಯುದ್ಧವು ಮಂಗಳಕರವಾಗಿ ಕಾಣಲಿಲ್ಲ. ಅವಳು ಗಂಡನನ್ನು ತಡೆದು ಯುದ್ಧ ಬೇಡವೆಂದಳು. ವಾಲಿಯು ಅವಳ ಶಂಕೆಯನ್ನು ಉಪೇಕ್ಷಿಸಿ ಮುಂದುವರೆದಾಗ, ತಾರೆಯು ಅವನನ್ನು ಯುದ್ಧಕ್ಕೆ ಹೋಗದಂತೆ ತಡೆದಳು. ಮಗ ಅಂಗದನು ತನಗೆ ರಾಮನ ಕುರಿತು ಹೇಳಿದ-" ಅಯೋಧ್ಯೆಯಿಂದ ರಾಮ-ಸೀತೆ- ಲಕ್ಷ್ಮಣರು ವನವಾಸಕ್ಕೆ ಬಂದದ್ದು,ಪಂಚವಟಿಯಲ್ಲಿದ್ದಾಗ ರಾವಣನು ಸೀತಾಪಹರಣ ಮಾಡಿದ್ದು, ರಾಮ- ಸುಗ್ರೀವರು ಅಗ್ನಿಸಾಕ್ಷಿಯಾಗಿ ಗೆಳೆತನ ಮಾಡಿದ್ದು"- ಇವುಗಳನ್ನು ಹೇಳಿದಳು. ಬಲಿಷ್ಠನೊಬ್ಬನ ಬೆಂಬಲದಿಂದಲೇ ಸುಗ್ರೀವನು ಮರಳಿ ಯುದ್ಧದ ಆಹ್ವಾನ ನೀಡಿದ್ದರಿಂದ ಪ್ರಾಣಾಪಾಯ ಬರುವುದು ಬೇಡವೆಂದು ಆಗ್ರಹಪೂರ್ವಕವಾಗಿ ಯುದ್ಧವನ್ನು ತೊರೆಯಲು ತಾರೆಯು ವಾಲಿಯಲ್ಲಿ ಹೇಳಿದಳು. ಆಗ ವಾಲಿಯು -"ಲೋಕೈಕ ವೀರನಾದ ವಾಲಿಯು ಯುದ್ಧಕ್ಕೆ ಬಂದ ಆಹ್ವಾನವನ್ನು ಉಪೇಕ್ಷಿಸಿದರೆ ಅಪಕೀರ್ತಿಯುಂಟಾಗುವುದು. ಒಂದೊಮ್ಮೆ ರಾಮನೊಂದಿಗೆ ಸುಗ್ರೀವನು ಯುದ್ಧಕ್ಕೆ ಬಂದಿದ್ದರೆ ನಾನು ಆ ಅವತಾರಪುರುಷನನ್ನು ಗೌರವಿಸಿ, ಪೂಜಿಸಿ ಅರಮನೆಗೆ ಕರೆತರುವೆನು-" ಎಂದು ಹೇಳಿ ಆತಂಕದಿಂದ ಅಳುತ್ತಿದ್ದ ತಾರೆಯನ್ನು ಸಮಾಧಾನಪಡಿಸಿ ಯುದ್ಧಕ್ಕೆ ತೆರಳಿದನು.
ವಾಲಿ- ಸುಗ್ರೀವರ ನಡುವೆ ಅಂತಿಮ ಯುದ್ಧ ಆರಂಭವಾಯಿತು. ಸಮಬಲದಲ್ಲಿ ಇಬ್ಬರೂ ಗುದ್ದಾಡತೊಡಗಿದರು. ಸುಗ್ರೀವನು ಆಗಾಗ ರಾಮನ ಕಡೆ ನೋಡುತ್ತ ಯುದ್ಧ ಮಾಡುತ್ತಿದ್ದನು. ಮರದ ಮರೆಯಲ್ಲಿ ನಿಂತಿದ್ದ ರಾಮನು ಹೆಚ್ಚಿನ ಸಮಯವನ್ನು ಕಳೆಯದೆ ವಾಲಿಯ ಮೇಲೆ ಗುರಿಯಿಟ್ಟು ಬಾಣಪ್ರಯೋಗವನ್ನು ಮಾಡಿದ. ಎದೆಯನ್ನು ಸೀಳಿದ ಬಾಣದೊಂದಿಗೆ ವಾಲಿಯು ಎತ್ತರಕ್ಕೆ ಹಾರಿ ನೆಲಕ್ಕೊರಗಿದನು!
ವಾಲಿಯ ಬಳಿಗೆ ರಾಮ ಬಂದನು. ರಾಮನ ಪರೋಕ್ಷ ದಾಳಿಯಿಂದ ವಾಲಿಯು ಅಸಮಾಧಾನ ಹೊಂದಿದ್ದನು. ರಾಮನಲ್ಲಿ- ನೀನು ರಾಜಧರ್ಮಕ್ಕೆ ವಿರುದ್ಧವಾಗಿ ಪ್ರತ್ಯಕ್ಷಯುದ್ಧ ಮಾಡದೆ ಪರೋಕ್ಷಯುದ್ಧದಿಂದ ನನ್ನನ್ನು ಕೊಂದೆ. ಇದರಿಂದ ನಿನಗೆ ಸಿಕ್ಕಿದ ಕೀರ್ತಿ ಯಾವುದು? ನಾನು ನಿನಗೇನು ಅನ್ಯಾಯ ಮಾಡಿದೆ? ಸುಗ್ರೀವನು ನಿನಗೆ ಯಾವ ಉಪಕಾರವನ್ನು ಮಾಡಿರುವನು? ಸೀತೆಗಾಗಿ ನೀನು ಅವನ ಸಖ್ಯವನ್ನು ಮಾಡಿರುವೆನೆಂದು ಕೇಳಿದ್ದೇನೆ. ನನ್ನಲ್ಲಿ ಹೇಳಿದ್ದರೆ, ನಾನು ಮನಸ್ಸು ಮಾಡಿದ್ದರೆ, ಕ್ಷಣಾರ್ಧದಲ್ಲಿ ಲಂಕೆಗೆ ಹೋಗಿ ಸೀತೆಯನ್ನು, ಲಂಕೆಸಹಿತ ರಾವಣ ಹಾಗೂ ಅವನ ಪರಿವಾರವನ್ನು ಕಟ್ಟಿ ತರುತ್ತಿದ್ದೆ. ಆದರೆ ನೀನು ಕ್ಷತ್ರಿಯನಾಗಿರುವ ಬದಲು ಬೇಡನಾಗಿ ನನ್ನನ್ನು ಕಪಿಯಂತೆ ಕೊಂದೆಯಲ್ಲ!?..."- ಮುಂತಾಗಿ ರಾಮನಲ್ಲಿ ಹೇಳಿದನು.
ವಾಲಿಯ ಆರೋಪಗಳನ್ನು ತಿರಸ್ಕರಿಸಿದ ರಾಮನು- "ನಾನು ಧರ್ಮಪರಿಪಾಲನೆಗಾಗಿ ಧನುರ್ಧಾರಿಯಾಗಿ ಲೋಕಸಂಚಾರ ಮಾಡುತ್ತಿರುವೆನು. ಅಧರ್ಮಿಗಳನ್ನು ನಾಶಗೊಳಿಸಿ ಸದ್ಧರ್ಮ ಪಾಲನೆಯನ್ನು ಮಾಡುತ್ತಿದ್ದೇನೆ. ನೀನಾದರೋ ತಮ್ಮನನ್ನು ಓಡಿಸಿ, ಮಗಳಿಗೆ ಸಮಾನಳಾದ ನಿನ್ನ ತಮ್ಮನ ಹೆಂಡತಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲಾತ್ಕಾರದಿಂದ ರಮಿಸುತ್ತಿರುವೆ. ನೀನು ಕೇವಲ ಕಾಡುಪ್ರಾಣಿ. ಕಾಡುಪ್ರಾಣಿಯನ್ನು ಕೊಲ್ಲುವಂತೆ ಅಧರ್ಮಿಯಾದ ನಿನ್ನನ್ನು ಕೊಂದಿದ್ದೇನೆ. ಅಧರ್ಮಾಚರಣೆಯನ್ನು ಮಾಡಿ ನೀನು ಹೀಗೆ ದೂಷಿಸಬಾರದು-" ಎಂದು ವಾಲಿಯಲ್ಲಿ ಹೇಳಿದನು. ವಾಲಿಗೆ ಪಾಪಪ್ರಜ್ಞೆಯು ಮೂಡಿತು,ಪಶ್ಚಾತ್ತಾಪದಿಂದ ನೊಂದನು. ರಾಮನನ್ನು ಶ್ರೀಹರಿಯೆಂದು ಅರಿತನು. ಅರಿಯದೆ ಮಾಡಿದ ತಪ್ಪನ್ನು,ಹೇಳಿದ ಮಾತುಗಳನ್ನೂ ಮರೆತು ಕ್ಷಮಿಸುವಂತೆ ಪ್ರಾರ್ಥಿಸಿದನು. ಮರಣಕಾಲದಲ್ಲಿ, ಮಹರ್ಷಿಗಳಿಗೂ ದುರ್ಲಭವಾದ ರಾಮನ- ಶ್ರೀಹರಿಯ ದರ್ಶನದಿಂದ ಧನ್ಯನಾದೆ, ನನಗೆ ಮೋಕ್ಷವನ್ನು ಕರುಣಿಸು ಎಂದು ಪ್ರಾರ್ಥಿಸಿದನು. ವಾಲಿಯ ಪ್ರಾರ್ಥನೆಯಂತೆ ಅವನ ಮೇಲೆ ತಾನು ಪ್ರಯೋಗಿಸಿದ ಬಾಣವನ್ನು ರಾಮನು ತೆಗೆದನು. ರಾಮನ ಕರಸ್ಪರ್ಶದಿಂದ ಪುನೀತನಾದ ವಾಲಿಯು ಮುಕ್ತಿಯನ್ನು ಹೊಂದಿದನು.
ಗಂಡನ ಮರಣ ವಾರ್ತೆಯನ್ನು ಕೇಳಿದ ತಾರೆಯು ಪ್ರಲಾಪಿಸುತ್ತಾ ಮಗ ಅಂಗದನೊಂದಿಗೆ ವಾಲಿಯಿದ್ದಲ್ಲಿಗೆ ಬಂದಳು. ರೋದಿಸುತ್ತಾ ತನ್ನನ್ನೂ ವಾಲಿಯನ್ನು ಕೊಂದ ಬಾಣದಿಂದಲೇ ಸಂಹರಿಸಲು ರಾಮನಲ್ಲಿ ಹೇಳಿದಳು. ತಾನೂ ಅವನೊಡನೆ ಮೋಕ್ಷವನ್ನು ಹೊಂದುವೆನು ಎಂದು ಗೋಳಾಡುತ್ತಾ ರಾಮನಲ್ಲಿ ಪ್ರಾರ್ಥಿಸಿದಾಗ ರಾಮನು ಅವಳಿಗೆ ತತ್ತ್ವೋಪದೇಶವನ್ನಿತ್ತು ಸಮಾಧಾನ ಪಡಿಸಿದನು. ರಾಮನ ತತ್ತ್ವೋಪದೇಶದಿಂದ ದೇಹಾಭಿಮಾನದಿಂದ ಹುಟ್ಟಿದ ಶೋಕವನ್ನು ತೊರೆದಳು. ಆತ್ಮಾನುಭವವನ್ನು ಪಡೆದು ತೃಪ್ತಳಾಗಿ ಜೀವನ್ಮುಕ್ತಳಾದಳು.
ರಾಮನ ಆದೇಶದಂತೆ ಸುಗ್ರೀವನು ಅಣ್ಣನ ಅಂತ್ಯಸಂಸ್ಕಾರವನ್ನು ಮಗನಾದ ಅಂಗದನ ಮೂಲಕ ತಾರೆ ಹಾಗೂ ಸಮಸ್ತ ಪರಿವಾರದೊಂದಿಗೆ ಶಾಸ್ತ್ರೋಕ್ತವಾಗಿ ನೆರವೇರಿಸಿದ. ರಾಮನ ಆದೇಶದಂತೆ ಲಕ್ಷ್ಮಣನು ಕಿಷ್ಕಿಂಧೆಯ ಪಟ್ಟಣಕ್ಕೆ ತೆರಳಿ ಸುಗ್ರೀವನಿಗೆ ಕಿಷ್ಕಿಂಧಾರಾಜ್ಯದ ರಾಜ್ಯಾಭಿಷೇಕವನ್ನು ಮಾಡಿದನು. ಅಂಗದನನ್ನು ಯುವರಾಜನನ್ನಾಗಿಸಿದನು. ಮಳೆಗಾಲವು ಸಮೀಪಿಸಿರುವುದರಿಂದ ಅದು ಮುಗಿಯುವ ವರೆಗೆ ಸೀತಾನ್ವೇಷಣೆಯು ಕಷ್ಟಸಾಧ್ಯ. ಆದ್ದರಿಂದ ರಾಮ-ಲಕ್ಷ್ಮಣರು ಪ್ರವರ್ಷಣವೆಂಬ ಪರ್ವತದ ಮೇಲಿರುವ ವಿಶಾಲವಾದ ಜಲ-ಕಂದ-ಮೂಲ- ಫಲಗಳಿರುವ ಸ್ಥಳದ ಗುಹೆಯೊಂದರಲ್ಲಿ ವಾಸಮಾಡತೊಡಗಿದರು. ಲಕ್ಷ್ಮಣನ ಕೋರಿಕೆಯಂತೆ ರಾಮನು ಲಕ್ಷ್ಮಣನಿಗೆ ಕ್ರಿಯಾಯೋಗ (ಪೂಜಾಪದ್ಧತಿಯಿಂದ ದೇವನನ್ನು ಒಲಿಸಿ ಮುಕ್ತಿಯನ್ನು ಪಡೆಯುವ ವಿಧಾನ) ವನ್ನು ಬೋಧಿಸಿದನು. ತನ್ನ ಕೋರಿಕೆಯು ಈಡೇರಿದುದರಿಂದ ಲಕ್ಷ್ಮಣನು ಸಂತಸಗೊಂಡನು.
ಇತ್ತ ಸುಗ್ರೀವನು ರಾಜವೈಭವದಿಂದ ಕಿಷ್ಕಿಂಧೆಯಲ್ಲಿ ವಿಹರಿಸತೊಡಗಿದನು.
ಮುಂದುವರಿಯುವುದು....
- ವಿಶ್ವ ಉಂಡೆಮನೆ, ಬೆಳ್ತಂಗಡಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ