ಅಪರ್ಣಾ ಇನ್ನಿಲ್ಲ ಅನ್ನುವುದು ತುಂಬ ದುಃಖದ ವಿಚಾರ.
ಛೆ. ಇಷ್ಟು ಬೇಗ ಅವರು ಹೊರಟು ಹೋಗಬಾರದಿತ್ತು.
ಪಿ ಬಿ ಶ್ರೀನಿವಾಸ್ ಅವರು ಒಂದು ಹಾಡಿನಲ್ಲಿ "ಜೇನಂತ ಮಾತಲ್ಲಿ, ನಗುವೆಂಬ ಹೂಚೆಲ್ಲಿ..." ಅನ್ನುವ ಸಾಲಿದೆ. ಪಿ ಬಿ ಶ್ರೀನಿವಾಸ್ರವರು 'ಜೇನು' ಅನ್ನುವ ಶಬ್ದ ಉಚ್ಛಾರದಲ್ಲೇ ಒಂದು ವಿಶಿಷ್ಟವಾದ, ಕಿವಿಗೆ ಸಿಹಿಯಾದ ಧ್ವನಿ ರಸ ಹರಿಸುತ್ತಾರೆ. ಅಪರ್ಣಾರವರದು ಕೂಡ ಅದೇ ರೀತಿ ಜೇನಂತ ಮಾತು. ಬೆಂಗಳೂರಿನ ಅನೇಕ ಸಿಟಿ ಬಸ್ಗಳಲ್ಲಿ, ನಿಲ್ದಾಣ ಸೂಚನೆಗಳಿಗೆ ಅವರೇ ಧ್ವನಿ ಕೊಟ್ಟಿದ್ದಾರೆ. "ಮುಂದಿನ ನಿಲ್ದಾಣ ಬನ್ನೇರುಘಟ್ಟ", "ಮುಂದಿನ ನಿಲ್ದಾಣ ಬ್ಯಾಟರಾಯನ ಪುರ" ಅಂತೆಲ್ಲ ಅವರ ಧ್ವನಿಯಲ್ಲಿ ಕೇಳುವುದೇ ಒಂದು ಸ್ವಾರಸ್ಯ. ಈಗ ಅವರೇ "ಮುಂದಿನ ನಿಲ್ದಾಣ ಹರಿಶ್ಚಂದ್ರ ಘಾಟ್" ಅಂತ ಹೇಳಿಕೊಂಡು ಹೊರಟಿದ್ದು ದುರಂತದ ಪ್ರಯಾಣವೇ ಸರಿ.
ಅವರ ನಟನೆಯ 'ಮಸಣದ ಹೂವು' ಸಿನಿಮಾದಲ್ಲಿನ ನಟನೆ, ಸದಾ ಹದಿನಾರು ವರ್ಷದ 'ಒನ್ & ಓನ್ಲಿ ವರಲಕ್ಷ್ಮಿ'ಯಾಗಿ ಹಾಸ್ಯ ಪಾತ್ರದಲ್ಲಿ ಮಜಾ ಟಾಕೀಸ್ನಲ್ಲಿ ನಟಿಸಿದ ನಟನೆಗಳು ಯಾವತ್ತೂ ಮರೆಯುವಂತಹದ್ದಲ್ಲ.
ಎರಡೂವರೆ ದಶಕಗಳ ಹಿಂದೆ, ಬೆಂಗಳೂರು ಆಕಾಶವಾಣಿ ಆವರಣದಲ್ಲಿ ಒಮ್ಮೆ ಅವರನ್ನು ಭೇಟಿ ಮಾಡಿದ್ದು (ಬಹುಶಃ JC ಕಾರ್ಯಕ್ರಮ ಒಂದಕ್ಕೆ ಆಹ್ವಾನಿಸುವುದಕ್ಕೆ ಅಂತ ನೆನಪು), ಬೆಂಗಳೂರಿನಲ್ಲಿ ಅವರು ನಿರೂಪಕರಾಗಿದ್ದ ಒಂದು ಮಿಲಿಟರಿ ಸೇನಾ ಕಾರ್ಯಕ್ರಮದಲ್ಲಿ ಅವರನ್ನು ನೋಡಿದ್ದು, ಅದೆಲ್ಲಕ್ಕಿಂತ ಮುಖ್ಯವಾಗಿ ಬೆಂಗಳೂರಿನ 'ಯವನಿಕಾ'ದಲ್ಲಿ 'ಪ್ರತಿ ಶುಕ್ರವಾರ ನೆಡೆಯುತ್ತಿದ್ದ ಸಂಗೀತ ಕಾರ್ಯಕ್ರಮ ಒಂದರಲ್ಲಿ, ನಾನು ಕಲಾವಿದರಿಗೆ ಸ್ವಾಗತ, ಕಲಾವಿದರ ಪರಿಚಯ ಮತ್ತು ಕೊನೆಯಲ್ಲಿ ವಂದನಾರ್ಪಣೆಯ ಪುಟ್ಟ 'ನಿರೂಪಣೆ' ಮಾಡಿದ ಕಾರ್ಯಕ್ರಮದಲ್ಲಿ ಅಪರ್ಣಾ ಅವರು ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಕಾರ್ಯಕ್ರಮ ಮುಗಿದಾಗ "ನಿಮ್ಮ ಸ್ವರ ಚನಾಗಿದೆ, ಧೈರ್ಯವಾಗಿ ಮಾತಾಡಿ" ಅಂದಿದ್ದರು (ನನಗೆ ವೇದಿಕೆ ಹತ್ತಿದರೆ 'ಸಭಾ ಕಂಪನ ಫೊಬಿಯ' ಆಗ ಇನ್ನೂ ಜಾಸ್ತಿ ಇತ್ತು!!)
ಅನಿರೀಕ್ಷಿತವಾಗಿ, ಇಷ್ಟು ಬೇಗ ಅಪರ್ಣಾರವರು 'ಮುಂದಿನ ನಿಲ್ದಾಣ'ಕ್ಕೆ ಹೋಗಿದ್ದು...... ಛೇ.
ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ
-ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ