ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ಸಾಧನೆ ಮಾಡಲೇಬೇಕು ಅಂತ ಅಂದ್ಕೊಳ್ತಾರೆ. ಸಾಧನೆಗೆ ಅಗತ್ಯವಾದ ಗುರಿಯನ್ನು ಇಟ್ಕೊಳ್ತಾರೆ. ಗುರಿ ತಲುಪೋದಕ್ಕೆ ಎಷ್ಟೆಷ್ಟೋ ಪ್ರಯತ್ನಗಳನ್ನು ಮಾಡ್ತಾರೆ. ಕೆಲವೊಮ್ಮೆ ತಮ್ಮ ಪ್ರಯತ್ನಗಳಲ್ಲಿ ಬಲ ಪ್ರಯೋಗವೂ ಒಳಗೊಂಡಿರುತ್ತದೆ. ಆದರೆ ಎಷ್ಟೆಲ್ಲಾ ಪ್ರಯೋಗ ಪ್ರಯತ್ನಗಳನ್ನು ಮಾಡಿದರೂ ಸಾಧನೆ ಸಾಧ್ಯವಾಗುವುದಿಲ್ಲ. ಆಗ ತಮ್ಮ ಪ್ರಯೋಗ ಮತ್ತು ಪ್ರಯತ್ನಗಳಲ್ಲಿ ಆಗಿರುವ ಪ್ರಮಾದಗಳನ್ನು ಪ್ರಮಾಣೀಕರಿಸಿ ನೋಡಬೇಕಾಗುತ್ತದೆ. ಜೀವನದಲ್ಲಿ ಸಾಧನೆ ಮಾಡಲಾಗದಿರುವುದ್ದಕ್ಕೆ, ಯಶಸ್ಸು ಸಾಧ್ಯವಾಗದಿರುವುದ್ದಕ್ಕೆ ಕಂಡುಬರುವ ಒಂದೇ ಒಂದು ಪ್ರಮಾದವೆಂದರೆ ಅದು ಇಚ್ಛಾಶಕ್ತಿಯ ಕೊರತೆ. ಜೀವನದಲ್ಲಿ ಇಚ್ಛಾಶಕ್ತಿ ಇರದಿದ್ದರೆ ವ್ಯಕ್ತಿ ತಾನು ಅಂದುಕೊಂಡ ಕಾರ್ಯ ಸಾಧನೆಯ ಗುರಿ ತಲುಪಲು ಸಾಧ್ಯವೇ ಇಲ್ಲ. ಸಾಧನೆಯ ಭವನ ನಿರ್ಮಾಣಕ್ಕೆ ಇಚ್ಛಾಶಕ್ತಿಯೇ ಪ್ರಮುಖ ಅಡಿಗಲ್ಲು. ಜೀವನದಲ್ಲಿ ಬಿಗಿಭದ್ರತೆಯ ಇಚ್ಛಾಶಕ್ತಿಯಿದ್ದರೆ ಎಂತಹ ಕಷ್ಟದ ಕೆಲಸವನ್ನಾದರೂ ಸರಿ ಸುಲಭವಾಗಿ ಮಾಡಿ ಸಾಧನೆ ಮಾಡಬಹುದು. ಮಹಾಕಾವ್ಯ ರಾಮಾಯಣದಲ್ಲಿ ಸಾಗರೋಲ್ಲಂಘನ ಮಾಡಿದ ಹನುಮಂತನಲ್ಲಿ ಇದ್ದ ಮನೋಬಲವೇ ಇಚ್ಛಾಶಕ್ತಿಗೆ ಉದಾಹರಣೆ. ಮಹಾಕಾವ್ಯ ಮಹಾಭಾರತದಲ್ಲಿ ಧರ್ಮ ಸಂಸ್ಥಾಪನೆಗಾಗಿ ಶ್ರೀ ಕೃಷ್ಣನ ಕಾರ್ಯವೈಖರಿಯ ದೃಷ್ಟಿಯೇ ಇಚ್ಛಾಶಕ್ತಿಯಾಗಿದೆ ಮಹರ್ಷಿ ವಾಲ್ಮೀಕಿ ಮತ್ತು ವೇದವ್ಯಾಸರು ಈ ಜಗತ್ತಿಗೆ ನೀಡಿದ ಅನನ್ಯ ಕೊಡುಗೆ ರಾಮಾಯಣದ ಮತ್ತು ಮಹಾಭಾರತ ಮಹಾಕಾವ್ಯಗಳು. ಅವರ ಗುರಿ ಸಾಧನೆಯಲ್ಲಿದ್ದ ಮಾರ್ಗವೇ ಇಚ್ಛಾಶಕ್ತಿ. ಪಾಂಡವರು ಅಮೋಘ ಮತ್ತು ಅದ್ಭುತವಾದ ಇಂದ್ರಪ್ರಸ್ಥ ಸಾಮ್ರಾಜ್ಯವನ್ನು ಸ್ಥಾಪಿಸಲು ಅವರಲ್ಲಿದ್ದ ಇಚ್ಛಾಶಕ್ತಿಯೇ ಕಾರಣವಾಗಿತ್ತು. ಏಕೆಂದರೆ ಇಂದ್ರಪ್ರಸ್ಥವು ಮೊದಲು ಖಾಂಡವವನವಾಗಿತ್ತು. ಸ್ವಲ್ಪ ಭೂಮಿ ಬಂಜರು ನೆಲವಾಗಿತ್ತು. ಆದರೆ ಪಾಂಡವರು ಅದನ್ನು ಫಲವತ್ತಾದ ನೆಲವನ್ನಾಗಿಸಿದರು. ಯುಗಯುಗಗಳು ಮರೆಯಲಾಗದ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಆ ಇಂದ್ರಪ್ರಸ್ಥವೇ ಇಂದಿನ ನಮ್ಮ ಭಾರತದ ರಾಜಧಾನಿ ದೆಹಲಿಯಾಗಿದೆ. ಕರ್ನಾಟಕ ವನ್ನಾಳಿದ ಮೊದಲ ವಂಶವೆಂದರೆ ಅದು ಕದಂಬ ವಂಶ. ಕದಂಬರ ಸಾಮ್ರಾಜ್ಯವನ್ನು ಸ್ಥಾಪಿಸಿದ ಮಯೂರವರ್ಮನಲ್ಲಿದ್ದ ಮನೋಬಲವೇ ಅವನ ಇಚ್ಛಾಶಕ್ತಿಯಾಗಿದೆ. ಛತ್ರಪತಿ ಶಿವಾಜಿಯಲ್ಲಿದ್ದ ಇಚ್ಛಾಶಕ್ತಿಯು ಪ್ರಸಿದ್ಧ ಮರಾಠ ಸಾಮ್ರಾಜ್ಯದ ಸ್ಥಾಪನೆಯನ್ನು ಮಾಡಿತು. ವಿಶ್ವೇಶ್ವರಯ್ಯನವರ ಕಾರ್ಯ ಸಾಧನೆ ಈಗಲೂ ಭದ್ರವಾಗಿರುವುದಕ್ಕೆ ಅವರ ಯೋಜನೆಗಳ ಚಿಂತನೆಗಳಲ್ಲಿದ್ದ ಇಚ್ಛಾಶಕ್ತಿಯೇ ಮುಖ್ಯ ಕಾರಣವಾಗಿದೆ. ಬ್ರಿಟಿಷರ ವಿರುದ್ಧ ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿದ್ದ ಇಚ್ಛಾಶಕ್ತಿಯೇ ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ. ಅಬ್ದುಲ್ ಕಲಾಂ ರವರ ಇಚ್ಛಾಶಕ್ತಿ ಅವರನ್ನು ಕ್ಷಿಪಣಿಗಳ ಜನಕನನ್ನಾಗಿಸಿದೆ. ಮಹಾತ್ಮ ಗಾಂಧೀಜಿಯವರ ಇಚ್ಛಾಶಕ್ತಿ ಇಂದು ಅವರನ್ನು ರಾಷ್ಟ್ರಪಿತನನ್ನಾಗಿಸಿದೆ. ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಹೀಗೆ ಹಲವಾರು ಗಣ್ಯಾತಿಗಣ್ಯರ ಸರ್ವೋಚ್ಚ ಇಚ್ಛಾಶಕ್ತಿಯೇ ಅವರನ್ನು ಸರ್ವೋನ್ನತ ಸಾಧಕರನ್ನಾಗಿಸಿದೆ ಎಂಬೆಲ್ಲಾ ವಿಚಾರಗಳು ನಮಗೆ ಇತಿಹಾಸದ ಅಧ್ಯಯನದಿಂದ ತಿಳಿದು ಬರುತ್ತದೆ.
ಇಚ್ಛಾಶಕ್ತಿಯನ್ನು ಹೊಂದಿರುವವರಲ್ಲಿ ಧನಾತ್ಮಕವಾದ ಚಿಂತನೆಗಳು, ಹೊಗಳಿಕೆ, ಸಜ್ಜನರ ಸಹವಾಸ, ಕೌಟುಂಬಿಕ ವಾತಾವರಣ, ಒಳ್ಳೆಯ ಗೆಳೆಯರ ಬಳಗ, ಸ್ಪಂದನಾ ಮನೋಭಾವದ ನೆರೆಹೊರೆ, ಶಾಲೆ, ಉತ್ತಮ ಹವ್ಯಾಸಗಳು, ಉತ್ತಮ ಗುರುದರ್ಶನ, ಉತ್ತಮ ಮಾರ್ಗದರ್ಶನ, ಸಹಕಾರ, ನಿರಂತರತೆ, ನೈಪುಣ್ಯತೆ, ಕ್ರಿಯಾಶೀಲತೆ, ಸ್ವಾವಲಂಬನೆಯ ಗುಣ, ಕಾರ್ಯವೈಖರಿಯ ವೈಶಿಷ್ಟ್ಯತೆ, ಸ್ಪರ್ಧಾತ್ಮಕ ಮನೋಭಾವ, ಉತ್ತಮ ಪುಸ್ತಕಗಳ ಅಧ್ಯಯನ ಮುಂತಾದ ಅಂಶಗಳು ಇರುತ್ತವೆ. ಇಚ್ಛಾಶಕ್ತಿಯನ್ನೇ ಮೂಲಾಧಾರವಾಗಿ ಹೊಂದಿರುವ ವ್ಯಕ್ತಿಗಳ ಸಾಧನೆಯ ಹಾದಿಯಲ್ಲಿ ಮೇಲೆ ತಿಳಿಸಿರುವ ಎಲ್ಲಾ ಅಂಶಗಳನ್ನು ರೂಢಿಸಿಕೊಂಡರೆ ಯಶಸ್ಸು ಪ್ರತಿಫಲವಾಗುತ್ತದೆ. ಅದೇ ರೀತಿ ಇಚ್ಛಾಶಕ್ತಿಯ ಕೊರತೆ ಇರುವವರಲ್ಲಿ ಋಣಾತ್ಮಕ ಚಿಂತನೆಗಳು, ತೆಗಳಿಕೆ, ಕೆಟ್ಟವರ ಒಡನಾಟ, ಸ್ಪಂದನಾ ಮನೋಭಾವದ ಕೊರತೆಯಿರುವ ನೆರೆಹೊರೆ, ಅಸಹಕಾರ, ಅಹಂಕಾರ, ಆಲಸ್ಯತನ, ಪರಾವಲಂಬನೆಯ ಗುಣ, ಗುರುದರ್ಶನ, ಮಾರ್ಗದರ್ಶನಗಳ ಕೊರತೆ, ಸ್ಪರ್ಧಾತ್ಮಕ ಮನೋಭಾವ ಇಲ್ಲದಿರುವ ಅಂಶಗಳು ಕಾರಣವಾಗುತ್ತವೆ. ಯಶಸ್ಸು ಎಂಬುದು ದೂರದ ಮಾತಾಗಿರುತ್ತದೆ.
ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ ನಂಬಿಕೆ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ಶ್ರದ್ಧೆ ಮತ್ತು ನಿಷ್ಠೆಗಳು ತಂತಾನೆ ಇಚ್ಛಾಶಕ್ತಿಯನ್ನು ಹಿಂಬಾಲಿಸುತ್ತವೆ. ಕೆಲಸದಲ್ಲಿ ಆಸಕ್ತಿ ಹೆಚ್ಚುತ್ತದೆ. ಮನೋಬಲ ವೃದ್ಧಿಸುತ್ತದೆ. ಆಗಾಗ್ಗೆ ಉಂಟಾಗುವ ಸವಾಲು ಮತ್ತು ಸಮಸ್ಯೆಗಳಿಗೆ ಇಚ್ಛಾಶಕ್ತಿಯೇ ನಿವಾರಣೆಯನ್ನು ಕಂಡು ಕೊಳ್ಳುತ್ತದೆ. ಧನಾತ್ಮಕ ಮನೋಭಾವವುಂಟಾಗಿ ವ್ಯಕ್ತಿಯ ವ್ಯಕ್ತಿತ್ವದ ವಿಕಸನದಲ್ಲಿ ಗುಣಾತ್ಮಕ ಬೆಳವಣಿಗೆ ಕಂಡುಬರುತ್ತದೆ. ಕಾರ್ಯ ಸಫಲತೆ ಸಾಧ್ಯವಾಗುತ್ತದೆ. ಬದಲಾಗಿ ಮಾಡುವ ಕೆಲಸದಲ್ಲಿ ಇಚ್ಛಾಶಕ್ತಿಯು ಸ್ವಲ್ಪ ಕಡಿಮೆಯಾದರೂ ಅನೇಕ ವಿಧವಾದ ಅಡ್ಡಿ ಆತಂಕಗಳು ಸೃಷ್ಟಿಯಾಗುತ್ತವೆ. ಅನೇಕ ರೀತಿಯ ವೈಪರೀತ್ಯಗಳುಂಟಾಗಿ ವೈಫಲ್ಯತೆ ಕಂಡು ಬರುತ್ತದೆ. ಇಚ್ಛಾಶಕ್ತಿಯ ಕೊರತೆಯಿಂದಾಗಿ ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ಕಳೆದು ಕೊಳ್ಳುತ್ತೇವೆ. ಮನೋಬಲ ಕಡಿಮೆಯಾಗುತ್ತದೆ. ಒಂದರಮೇಲೊಂದರಂತೆ ಪ್ರಮಾದಗಳ ಪ್ರಮಾಣವೇ ಹೆಚ್ಚಾಗುತ್ತದೆ. ಋಣಾತ್ಮಕ ಮನೋಭಾವವುಂಟಾಗಿ ವ್ಯಕ್ತಿತ್ವ ವಿಕಸನದಲ್ಲಿ ಹಿಂಬೀಳಿಕೆ ಪ್ರಾರಂಭವಾಗುತ್ತದೆ. ಮಕ್ಕಳಲ್ಲಿ ಇಚ್ಛಾಶಕ್ತಿಯ ಕೊರತೆಯಿಂದಾಗಿ ದೈಹಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆ ಕುಂಠಿತವಾಗುತ್ತದೆ. ಯುವಜನಾಂಗದಲ್ಲಿ ಇಚ್ಛಾಶಕ್ತಿಯ ಕೊರತೆಯಿಂದಾಗಿ ಯುವಜನ ಅಶಾಂತಿ ತಲೆದೋರುತ್ತದೆ. ಕುಟುಂಬದ ಸದಸ್ಯರಲ್ಲಿ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕೌಟುಂಬಿಕ ವಿಘಟನೆಗೆ ಕಾರಣವಾಗುತ್ತದೆ. ಅಂದಮೇಲೆ ಈಗ ನಾವೆಲ್ಲರೂ ಅರ್ಥ ಮಾಡಿಕೊಳ್ಳೋಣ. ನಮ್ಮ ನಮ್ಮ ಕೆಲಸದಲ್ಲಿ ನಾವು ಸಾಧನೆ ಮಾಡಲು, ಯಶಸ್ಸನ್ನು ಕಾಣಲು ನಮ್ಮ ಇಚ್ಛಾಶಕ್ತಿಯನ್ನು ಗಟ್ಟಿಗೊಳಿಸೋಣ. ಕುಟುಂಬ, ಗ್ರಾಮ, ರಾಜ್ಯ, ರಾಷ್ಟ್ರದ ಐಕ್ಯತೆ ಮತ್ತು ಅಭಿವೃದ್ಧಿ ಸಾಧಿಸೋಣ. ನಾವೂ ಯಶಸ್ವಿ ಸಾಧಕರಾಗೋಣ.
-ಕೆ.ಎನ್.ಚಿದಾನಂದ. ಹಾಸನ