ತೆಂಕನಿಡಿಯೂರು: ಪ್ರಾಚೀನ ಮತ್ತು ಆಧುನಿಕ ಮತ್ತು ಆಧುನಿಕೋತ್ತರ ಸಂಗಮ ಕಾಲದಲ್ಲಿರುವ ನಾವು ಭವ್ಯ ಇತಿಹಾಸ, ಪರಂಪರೆ ಹಾಗೂ ವೈವಿಧ್ಯಮಯ ಹಿನ್ನಲೆ ಹೊಂದಿರುವ ತುಳುವ ನಾಡಿನಲ್ಲಿ ವಾಸಿಸುತ್ತಿದ್ದೇವೆ. ತುಳುನಾಡಿನ ನಂಬಿಕೆ, ನಡವಳಿಕೆಗಳು, ಆಚಾರ-ವಿಚಾರಗಳು, ಸಂದಿ ಪಾಡ್ದನಗಳು, ತಾಳ ಮದ್ದಳೆ, ಯಕ್ಷಗಾನ, ಜಾನಪದ, ಕಲೆಗಳು, ಬಲೀಂದ್ರ ಪೂಜೆ, ಭೂತಾರಾಧನೆ, ಕೃಷಿ ಸಂಸ್ಕೃತಿ ನಮ್ಮ ಸಾರ್ಥಕ ಬದುಕಿಗೆ ಪ್ರೇರಕವಾಗಿದೆ ಎಂದು ಬಡಗುಬೆಟ್ಟು ಕೋಆಪರೇಟಿವ್ ಸಹಕಾರಿ ಸಂಘ ಹಾಗೂ ಉಡುಪಿ ತುಳು ಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು. ಅವರು ಇತ್ತೀಚೆಗೆ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ತುಳುಕೂಟ ಉದ್ಘಾಟಿಸಿ ಮಾತನಾಡುತ್ತಿದ್ದರು. ತುಳುಭಾಷೆ ನಮ್ಮ ಮನೆಯ ಮಾತಾಗಬೇಕು, ನಿತ್ಯವೂ ಆಡು ಭಾಷೆಯಾಗಬೇಕು ಎಂದು ಹೇಳಿದ ಅವರು ಈ ಕಾಲೇಜಿನಲ್ಲಿ ತುಳುಕೂಟದ ಉದ್ಘಾಟನೆ ಮಾಡಿದ ಪ್ರೊ. ಸುರೇಶ್ ರೈಗಳ ಕ್ರಮವನ್ನು ಶ್ಪಾಘಿಸಿದರು.
ಹೆಸರಾಂತ ನಾಟಕ ಕರ್ತೃ, ತುಳುಕೂಟದ ಸದಸ್ಯರಾದ ಗಂಗಾಧರ ಕಿದಿಯೂರು ದಿಕ್ಸೂಚಿ ಭಾಷಣ ಮಾಡುತ್ತಾ ತುಳುಭಾಷೆ ಮತ್ತು ಸಂಸ್ಕೃತಿ ಅನನ್ಯವಾದುದು. ಅದರ ಒಳತತ್ವವನ್ನು ಕುರಿತು ಅಳವಡಿಸಿಕೊಂಡು ಬದುಕಿದಾಗ ಮಾತ್ರ ಯಾವುದೇ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳು ಜೀವಂತವಾಗಿ ಉಳಿಯಲು ಸಾಧ್ಯ ಎಂದು ನುಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ರೈ ಕೆ. ಕಾಲದೊಂದಿಗೆ ಕೊಚ್ಚಿ ಹೋಗುವ ನಮ್ಮತನವನ್ನು ಅಳಿದು ಹೋಗದಂತೆ ಭದ್ರವಾಗಿ ರಕ್ಷಿಸುವ ಹಗೂ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವ ಕರ್ತವ್ಯವನ್ನು ನಾವು ಎಂದೂ ಮರೆಯಬಾರದು ಎಂದರು.
ಕಾಲೇಜಿನ ತುಳುಕೂಟದ ಸಂಚಾಲಕಿ ರತ್ನಮಾಲಾ ಎಲ್ಲರನ್ನೂ ಸ್ವಾಗತಿಸಿದರು. ವೇದಿಕೆಯಲ್ಲಿ ತುಳುಕೂಟದ ಆಟಕೂಟದ ಸಂಚಾಲಕಿ ವಿದ್ಯಾ ಸರಸ್ವತಿ, ಶ್ರೀ ನಿತ್ಯಾನಂದ ಗಾಂವ್ಕರ್, ಡಾ. ಪ್ರಸಾದ್ ರಾವ್ ಎಂ., ಶ್ರೀ ಕೃಷ್ಣ ಸಾಸ್ತಾನ ಮತ್ತು ಉಡುಪಿ ತುಳು ಕೂಟದ ಸದಸ್ಯರು ಉಪಸ್ಥಿತರಿದ್ದರು. ಕುಮಾರಿ ಶರಣ್ಯ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಕು. ಶಿಲ್ಪಾ ಧನ್ಯವಾದ ಸಮರ್ಪಿಸಿದರು. ಸುಮಾರು 300ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ