ಡಾ.ನಾ.ಮೊಗಸಾಲೆಯವರಿಗೆ ಸುನಂದಾ ಬೆಳಗಾಂವಕರ್ ಕಾದಂಬರಿ ಪ್ರಶಸ್ತಿ ಪ್ರದಾನ

Upayuktha
0


ಕಾರ್ಕಳ: ತನ್ನ 18ನೇ ವಯಸ್ಸಿನಲ್ಲಿಯೇ ‘ನನ್ನದಲ್ಲದ್ದು’ ಎಂಬ ಕಾದಂಬರಿ ರಚನೆಯೊಂದಿಗೆ ಕಾದಂಬರಿಲೋಕಕ್ಕೆ ಪಾದಾರ್ಪಣೆಗೈದ ಡಾ.ನಾ.ಮೊಗಸಾಲೆಯವರು ಈಗಾಗಲೇ ತಮ್ಮ 22 ಕಾದಂಬರಿಗಳೊಂದಿಗೆ ಸಾಹಿತ್ಯದ ಇತರ ಪ್ರಕಾರಗಳಲ್ಲಿಯೂ ಸಾಕಷ್ಟು ಕೃಷಿ ಮಾಡಿ ನಾಡಿನ ಪ್ರಮುಖ ಸೃಜನಶೀಲ ಸಾಹಿತಿಗಳಲ್ಲಿ  ಒಬ್ಬರೆನಿಸಿದ್ದಾರೆ ಎಂಬುದಾಗಿ ಖ್ಯಾತ ಇತಿಹಾಸ ತಜ್ಞ ಹಾಗೂ ವಾಗ್ಮಿಗಳೂ ಆಗಿರುವ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು. ಕನ್ನಡದ ಮಹತ್ವದ ಲೇಖಕಿಯರಲ್ಲೊಬ್ಬರಾದ ದಿ. ಸುನಂದಾ ಬೆಳಗಾಂವಕರ್ ಅವರ ಹೆಸರಿನಲ್ಲಿ ಧಾರವಾಡದ ‘ಸಾಹಿತ್ಯ ಗಂಗಾ’ ಸಂಸ್ಥೆಯು ಈ ವರ್ಷದಿಂದ ನೀಡುತ್ತಿರುವ ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿಗೆ ಡಾ.ನಾ.ಮೊಗಸಾಲೆಯವರ ‘ಭಾರತ ಕಥಾ’ ಕಾದಂಬರಿಯು  ಆಯ್ಕೆಯಾಗಿದ್ದು ಕಾರ್ಕಳದ ಪ್ರಕಾಶ್ ಹೋಟೇಲಿನ ಸಂಭ್ರಮ ಸಭಾಂಗಣದಲ್ಲಿ ಏರ್ಪಡಿಸಲಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೊಗಸಾಲೆಯವರಿಗೆ ಪ್ರಶಸ್ತಿಯನ್ನು ಪ್ರದಾನಿಸಿ ಅವರು ಮಾತನಾಡಿದರು.


‘ಸಾಹಿತ್ಯ ಗಂಗಾ’ ಸಂಸ್ಥೆಯ ಮುಖ್ಯಸ್ಥರಾದ ವಿಕಾಸ ಹೊಸಮನಿಯವರು ಅಭಿನಂದನಾ ಭಾಷಣವನ್ನು ನೆರವೇರಿಸಿ ಮೊಗಸಾಲೆಯವರ ಪ್ರತಿಯೊಂದು ಕಾದಂಬರಿಯೂ ವಿಭಿನ್ನ ಪ್ರಯೋಗಶೀಲತೆಯಿಂದ ಕೂಡಿದ್ದು ಕಾದಂಬರಿ ಪ್ರಕಾರಕ್ಕೆ ಮಾದರಿಗಳಾಗಿವೆ. ವಿಶೇಷವಾಗಿ ಕರಾವಳಿಯ ಎಲ್ಲ ಪ್ರಸಿದ್ಧ ಸಾಹಿತಿಗಳನ್ನೂ  ನಾವಿಂದು ಮೊಗಸಾಲೆಯವರಲ್ಲಿ ಕಾಣಬಹುದಾಗಿದ್ದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅವರಿಂದ ಇನ್ನಷ್ಟು ಕಾದಂಬರಿಗಳು ಬೆಳಕು ಕಾಣುವಂತಾಗಲಿ ಎನ್ನುತ್ತಾ ಅವರನ್ನು ಅಭಿನಂದಿಸಿದರು. ಡಾ.ನಾ.ಮೊಗಸಾಲೆಯವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅ.ಭಾ.ಸಾ.ಪ.ದ ಕಾರ್ಕಳ ತಾಲೂಕು ಘಟಕದ ಗೌರವಾಧ್ಯಕ್ಷರಾದ ನಿತ್ಯಾನಂದ ಪೈಯವರು ಸಭಾಧ್ಯಕ್ಷತೆಯನ್ನು ವಹಿಸಿದ್ದು ಅ.ಭಾ.ಸಾ.ಪದ ಅಧ್ಯಕ್ಷರಾದ ಮಿತ್ರಪ್ರಭಾ ಹೆಗ್ಡೆ, ಸಾಹಿತ್ಯ ಸಂಘ ಕಾರ್ಕಳದ ಅಧ್ಯಕ್ಷರಾದ ಕೆ.ಪಿ.ಶೆಣೈ, ಕ.ಸಾ.ಪ. ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾದ ಪ್ರಭಾಕರ ಕೊಂಡಳ್ಳಿ, ದಿ. ಸುನಂದಾ ಬೆಳಗಾಂವಕರ ಅವರ ಸುಪುತ್ರಿ ವೈಜಯಂತಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸುಭಾಷ್ ಪಟ್ಟಾಜೆಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ತೀರ್ಪುಗಾರರ ಟಿಪ್ಪಣಿಯನ್ನು ಮಂಡಿಸಿದರು. ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣರಾವ್ ಸ್ವಾಗತಿಸಿ ರೇವಣಸಿದ್ದಪ್ಪ ಜಿ. ಆರ್. ವಂದಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top