ಪುತ್ತೂರು: ‘ಗೋಪಣ್ಣ’ ಸ್ಮೃತಿ ಗೌರವಕ್ಕೆ ಲಕ್ಷ್ಮೀಶ ಅಮ್ಮಣ್ಣಾಯ ಆಯ್ಕೆ ಯಕ್ಷಗಾನದ ವಾದನ ಪರಿಕರಕ್ಕೆ ಮತ್ತು ವಾದನಕ್ಕೆ ಹೊಸ ಆಯಾಮವನ್ನು ತೋರಿದ ಪುತ್ತೂರು ಗೋಪಾಲಕೃಷ್ಣಯ್ಯ ಗೋಪಣ್ಣ ಇವರ ಸ್ಮೃತಿ ಕಾರ್ಯಕ್ರಮವು 2024, ಜುಲೈ 3, ಬುಧವಾರದಂದು ಅಪರಾಹ್ಣ ಗಂಟೆ 2ಕ್ಕೆ ಜರುಗಲಿದೆ. ಪುತ್ತೂರಿನ ಬಪ್ಪಳಿಗೆ ‘ಅಗ್ರಹಾರ’ ನಿವಾಸದಲ್ಲಿ ಸಂಪನ್ನವಾಗುವ ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ಹಿರಿಯ ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯ ಅವರಿಗೆ ‘ಗೋಪಣ್ಣ ಸ್ಮೃತಿ ಗೌರವ’ವನ್ನು ಪ್ರದಾನಿಸಲಾಗುವುದು. ಸಮಾರಂಭದ ಬಳಿಕ ತಾಳಮದ್ದಳೆ ನಡೆಯಲಿದೆ.
ಹಿರಿಯ ಕಲಾವಿದ ಲಕ್ಷ್ಮೀಶ ಅಮ್ಮಣ್ಣಾಯರು ಉಪ್ಪಿನಗಂಡಿ ಸನಿಹದ ಇಳಂತಿಲದವರು. ಮೂಲತಃ ಕೃಷಿಕರು. ಕಲಾ ಕುಟುಂಬ ಇವರ ತಂದೆ ವಿಷ್ಣು ಅಮ್ಮಣ್ಣಾಯರು. ಉತ್ತಮ ಭಾಗವತ ಮತ್ತು ಆರ್ಥದಾರಿ ತಂದೆ ಹಾಗೂ ಮುಂಡ್ರುಪ್ಪಾಡಿ ಶ್ರೀಧರ ರಾವ್ ಗುರುಗಳು ಶ್ರೀ ಧರ್ಮಸ್ಥಳ, ಮಂಗಳಾದೇವಿ, ಬಪ್ಪನಾಡು, ಪುತ್ತೂರು, ಅರುವ, ಕರ್ನಾಟಕ, ಕುಂಬಳೆ, ಕದ್ರಿ ಮೇಳಗಳಲ್ಲಿ ಇಪ್ಪತ್ತೆರಡು ವರುಷದ ಮೇಳ ತಿರುಗಾಟ. ಬಳಿಕ ಹವ್ಯಾಸಿ ರಂಗದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ತೆಂಕಿನ ಬಹುತೇಕ ಭಾಗವತರ ಒಡನಾಟ. ರಂಗದ ಒಳ-ಹೊರಗಿನ ವಿದ್ಯಮಾನಗಳನ್ನು ಅರಿತ ಸಂದರ್ಭ ಬಂದಾಗ ದಿಟ್ಟವಾಗಿ ಹೇಳಬಲ್ಲ ಕಲಾವಿದ. ರಂಗದ ಕಸುಬಿನಲ್ಲಿ ಇವರದು ತುಂಬಿದ ಕೊಡ. ಲಕ್ಷ್ಮೀಶ ಅಮ್ಮಣ್ಣಾಯರಿಗೆ ಪುತ್ತೂರು ಬಪ್ಪಳಿಗೆ ಸನಿಹದ ಅಗ್ರಹಾರ’ದಲ್ಲಿ ಜುಲೈ 3 ರಂದು ಗೌರವ ಪ್ರದಾನ. ಹಿಂದಿನ ವರುಷಗಳಲ್ಲಿ ಗೋಪಣ್ಣ ನೆನಪಿನ ಗೌರವವನ್ನು ದೇವದರ್ಜಿ ಅಳಕೆ ನಾರಾಯಣ ರಾವ್, ಮದ್ಲೆಗಾರ ವೆಂಕಟೇಶ ಉಳಿತ್ತಾಯರು, ಜ್ಯೋತಿಷಿ ಗಣಪತಿ ಭಟ್, ಅರ್ಥದಾರಿ ಪಾವಲಕೋಡಿ ಗಣಪತಿ ಭಟ್, ಯಕ್ಷಗುರು ಮೋಹನ ಬೈಪಾಡಿತ್ತಾಯರು, ಮದ್ಲೆಗಾರ ಪದ್ಯಾಣ ಜಯರಾಮ ಭಟ್, ಅಧ್ಯಾಪಿಕೆ ಶ್ರೀಮತಿ ಬಿ. ಸುಲೋಚನಾ ಹಾಗೂ ಭಾಗವತ, ಗುರು ಪಾಲೆಚ್ಚಾರು ಗೋವಿಂದ ನಾಯಕರಿಗೆ ಪ್ರದಾನ ಮಾಡಲಾಗಿತ್ತು. ಗೋಪಣ್ಣ ಅವರ ಚಿರಂಜೀವಿ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಕುಟುಂಬವು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ