ಉಜಿರೆ: ಬಡತನವು ಸಾಧನೆಗೆ ತಡೆಗೋಡೆ ಎಂದು ತಿಳಿಯಬಾರದು. ಛಲ ಒಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಹಿರಿಯ ಸಾಹಿತಿ ಡಾ. ಪ್ರಭಾಕರ ಶಿಶಿಲ ಹೇಳಿದರು.
ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಜೂ.27ರಂದು ಆಯೋಜಿಸಲಾಗಿದ್ದ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ಸರಣಿ ‘ಎಸ್ ಡಿ ಎಂ ನೆನಪಿನಂಗಳ’ದ ಹದಿಮೂರನೇ ಕಂತಿನ ಕಾರ್ಯಕ್ರಮದಲ್ಲಿ ಅವರು ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಚಿತ್ರಾವತಿ ಅವರಿಗೆ ಸಹಾಯಧನ (5,000 ರೂ.) ಹಸ್ತಾಂತರಿಸಿ ಮಾತನಾಡಿದರು. “ಜೀವನದಲ್ಲಿ ಛಲವಿದ್ದರೆ ನೀವು ಎದುರಿಸುತ್ತಿರುವ ಬಡತನ ನಿಮ್ಮ ಸಾಧನೆಗೆ ದಾರಿಯಾಗಬಲ್ಲದು” ಎಂದು ಪ್ರೇರಕ ನುಡಿಗಳನ್ನಾಡಿದ ಅವರು, “ಮನುಷ್ಯನ ಜೀವನದಲ್ಲಿ ಸ್ವಾರ್ಥ ಇರಬಾರದು. ಎಲ್ಲರಲ್ಲಿ ನಾನೊಬ್ಬ ಎಂದು ಅರಿತು ಸಮನ್ವಯದಿಂದ ಬಾಳಬೇಕು” ಎಂದು ಕಿವಿಮಾತು ಹೇಳಿದರು.
“ಈಗಿನ ಮಕ್ಕಳ ದೊಡ್ಡ ಸಮಸ್ಯೆ ಎಂದರೆ ಪ್ರಶ್ನೆ ಕೇಳದಿರುವುದು. ಪ್ರಶ್ನೆ ಕೇಳದಿದ್ದರೆ ಏಕ ವ್ಯಕ್ತಿ ಪ್ರಾಧಿಕಾರ ನಡೆಯುತ್ತದೆ. ಹಾಗಾಗಿ ನಿಮ್ಮ ಜೀವನದಲ್ಲಿ ಪ್ರಶ್ನಿಸುವ ಗುಣವನ್ನು ಅಳವಡಿಸಿಕೊಳ್ಳಿ ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, “ನಮ್ಮ ಈ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿತು ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಅವರ ಅನುಭವಗಳನ್ನು ಈಗಿನ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲು ಇಂತಹ ಕಾರ್ಯಕ್ರಮ ಪೂರಕವಾಗಿದೆ” ಎಂದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ, ಹಿರಿಯ ವಿದ್ಯಾರ್ಥಿ ತಿಮ್ಮಪ್ಪ ಗೌಡ ಹಾಗೂ ಕಾಲೇಜಿನ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಡಾ. ಎಂ. ಪಿ. ಶ್ರೀನಾಥ್ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಅಭಿಲಾಷ್ ವಂದಿಸಿ, ಡಾ. ದಿವಾಕರ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು.