ಪಾಣಾಜೆ: ಪಾಣಾಜೆ ಸುಬೋಧ ಪ್ರೌಢಶಾಲೆ 2023-2024 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಯವರನ್ನು ಆಡಳಿತ ಮಂಡಳಿ ವತಿಯಿಂದ ಜೂನ್ 8 ರಂದು ಸನ್ಮಾನಿಸಿ ಅಭಿನಂದಿಸಲಾಯಿತು.
ನಿರಂತರ ಕಲಿಯುವಿಕೆ ಅಗತ್ಯ ಮಕ್ಕಳು ಪಾಠಗಳನ್ನು ಪ್ರಾರಂಭದಿಂದಲೇ ನಿರಂತರವಾಗಿ ಕಲಿಯಬೇಕು ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಪಾಣಾಜೆ ಗ್ರಾಮ ಪಂಚಾಯತಿನ ಅಧ್ಯಕ್ಷೆ ಶ್ರೀಮತಿ ಮೈಮನತುಲ್ ಮೆಹರ ಮಕ್ಕಳಿಗೆ ಕರೆ ನೀಡಿದರು.
ಸುಬೋಧ ಮಕ್ಕಳು ಉನ್ನತ ಪ್ರಜೆಗಳಾಗಬೇಕು:
ಅರ್ಲಪದವಿನ ಸ್ನೇಹ ಟೆಕ್ಸ್ಟೈಲ್ ಸಿನ ಮಾಲಕ ವರದರಾಯ ನಾಯಕ್ ವಿದ್ಯಾರ್ಥಿಗಳು ಶ್ರಮಪಟ್ಟು ಓದಬೇಕು, ಜೀವನದಲ್ಲಿ ಒಂದು ಗುರಿ ಇರಬೇಕು ಎಂದು ಮಕ್ಕಳನ್ನು ಅಭಿನಂದಿಸಿದರು. ಇನ್ನೋರ್ವ ಮುಖ್ಯ ಅತಿಥಿ, ಸುಬೋಧ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಜಗನ್ಮೋಹನ ರೈ ಸೂರಂಬೈಲ್, ಶಾಲೆಗೆ ಸತತವಾಗಿ ನೂರು ಶೇಕಡ ಫಲಿತಾಂಶ ಬಂದಲ್ಲಿ ಮಕ್ಕಳ ಸಂಖ್ಯೆ ತನ್ನಿಂದ ತಾನೇ ವೃದ್ಧಿಯಾಗುತ್ತದೆ. ಪ್ರತಿ ವರ್ಷ ಶಾಲೆಯಲ್ಲಿ ಶೇ 100 ಫಲಿತಾಂಶ ಬರುವಂತೆ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಎಲ್ಲಾ ಮಕ್ಕಳಿಗೆ, ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಯವರಿಗೆ ಉಡುಗರೆ,ಸ್ಮರಣಿಕೆ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು. ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಉಪೇಂದ್ರ ಬಲ್ಯಾಯರು ಕೊಡಮಾಡಿದ ನೆನಪಿನ ಕಾಣಿಕೆ, ಆಡಳಿತ ಮಂಡಳಿ ಸದಸ್ಯರಾದ ವಿದ್ಯಾ ಮಣ್ಣಂಗಳ ಅವರು ನೀಡಿದ ನಗದು ಬಹುಮಾನವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಯವರಿಗೆ ವಿತರಿಸಲಾಯಿತು.
ಮುಹಮ್ಮದ್ ಅಫ್ಸಲ್, ಚೈತನ್ಯ ಜಿ, ಗ್ರೀಷ್ಮಾ ಎ ಮತ್ತು ಶ್ರೀಜಶ್ರೀ ಕುಮಾರಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸುಬೋಧ ಪ್ರೌಢಶಾಲೆಯ ಪ್ರಥಮ ಮುಖ್ಯೋಪಾಧ್ಯಾಯರಾದ ಪಿಲಿಂಗಲ್ಲು ಕೃಷ್ಣ ಭಟ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಜಯಶ್ರೀ ದೇವಸ್ಯ ಶುಭಾಶಂಸನೆಗೈದರು.
ಇದೇ ಸಂದರ್ಭದಲ್ಲಿ NMMS ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸ್ಕಾಲರ್ಶಿಪ್ಗೆ ಅರ್ಹತೆ ಪಡೆದ ವಿದ್ಯಾರ್ಥಿಗಳನ್ನು ಶಾಲು ಹೊದಿಸಿ ಸ್ಮರಣಿಕೆ ಮತ್ತು ಬಹುಮಾನ ನೀಡಿ ಗೌರವಿಸಲಾಯಿತು.
ಶಾಲಾ ಸಂಚಾಲಕರಾದ ಗಿಳಿಯಾಲು ಮಹಾಬಲೇಶ್ವರ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶೇ 100 ಫಲಿತಾಂಶಕ್ಕೆ ಕಾರಣಕರ್ತರಾದ ಎಲ್ಲಾ ವಿದ್ಯಾರ್ಥಿಗಳನ್ನು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯವರನ್ನು ಅಭಿನಂದಿಸಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಉಪೇಂದ್ರ ಬಲ್ಯಾಯ ದೇವಸ್ಯ ವಹಿಸಿದ್ದರು. ಶಾಲಾ ವಿದ್ಯಾರ್ಥಿನಿಯರಾದ ಸಿಂಚನಾ, ಸಿಂಚನಾ ಎಸ್ ಸ್ವಸ್ತಿಕಾ, ದೀಪ್ತಿ ಲಕ್ಷ್ಮಿ, ಭವ್ಯಶ್ರೀ ಹಾಗೂ ಲಾವಣ್ಯ ಪ್ರಾರ್ಥಿಸಿ, ಮುಖ್ಯ ಶಿಕ್ಷಕ ಶ್ರೀಪತಿ ಭಟ್ ವಂದಿಸಿದರು. ಸಹ ಶಿಕ್ಷಕಿ ನಿರ್ಮಲ ಕೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಸುಧೀರ್ ಎಸ್ ಪಿ ನಿರೂಪಿಸಿದರು. ಆಡಳಿತ ಮಂಡಳಿ ಸದಸ್ಯರು ಪೋಷಕರು,ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದರಾಯ ನಾಯಕ್ ರಿಂದ ನಗದು ಬಹುಮಾನ ವಿತರಣೆ
ಮುಖ್ಯ ಅತಿಥಿಯಾಗಿ ಆಗಮಿಸಿದ ಸ್ನೇಹ ಟೆಕ್ಸ್ ಟೈಲ್ಸ್ ನ ಮಾಲಕರಾದ ವರದರಾಯ ನಾಯಕ್ ಅವರು ಶಾಲೆಗೆ ಪ್ರಥಮ ಸ್ಥಾನಿಯಾದ ಮುಹಮ್ಮದ್ ಆಫ್ಸಲ್ ಗೆ ರೂ 10000/- ದ್ವಿತೀಯ ಸ್ಥಾನಿಯಾದ ಚೈತನ್ಯ ಜಿ ಅವರಿಗೆ ರೂ 3000/- ಮೂರನೇ ಸ್ಥಾನ ಪಡೆದ ಗ್ರೀಷ್ಮಾ ಎ ಅವರಿಗೆ ರೂ 2000/ - ನಾಲ್ಕನೇ ಸ್ಥಾನ ಪಡೆದ ಶ್ರೀಜಶ್ರೀ ಕುಮಾರಿಗೆ ರೂ 1000/- ಉಳಿದ ಎಲ್ಲಾ ವಿದ್ಯಾರ್ಥಿಗಳಿಗೆ ರೂ 500/-ರಂತೆ ನಗದು ಬಹುಮಾನ, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಯವರಿಗೆ ವಿಶೇಷ ಬಹುಮಾನ ನೀಡಿ ಗೌರವಿಸಿದರು. ಮುಂದೆಯೂ ಶಾಲೆಗೆ ನೂರು ಶೇಕಡ ಫಲಿತಾಂಶ ಬಂದಲ್ಲಿ ಎಲ್ಲಾ ಮಕ್ಕಳನ್ನು ಹಾಗೂ ಶಿಕ್ಷಕರನ್ನು ಗೌರವಿಸುವುದಾಗಿ ವಾಗ್ದಾನ ಮಾಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ