ಮಂಗಳೂರು: ಅಹಮದ್ ನಗರದ ಉದ್ಯಮಿ, ಕಲಾಪೋಷಕ ಮತ್ತು ಧಾರ್ಮಿಕ- ಸಾಮಾಜಿಕ ಸೇವಾಕರ್ತ ಕೆ.ಕೆ.ಶೆಟ್ಟಿ ಅವರು ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಆರ್ಯಭಟ ಕಲ್ಚರಲ್ ಆರ್ಗನೈಸೇಷನ್ ಸಂಸ್ಥೆಯು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಮಾಡಿದ ಸೇವೆಗಾಗಿ ಕೆ.ಕೆ.ಶೆಟ್ಟರಿಗೆ ಈ ಪ್ರಶಸ್ತಿಯನ್ನು ಘೋಷಿಸಿದೆ.
ಸೇವಾ ಸಾಧಕ:
ಮೂಲತಃ ಕುಂಬಳೆಯವರಾದ ಕುತ್ತಿಕ್ಕಾರು ಕಿಂಞಣ್ಣ ಶೆಟ್ಟಿ ಅವರು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಪೂರೈಸಿ 1980ರಲ್ಲಿ ಅಹ್ಮದ್ ನಗರ ಸೇರಿದರು. ಹೋಟೆಲ್ ಉದ್ಯಮಕ್ಕೆ ತೊಡಗಿದ ಅವರು ಪ್ರಸ್ತುತ ತಮ್ಮ ಶಬರಿ ಇಂಡಸ್ಟ್ರಿಯಲ್ ಕ್ಯಾಟರಿಂಗ್ ಮೂಲಕ 55ಕ್ಕೂ ಮಿಕ್ಕಿ ಕ್ಯಾಂಟೀನ್ ಗಳನ್ನು ನಡೆಸುತ್ತಿದ್ದಾರೆ. 1990 ರಲ್ಲಿ ಅಹ್ಮದ್ ನಗರದಲ್ಲಿ ಸುಂದರ ಅಯ್ಯಪ್ಪ ಮಂದಿರ ಕಟ್ಟಿಸಿ ಅದರ ಸ್ಥಾಪಕ ಅಧ್ಯಕ್ಷರಾದರು. 2020 ರಲ್ಲಿ ತಮ್ಮ ಹುಟ್ಟೂರು ಮುಂಡಪಳ್ಳದಲ್ಲಿ ನೂತನ ಶ್ರೀ ರಾಜರಾಜೇಶ್ವರಿ ದೇವಸ್ಥಾನವನ್ನು ನಿರ್ಮಿಸಿ ಅದರ ಆಡಳಿತ ಮೊಕ್ತೇಸರರಾಗಿದ್ದಾರೆ. ಅಡೂರು, ಮಧೂರು, ಕನ್ಯಾನ ಕ್ಷೇತ್ರಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಪ್ರಮುಖ ಕೆಲಸಗಳನ್ನು ತಾವೇ ಮಾಡಿರುತ್ತಾರೆ. ಕಾಸರಗೋಡು ಸುತ್ತಮುತ್ತಲಿನ ಸುಮಾರು 50 ದೇಗುಲ, ಮಠ, ಮಂದಿರ ಮತ್ತು ವಿದ್ಯಾಸಂಸ್ಥೆಗಳ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಉದಾರ ಧನಸಹಾಯ ನೀಡುತ್ತಿದ್ದಾರೆ.
'ಯಕ್ಷಾಂಗಣ ಮಂಗಳೂರು' ಚಿಂತನ- ಮಂಥನ ಮತ್ತು ಪ್ರದರ್ಶನ ವೇದಿಕೆಯ ಗೌರವ ಉಪಾಧ್ಯಕ್ಷರಾಗಿರುವ ಕೆ.ಕೆ.ಶೆಟ್ಟಿ ಅವರು, ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿಯಾಗಿ ಇತ್ತೀಚೆಗೆ ಕಾಸರಗೋಡಿನ ಕಲಾವಿದರೊಬ್ಬರ ಗೃಹ ನಿರ್ಮಾಣಕ್ಕೆ ಆರ್ಥಿಕ ಕೊಡುಗೆ ನೀಡಿದ್ದಾರೆ. ಅಹ್ಮದ್ ನಗರದಲ್ಲಿ ಕನ್ನಡ ಸಂಘ ಮತ್ತು ಹೊರನಾಡ ಕನ್ನಡಿಗರ ಸಂಘಗಳ ಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ. ಭಾರತ- ಭಾರತಿ ಸಂಸ್ಥೆಯಲ್ಲಿ ಅವರು ಸಕ್ರಿಯರು. ಪೂನಾ ಬಂಟರ ಸಂಘದ ಕಾರ್ಯಕಾರಿಣಿ ಸದಸ್ಯರಾಗಿರುವುದಲ್ಲದೆ ಕಾಸರಗೋಡಿನಲ್ಲಿ ನೂತನ ಬಂಟರ ಭವನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಬಂಟ್ವಾಳ ಸಮೀಪ ವಿಶಾಲ ಕೃಷಿ ಭೂಮಿ ಖರೀದಿಸಿ ಅದನ್ನು ಅಭಿವೃದ್ಧಿಪಡಿಸುತ್ತಿರುವ ಪ್ರಗತಿಪರ ಕೃಷಿಕರೂ ಆಗಿದ್ದಾರೆ.
ಜೂ.23 ಪ್ರಶಸ್ತಿ ಪ್ರದಾನ:
ಇದೇ ಜೂನ್ 23ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರಿಗೆ 2024ನೇ ಸಾಲಿನ ಆರ್ಯಭಟ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಆರ್ಯಭಟ ಕಲ್ಚರಲ್ ಆರ್ಗನೈಸೇಷನ್ ಸ್ಥಾಪಕಾಧ್ಯಕ್ಷ ಡಾ. ಎಚ್.ಎಲ್.ಎನ್. ರಾವ್ ಪ್ರಕಟಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ