ಚಿತ್ರಕಲಾ ಪರಿಷತ್ನಲ್ಲಿ ತಂದೆ-ಮಗಳ ಕಲಾಕೃತಿಗಳ ಪ್ರದರ್ಶನ
ಬೆಂಗಳೂರು: "ದ ಡಾಪರ್ ಶೋ" ಇದರ ಉದ್ಘಾಟನಾ ಸಮಾರಂಭ ಬೆಂಗಳೂರಿನ ಚಿತ್ರಕಲಾ ಪರಿಷತ್ನಲ್ಲಿ ನಡೆಯಿತು. ಇದೊಂದು ವಿಶಿಷ್ಟವಾದ ಪ್ರದರ್ಶನವಾಗಿದ್ದು, ತಂದೆ ಉದಯ ಕೃಷ್ಣ ಜಿ ಮತ್ತು ಮಗಳು ನಿಯತಿ ಯು. ಭಟ್ ಜೊತೆಯಾಗಿ ತಮ್ಮ ಕಲಾಕೃತಿಗಳನ್ನು ಹಾಗೂ ಛಾಯಾಚಿತ್ರಗಳನ್ನು ಮೂರು ದಿನಗಳ ಕಾಲ ಪ್ರದರ್ಶಿಸಿದರು. ಉದಯ ಕೃಷ್ಣ ಅವರ ತಾಯಿ ಶ್ರೀಮತಿ ಜಿ. ಎಸ್. ಶಂಕರಿ ಅವರು ದೀಪೋಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು.
ಮುಖ್ಯ ಅತಿಥಿ, ದಾಸವಾಣಿ ಸಂಗೀತಜ್ಞ ಡಾ. ವಿದ್ಯಾಭೂಷಣ ಅವರು ಮಾತನಾಡುತ್ತಾ "ಪೋಷಕರು ತಮ್ಮ ಮಕ್ಕಳಿಗೆ ಯಾವುದಾದರೊಂದಾದರೂ ಪ್ರವೃತ್ತಿಯನ್ನು ಕಲಿಸಬೇಕು, ಅದರಿಂದಾಗಿ ಸಮೃದ್ಧ, ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ಉದಯ ಕೃಷ್ಣ ಅವರು ತಮ್ಮ ಪುತ್ರಿ ನಿಯತಿ ಅವರ ಪ್ರತಿಭೆಗೆ ಆಸರೆಯಾಗಿ ನಿಂತಿರುವುದು ಶ್ಲಾಘನೀಯ" ಎಂದರು.
ಇನ್ನೋರ್ವ ಪ್ರಧಾನ ಅತಿಥಿ, ಹಿರಿಯ ಪತ್ರಕರ್ತ ರವೀಂದ್ರ ಭಟ್ ಐನಕೈ ಅವರು "ಮಗನ ಮತ್ತು ಮೊಮ್ಮಗಳ ಕಲಾ ಪ್ರದರ್ಶನವನ್ನು ತಾಯಿ ಉದ್ಘಾಟನೆ ಮಾಡುವುದನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ನಮ್ಮ ತೃಪ್ತಿಗಾಗಿ, ನಮ್ಮ ಬದುಕನ್ನು ಸುಂದರಗೊಳಿಸುವುದಕ್ಕಾಗಿ ಕಲೆಗಳನ್ನು ಕಲಿಯುವುದು ಬಹಳ ಮುಖ್ಯ. ಚಿತ್ರ, ಫೋಟೋಗ್ರಫಿಯಂಥ ಕಲೆಗಳಿಂದ ಏಕಾಗ್ರತೆ ಸಿದ್ಧಿಸುತ್ತದೆ. ಒಂದು ಚಿತ್ರ ಸಾವಿರ ಶಬ್ದಗಳಿಗೆ ಸಮಾನ. ಅಂಥ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಿದ್ದೀರಿ" ಎಂದು ಅಭಿಪ್ರಾಯ ಪಟ್ಟರು.
ನಾಡಿನ ಹಾಗೂ ದೂರದ ಊರುಗಳಿಂದಲೂ ಆಗಮಿಸಿದ ವಿದ್ವಜ್ಜನರ ತುಂಬಿದ ಸಭೆ ಸಮಾರಂಭಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮವನ್ನು ಸ್ವತಃ ಕಲಾವಿದ, ಫೋಟೋಗ್ರಾಫರ್ ಉದಯ ಕೃಷ್ಣ ಅಚ್ಚುಕಟ್ಟಾಗಿ ನಿರ್ವಹಿಸಿದರು. ಅತಿಥಿಗಣ್ಯರಿಗೆ ಅವರದೇ ಚಿತ್ರಗಳನ್ನು ರಚಿಸಿ ಸ್ಮರಣಿಕೆಯಾಗಿ ನೀಡಿದ್ದು ವಿಶೇಷವೆನಿಸಿತು.
ರೇಖಾಚಿತ್ರ, ಮಂಡಲ ಕಲೆ, ವರ್ಣಚಿತ್ರ ಹಾಗೂ ಛಾಯಾಚಿತ್ರಗಳ ಒಟ್ಟು 139 ಕಲಾಕೃತಿಗಳು ಪ್ರದರ್ಶನಗೊಂಡಿದ್ದು, ಅಪೂರ್ವ ವೈವಿಧ್ಯತೆಯಿಂದ ಕಲಾಸಕ್ತರ ಪ್ರಶಂಸೆಗೆ ಪಾತ್ರವಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ