ಡಾ. ಗುರುರಾಜ ರವರು ಪ್ರಸ್ತುತ ಕರ್ನಾಟಕ ಆಧ್ಯಾತ್ಮಿಕ - ಧಾರ್ಮಿಕ ಕ್ಷೇತ್ರದ ಅಗ್ರಮಾನ್ಯ ಲೇಖಕರಾಗಿ ನಿತ್ಯ- ವಾರ- ತಿಂಗಳ ಪತ್ರಿಕೆಗಳಲ್ಲಿ ನಿರಂತರವಾಗಿ ಹಬ್ಬ - ಹರಿದಿನ , ಉತ್ಸವ- ಆಚರಣೆ- ಆರಾಧನೆಗಳ ಬಗ್ಗೆ ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳ ಮೂಲಕ ಉಜ್ವಲ - ಅಧ್ಯಯನಪೂರ್ಣ ಬರಹಗಳನ್ನು ಪ್ರಕಟಿಸುತ್ತ ಆಧುನಿಕ ಕಾಲಘಟ್ಟದಲ್ಲಿ ಬಹಳ ಮಹತ್ವದ ಭಕ್ತಿ ಪ್ರಸರಣೆಯಲ್ಲಿ ತೊಡಗಿರುವ ಸಾತ್ವಿಕ ಚೇತನ. ಓದುಗರ ಸಾಂಸ್ಕೃತಿಕ ಮನೋಭಾವವನ್ನು ಅರಳಿಸುವಲ್ಲಿ, ಸದಭಿರುಚಿಯನ್ನು ಬೆಳೆಸುವಲ್ಲಿ ಅವ್ಯಾಹತವಾಗಿ ಸಾರಸ್ವತ 'ಸೇವೆ' ಸಲ್ಲಿಸುತ್ತಿರುವ ಅನನ್ಯ ಅಕ್ಷರ ಪ್ರೇಮಿ.
ವಿದ್ಯಾರ್ಥಿ ದೆಸೆಯಲ್ಲೆ ಪತ್ರಿಕೋದ್ಯಮದಿಂದ ಆಕರ್ಷಿತ. ಕನ್ನಡ ಸ್ನಾತಕೋತ್ತರ ಅಧ್ಯಯನದ ಜೊತೆಗೆ ಸಾತ್ವಿಕ ಮನೋಭಾವದ ಬರವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಈ ಯುವ ಬರಹಗಾರನ ಆಸಕ್ತಿಗಳ ಹಲವು. 'ಏನಾದರೂ ಮಾಡುತ್ತಿರು ತಮ್ಮ' ಎಂಬ ಡಿವಿಜಿಯವರ ವಾಣಿಯಂತೆ ಇವರು ಬದುಕು ತೋರಿದ ಹಾದಿಯಲ್ಲಿ ನಿತ್ಯ ಕ್ರಿಯಾಶೀಲ, ಬಹುರೂಪಿ ಕ್ಷೇತ್ರಕಾರ್ಯದಲ್ಲಿ ಶ್ರದ್ಧೆ, ಅಸೀಮ ಬದ್ದತೆ, ತನ್ಮಯತೆ, ನಿಸ್ಪೃಹತೆಯನ್ನೇ ಮೆಟ್ಟಿಲಾಗಿಸಿಕೊಂಡು ವಿಶಿಷ್ಟ ಛಾಪು ಮೂಡಿಸಿರುವ ಸಾಂಸ್ಕೃತಿಕ ಸಂಘಟನೆಯ ದಿವ್ಯ ಚೈತನ್ಯ.
ಪ್ರವೃತ್ತಿಯಿಂದ ಬರಹಗಾರರು , ಸಾಹಿತ್ಯದ ಪರಿಸರದಲ್ಲಿ ಬದುಕಲು ಅಪಾರ ಆಸಕ್ತಿ; ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕರಾಗಿ ಅದರ ಮೂಲಕ ಪ್ರಚಾರ, ಮುದ್ರಣ, ಬರವಣಿಗೆಯಲ್ಲಿ ತೊಡಗಿಸಿಕೊಂಡರು, ಕನ್ನಡ ಸಾಹಿತ್ಯದಲ್ಲಿ ಬಿತ್ತರಗೊಂಡಿರುವ ಗಣಪತಿಯ ವಿವಿಧ ಮುಖಗಳನ್ನು ಪರಿಚಯಿಸುವ ಅಪರೂಪದ ಸೃಷ್ಟಿ "ಕನ್ನಡ ಕಂಪಿನಲ್ಲಿ ಕರಿವದನ" ಹಾಗೂ 'ವಿಶ್ವವಂದಿತ ವಿನಾಯಕ' ಹೊತ್ತಿಗೆಯ ಕರ್ತೃವಾಗಿ , ವಿವಿಧ ಕೇಶವನಾಮಗಳ ಸಂಗ್ರಹ 'ಭಕ್ತಿ ಪಾರಿಜಾತ' , ದೈವೀಕ ಕಲಾರಾಧಕಿ ಡಾ. ಮೀರಾಕುಮಾರ್ ವರ್ಣಯಾನ, ಡಾ.ಅರಳುಮಲ್ಲಿಗೆ ಪಾರ್ಥಸಾರಥಿ 70ರ ಸಂಭ್ರಮದ 950 ಪುಟಗಳ ಉದ್ಗ್ರಂಥ 'ಭೀಮರಥಿ ಬಾಗಿನ' ಪ್ರಧಾನ ಸಂಪಾದಕರಾಗಿ, ಇತ್ತೀಚಿನ ಇವರ ವಿದ್ವತ್ಪೂರ್ಣ ಕೃತಿ 'ವಂದೇ ಗುರು ಪರಂಪರಾಮ್' , ಸತ್ಸಂಗ ಸಂಪದ , ದಾಸ ಪಂಥವರೆವಿಗೂ ಗೈದ ಸಾಧನೆಗಳು ಶ್ರೀಯುತರ ಕರ್ತೃತ್ವಶಕ್ತಿ ನಿರೂಪಣಾ ಕುಶಲತೆ ಮತ್ತು ಕಲಾಪ್ರಜ್ಞೆಗೆ ಸಾಕ್ಷಿಗಳಾಗಿವೆ. 'ಶ್ರೀ ಕೃಷ್ಣಾರ್ಪಣ ಮತ್ತು ಕೃಷ್ಣನ ಹೆಸರೇ ಲೋಕಪ್ರಿಯ; ಬೆಟ್ಟದೊಡೆಯನ ಭಕ್ತಾಗ್ರೇಸರ ತಾಳ್ಳಪಾಕ- 'ಅನ್ನಮಾಚಾರ್ಯರು ಇತ್ತೀಚೆಗೆ ಪ್ರಕಟಗೊಂಡ ಕೃತಿ, ಬೆಂಗಳೂರು ವಿಶ್ವವಿದ್ಯಾಲಯದ ಬಿಎಸ್ಡಬ್ಲ್ಯೂ ಪದವಿ ತರಗತಿಯ ಪಠ್ಯಕ್ಕೆ ಇವರು ಬರೆದ 'ಸಂತ ಶಿಶುನಾಳ ಷರೀಫ' ಲೇಖನ ಆಯ್ಕೆಗೊಂಡಿದೆ.
ಗಾಂಧೀ ಭವನ ಹೊರತರುವ ಅಮರಬಾಪು ಚಿಂತನ, ಕನ್ನಡ ದ್ವೈಮಾಸಿಕ ಪತ್ರಿಕೆಯ ಸಂಪಾದಕೀಯ ನಿರ್ವಹಣಾಕಾರರಾಗಿ, ತಿರುಪತಿಯ ಟಿ.ಟಿ.ಡಿ ಪ್ರಕಟಿಸುವ ಸಪ್ತಗಿರಿ ಆಧ್ಯಾತ್ಮಿಕ ಕನ್ನಡ ಮಾಸ ಪತ್ರಿಕೆಯ ಸಂಪಾದಕ ಸಲಹಾ ಮಂಡಲಿಯ ಸದಸ್ಯರಾಗಿ ಹಾಗೂ ಅನೇಕ ಪತ್ರಿಕೆಗಳಿಗೆ ಅಂಕಣಕಾರರಾಗಿ, ವಿಶೇಷ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಸರ್ವೋದಯ ಮಂಡಲ, ಬ್ರಹ್ಮಿಭೂತ ವಾಸುದೇವ ಮಹಾರಾಜ್ ಫೌಂಡೇಷನ್, ಕಾಕೋಳು ಶ್ರೀವೇಣುಗೋಪಾಲಸ್ವಾಮಿ ದೇವಾಲಯ, ಪಾಂಚಜನ್ಯ ಪ್ರತಿಷ್ಠಾನ ಮುಂತಾದ ಸಾಂಸ್ಕೃತಿಕ ಮತ್ತು ಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ರಾಜಮಾತೆ ಪ್ರಮೋದದೇವಿ ಓಡೆಯರ್ ರವರಿಂದ ಗಣಪತಿ ವಿಶೇಷ ಆಧ್ಯಯನಕ್ಕಾಗಿ ಖಾಸಗಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಟಿಟಿಡಿಯ ಪ್ರತಿಷ್ಠಿತ 'ಪುರಂದರಾನುಗ್ರಹ' ಪ್ರಶಸ್ತಿ, 'ಟಿ.ವಿ.ಕಪಾಲಿ ಶಾಸ್ತ್ರಿ' , ಪುರಸ್ಕಾರ ಮೊದಲಾದ ಸಾಲು ಸಾಲು ಪ್ರಶಸ್ತಿ ಪುರಸ್ಕಾರಗಳು ಇವರನ್ನು ಅಪ್ಪಿಕೊಂಡರೂ, ಯಾವುದೇ ಹಮ್ಮು-ಬಿಮ್ಮು ತೋರದ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಪುಸ್ತಕ ಸಂಸ್ಕೃತಿ ಪರವಾದ ಆಲೋಚನೆಗಳನ್ನು ಸಾಕಾರಗೊಳಿಸುತ್ತಿರುವ ಅದಮ್ಯ ಉತ್ಸಾಹಿ, ಬರಹದ ಬದುಕಿನಲ್ಲಿ ಬಹುದೂರ ಸಾಗಬಲ್ಲ ಸಮರ್ಥ. ಸಾಕಷ್ಟು ಸಾಧನೆ ಮಾಡಿದ್ದರು ಸರಳತೆಯ ವಿಶಿಷ್ಟ ವ್ಯಕ್ತಿತ್ವ ರೂಪಿಸಿಕೊಂಡಿರುವ ಶ್ರೀಯುತರು ಸಮಾಜಕ್ಕೊಂದು ಆಸ್ತಿ.
ಉಪಯುಕ್ತ ನ್ಯೂಸ್ ಡಿಜಿಟಲ್ ಮಾಧ್ಯಮದಲ್ಲಿ ಇತ್ತೀಚಿಗೆ ಮುಕ್ತಾಯಗೊಂಡ ದಾಖಲೆಯ 150 ದಿನಗಳ ಶ್ರೀರಾಮಕಥಾ ಲೇಖನ ಅಭಿಯಾನದ ಸಂಚಾಲಕರಾಗಿ ನಾಡಿನಲ್ಲೆಡೆ ಶ್ರೀರಾಮ ಭಕ್ತಿ ಜಾಗೃತಿಯನ್ನು ಮೂಡಿಸಿದ ಸೇವಾ ತತ್ಬರರು. ಇದೀಗ ಉಪಯುಕ್ತ.ಕಾಂನಲ್ಲಿ 'ವ್ಯಾಸ ಪೀಠ' ಅಂಕಣದ ಮೂಲಕ ಪ್ರತಿ ಶನಿವಾರದಂದು ಕನ್ನಡ ಸಾರಸ್ವತ ಲೋಕಕ್ಕೆ ಸರ್ವ ಶ್ರೇಷ್ಠ ಕೊಡುಗೆ ನೀಡಿರುವ ಪ್ರಾಜ್ಞರುಗಳ ಆಧ್ಯಾತ್ಮಿಕ- ಸಾಮಾಜಿಕ- ವೈಚಾರಿಕ ಸಾಹಿತ್ಯಕ ಹೊತ್ತಗೆಗಳ ಅಪೂರ್ವ ಅವಲೋಕನವನ್ನು ಮಾಡಿಕೊಡಲಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ