ಭಕ್ತರೋದ್ಧಾರ ನರಸಿಂಹ

Upayuktha
0

ಮೇ-22   ನರಸಿಂಹ ಜಯಂತಿ



ಗದ ಒಡಲಲ್ಲಿ ಕಾಣಸಿಗುವ ಸಕಾರಾತ್ಮಕ ಶಕ್ತಿಯೇ ದೈವ. ನಕಾರಾತ್ಮಕ ಶಕ್ತಿಯೇ ಅಸುರೀ ಭಾವ. ಸಾತ್ವಿಕ ಚಿಂತನೆ ಅಸ್ತಂಗತವಾದಾಗ ಧರ್ಮದ ಉತ್ಥಾನಕ್ಕಾಗಿ ದೇವತಾ ಶಕ್ತಿಯ ಉಗಮವಾಗುತ್ತದೆ. ಆಸ್ತಿಕ ಭಾವ ಸಂರಕ್ಷಿಸುವ ಶಕ್ತಿಯಾಗಿ ಕಾಣಸಿಗುವ ಚೈತನ್ಯವೇ ನರಸಿಂಹ. ಮಾನವೀಯ ಹೃದಯವನ್ನು ತೋರಿದ ಆದಿದೈವ. 


ನರ-ಸಿಂಹರ ಆಕೃತಿಯನ್ನು ಪಡೆದು ಅತಿ ಮಾನುಷ ಶಕ್ತಿ ತಾನೆಂದು ತಿಳಿಯಪಡಿಸಿದ. ಎಲ್ಲೆಡೆ ತುಂಬಿದವನು, ಸ್ತ್ರೀ ಪುರುಷರ ಸಮಾನವಾದ ಹುಟ್ಟುವವನಲ್ಲ ಎಂದು ತಿಳಿಸಲು ಕಂಬದಿಂದ ಉದಿಸಿದ. ದುಷ್ಟ ಸಂಹಾರ ಮಾಡಿದ. ಶಿಷ್ಯರಾದ ಪ್ರಹ್ಲಾದನಂತಹ ಭಗವದ್ಭಕ್ತರನ್ನು ಉದ್ಧರಿಸಿದ. ಬಹಳಷ್ಟು ಜನರ ಮುಖ ಮನುಷ್ಯರಂತೆ ಕಂಡರೂ ಹೃದಯ ಸಿಂಹದಂತೆ ಕ್ರೂರವಾಗಿರುತ್ತದೆ. ಮುಖ ಸ್ವಲ್ಪ ವಿಕಾರವಾಗಿ ಕಂಡರೂ ಪರವಾಗಿಲ್ಲ ಆದರೆ ಮಾನವೀಯ ಹೃದಯ ಬೇಕೆಂದು ತೋರಿದವನು ಸಿಂಹದ ಮುಖವನ್ನು ಹೊತ್ತ ಮಾನವ ಹೃದಯವನ್ನು ಪಡೆದ ನರಸಿಂಹ. ಅವನ ಮುಖ ಮಾತ್ರ ಸಿಂಹದ್ದು. ಉಳಿದೆಲ್ಲಾ ಭಾಗ ಮನುಷ್ಯರಂತೆ. ಅಂತಹ ಅಪೂರ್ವ ಅವತಾರವಾದ ನರಸಿಂಹನ ಆವಿರ್ಭಾವವನ್ನು ನೆನಪಿಸಿಕೊಳ್ಳಲಿಕ್ಕಾಗಿ `ನರಸಿಂಹ ಜಯಂತಿ’ ಆಚರಣೆ. ನಮ್ಮ ಎಲ್ಲ ಅನಿಷ್ಟವನ್ನು ನಿವೃತ್ತಿಗೊಳಿಸುವ ಮೂಲಕ ನಮಗೆ ಸನ್ಮಂಗಲವನ್ನು ಉಂಟುಮಾಡುವ ನರಸಿಂಹನನ್ನು ಈ ಸಂದರ್ಭದಲ್ಲಾದರೂ ಸ್ಮರಿಸೋಣ. 


ಅನನ್ಯ ರೂಪನಿವನು 

ವಿಷ್ಣುವಿನ ದಶಾವತಾರಗಳಲ್ಲಿ ನಾಲ್ಕನೆಯದು ನರಸಿಂಹಾವತಾರ. ಅಸಾಧ್ಯ ಶಕ್ತಿ. ಅಪರಿಮಿತ ಸಾಮರ್ಥ್ಯವಿರುವ ನರಸಿಂಹನ ಉಗ್ರತೆಯನ್ನು ಕಂಡು ಸನಿಹದಲ್ಲೇ ಇದ್ದ ಬ್ರಹ್ಮ ಜ್ಞಾನಾನಂದ ಶರೀರ ಎಂದು ಸ್ತುತಿಸುತ್ತಾನೆ. ತಾನೇ ಸರ್ವಶ್ರೇಷ್ಠನು, ಸರ್ವವಂದ್ಯನು, ತನ್ನ ಅಣತಿಯಿಂದಲೇ ಎಲ್ಲವೂ ನಡೆಯುತ್ತದೆ ಎಂಬ ಅಹಮ್ಮಿಕೆ. ದರ್ಪಗಳನ್ನು ಮುರಿದ ಈ ಮೃಗಮಾನವ ಒಂದು ಫ್ಯಾಂಟಸಿಯAತೆ ತೋರಿಸಿಬಿಡುತ್ತಾನೆ. ಎಳೆಯ ಪ್ರಹ್ಲಾದ ಈ ಘೋರ ರೂಪವನ್ನು ಕಂಡು ವಿಚಲಿತನಾಗಲಿಲ್ಲ. ಮಕ್ಕಳೇ ಹಾಗೆ ಭಯವನ್ನೇ ಅರಿಯದವರು. ಭಯ, ಕೋಪ, ಸೇಡು, ಆಸೆ ಎಲ್ಲವನ್ನೂ ಹಿರಿಯರಾದ ನಾವು ಹೇಳಿಕೊಟ್ಟ ನಂತರ ಅವುಗಳು ಮಕ್ಕಳ ಅನುಭವಕ್ಕೆ ಬರುತ್ತದೆ. ಭಾಗವತದ ಏಳನೇ ಸ್ಕಂದದಲ್ಲಿ ಪ್ರಹ್ಲಾದ ಹರಿಯನ್ನು ಸ್ತುತಿಸುತ್ತಾನೆ. ಗಮನ ಸೆಳೆಯುವ ಮತ್ತೊಂದು ವಿಚಾರವೆಂದರೆ ನಾರಸಿಂಹ ಪ್ರಹ್ಲಾದನಿಗೆ ಹಿರಣ್ಯಕಶಿಪುನ ಪೂರ್ವಾಪರಗಳನ್ನು ಅರುಹುವುದು. ಹಿಂದೆ ಅವನು ತನ್ನ ಭಕ್ತನಾಗಿದ್ದನು, ಶಾಪದಿಂದಾಗಿ ದೈತ್ಯನಾಗಿ ಹುಟ್ಟಿದ, ತನ್ನ ಮೋಕ್ಷಕ್ಕಾಗಿಯೇ ಈ ಚಿತ್ರವಾದ, ಮಿತಿಮೀರಿದ ನಡವಳಿಕೆಗಳನ್ನು ತೋರಿದೆ ಎಂದು ತಿಳಿಸುತ್ತಾನೆ. ಮೇಲ್ನೋಟಕ್ಕೆ ಇವೆಲ್ಲವೂ ಪೂರ್ವನಿಯೋಜಿಯವೇ ಎನಿಸುತ್ತದೆ. ಆದರೆ ನಾರಸಿಂಹ ರೂಪಕಲ್ಪನೆಗೂ ಮೀರಿದ ಚಿತ್ರ. ಅರ್ಧ ಸಿಂಹ, ಅರ್ಧ ಮನುಷ್ಯನ ರೂಪವನ್ನೇಕೆ ಧರಿಸಿದ ಎನ್ನುವ ಪ್ರಶ್ನೆ ಮೂಡುತ್ತದೆ. ಇದಕ್ಕೆ ಹಲವು ದೃಷ್ಟಿಕೋನಗಳಿವೆ. ದೈತ್ಯಶಕ್ತಿಗೆ ಸಿಂಹದ ಅಂಶವೇ ಸೂಕ್ತ. ಮನುಷ್ಯನಂತೆ ಚಲಿಸಲು ಕೈಕಾಲುಗಳೇ ಹಿತ. ಮೃಗರುಂಡವಿದ್ದರೂ ಪ್ರಪಂಚಕ್ಕೆ ಸಾದೃಶ ಪಡಿಸಲು ಅರಮನೆಯ ಕಂಬವನ್ನು ಸೀಳಿಕೊಂಡೇ ಬಂದ. ಅಷ್ಟೇ ಅಲ್ಲ ಬ್ರಹ್ಮನ ವರವನ್ನೂ ನೆನಪಿಗೆ ತಂದುಕೊಂಡು ಸಂಧ್ಯಾ ಸಮಯಕ್ಕೆ ಕಾಯುತ್ತಿದ್ದ. ಹಿರಣ್ಯಕಶಿಪುವಿನ ಕರುಳನ್ನು ಬಗೆದ. ಅಲ್ಲಿ ಮಾತ್ರ ಸಿಂಹದ ವರ್ತನೆ ಪ್ರಕಟವಾಯಿತು. ಸಂಹಾರದ ನಂತರ ನಡೆದದ್ದೆಲ್ಲವೂ ಭಗವಂತ-ಭಕ್ತ ಸಂಬಂಧಿತವಾಗಿವೆ. 


ನಮ್ಮ ಬದುಕು ಅದರ ಆಗುಹೋಗುಗಳು ಅಚಿಂತ್ಯವಾದ, ಅದ್ಭುತವಾದ ಶಕ್ತಿಯ ಅಧೀನ. ಅದಕ್ಕೆ ಶರಣಾಗತರಾಗಿ ಬದುಕಬೇಕೆನ್ನುವ ನಂಬಿಕೆ ಸಮಾಜದ ಬಹುತೇಕ ಜನರಲ್ಲಿದೆ. ಹುಟ್ಟು ಸಾವುಗಳ ಮಧ್ಯದ ಇರುವು ಇವು ನಮ್ಮ ಕೈಯಲಿಲ್ಲ. ನಾವು ಬಯಸಿದಂತೆ ಹುಟ್ಟಲು ಸಾಧ್ಯವಾಗುವುದಲ್ಲ. ಇರವು ನಮ್ಮ ಕೈಯಲ್ಲಿಲ್ಲ. ಹಾಗಾಗಿ ನಾವು ಬಯಸಿದಂತೆ ಇರಲು ಸಾಧ್ಯವಿಲ್ಲ. ನಾವು ನಮ್ಮ ಕೈಯಲ್ಲಿಲ್ಲ. ಹಾಗಾಗಿ ನಾವು ಬಯಸಿದಂತೆ ಸಾಯಲು ಸಾಧ್ಯವಿಲ್ಲ. ಇವೆಲ್ಲವನ್ನೂ ನಿಯಂತ್ರಿಸುವ ಎತ್ತರದ ಶಕ್ತಿಯೊಂದಿದೆ. ಅದರ ಅನುಗ್ರಹಕ್ಕೆ ಪಾತ್ರರಾಗಿ ಬದುಕನ್ನು ರೂಪಿಸಿಕೊಳ್ಳಬೇಕೆಂಬುದು ಆಸ್ತಿಕ ಸಮುದಾಯ ನಂಬಿಕೆ. 


ಈ ಜಗತ್ತಿನಲ್ಲಿ ಸಕಾರಾತ್ಮಕವಾದ ಶಕ್ತಿಯೂ ಇದೆ. ಅದಕ್ಕೆ ದೈವೀಶಕ್ತಿ ಎಂದು ಹೆಸರು. ನಕಾರಾತ್ಮಕ ಶಕ್ತಿಯೂ ಇವೆ. ಅದಕ್ಕೆ ಅಸುರ ಶಕ್ತಿ ಎಂದು ಹೆಸರು. ದೈವೀಶಕ್ತಿ. ಅಸುರೀ ಶಕ್ತಿಗಳ ಮಧ್ಯೆ ಸಂಘರ್ಷವಾಗುತ್ತಲೇ ಇರುತ್ತದೆ. ಅದೆಷ್ಟೋ ಸಲ ಅಸುರಶಕ್ತಿಯೇ ವಿಜೃಂಭಿಸಿದೆ. 


ಮಾನವತೆಯ ಪ್ರತೀಕ ನರಸಿಂಹ

ದಾನವರ ಹಿರಣ್ಯಕಶಿಪು ಜನ್ಮಜಾತ ದೈವ ವಿರೋಧಿ. ವರಾಹಾವತಾರದಲ್ಲಿ ವಿಷ್ಣುವು ಸಂಹರಿಸಿದ ಹಿರಣಾಕ್ಷನೆಂಬ ರಾಕ್ಷಸನ ಅಣ್ಣ. ವಿಷ್ಣುವನ್ನು ದ್ವೇಷಿಸುತ್ತಿದ್ದ ಹಿರಣ್ಯಕಶಿಪು, ಅವನ ವಿರುದ್ಧ ಸೇಡು ತೀರಿಸಿಕೊಳ್ಳಲು ಬ್ರಹ್ಮನನ್ನು ಕುರಿತು ಘೋರ ತಪಸ್ಸನ್ನು ಮಾಡಿ `ಮನೆಯ ಒಳಗಾಗಲಿ ಹೊರಗಾಗಲಿ, ಹಗಲಿನಲ್ಲಾಗಲಿ ರಾತ್ರಿಯಲ್ಲಾಗಲಿ. ಭೂಮಿಯ ಮೇಲಾಗಲಿ ಆಕಾಶದಲ್ಲಾಗಲಿ, ಯಾವುದೇ ಶಸ್ತçದಿಂದಾಗಲಿ, ಮಾನವನಿಂದಾಗಲಿ ಮೃಗದಿಂದಾಗಲಿ, ನೀನು ಸೃಷ್ಟಿಸಿರುವ ಸಜೀವ ಅಥವಾ ನಿರ್ಜೀವ ವಸ್ತುವಿನಿಂದಾಗಲಿ ನನಗೆ ಮರಣ ಬರದಂತೆ ವರವನ್ನು ಕೊಡು’ ಎಂದು ಬೇಡಿ ಅಂತೆಯೆ ವರವನ್ನು ಪಡೆದ .


ವಿಪರ್ಯಾಸವೆಂದರೆ ಅವನ ಸ್ವಂತ ಮಗನೇ ವಿಷ್ಣು ಭಕ್ತ. ತಂದೆ ವಿಷ್ಣು ದ್ವೇಷಿ, ವಿಷ್ಣು ಶತ್ರು. ಮಗ ವಿಷ್ಣು ಭಕ್ತ, ವಿಷ್ಣುವಿನ ಆರಾಧಕ. ಅವನದು ಅವಿಚಲ ಭಕ್ತಿ. ತನ್ನ ಮಗ ಪ್ರಹ್ಲಾದ ವಿಷ್ಣು ಭಕ್ತನಾದುದರಿಂದ ಹಿರಣ್ಯಕಶಿಪುವಿಗೆ ಅವನ ಮೇಲೆ ಬದ್ಧ ದ್ವೇಷ. ಮಗನೆಂಬ ಪ್ರೀತಿಯಾಗಲಿ ವಾತ್ಸಲ್ಯವಾಗಲಿ ಇಲ್ಲ ಮಗನ ವಿಷ್ಣು ಭಕ್ತಿಯನ್ನು ನಾಶಮಾಡಿ ತಾನೇ ಶ್ರೇಷ್ಠನೆಂದು ಹೇಳುವಂತೆ ಮಗನ ಮನಸ್ಸನ್ನು ಪರಿವರ್ತಿಸಲು ಅವನು ಮಾಡದ ಪ್ರಯತ್ನವಿಲ್ಲ. ನೀಡದ ಘೋರ ಶಿಕ್ಷೆ ಇಲ್ಲ. ಆದರೆ ಪ್ರಹ್ಲಾದನದು ಅಚಲ ವಿಷ್ಣು ಭಕ್ತಿ. 


ತನ್ನ ನಿಜ ಭಕ್ತರನ್ನು ಕಾಪಾಡುವುದು ಭಗವಂತನ ಧರ್ಮ. ಹೀಗಾಗಿ ಹಿರಣ್ಯಕಶಿಪು ಪ್ರಹ್ಲಾದನಿಗೆ ನೀಡಿದ ಎಲ್ಲ ಶಿಕ್ಷೆಗಳೂ ವಿಷ್ಣುವಿನ ಪ್ರಭಾವದಿಂದ ನಿಷ್ಪಲಗೊಂಡು ಪ್ರತಿ ಹತ್ಯಾ ಪ್ರಯತ್ನದ ಅನಂತರವೂ ಪುಟಕ್ಕಿಟ್ಟ ಚಿನ್ನದಂತೆ ಪ್ರಹ್ಲಾದ ತೇಜೋಮಯನಾಗಿ ಹೊರಹೊಮ್ಮುತ್ತಾನೆ. 


ತಂದೆ ಮಕ್ಕಳ ನಡುವೆ ಮತ್ತೆ ವಾಗ್ಯುದ್ಧ ತನ್ನನ್ನೇ ಇಡೀ ಜಗತ್ತಿನ ಪ್ರಭು ಎಂದು ಒಪ್ಪುವಂತೆ ಹಿರಣ್ಯಕಶಿಪುವಿನ ಒತ್ತಾಯ. ವಿಷ್ಣುವೇ ಜಗದೊಡೆಯ ಎಂಬ ಪ್ರಹ್ಲಾದನ ಉತ್ತರ. ವಿಷ್ಣು ಸರ್ವಾನಂತಾದ ಹಿರಣ್ಯಕಶಿಪು ``ಸರ್ವಾಂತರ್ಯಾಮಿ ನಿನ್ನ ವಿಷ್ಣು ಎನ್ನುವೆಯಲ್ಲ... ಈ ಕಂಬದಲ್ಲಿದ್ದಾನೆಯೇ ತೋರಿಸು’’ ಎಂದು ಅಬ್ಬರಿಸಿದ್ದಾಗ ಭಕ್ತ ಶ್ರೇಷ್ಠ ‘’ಕಂಬದಲ್ಲಿಯೂ ಇದ್ದಾನೆ. ಎಲ್ಲೆಲ್ಲಿಯೂ ಇದ್ದಾನೆ’’ ಎಂದು ಉತ್ತರಿಸುತ್ತಾನೆ. 


ತನ್ನ ಭಕ್ತನ ಮಾತನ್ನು ಉಳಿಸಲು ಕಂಬದಲ್ಲಿ ಆವಿರ್ಭವಿಸುತ್ತಾನೆ ವಿಷ್ಣು. ತನ್ನ ಗದೆಯಿಂದ ಕಂಬದ ಮೇಲೆ ಹಿರಣ್ಯಕಶಿಪು ಪ್ರಹಾರ ಮಾಡಿದಾಗ ಕಂಬ ಸೀಳಿಕೊಂಡು ಅವತರಿಸುತ್ತಾನೆ ನರಸಿಂಹ. ಶ್ರೀನರಸಿಂಹ ಚತುದರ್ಶಿಯಂದು ಆದಿ ದೇವ ಶ್ರೀ ವಿಷ್ಣುವಿನ ಅವತಾರವನ್ನು ಸಂಭ್ರಮದಿAದ ಆಚರಿಸಲಾಗುತ್ತದೆ. ರಾಕ್ಷಸ ರಾಜ ಹಿರಣ್ಯಕಶಿಪು ಸೃಷ್ಟಿಸಿದ್ದ ಕ್ಷೋಭೆಯನ್ನು ನಿವಾರಿಸಿ ಶಾಂತಿ ನೆಲೆಸುವಂತೆ ಮಾಡಲು ವಿಷ್ಣುವು ಈ ಭೂಮಿಯ ಮೇಲೆ ಆವಿರ್ಭವಿಸಿದ. ತನ್ನ ಸೋದರನ್ನು ಸಂಹರಿಸಿದ ಸ್ವತಃ ಭಗವಾನ್ ವಿಷ್ಣುವಿನ ವಿರುದ್ದವೇ ಪ್ರತೀಕಾರ ಕ್ರಮ ಕೈಗೊಳ್ಳಲು ಹಿರಣ್ಯಕಶಿಪು ಕಾತರದಿಂದ ಕಾಯುತ್ತಿದ್ದ. 


ಕಠಿಣ ತಪಸ್ಸಿನ ಮೂಲಕ ವಿಶ್ವದ ಸೃಷ್ಟಿಕರ್ತ ಬ್ರಹ್ನನ್ನು ಒಲಿಸಿಕೊಂಡ ಹಿರಣ್ಯಕಶಿಪು ಪ್ರಬಲವಾದ ವರವನ್ನು ಪಡೆದುಕೊಂಡ. ಅವು ಅವನು ವಿಷ್ಣುವಿನೊಡನೆ ಸಮರದಲ್ಲಿ ಸೆಣೆಸಿದರೆ ಅಲ್ಲಿ ಅವನ ಸಾವಿನ ಸಾಧ್ಯತೆಯನ್ನೇ ದೂರ ಮಾಡುವಂತಹ ವರಗಳು. ಅವನು ಬ್ರಹ್ಮನಲ್ಲಿ ಕೋರಿದ, “ಹೇ ಭಗವಂತ ! ನನಗೆ ಬೇಕಾದ ವರಗಳನ್ನು ಅನುಗ್ರಹಿಸುವುದೇ ಆದಲ್ಲಿ ಕೇಳುವ ಇವುಗಳನ್ನು ದಯಪಾಲಿಸು. ಯಾವುದೇ ಒಣ ಅಥವಾ ತೇವದಿಂದ, ನೀರು ಅಥವಾ ಬೆಂಕಿ, ಮರ, ಕೀಟ, ಬಂಡೆ ಅಥವಾ ಗಾಳಿಗಳಿಂದ ನನಗೆ ಸಾವು ಬರದಿರಲಿ. ಯಾವುದೇ ಆಯುಧ, ಈಟಿ, ಅಥವಾ ಪರ್ವತದಿಂದ ಅಥವಾ ಯಾವುದೇ ಮನುಷ್ಯ, ದೇವತೆ, ರಾಕ್ಷಸ, ಗಂಧರ್ವ, ಕಿನ್ನರ ಯಕ್ಷ ಅಥವಾ ವಿದ್ಯಾಧರರಿಂದ ನಾನು ಕೊಲ್ಲಲ್ಪಡಬಾರದು. ಸರ್ಪ, ಮಂಗ, ಜಿಂಕೆ ಮತ್ತಿತರ ಪ್ರಾಣಿಯಿಂದಾಗಲಿ ನನಗೆ ಮರಣವಿಲ್ಲದಂತೆ ಅನುಗ್ರಹಿಸು. ದುರ್ಗೆ ಅಥವಾ ದೈವೀ ಮಾತೆಯರಿಂದ ನನಗೆ ಸಾವು ಬರದಿರಲಿ. ಮನೆಯ ಒಳಗಾಗಲಿ ಹೊರಗಾಗಲಿ ಸಾವು ಬೇಡ. ಅಥವಾ ಇನ್ನಾವ ರೀತಿಯಿಂದಲೂ ನನಗೆ ಸಾವು ಬರಬಾರದು. ಹಗಲು ಹೊತ್ತಾಗಲಿ ರಾತ್ರಿ ಹೊತ್ತಾಗಲಿ ನನಗೆ ಮರಣವಿಲ್ಲದಂತೆ ಅನುಗ್ರಹಿಸು. ದೇವ, ನಾನು ಕೇಳುತ್ತಿರುವ ವರವಿಷ್ಟೆ.’’ 


ಈ ರೀತಿ ಬ್ರಹ್ಮನಿಂದ ಅನುಗ್ರಹಿತನಾದ, ಸೋಲಕಿಯದ ರಾಕ್ಷಸನು ವಿಷ್ಣುವಿನ ವಿರುದ್ಧ ಪ್ರತೀಕಾರಕ್ಕಾಗಿ ಚತುರ ಯೋಜನೆಯೊಂದನ್ನು ರೂಪಿಸಿದ. “ಯಜ್ಞ ಮತ್ತು ಧರ್ಮವನ್ನು ವಿಷ್ಣುವಿನ ಮೂಲವೆಂದು ಪರಿಗಣಿಸಲಾಗಿದೆ. ಯಜ್ಞ ಮತ್ತು ಧರ್ಮಕ್ಕೆ ಬ್ರಾಹ್ಮಣರು, ಗೋವುಗಳು, ವೇದಗಳು ಮತ್ತು ವರ್ಣಾಶ್ರಮದ ಅಗತ್ಯವಿದೆ. ಇವುಗಳನ್ನೆಲ್ಲ ನಾಶಪಡಿಸಿದರೆ ಯಜ್ಞ ಮತ್ತು ಧರ್ಮ ಹಾಗೂ ಬದ್ಧವೈರಿ ವಿಷ್ಣುವನ್ನು ನಾಶಪಡಿಸಬಹುದು.” 


ಹಿರಣ್ಯಕಶಿಪು ವಿಶ್ವದ ಎಲ್ಲೆಡೆ ಎಲ್ಲರನ್ನೂ ತೀವ್ರವಾಗಿ ಹಿಂಸಿಸತೊಡಗಿದ. ಯಜ್ಞಗಳ ಮೂಲಕ ದೇವತೆಗಳಿಗೆ ಯಾರಾದರೂ ಏನಾದರೂ ಸಮರ್ಪಿಸಿದರೆ ಅಥವಾ ಶ್ರೀ ವಿಷ್ಣುವನ್ನು ಪೂಜಿಸಿದರೆ ಅವರು ಹಿರಣ್ಯಕಶಿಪುವಿನ ಕೈಯಿಂದ ಸಾವನ್ನು ಆಹ್ವಾನಿಸಬೇಕಾಗಿತ್ತು. ಶ್ರೀಮದ್ ಭಾಗವತದಲ್ಲಿ ಹಿರಣ್ಯಕಶಿಪು ತನ್ನ ಅನುಯಾಯಿಗಳಿಗೆ ಹೇಳುತ್ತಾನೆ :

  • “ಮರವೊಂದರ ಬುಡವನ್ನು ಕತ್ತರಿಸಿದಾಗ, ಮರ ಕೆಳಕ್ಕೆ ಉರುಳುತ್ತದೆ. ಆಗ ಅದರ ಕೊಂಬೆಗಳೆಲ್ಲವೂ ತಾನೇ ತಾನಾಗಿ ಒಣಗಿ ಹೋಗುತ್ತವೆ. ಅದೇ ರೀತಿ, ನಾನು ಈ ಚತುರನಾದ ವಿಷ್ಣುವನ್ನು ಕೊಂದು ಬಿಟ್ಟರೆ, ವಿಷ್ಣುವೇ ಪ್ರಾಣವಾಗಿರುವ ದೇವತೆಗಳನ್ನು ತಮ್ಮ ಜೀವನದ ಮೂಲವನ್ನೇ ಕಳೆದುಕೊಂಡು ಅವನತಿ ಹೊಂದುತ್ತಾರೆ.” 
  • “ಬ್ರಾಹ್ಮಣ ಸಂಸ್ಕೃತಿಯ ಮೂಲ ತತ್ತ್ವವೆಂದರೆ, ಯಜ್ಞಯಾಗಾದಿಗಳ ಹಾಗೂ ಧಾರ್ಮಿಕ ಕ್ರಿಯೆಗಳ ಮೂರ್ತಸ್ವರೂಪಿಯಾದ ಭಗವಾನ್ ವಿಷ್ಣುವನ್ನು ತೃಪ್ತಿಪಡಿಸುವುದು, ಭಗವಾನ್ ವಿಷ್ಣುವು ಸಕಲ ಧಾರ್ಮಿಕ ತತ್ತ್ವಗಳ ಭಂಡಾರ. ಮೂರ್ತಸ್ವರೂಪ; ಅವನು ಸಕಲ ದೇವತೆಗಳ, ಪಿತೃಗಳ ಮತ್ತು ಜನಸಾಮಾನ್ಯರ ಆಶ್ರಯದಾತನು. ಬ್ರಾಹ್ಮಣರನ್ನು ಕೊಂದುಬಿಟ್ಟರೆ, ಯಜ್ಞಯಾಗಾದಿಗಳನ್ನು ಮಾಡುವಂತೆ ಕ್ಷತ್ರಿಯರನ್ನು ಪ್ರೋತ್ಸಾಹಿಸುವವರು ಯಾರೂ ಇರುವುದಿಲ್ಲ; ಆಗ ದೇವತೆಗಳು ಯಜ್ಞಯಗಾದಿಗಳಿಂದ ಲಭಿಸುವ ತೃಪ್ತಿ ಇಲ್ಲದೆ ಸಾಯುತ್ತಾರೆ.” 
  • “ ಎಲ್ಲೆಲ್ಲಿ ಗೋವುಗಳಿಗೂ ಬ್ರಾಹ್ಮಣರಿಗೂ ಒಳ್ಳೆಯ ರಕ್ಷಣೆಯಿದೆಯೋ, ವರ್ಣಾಶ್ರಮ ಧರ್ಮದ ಪ್ರಕಾರ ಎಲ್ಲೆಲ್ಲಿ ವೇದಾಧ್ಯಯನ ನಡೆಯುತ್ತಿದೆಯೋ ಅಲ್ಲಿಗೆಲ್ಲಾ ಕೂಡಲೇ ಹೋಗಿ. ಆ ಸ್ಥಳಗಳಿಗೆಲ್ಲ ಬೆಂಕಿ ಹಚ್ಚಿರಿ. ಅಲ್ಲಿರುವ ಜೀವಮೂಲಗಳಾದ ಮರಗಳನ್ನೆಲ್ಲ ಕಡಿದು ಹಾಕಿ.” 


ಹಿರಣ್ಯಕಶಿಪು ಎಷ್ಟು ಭಯದ ವಾತಾವರಣವನ್ನು ಸೃಷ್ಟಿಸಿದನೆಂದರೆ, ಶಿವ ಮತ್ತು ಇತರ ದೇವತೆಗಳು ವಿಷ್ಣುವಿನ ಬಳಿ ತೆರಳಿ ರಕ್ಷಣೆ ಕೋರಿದರು. ಶಿವನು ವಿಷ್ಣು ನಾಮಗಳನ್ನು ಜಪಿಸಿ ಭಗವಂತನನ್ನು ತೃಪ್ತಿಪಡಿಸಿದನು. ಕೊನೆಗೂ ಹಿರಣ್ಯಕಶಿಪುವಿನ ಅಂತ್ಯ ಈಗ ಗೋಚರವಾಗುತ್ತಿತ್ತು. 


ಆದರೆ ಅಲ್ಲೊಂದು ಸಮಸ್ಯೆ ಇತ್ತು: ಹಿರಣ್ಯಕಶಿಪುವಿಗೆ ಬ್ರಹ್ಮನು ನೀಡಿದ್ದ ವರಗಳನ್ನು ಜಯಿಸುವುದು ಸುಲಭವಾಗಿರಲಿಲ್ಲ. ಅವು ಎಷ್ಟು ವ್ಯಾಪಕವಾಗಿದ್ದವೆಂದರೆ ಅವು ಈ ರಾಕ್ಷಸನನ್ನು ಸಂಹರಿಸುವ ಸಾಧ್ಯತೆಯನ್ನೇ ದೂರ ಮಾಡಿದ್ದವು. ಒಂದು ಕ್ಷಣವೂ ನಿಲ್ಲದೆ, ಕಿಂಚಿತ್ತೂ ದೋಷವಿಲ್ಲದೆ ಸುತ್ತುತ್ತಿರುವ ಅಸಂಖ್ಯ ಗ್ರಹಗಳಾಗಿ ರೂಪುಗೊಳ್ಳುವ ಶಕ್ತಿಯನ್ನು ಹೊಂದಿರುವ ವಿಷ್ಣುವು ಈಗ ಏನಾದರೂ ಪರಿಹಾರ ಕಂಡುಹಿಡಿಯಬೇಕಾಗಿತ್ತು. 


ಅತ್ಯಂತ ಶುಭ ದಿನವಾದ ವೈಶಾಖ ಶುಕ್ಲಪಕ್ಷ ಚತುದರ್ಶಿಯಂದು ಅಂತಹ ದಿವ್ಯ ಪರಿಹಾರವು ವ್ಯಕ್ತವಾಯಿತು. ವಿಷ್ಣುವಿನ ಅದ್ಭುತ ರೂಪವೊಂದು ಅಂದು ಭೂಮಿಯ ಮೇಲೆ ಅವತರಿಸಿತು. ಅರ್ಧ ಮಾನವ ಮತ್ತು ಅರ್ಧ ಸಿಂಗ ರೂಪದ ಭಗವಾನ್ ನೃಸಿಂಹನು ಹಿರಣ್ಯಕಶಿಪುವಿನ ಅರಮನೆಯ ಕಂಬದಿಂದ ಪ್ರತ್ಯಕ್ಷನಾದನು. ಭಾಗವತವು  ವರ್ಣಿಸುತ್ತದೆ (7.8.17): 


“ತನ್ನ ಸೇವಕನಾದ ಪ್ರಹ್ಲಾದ ಮಹಾರಾಜನ ಮಾತು ಸತ್ಯ ಎಂಬುದನ್ನು ತೋರಿಸಲು, ಬೇರೆ ಮಾತುಗಳಲ್ಲಿ ಹೇಳುವುದಾದರೆ, ಪರಮ ಪ್ರಭುವು ಎಲ್ಲೆಡೆಯಲ್ಲೂ, ಸಭಾಮಂಟಪದ ಕಂಬದಲ್ಲೂ ಇದ್ದಾನೆಂಬುದನ್ನು ತೋರಿಸಲು ದೇವೋತ್ತಮ ಪರಮ ಪುರುಷನಾದ ಹರಿಯು ಹಿಂದೆAದೂ ಕಂಡರಿಯದ ಅದ್ಭುತ ರೂಪವನ್ನು ಪ್ರದರ್ಶಿಸಿದನು. ಆ ರೂಪವು ಮನುಷ್ಯನದೂ ಆಗಿರಲಿಲ್ಲ. ಸಿಂಹದ್ದೂ ಆಗಿರಲಿಲ್ಲ. ಹೀಗೆ ಭಗವಂತನು ಸಭಾಮಂಟಪದಲ್ಲಿ ಅದ್ಭುತಾಕಾರದಲ್ಲಿ ಕಾಣಿಸಿಕೊಂಡನು. 


“ಆ ಆಕಾರವು ಅರ್ಧವ ಮಾನವ ಮತ್ತು ಅರ್ಧ ಸಿಂಹ, ನರಸಿಂಹನ ರೂಪವನ್ನು ಪಡೆದಿದ್ದ ಶ್ರೀವಿಷ್ಣು. ಭಯಾನಕ ಸರ್ಪವನ್ನು ಹದ್ದು ಕೊಲ್ಲುವಂತೆ ಅವನು ರಾಕ್ಷಸನನ್ನು ಸಂಹರಿಸಿದನು. ಅವನು ಬ್ರಹ್ಮನು ನೀಡಿದ್ದ ಯಾವುದೇ ವರವನ್ನು ಉಲ್ಲಂಘಿಸಲಿಲ್ಲ: ನರಸಿಂಹದೇವನು ಮಾನವನೂ ಆಗಿರಲಿಲ್ಲ. ಪ್ರಾಣಿಯೂ ಆಗಿರಲ್ಲಿಲ್ಲ. ರಾಕ್ಷಸನನ್ನು ಬಗೆಯಲು ಅವನು ಬಳಸಿದ್ದ ಉಗುರು ಆಯುಧವಲ್ಲ. ಹಗಲೂ ಅಲ್ಲ, ಇರುಳೂ ಅಲ್ಲದ ಸಂಜೆಯಲ್ಲಿ ಹಿರಣ್ಯಕಶಿಪುವಿನ ಸಂಹಾರವಾಯಿತು ಮತ್ತು ಅವನನ್ನು ಒಳಗೂ ಅಲ್ಲದ ಹೊರಗೂ ಅಲ್ಲದ ಅರಮನೆಯ ಹೊಸ್ತಿಲಲ್ಲಿ ಸಂಹರಿಸಲಾಯಿತು. 


ಸ್ವರ್ಗದಿಂದ ದೇವತೆಗಳ ಸಮೂಹವೇ ಪರಮಾನಂದದಿಂದ ಭಗವಂತನನ್ನು ಕೊಂಡಾಡಿ ಹಾಡತೊಡಗಿತು. ಪ್ರಭುವಿನ ಶ್ರೇಷ್ಠ ಭಕ್ತ ಪ್ರಹ್ಲಾದನು ಭಗವಂತನ ಪಾದ ಕಮಲದ ಬಳಿ ಕುಳಿತು ಈ ಸ್ತುತಿಯನ್ನು ಪಠಿಸಿದನು 


ಓಂ ನಮೋ ಭಗವತೇ ತುಭ್ಯಂ ಪುರುಷಾಯ ಮಹಾತ್ಮನೇ |

ಹರಯೇ$ದ್ಭುತಸಿಂಹಾಯ ಬ್ರಹ್ಮಣೇ ಪರಮಾತ್ಮನೇ ||

“ಹೇ ನನ್ನ ಪ್ರಭುವೇ ! ಷಡೈಶ್ವರ್ಯ ಪರಿಪೂರ್ಣನೆ ! ಹೇ ಪರಮ ಪುರುಷನೆ ! ಹೇ ವiಹಾತ್ಮನೇ ! ದುಃಖಹಾರಕನೆ ! ಅದ್ಭುತವಾದ ನರಸಿಂಹದೇವನ ರೂಪದಲ್ಲಿ ಪ್ರತ್ಯಕ್ಷನಾದ ಹೇ ಪರಮ ಪುರುಷನೇ ! ನಿನಗೆ ನಿನ್ನ ಗೌರವಪೂರ್ವಕ ನಮನಗಳು.” 

ಭಗವಾನ್ ನೃಸಿಂಹ ದೇವನು ಪ್ರಹ್ಲಾದ ಮತ್ತು ಅವನಂತಹ ಇತರರನ್ನು ಆಶೀರ್ವದಿಸಿದನು (ಭಾಗವತ 7.10.19) 


ಯತ್ರ ಯತ್ರ ಚ ಮದ್ ಭಕ್ತಾಃ ಪ್ರಶಾನ್ತಾಃ ಸಮದರ್ಶಿನಃ 

ಸಾಧವಃ ಸಮುದಾಚಾರಾಸ್ತೇ ಪೂಯನ್ತೇ ಅಪಿ ಕೀಕಟಾಃ 


“ಯಾವಾಗ ಮತ್ತು ಎಲ್ಲೆಲ್ಲಿ ಸದಾಚಾರ ಸಂಪನ್ನರೂ ಸುಶೀಲರೂ ಪ್ರಶಾಂತರೂ ಸಮದರ್ಶಿಗಳೂ ಆದ ಭಕ್ತರು ಇರುವರೋ, ಆ ಸ್ಥಳವೂ ಆ ವಂಶಗಳೂ, ದೂಷಿತವಾಗಿದ್ದರೂ ಸಹ ಪಾವನವಾಗುತ್ತವೆ.” 


ನೃಸಿಂಹ ಉಪಾಸನೆ 

ಶಾಸ್ತ್ರಗ್ರಂಥಗಳಲ್ಲಿ ಇಹಪರಗಳ ಶ್ರೇಯಸ್ಸಿಗೆ ಸಾಧಕವಾದ ಅನೇಕ ಉಪಾಸನೆಗಳನ್ನು ವಿಧಿಸಿದ್ದಾರೆ. ಮುಮುಕ್ಷಗಳಿಗೆ ಮೋಕ್ಷದ ಹೆದ್ದಾಗಿ ಸೂಚಿಸಬಲ್ಲ ಇಂತಹ ಉಪಾಸನೆಗಳಲ್ಲಿ ಶ್ರೀನೃಸಿಂಹೋಪಾಸನೆ ತುಂಬಾ ಮಹತ್ವದ್ದು. ನೃಸಿಂಹಪೂರ್ವತಾಪಿನೀ ಉಪನಿಷತ್ತಿನಲ್ಲಿ (5-8) ಆಶ್ರಮಗಳಲ್ಲಿ ಸಂನ್ಯಾಸಾಶ್ರಮ ಹಿರಿದೆಂದೂ, ರುದ್ರಾಧ್ಯಾಯವನ್ನು ಜಪಿಸುವವನು-ಯಾವುದೇ ಆಶ್ರಮದಲ್ಲಿರಲಿ-ನೂರು ಸಂನ್ಯಾಸಿಗಳಿಗೆ ಸಮನೆಂದೂ, ನೃಸಿಂಹನ ಉಪಾಸನೆ ಮಾಡುವವನು ಅಂತಹ ಹತ್ತು ಸಹಸ್ರ ಸಾಧಕರಿಗೆ ಸರಿಯೆಂದು ಅರ್ಥ ಕೊಡುವ ಒಂದು ವಾಕ್ಯವಿದೆ. ಪೂಜ್ಯ ಶಂಕರ ಭಗವತ್ಪಾದರು ತಮ್ಮ `ಲಕ್ಷ್ಮೀ ನೃಸಿಂಹ ಪಂಚರತ್ನ ಸ್ತೋತ್ರ’ದಲ್ಲಿ `ತ್ವತ್ಪçಭು ಜೀವಪ್ರಿಯಮಿಚ್ಛತಿ ಚೇತ್ ನರಹರಿಪೂಜಾಂ ಕುರು ಸತತಮ್’ (ನಿನಗೆ ಸ್ವಾಮಿಯಾದ ಜೀವನ ಸಂತೋಷವನ್ನು ಬಯಸುವುದಾದರೆ ಯಾವಾಗಲೂ ನೃಸಿಂಹನನ್ನು ಪೂಜಿಸು) ಎಂದು ಆದೇಶಿಸಿದ್ದಾರೆ. ಆಚಾರ್ಯ ಶಂಕರರ ಸಾಕ್ಷಾಚ್ಛಿಷ್ಯರಾದ ಪದ್ಮಪಾದರು ಶ್ರೀ ನೃಸಿಂಹೋ ಪಾಸನೆಯನ್ನು ಮಾಡುತ್ತಿದ್ದರೆಂದೂ, ಕಾಪಾಲಿಕರ ಕರಾಳ ಕೈಗಳಿಂದ ಬಿಡಿಸಿಕೊಳ್ಳುವುದಕ್ಕಾಗಿ ಅವರು ಸ್ವತಃ ನರಸಿಂಹನಾಗಿ ದುಷ್ಟಸಂಹಾರ ಮಾಡಿದರೆಂದೂ `ಮಾಧವೀಯ ಶಂಕರಾಚಾರ್ಯರೂ ತಮ್ಮ ಶರೀರವನ್ನು ಅಗ್ನಿಯ ಜ್ವಾಲೆಗೆ ಬಲಿಯಾದಾಗ ಲಕ್ಷ್ಮೀ ನೃಸಿಂಹ ಸ್ತೋತ್ರದಿಂದ ಪರಮಾತ್ಮನನ್ನು ಪ್ರಾರ್ಥಿಸಿ ಸ್ವಸ್ಥರಾದ ಸಂಗತಿಯು ಆನಂದಗಿರಿಯ ಶಂಕರವಿಜಯ (ಪು. 181)ದಲ್ಲಿ ಇದೆ. 


ಸಾಹಿತ್ಯದಲ್ಲಿ ನೃಸಿಂಹ 

ಸಂಸ್ಕೃತ ಸಾಹಿತ್ಯದಲ್ಲಿ ನೃಸಿಂಹನ ಕುರಿತಾದ ಉಲ್ಲೇಖಗಳು ಹೇರಳವಾಗಿದೆ. ಯಜುರ್ವೇದದ ಶ್ರೀರುದ್ರಧ್ಯಾಯದಲ್ಲಿ ಬರುವ `ಸ್ತುತಿ ಶ್ರುತಂ’ ಎಂಬ ಮಂತ್ರವು `ನೃಸಿಂಹನನ್ನು ಸ್ತುತಿಸು’ ಎಂದೇ ಆದೇಶಿಸುತ್ತದೆ. ತೈತ್ತರೀಯ ಶಾಖೆಯ ಅನೇಕ ಮಂತ್ರಗಳನ್ನು ಸಾಂಪ್ರದಾಯಿಕರಾದವರು ಶ್ರೀ ನೃಸಿಂಹಪರವಾಗಿಯೂ ಅರ್ಥೈಸುತ್ತಾರೆ. `ಶ್ರೀ ನೃಸಿಂಹ ತಾಪನೀಯೋಪಷತ್ತು’ ಇಂತಹ ಮಂತ್ರಗಳನ್ನು ಉಲ್ಲೇಖಿಸಿ, ನೃಸಿಂಹೋಪಾಸನೆಯ ಮಹತ್ವವನ್ನು ಸಾರುತ್ತದೆ. ಈ ಉಪನಿಷತ್ತಿಗೆ ಭಗವತ್ಪಾದರ ಭಾಷ್ಯವೂ, ಸುರೇಶ್ವರಾಚಾರ್ಯರ ವಾರ್ತಿಕವೂ ಇದ್ದು, ವಿದ್ಯಾರಣ್ಯರು-ಇದರ ವ್ಯಾಖ್ಯಾನವನ್ನು ಮುಂದುವರಿಸಿ, ಪ್ರಯೋಗಕ್ಕೆ ಅಣಿಗೊಳಿಸಿದ್ದಾರೆ. ನರಸಿಂಹಚಾರ್ಯ, ನರಸಿಂಹ ಚಿಂತಾಮಣಿ ಮುಂತಾದ ಹತ್ತಾರು ಗ್ರಂಥಗಳು ಈ ದಿಸೆಯಲ್ಲಿ ನಮಗೆ ಮಾರ್ಗದರ್ಶಕವಾಗಿವೆ. ಪುರಾಣಗಳಲ್ಲಿಯೂ, ಉಪಪುರಾಣಗಳಲ್ಲಿಯೂ, ಶ್ರೀ ನೃಸಿಂಹನ ಆವಿರ್ಭಾವ, ಮಹಾತ್ಮ್ಯ  ಮುಂತಾದವು ಕಂಡುಬರುತ್ತದೆ. ಮತ್ಸ್ಯ ಪುರಾಣ (ಉತ್ತರಾರ್ಧ: 161-163), ಶ್ರೀಮದ್ಭಾಗವತ (ಸ್ಕಂದ 2 ಅಧ್ಯಾಯ 8-10), ಬ್ರಹ್ಮ, ಪದ್ಮ, ವಿಷ್ಣು, ವಾಯು, ಮಾರ್ಕಂಡೇಯ, ಅಗ್ನಿ, ಕೂರ್ಮ, ಗರುಡ, ಬ್ರಹ್ಮಾಂಡ ಹೀಗೆ ಹನ್ನೊಂದು ಪುರಾಣಗಳಲ್ಲಿ ಶ್ರೀ ನೃಸಿಂಹನನ್ನು ಕುರಿತ ಅಧ್ಯಾಯಗಳಿವೆ. ಹದಿನೆಂಟು ಉಪಪುರಾಣಗಳಲ್ಲಿ ನರಸಿಂಹಪುರಾಣವೂ ಒಂದು. ಎಂಭತ್ತೆಂಟು ಅಧ್ಯಾಯಗಳ ಈ ಪುರಾಣವು ವಿಷ್ಣುವಿನ ಅವತಾರಗಳನ್ನೆಲ್ಲಾ ವರ್ಣಿಸುತ್ತಾ, ಶ್ರೀಮದ್ಭಾಗವತದಂತೆ ಸಾಂದರ್ಭಿಕವಾಗಿ ಅದು ಶ್ರೀ ನೃಸಿಂಹಾವತಾರವನ್ನೂ ವಿವರಿಸುತ್ತದೆ. ಇಲ್ಲಿ ಶ್ರೀಹರಿಯ 68 ಕ್ಷೇತ್ರಗಳನ್ನು ಹೆಸರಿಸಲಾಗಿದೆ. ಗಣಪತಿಯ ಮಹತ್ವವನ್ನು ಎತ್ತಿ ತೋರಿಸಲು ಪ್ರವೃತ್ತವಾದ ಮುದ್ಗಲ ಪುರಾಣದಲ್ಲೂ (ಖಂಡ 2, ಅಧ್ಯಾಯ 37) ಶ್ರೀ ನೃಸಿಂಹ ಮಹಾತ್ಮ್ಯಕ್ಕೆ ಒಂದು ಅಧ್ಯಾಯ ಮೀಸಲಾಗಿದೆ. 


ಶ್ರೀನೃಸಿಂಹನ ಅವತಾರವನ್ನು ವಸ್ತುವಾಗಿಟ್ಟುಕೊಂಡು ಕಾವ್ಯ ರಚನೆ ಮಾಡಿರುವವರೂ ಇದ್ದಾರೆ. `ನರಸಿಂಹ ವಿಜಯ ಚಂಪೂ’ ಎಂಬ ಸಂಸ್ಕೃತ ಕಾವ್ಯ ತಮಿಳುನಾಡಿನಲ್ಲಿ ಪ್ರಕಟವಾಗಿದೆ. `ಪ್ರಹ್ಲಾದ ಚರಿತ್ರ’ ಎಂಬ ಸಂಸ್ಕೃತ ರೂಪಕವನ್ನು ಉತ್ತರ ಕನ್ನಡದ ಸ್ವರ್ಣವಲ್ಲೀ ಮಠದವರು ಪ್ರಕಾಶಿಸಿದ್ದಾರೆ. ಅಖಿಲ ಕರ್ನಾಟಕ ಸಂಸ್ಕೃತ ಪರಿಷತ್ತಿನ ಕುಂದಾಪುರ-ಉಡುಪಿ ಶಾಖೆಗಳ ಆಶ್ರಯದಲ್ಲಿ ಕನರಾಡಿ ವಿಠಲ ಉಪಾಧ್ಯಾಯರ `ಪ್ರಹ್ಲಾದ ಚಂಪೂ’ ಎಂಬ ಕೃತಿ ಪ್ರಕಟವಾಗಿದೆ. ಈ ಎಲ್ಲಾ ಕಾವ್ಯಗಳಲ್ಲಿ ಶ್ರೀ ನೃಸಿಂಹನ ಮಹಿಮೆಗಳು ನಿರೂಪಿತವಾಗಿದೆ. 


ಉಪಾಸನೆಯ ಪ್ರಾಚೀನತೆ 

ಶ್ರೀನೃಸಿಂಹೋಪಾಸನೆಯ ಪ್ರಾಚೀನತೆಯ ಬಗ್ಗೆ ಎರಡು ವಿಧದ ಅಭಿಪ್ರಾಯಗಳನ್ನು ಉಲ್ಲೇಖಿಸಬಹುದು. ಒಂದು ಸಾಂಪ್ರದಾಯಿಕ; ಇನ್ನೊಂದು ಐತಿಹಾಸಿಕ. ಶ್ರೀನೃಸಿಂಹನ ಆವಿರ್ಭಾವವಾಗಿ ಹಿರಣ್ಯಕಶಿಪುವಿನ ಸಂಹಾರವಾದ ಮೇಲೂ, ಅವನು ಶಾಂತನಾಗಲೇ ಇಲ್ಲ. ಶ್ರೀ ನೃಸಿಂಹನನ್ನು ಸಮಾಧಾನಗೊಳಿಸಲು ದೇವತೆಗಳೂ, ಋಷಿಗಳೂ, ಇತರರೂ ಪ್ರಯತ್ನಿಸಿದರು. ಸೃಷ್ಟಿಕರ್ತನಾದ ಬ್ರಹ್ಮನು ಪ್ರಳಯಕಾಲದ ರುದ್ರನಮತೆ ಪ್ರಜ್ವಲಿಸುತ್ತಿರುವ ಪರಮಾತ್ಮನನ್ನು ಸಹಸ್ರನಾಮಗಳಿಂದ ಸ್ತುತಿಸಿದನು. ಅಲ್ಲಿಂದಲ್ಲೇ ಅಂದರೆ, ಆವಿರ್ಭಾವ ಕಾಲದ ತ್ರೇತಾಯುಗದ ಆದಿಭಾಗದಿಂದಲೇ-ಶ್ರೀ ನೃಸಿಂಹೋಪಾಸನೆಯು ಆರಂಭವಾಯಿತು. `ಉಪಾಸ್ಮಹೇ ನೃಸಿಂಹಾಖ್ಯA ಬ್ರಹ್ಮವೇದಾಂತ ಗೋಚರಮ್’ ಇದು ಸಾಂಪ್ರದಾಯಿಕ ಅಭಿಪ್ರಾಯ. 


ಆಧುನಿಕ ವಿದ್ವಾಂಸರು ನೃಸಿಂಹೋಪಾಸನೆಯ ಪ್ರಾಚೀನತೆಯ ಕುರಿತು ಐತಿಹಾಸಿಕ ದಾಖಲೆ-ಉಲ್ಲೇಖಗಳನ್ನು ಒದಗಿಸುತ್ತಾರೆ. ಸಾಲಿಗ್ರಾಮದ ಶ್ರೀಗುರು ನೃಸಿಂಹದೇವರು ಭಟ್ಟಾಚಾರ್ಯರಿಂದ ಸ್ಥಾಪನೆಗೊಂಡಿರುವುದು ಐತಿಹಾಸಿಕ ಸಂಗತಿ. ಭಟ್ಟಾಚಾರ್ಯರು ಆದಿ ಶಂಕರಾಚಾರ್ಯರ ಸಮಕಾಲೀನ ಎಂಬುದು ರೂಢಮೂಲವಾದ ನಂಬಿಕೆ. ಶ್ರೀ ಶಂಕರಾಚಾರ್ಯರ ಕಾಲ 8ನೆಯ ಶತಮಾನವೆಂಬುದು ಐತಿಹಾಸಿಕ ಆಧಾರಗಳಿಂದ ಸಿದ್ಧವಾಗಿದೆ. ಆದ್ದರಿಂದ ಸಾಲಿಗ್ರಾಮದ ಶ್ರೀಗುರುನೃಸಿಂಹನ ವಿಗ್ರಹದ ಸ್ಥಾಪನೆಯ ಕಾಲ ಕ್ರಿ.ಶ. ಎಂಟನೆಯ ಶತಮಾನವೆಂದು ಹೇಳಲಾಗಿದೆ. ಹಂಪೆಯ ಶ್ರೀ ನೃಸಿಂಹ ದೇವಾಲಯ ಕ್ರಿ.ಶ. 1378ಕ್ಕಿಂತ ಸ್ವಲ್ಪ ಹಿಂದಿನದು. ಅಲ್ಲಿರುವ ಲಕ್ಷ್ಮೀ ನೃಸಿಂಹಮೂರ್ತಿ ಕೃಷ್ಣದೇವರಾಯನ ಕಾಲದ್ದು. ಸೋಮನಾಥ ದೇವಾಲಯದಲ್ಲಿರುವ ಲಕ್ಷ್ಮೀ  ನೃಸಿಂಹ ಪ್ರತಿಮೆ ಕ್ರಿ.ಶ. 1268ರದು. ಬನವಾಸಿಯಲ್ಲಿರುವ ಮೂರ್ತಿ ಅಷ್ಟು ಹಳೆಯದಲ್ಲ. ಆದರೆ ಸಾಂಚಿ ಹಾಗೂ ಮಥುರಾದಲ್ಲಿ ಇರುವ ಪ್ರಾಕೃತ ಶಿಲಾಶಾಸನಗಳು (ಕ್ರಿ.ಪೂ. 2 ರಿಂದ ಕ್ರಿ.ಶ. 6-7ನೆಯ ಶತಮಾನದ ಒಳಗೆ) ಶ್ರೀ ನೃಸಿಂಹನನ್ನು ಉಲ್ಲೇಖಿಸಿವೆ. ಇದರಿಂದ ಶ್ರೀ ನೃಸಿಂಹೋಪಾಸನೆ ಕ್ರಿ.ಪೂ. 2ನೇ ಶತಮಾನಕ್ಕಿಂತ ಹಿಂದೆ ಇದ್ದಿತ್ತು-ಎನ್ನಲು ಇನ್ನಿತರ ಸಾಕ್ಷ್ಯಾಧಾರಗಳು ದೊರೆಯುವ ವರೆಗೆ ಅದನ್ನೇ ಗರಿಷ್ಠಮಿತಿ ಎಂದು ಅಂಗೀಕರಿಸಬಹುದು.  


ಸಂಸ್ಕೃತ ಗ್ರಂಥಗಳಲ್ಲಿ ಭಾಟ್ಟ ದೀಪಿಕೆ (17ನೇ ಶತಮಾನ), ಸರ್ವದರ್ಶನ ಸಂಗ್ರಹ (14ನೇ ಶತಮಾನ), ತತ್ವ ಪ್ರದೀಪಿಕಾ (13ನೇ ಶತಮಾನ), ಸುಭಾಷಿತಾವಲೀ (12ನೇ ಶತಮಾನ), ದ್ವನ್ಯಾಲೋಕ (10ನೇ ಶತಮಾನ), ಮಾಘ ಕಾವ್ಯ (9ನೇ ಶತಮಾನ), ಯೋಗಾವಾಸಿಷ್ಠ (6ನೇ ಶತಮಾನ)- ಮುಂತಾದವು ಶ್ರೀನೃಸಿಂಹನ ಬಗ್ಗೆ ತಿಳಿಸುತ್ತವೆ. ರಾಮಾಯಣ, ಮಹಾಭಾರತ-ಮುಂತಾದವುಗಳಲ್ಲಿ ಈ ಕುರಿತು ಪ್ರಮಾಣ ದೊರೆಯುತ್ತದೆಯಾದರೂ, ಕ್ರಿ.ಪೂ. 2ನೇ ಶತಮಾನಕ್ಕಿಂತ ಹಿಂದೆ ಈ ಉಪಾಸನೆಯು ಪ್ರಬಲವಾಗಿತ್ತು ಎನ್ನಲು ಸಾಕ್ಷಾö್ಯಧಾರಗಳು ಸಾಲದು. ನೃಸಿಂಹಪರವೆAದು ಹೇಳುವ ಮಂತ್ರಗಳು ಪ್ರಾಚೀನವಾದರೂ, ಅವುಗಳ ವ್ಯಾಖ್ಯಾನ ಆರ್ವಾಚೀನ ಎನ್ನಲು ಅವಕಾಶವಿದೆ. ನೃಸಿಂತಾತಾಪಿನೀ ಉಪನಿಷತ್ತು ಸಹ ಕೆಲವು ಅಂಶಗಳಲ್ಲಿ ಮಾಂಡೂಕ್ಯವನ್ನು ಹೋಲುವುದರಿಂದ ಪ್ರಾಚೀನವಿರಲಿಕ್ಕಿಲ್ಲ. ಭಗವತ್ಪಾದ ಶಂಕರರು ಇದಕ್ಕೆ ಭಾಷ್ಯ ಬರೆದಿದ್ದರೆಂಬ ಸಂಗತಿ ನಿರ್ವಿವಾದವೇನೂ ಅಲ್ಲ. 


ಅಭಿಪ್ರಾಯ ಭೇದವಿದ್ದರೂ, ಶ್ರೀನೃಸಿಂಹೋಪಾಸನೆ ದಕ್ಷಿಣದ ಕೇರಳದಿಂದ ಉತ್ತರದ ಕಾಶ್ಮೀರದ ವರೆಗೂ, ಪಶ್ಚಿಮ ಕಚ್ಛದಿಂದ ಪೂರ್ವದ ಕಾಮರೂಪದ ವರೆಗೂ ಸಮಗ್ರ ಭಾರತದಲ್ಲಿ ಎಲ್ಲೆಡೆಗೂ ಒಂದಲ್ಲೊಂದು ಕಾಲದಲ್ಲಿ ಒಂದು ವಿಶಿಷ್ಟ ಸಂಪ್ರದಾಯವನ್ನು ಅನುಸರಿಸಿ ನಡೆಯುತ್ತಾ ಬಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ. 


ನವ ನರಸಿಂಹನ ಗುಣವಿಶೇಷಣ 

ಪುರಾಣಗಳಲ್ಲಿ ಒಟ್ಟು 74 ಬಗೆಯ ನರಸಿಂಹ ಸ್ವಾಮಿಯ ಸ್ವರೂಪಗಳಿದ್ದರೂ ಒಂಬತ್ತು ಸ್ವರೂಪಗಳು ಪ್ರಸಿದ್ಧವಾಗಿವೆ. ಅವೆಂದರೆ ಉಗ್ರ ನರಸಿಂಹ, ಕ್ರೋಧ ನರಸಿಂಹ, ಜ್ವಾಲಾ ನರಸಿಂಹ, ವರಾಹ ನರಸಿಂಹ, ಕಾರಂಜ ನರಸಿಂಹ, ಯೋಗ ನರಸಿಂಹ ಮತ್ತು ಲಕ್ಷ್ಮೀ  ನರಸಿಂಹ. 

ಮಲ್ಲೋಲ ನರಸಿಂಹ : `ಮ’ ಎಂದರೆ ತಾಯಿ ಮಹಾಲಕ್ಷ್ಮೀ . ಲೋಲ ಎಂದರೆ ಪ್ರೀತಿಪಾತ್ರ. ಮಲ್ಲೋಲ ನರಸಿಂಹನ ತೊಡೆಯ ಮೇಲೆ ಮಹಾಲಕ್ಷ್ಮೀ ಯಿದ್ದಾಳೆ. 

ಜ್ವಾಲ ನರಸಿಂಹ : ಭೀಕರ ಸ್ವರೂಪನಾದ ನರಸಿಂಹ. ಎಂಟು ಕೈಗಳನ್ನು ಹೊಂದಿದ್ದಾನೆ. ಹಿರಣ್ಯಕಶಿಪುವಿನ ಕರುಳನ್ನು ಉಗುರಲ್ಲಿ ಬಗೆದು ಮಾಲೆಯಾಗಿ ಧರಿಸಿದ್ದಾನೆ. 

ವರಾಹ ನರಸಿಂಹ : ಶಾಂತ ನರಸಿಂಹನ ಸ್ವರೂಪವಿದು. ಲಕ್ಷ್ಮೀ ದೇವಿಯನ್ನು ತನ್ನ ಬದಿಯಲ್ಲಿ ಇರಿಸಿಕೊಂಡಿದ್ದಾನೆ. 

ಭಾರ್ಗವ ನರಸಿಂಹ : ಪರಶುರಾಮನನ್ನು ಆಶೀರ್ವದಿಸುವ ಸಲುವಾಗಿ ನರಸಿಂಹ ಸ್ವಾಮಿ ತಾಳಿದ ಅವತಾರವಿದು. ಉಗ್ರ ನರಸಿಂಹನ ಸ್ವರೂಪದಂತಿದೆ. 

ಕಾರಂಜ ನರಸಿಂಹ : ಕಾರಂಜ ವೃಕ್ಷ ಲಕ್ಷ್ಮೀ ದೇವಿಯ ಆವಾಸ ಸ್ಥಾನ. ಹನುವiನ ಭಕ್ತಿಗೆ ಮೆಚ್ಚಿ ಒಲಿದ ನರಸಿಂಹ ಸ್ವಾಮಿಯ ರೂಪವಿದು. ಕಾರಂಜ ನರಸಿಂಹ ರಾಮನ ರೂಪವನ್ನೇ ಹೋಲುತ್ತಾನೆ. ತನ್ನ ಕೈಯೊಳಗೆ ಬಿಲ್ಲು ಮತ್ತು ಬಾಣವನ್ನು ಇಟ್ಟುಕೊಂಡಿರುತ್ತಾನೆ. ಈತ ಸರ್ಪಭೂಷಣನಾಗಿದ್ದಾನೆ. 

ಯೋಗ ನರಸಿಂಹ : ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿರುವ ನರಸಿಂಹನೀತ. ಯೋಗಾಸನ ಭಂಗಿಯಲ್ಲಿದ್ದಾನೆ. 

ಲಕ್ಷ್ಮೀ ನರಸಿಂಹ : ಶಾಂತ ಸ್ವಭಾವದ ನರಸಿಂಹ ರೂಪ. ಈ ರೂಪದಲ್ಲಿ ನರಸಿಂಹ ಸ್ವಾಮಿಯೊಂದಿಗೆ ಸೇಂಜು ಲಕ್ಷ್ಮೀ ಇರುತ್ತಾಳೆ. ಸೇಂಜು ಲಕ್ಷ್ಮೀ  ಬುಡಕಟ್ಟು ಜನಾಂಗೀಯರ ಮನೆಯಲ್ಲಿ ಜನಿಸುತ್ತಾಳೆ. ಈ ಜನಾಂಗದವರು ಇಂದಿಗೂ ಲಕ್ಷ್ಮೀ ನರಸಿಂಹನನ್ನು ಆರಾಧಿಸುತ್ತಾರೆ.


ಚತುರ್ದಶ ಸಂಬಂಧ

ನರಸಿಂಹಾವತಾರವಾದದ್ದು ವೈಶಾಖ ಶುದ್ಧ ಚತುರ್ದಶಿಯಂದು. ಎಂದರೆ ಭಗವಂತ ಕಂಬವನ್ನೊಡೆದು ಹೊರಬಂದದ್ದು ವೈಶಾಖ ಮಾಸದ ಶುಕ್ಲ ಪಕ್ಷದ ಹದಿನಾಲ್ಕನೆಯ ದಿನದಲ್ಲಿ, ಸ್ವಾತೀ ನಕ್ಷತ್ರದ ಮುಸ್ಸಂಜೆಯಲಿ. 

ಅತಳವಿತಳವೇ ಮುಂತಾದ ಕೆಳಗಿನ ಏಳು ಲೋಕಗಳಲ್ಲೂ, ಭೂಲೋಕ ಭುವರ್ ಲೋಕ ಮುಂತಾದ ಮೇಲಿನ ಏಳು ಲೋಕ ಸೇರಿ ಹದಿನಾಲ್ಕು ಲೋಕಗಳಲ್ಲೂ ಭಗವಂತ ವ್ಯಾಪಿಸಿದ್ದಾನೆ ಎಂಬ ಸಂದೇಶವಿದೆ. 


ನಮ್ಮ ದೇಹದ ಚತುರ್ದಶ ಇಂದ್ರಿಯಗಳಲ್ಲಿ (ಐದು ಕರ್ಮೇಂದ್ರಿಯಗಳು, ಐದು ಜ್ಞಾನೇಂದ್ರಿಯಗಳು, ಅಂತಃಕರಣ ಚತುಷ್ಟಯಗಳು) ಚೇತನ ಸಂಚಾರವಾಗುವುದೇ ನರಸಿಂಹ ತತ್ವ. 

ನರಸಿಂಹನ ಉಪಾಸನೆಯಲ್ಲಿ ಹನ್ನೊಂದು ದುಷ್ಟ ಗುಣಗಳನ್ನು (ಇವು ಹಿರಣ್ಯ ಕಶಿಪುವಿನ ಗುಣಗಳು) ಅವನ ಪದತಲಕ್ಕೆ ಸಮರ್ಪಿಸಿ ಬಿಟ್ಟು ಬಿಡಬೇಕು. (ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಡಂಭ, ದರ್ಪ, ಅಹಂಕಾರ, ನೀಚತನ, ಮೇಲರಿಮೆ) ವಿನಯ, ಶ್ರದ್ಧೆ, ಭಕ್ತಿ ಈ ಮೂರು ಪ್ರಹ್ಲಾದನ ಗುಣಗಳನ್ನು ತಾಳಿಕೊಳ್ಳಬೇಕು. ಒಟ್ಟು ಹದಿನಾಲ್ಕು ಗುಣಗಳು. 

(ವಿವಿಧ ಮೂಲಗಳಿಂದ)

- ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಬೆಂಗಳೂರು 

ಸಂಸ್ಕೃತಿ ಚಿಂತಕರು

9739369621




  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top