ಮೇ 22 : ಜೀವ ವೈವಿಧ್ಯತಾ ಅಂತರರಾಷ್ಟ್ರೀಯ ದಿನದ ನಿಮಿತ್ತ
ಬ್ರಹ್ಮಾಂಡದಲ್ಲಿ ಮಹಾಸ್ಫೋಟದ ಮೂಲಕ ಕಾಲಾಂತರದಲ್ಲಿ ಭೂಮಿ ಸೃಷ್ಟಿಯಾಯಿತು ಎಂದು ತಿಳಿದಿದ್ದೇವೆ. ಭೂಮಿಯ ಮೇಲಿನ ನೀರು, ಗಾಳಿ, ಉಷ್ಣಾಂಶ, ಮಣ್ಣು, ಆಹಾರ, ವಾಸಸ್ಥಳ ಎಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ವಿಶೇಷವೇ ಆಗಿವೆ. ಭೂಮಿಯ ಮೇಲಿನ ಜೀವಿಗಳಂತೂ ವೈಶಿಷ್ಟ್ಯತೆಯಲ್ಲಿ ವೈಶಿಷ್ಟ್ಯತೆಯನ್ನು ಪಡೆದಿವೆ. ಬರೀ ವೈಶಿಷ್ಟ್ಯತೆ ಮಾತ್ರವಲ್ಲ, ವೈವಿಧ್ಯತೆಯನ್ನೂ ಕಾಣಬಹುದು. ಸೂಕ್ಷ್ಮಾಣು ಜೀವಿಗಳಿಂದ ಹಿಡಿದು ದೈತ್ಯಕಾರದ ಪ್ರಾಣಿಗಳವರೆಗೂ ವಿಭಿನ್ನ ಪ್ರಭೇಧಗಳಲ್ಲಿ ಪ್ರಾಣಿಗಳನ್ನು ನೋಡಬಹುದಾಗಿದೆ. ಏಕಕೋಶ ಜೀವಿಗಳು, ಬಹುಕೋಶ ಜೀವಿಗಳು, ಸಸ್ಯ ಸಂಕುಲ , ಪ್ರಾಣಿ ಸಂಕುಲಗಳು ಗಾಳಿಯಲ್ಲಿ ಹಾರಾಡುವ ಚಿಟ್ಟೆ ಹಾಗೂ ಪಕ್ಷಿಗಳಿಂದ ಹಿಡಿದು ನೀರಿನಲ್ಲಿರುವ ಚಿಕ್ಕ ಮೀನುಗಳು, ತಿಮಿಂಗಿಲಗಳು ಇವೆ. ಭೂಮಿಯನ್ನೇ ಆಳಿದಂತಹ ದೈತ್ಯಾಕಾರದ ಸರಿಸೃಪ, ಡೈನೋಸಾರ್ಗಳು, ಆನೆಗಳು, ಮಂಗಗಳು, ಮಾನವರು ಹೀಗೆ ಎಲ್ಲಾ ಜೀವರಾಶಿಗಳು ಹಂತ ಹಂತವಾಗಿ ಭೂಮಿಯ ಮೇಲೆ ವಿಕಾಸ ಹೊಂದಿವೆ. ಭೂಮಿಯ ಮೇಲೆ ಅಸಂಖ್ಯಾತ ಜೀವಿಗಳು, ವಿವಿಧ ವರ್ಗಗಳ ಸೂಕ್ಷ್ಮಾಣುಗಳು, ಸಸ್ಯಗಳು, ಪ್ರಾಣಿಗಳು ಬಗೆಬಗೆಯ ರೂಪದಲ್ಲಿ ವೈವಿಧ್ಯಮಯ ಜೀವರಾಶಿಗಳು ಸಹಸ್ರಾರು ವರ್ಷಗಳಿಂದ ರಕ್ಷಣೆ ಪಡೆದು ಪ್ರಕೃತಿಯ ಪ್ರೋತ್ಸಾಹದಿಂದ ಬದುಕುತ್ತಿವೆ. ಈ ಪರಿಸರದಲ್ಲಿ ಭೂಮಿಯ ಮೇಲಿರುವ ಗಾಳಿಯಲ್ಲಿ, ನೀರಿನಲ್ಲಿ, ಪೃಥ್ವಿಯ ಮೇಲೆ ಹೀಗೆ ಎಲ್ಲಾ ಕಡೆ ವಾಸವಾಗಿರುವ ಸೂಕ್ಷ್ಮಾಣು ಜೀವಿಗಳು , ಸಸ್ಯಗಳ , ಪ್ರಾಣಿಗಳ , ಕೀಟಗಳ , ಪಕ್ಷಿಗಳ ವಿವಿಧತೆ ಮತ್ತು ವಿವಿಧ ವರ್ಗಗಳ ವೈವಿಧ್ಯತೆಯನ್ನು ಜೀವವೈವಿಧ್ಯತೆ ಎಂದು ಹೇಳಲಾಗುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಈ ಪ್ರಕೃತಿಯಲ್ಲಿನ ವಿವಿಧ ಜೀವರಾಶಿಗಳಾದ ವಾಯು ಮಂಡಲದ ಜೀವರಾಶಿಗಳು , ಜಲಮಂಡಲದ ಜೀವರಾಶಿಗಳು , ಭೂಮಂಡಲದ ಜೀವರಾಶಿಗಳು ಮತ್ತು ಜೀವರಾಶಿಗಳಲ್ಲಿರುವ ವಿವಿಧ ಬಗೆಯ ಸಸ್ಯವರ್ಗಗಳು , ಕೀಟ ವರ್ಗಗಳು , ಸೂಕ್ಷ್ಮಾಣು ಜೀವಿಗಳು , ಪ್ರಾಣಿವರ್ಗಗಳು ಅವುಗಳ ವಿವಿಧತೆಯನ್ನು ಜೀವ ವೈವಿಧ್ಯತೆ ಎನ್ನಲಾಗುತ್ತದೆ
ಜೀವವೈವಿಧ್ಯ ಎಂಬುದು ಒಂದು ನಿರ್ದಿಷ್ಟ ಪರಿಸರ ವ್ಯವಸ್ಥೆಯೊಳಗೆ ಅಥವಾ ಇಡೀ ಭೂಮಿಯಲ್ಲಿರುವ ಜೀವಸಂಕುಲಗಳ ಹಲವು ರೂಪಗಳ ಏರಿಳಿತ. ಜೀವವೈವಿಧ್ಯ ನಿಸರ್ಗ ವ್ಯವಸ್ಥೆಯ ಆರೋಗ್ಯದ ಮಾನದಂಡವಾಗಿಯೂ ಬಳಸಲಾಗಿದೆ. ಸುಮಾರು 3.5 ಶತಕೋಟಿ ವರ್ಷಗಳ ವಿಕಸನದ ಫಲವಾಗಿ ಇಂದು ಭೂಮಿಯಲ್ಲಿ ಕಂಡುಬರುವ ಜೀವವೈವಿಧ್ಯದಲ್ಲಿ ದಶಲಕ್ಷಗಳಷ್ಟು ವಿವಿಧ ಜೈವಿಕ ಪ್ರಭೇಧಗಳಿವೆ ಎಂದು ಅಧ್ಯಯನಗಳಿಂದ ತಿಳಿದು ಬರುತ್ತದೆ. ಭೂಮಂಡಲದಲ್ಲಿನ ಎಲ್ಲಾ ಸ್ತರಗಳಲ್ಲಿ ಜಲಚರ , ಭೂಚರ , ವಾಯುವಲಯ , ಕಾಡು , ಮರುಭೂಮಿ ಸಮುದ್ರ ಹೀಗೆ ಎಲ್ಲಾ ಬಗೆಯ ಪರಿಸರ ವ್ಯವಸ್ಥೆಯಲ್ಲಿ ಸೂಕ್ಷ್ಮಾಣು ಜೀವಿಗಳಿಂದ ಹಿಡಿದು , ಏಕಕೋಶ , ಬಹುಕೋಶ , ಅಕಶೇರುಕ ಮತ್ತು ಕಶೇರುಕ ಜೀವಿಗಳಲ್ಲಿ ಗಾತ್ರ , ಬಣ್ಣ , ಪ್ರಭೇದ , ಹೀಗೆ ಅನೇಕ ರೀತಿಯ ವೈವಿಧ್ಯತೆಯನ್ನು ಕಾಣಬಹುದು. ಜೀವ ವೈವಿಧ್ಯತೆಯು ಮಾನವನ ಉಳುವಿಗೆ, ಸಾಮಾಜಿಕ ಬದುಕಿಗೆ, ಧಾರ್ಮಿಕ ಆಚರಣೆಗೆ, ಮನೋಲ್ಲಾಸಕ್ಕಾಗಿ ಸೌಂದರ್ಯದಾಯಕ ತಾಣಗಳಾಗಿ ಪ್ರಮುಖ ಪಾತ್ರವಹಿಸುತ್ತದೆ. ಅಭಯಾರಣ್ಯಗಳು , ನಿತ್ಯ ಹರಿದ್ವರ್ಣ ಕಾಡುಗಳು , ಬಗೆ ಬಗೆಯ ಸಸ್ಯಗಳ ರಾಶಿ, ಅಲ್ಲಿ ವಾಸಿಸುವ ಪ್ರಾಣಿ ಪಕ್ಷಿಗಳು ರಮಣೀಯ ತಾಣಗಳಾಗಿ ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಭೂಮಿ ನಮಗೆ ವಾಸದ ಮನೆಯಾಗಿರುವಂತೆ ವಿವಿಧ ಪ್ರಾಣಿ- ಪಕ್ಷಿ ಮತ್ತು ಸಸ್ಯ ಸಂಕುಲಗಳಿಗೂ ವಾಸದ ಮನೆಯಾಗಿದೆ. ಆದರೆ ಬುದ್ಧಿಜೀವಿ ಮಾನವ ಮಾತ್ರ ತನ್ನ ಸ್ವಂತ ಬಳಕೆಗೆ ಎಲ್ಲವನ್ನೂ ಬಳಸಿಕೊಂಡು ಪ್ರಕೃತಿಯ ಮೇಲೆ ತನ್ನ ಪ್ರಭಾವ ಬೀರುತ್ತಾ ವಿವಿಧ ಪ್ರಬೇಧಗಳ ಅವನತಿಗೆ ಕಾರಣನಾಗಿದ್ದಾನೆ. ಇದನ್ನರಿತು ''ಇನ್ನಾದರೂ ನಮ್ಮ ಜೀವವೈವಿಧ್ಯವನ್ನು ಅರ್ಥ ಮಾಡಿಕೊಂಡು ಅದನ್ನು ಉಳಿಸಲು ಪಣ ತೊಡದಿದ್ದರೆ ಮಾನವನೂ ಸರ್ವನಾಶವಾಗುವ ದಿನ ದೂರವಿಲ್ಲ,'' ಎಂದು ವಿಶ್ವ ಆರೋಗ್ಯ ಸಂಸ್ಥೆ ಆಗಾಗ್ಗೆ ಎಚ್ಚರಿಸುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಜೀವ ವೈವಿಧ್ಯ ದಿನವನ್ನು ಗುರುತಿಸಿ ಆಚರಿಸಲಾಗುತ್ತದೆ. 1992 ರಲ್ಲಿ ಬ್ರೆಜಿಲ್ನ ರಿಯೊ -ಡಿ- ಜನೈರೊ ದಲ್ಲಿ ನಡೆದ ಭೂಮಿಯ ಶೃಂಗಸಭೆ ಎಂದೂ ಕರೆಯಲ್ಪಡುವ ಪರಿಸರ ಮತ್ತು ಅಭಿವೃದ್ಧಿಯ ವಿಶ್ವಸಂಸ್ಥೆಯ ಸಮ್ಮೇಳನದ ಇತಿಹಾಸದಲ್ಲಿ ಜೈವಿಕ ವೈವಿಧ್ಯತೆಯ ಅಂತರರಾಷ್ಟ್ರೀಯ ದಿನವು ತನ್ನ ಬೇರುಗಳನ್ನು ಹೊಂದಿದೆ. ಈ ಸಮ್ಮೇಳನದಲ್ಲಿ, ವಿವಿಧ ವಿಶ್ವ ನಾಯಕರು ಜೀವ ವೈವಿಧ್ಯತೆ ಸಂರಕ್ಷಣೆಯ ತುರ್ತುಸ್ಥಿತಿ ಯನ್ನು ಗುರುತಿಸಿದರು. ಜಾಗತಿಕವಾಗಿ ಕುಸಿಯುತ್ತಿರುವ ಜೀವವೈವಿಧ್ಯತೆಯನ್ನು ಪರಿಹರಿಸಬೇಕಾಗಿದೆ. ಆದ್ದರಿಂದ, ಹಲವಾರು ದೇಶಗಳು ಮೇ 22, 1992 ರಂದು ಜೈವಿಕ ವೈವಿಧ್ಯತೆಯ ಸಮಾವೇಶವನ್ನು ಅಳವಡಿಸಿಕೊಂಡು ಜೈವಿಕ ವೈವಿಧ್ಯತೆಯ ಸಂರಕ್ಷಣೆಗೆ ಮುಂದಾದವು. ಜೀವವೈವಿಧ್ಯದ ಸಂರಕ್ಷಣೆ ಮತ್ತು ಜೀವವೈವಿಧ್ಯತೆಯನ್ನು ಪುನರ್ನಿರ್ಮಾಣ ಮಾಡುವ ಬದ್ಧತೆಗಳನ್ನು ಉತ್ತೇಜಿಸುವ ಸಲುವಾಗಿ ಪ್ರತಿವರ್ಷ ಮೇ 22 ರಂದು ಪ್ರಪಂಚದ ವಿವಿಧ ಭಾಗಗಳಲ್ಲಿ ಇದನ್ನು ಜೈವಿಕ ವೈವಿಧ್ಯತೆಗಾಗಿ ಅಂತರರಾಷ್ಟೀಯ ದಿನವನ್ನು ಆಚರಿಸಲಾಗುತ್ತದೆ. ಜೀವ ವೈವಿಧ್ಯ ದಿನವನ್ನು 1993ರ ಡಿಸೆಂಬರ್ನಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ಇದೀಗ ಮೂವತ್ತೊಂದು ವರ್ಷಗಳಿಂದ ಈ ದಿನವನ್ನು ಆಚರಿಸಲಾಗುತ್ತಿದ್ದು, ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಜೀವ ವೈವಿಧ್ಯ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಸಂಕಲ್ಪ ಮಾಡಲಾಗುತ್ತಿದೆ.
ವಿಶ್ವ ಸಂಸ್ಥೆಯು ವಿಶ್ವ ಜೈವಿಕ ವೈವಿಧ್ಯತೆಯ ದಿನಾಚರಣೆಯ ಸಂದರ್ಭದಲ್ಲಿ ಪ್ರತೀ ವರ್ಷ ಒಂದು ಘೋಷವಾಕ್ಯವನ್ನು ನೀಡಿ, ವಿಶ್ವದ ಎಲ್ಲಾ ರಾಷ್ಟ್ರಗಳು ವಿಶ್ವ ಜೀವ ವೈವಿಧ್ಯ ದಿನವನ್ನು ಆಚರಿಸಲು ಸೂಚಿಸುತ್ತದೆ. 2024 ರ ಜೀವವೈವಿಧ್ಯ ದಿನದ ಥೀಮ್ : "ಯೋಜನೆಯ ಭಾಗವಾಗಿರಿ " [ BE PART OF THE PLAN ] ಎಂಬುದಾಗಿದೆ. ಈ ಘೋಷಾ ವಾಕ್ಯವು ಮೂಲಭೂತವಾಗಿ ಪರಿಸರದ ಸಂರಕ್ಷಣೆಯನ್ನೇ ಉದ್ದೇಶವಾಗಿಟ್ಟುಕೊಂಡು ಮಾಡಿದಂತಿದೆ. ಪರಿಸರ ಸಂರಕ್ಷಣೆಯನ್ನು ಯೋಜನೆಗಳ ಮೂಲಕ ಕಾರ್ಯಾಚರಣೆಯನ್ನು ರೂಪಿಸಿ ಅದರಂತೆ ವಿಶ್ವದ ಎಲ್ಲಾ ಜನರು ಅದರಲ್ಲಿ ಭಾಗವಹಿಸುವ ಮೂಲಕ ಅದರ ಒಂದು ಭಾಗವಾಗಿ ಇರುವಂತೆ ಆಯೋಜಿಸುವುದಾಗಿದೆ. ಆ ಮೂಲಕ ಎಲ್ಲಾ ಪ್ರಭೇಧಗಳ ಜೀವಿಗಳೂ ಸಂರಕ್ಷಿಸಲ್ಪಡುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.
ಅಂತೆಯೇ ವಿಶ್ವ ಜೈವಿಕ ವೈವಿಧ್ಯತೆಯ ದಿನದ 2023 ರ ಘೋಷವಾಕ್ಯವನ್ನು ವಿಶ್ವ ಸಂಸ್ಥೆಯು ನೀಡಿತ್ತು. ಏನೆಂದರೆ : “ ಒಪ್ಪಂದದಿಂದ ಕ್ರಿಯೆಗೆ : ಜೀವವೈವಿಧ್ಯತೆಯನ್ನು ಮರಳಿ ನಿರ್ಮಿಸಿ [ FROM AGREEMENT TO ACTION : BUILD BACK BIODIVERSITY ] ಎಂಬುದಾಗಿತ್ತು.
ಜೀವ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ರವರು ಉಳಿವಿಗಾಗಿ ಹೋರಾಟ ಸಿದ್ಧಾಂತದಂತೆ ಯಾವ ಜೀವಿಯು ಕಾಲ ಕಾಲಕ್ಕೆ ಬದಲಾವಣೆ ಆಗುವ ಪರಿಸರಕ್ಕೆ ಹೊಂದಿಕೊಳ್ಳುವ ಗುಣಧರ್ಮಗಳನ್ನು ಪಡೆದು ಪರಿಸರದೊಂದಿಗೆ ಹೊಂದಿಕೊಂಡು ವಂಶಾಭಿವೃದ್ಧಿ ಮಾಡುತ್ತದೆಯೋ ಅಂತಹ ಜೀವಿಗಳು ಬದುಕುಳಿಯಲು ಸಾಧ್ಯ ಮತ್ತು ಅವುಗಳನ್ನು ನಿಸರ್ಗವು ಆಯ್ಕೆ ಮಾಡಿ ತಮ್ಮ ವಂಶ ಮುಂದುವರಿಯಲು ಸಹಾಯಮಾಡುತ್ತದೆ . ಒಂದು ಕಾಲದಲ್ಲಿದ್ದ ಅದೆಷ್ಟೋ ಪಕ್ಷಿ ಪ್ರಭೇಧಗಳು ಇಂದು ಇಲ್ಲವಾಗಿದೆ. ಒಂದು ಕಾಲದಲ್ಲಿದ್ದ ಅದೆಷ್ಟೋ ಪ್ರಾಣಿ ಪ್ರಬೇಧಗಳು ಇಂದು ನಾಶವಾಗಿವೆ. ಒಂದು ಕಾಲದಲ್ಲಿದ್ದ ಅದೆಷ್ಟೋ ಸಸ್ಯ ಸಂಕುಲಗಳು ಇಂದು ಕಾಣುತ್ತಿಲ್ಲ. ಎಲ್ಲವೂ ವಿನಾಶ ಹೊಂದಿವೆ ಮತ್ತು ವಿನಾಶದ ಅಂಚಿಗೂ ಬಂದಿವೆ. ಕಾಡು ಪ್ರಾಣಿಗಳ ಮತ್ತು ಮರಗಳ ಮಾರಣ ಹೋಮ ವೇ ನಡೆದಿದೆ. ಇದಕ್ಕೆಲ್ಲಾ ಕಾರಣವನ್ನು ಯೋಚಿಸುತ್ತಾ ಹೋದರೆ ನಮಗೆ ಮೊದಲು ತಿಳಿಯುವ ಅಂಶವೆಂದರೆ ನಿಸರ್ಗದ ಮೇಲೆ ಮಾನವನು ನಡೆಸುತ್ತಿರುವ ಚಟುವಟಿಕೆಗಳು. ಮಾನವನ ಆಸೆಗಳು ಅಪರಿಮಿತ. ಅವಕ್ಕೆ ಕೊನೆ ಎಂಬುದೇ ಇಲ್ಲ. ಅವುಗಳನ್ನು ಈಡೇರಿಸು ನಿಟ್ಟಿನಲ್ಲಿ ಪ್ರಕೃತಿಯ ಮೇಲೆ ತನ್ನ ಅಟ್ಟಹಾಸವನ್ನು ಮೆರೆದ ಮಾನವನು ಇಂದು ಜೀವ ಪ್ರಭೇಧಗಳ ವಿನಾಶಕ್ಕೆ ಕಾರಣನಾಗಿದ್ದಾನೆ. ಮಾನವನ ನಿತ್ಯ ಚಟುವಟಿಕೆಗಳಾದ ಗಣಿಗಾರಿಕೆ, ಮರ ಕೊಯ್ಯುವಿಕೆ, ರಸ್ತೆಗಳ ನಿರ್ಮಾಣ, ಬೃಹತ್ ಕೈಗಾರಿಕೆಗಳ ನಿರ್ಮಾಣ, ಅಂತರ್ಜಲದ ಅನಿಯಮಿತ ಬಳಕೆ, ಬೃಹತ್ ಕಟ್ಟಡಗಳ ನಿರ್ಮಾಣ, ನಗರೀಕರಣ ಮುಂತಾದ ಅಂಶಗಳು ಜೈವಿಕ ವೈವಿಧ್ಯತೆಯ ಉಳಿಯುವಿಕೆಗೆ ಕುತ್ತು ತಂದಿವೆ. ಜೈವಿಕ ವೈವಿಧ್ಯತೆಯ ಸಂರಕ್ಷಣೆ ಮತ್ತು ವಿಶ್ವದ ಉಳಿವಿಗೆ ಅವುಗಳ ಅಗತ್ಯತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಸಂಸ್ಥೆಯು ಮುನ್ನುಡಿಯಾಗಿ ಬರೆದು ಗುರುತಿಸಿ ಚಾಲನೆ ಮಾಡಿದ ದಿನವೇ ಜೀವ ವೈವಿಧ್ಯತೆಗಾಗಿ ಒಂದು ಅಂತರರಾಷ್ಟೀಯ ದಿನವಾಗಿದೆ.
ಜೀವ ವೈವಿಧ್ಯತೆಯ ಅಂತರ ರಾಷ್ಟ್ರೀಯ ದಿನವನ್ನು ಆಚರಿಸುವುದು ಹೇಗೆ :
* ಪ್ರಪಂಚದಾದ್ಯಂತ ಜೀವವೈವಿಧ್ಯತೆಯ ಬಗ್ಗೆ ಜಾಗೃತಿ ಮತ್ತು ಜ್ಞಾನವನ್ನು ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳು ಮತ್ತು ಸೆಮಿನಾರ್ಗಳನ್ನು ಆಯೋಜಿಸಲಾಗುತ್ತದೆ. ಆ ಮೂಲಕ ಆಚರಣೆ ಮಾಡಲಾಗುತ್ತದೆ.
* ಸಾಧ್ಯವಿರುವಷ್ಟುಮಟ್ಟಿಗೆ ಅವಕಾಶವಿರುವ ಜಾಗದಲ್ಲಿ ಗಿಡಮರಗಳನ್ನು ಬೆಳೆಸಿ ಪೋಷಿಸುವುದು. ಆ ಮೂಲಕ ಪರಿಸರ ಸಂರಕ್ಷಣೆ ಮಾಡುವುದು. ಅಳಿವಿನಂಚಿನಲ್ಲಿ ರುವ ಸಸ್ಯ, ಪ್ರಾಣಿ, ಪಕ್ಷಿ ಪ್ರಬೇಧಗಳನ್ನು ಸಂರಕ್ಷಿಸುವುದು.
* ಮರಗಳನ್ನು ಕಡಿದ ಸ್ಥಳದಲ್ಲಿ ಹೊಸ ಗಿಡವನ್ನು ನೆಟ್ಟು ಬೆಳೆಸುವುದು. ಸ್ಥಳಾವಕಾಶ ಹೆಚ್ಚು ಇರುವ ಕಡೆ ಮೀಸಲು ಅರಣ್ಯಗಳನ್ನು ಬೆಳೆಸುವುದು.
* ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು. ಅವಕಾಶವಿದ್ದರೆ ಪ್ಲಾಸ್ಟಿಕ್ ಬಳಕೆಯನ್ನು ಪರಿಪೂರ್ಣವಾಗಿ ನಿಷೇಧಿಸುವುದು.
* ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕ ರಲ್ಲಿ ಜನಜಾಗೃತಿ ಮೂಡಿಸುವುದು. ಆ ಮೂಲಕ ಜೀವ ವೈವಿಧ್ಯ ಸಂರಕ್ಷಣೆಯ ಜಾಗೃತಿ ಮೂಡಿಸುವುದು.
* ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪಠ್ಯ ಬೋಧನೆಯ ಸಂದರ್ಭದಲ್ಲಿ ಪ್ರಾಸಂಗಿಕವಾಗಿ ಜೀವ ವೈವಿಧ್ಯ ಸಂರಕ್ಷಣೆಯ ವಿಚಾರಗಳ ಕುರಿತು ಅರಿವು ಮೂಡಿಸುವುದು.
* ಮೊಬೈಲ್ ಗಳ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುವುದು. ಇದರ ಪರಿಣಾಮ ಮತ್ತು ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸುವುದು.
* ಶಾಲಾ, ಕಾಲೇಜು, ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳಿಂದ ಭೂಮಿ, ನೀರು, ಗಾಳಿ, ಮಣ್ಣು, ಅರಣ್ಯ, ಜೀವ ಪ್ರಬೇಧಗಳ ಸಂರಕ್ಷಣೆ ಮುಂತಾದ ಪ್ರಾಕೃತಿಕ ವಿಷಯಗಳ ಸಂಬಂಧ ಜಾಗೃತಿ ಮೂಡಿಸುವ ಸಲುವಾಗಿ ಜಾಥಾ ಕಾರ್ಯಕ್ರಮ, ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಭಾಷಣ ಸ್ಪರ್ಧೆ, ಬೀದಿ ನಾಟಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಜನ ಜಾಗೃತಿ ಮೂಡಿಸುವುದು.
* ವಿಶ್ವ ರಾಷ್ಟ್ರಗಳ ಸರ್ಕಾರಗಳು ಈಗಾಗಲೇ ಜಾರಿಗೆ ತಂದಿರುವ ಜೀವ ವೈವಿಧ್ಯ ಸಂರಕ್ಷಣಾ ಕಾನೂನು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಪಾಲನೆ ಮಾಡುವುದು.
* ಪ್ರಾಕೃತಿಕ ಸಂಪನ್ಮೂಲಗಳನ್ನು ಮತ್ತು ಜೀವ ವೈವಿಧ್ಯಗಳನ್ನು ಸಂರಕ್ಷಿಸುವಲ್ಲಿ ಗೀತರಚನೆ , ನಾಟಕ ರಚನೆ , ಚರ್ಚಾಸ್ಪರ್ಧೆ , ವಿಚಾರ ಸಂಕಿರಣಗಳಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಿ ಜಾಗೃತಿ ಮೂಡಿಸಲು ಅವಕಾಶ ಕಲ್ಪಿಸುವುದು.
* ವಿಶ್ವ ರಾಷ್ಟ್ರಗಳ ಸರ್ಕಾರಗಳು ಪರಿಸರ ಪೂರಕ ಚಟುವಟಿಕೆಗಳನ್ನು ನಿರ್ವಹಣೆ ಮಾಡುತ್ತಿರುವವರನ್ನು ಗುರ್ತಿಸಿ ಪ್ರಶಂಸಿಸಿ ಆರ್ಥಿಕ ಉತ್ತೇಜನವನ್ನು ನೀಡುವುದು.
ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಪ್ರಕೃತಿಯ ಒಡನಾಟದಲ್ಲಿ ಬೆಳೆಸುವುದು ಒಳಿತು. ಇದರಿಂದ ಅವರಲ್ಲಿ ಜೀವ ವೈವಿಧ್ಯತೆಯನ್ನು ಪ್ರೀತಿಸುವ ಮತ್ತು ಪೋಷಿಸುವ ಮನೋಭಾವ ಬೆಳೆಯುತ್ತದೆ. ನಗರ ಪ್ರದೇಶ ಮತ್ತು ಗ್ರಾಮಗಳಲ್ಲಿರುವವರು ಜೀವ ವೈವಿಧ್ಯತೆಯ ಮಹತ್ವವನ್ನು ತಿಳಿದುಕೊಂಡರೆ ಜೀವ ವೈವಿಧ್ಯ ಸಂರಕ್ಷಣಾ ಕಾರ್ಯ ಸುಲಭ ಸಾಧ್ಯ. ವನ್ಯಮೃಗ ಧಾಮಗಳು, ಅಭಯಾರಣ್ಯಗಳು ಜೀವ ವೈವಿಧ್ಯಗಳ ಸಂರಕ್ಷಣೆಗೆ ಸಹಕಾರಿಯಾಗಿವೆ. ಕಾಡು ಉಳಿದರೆ ಮಾತ್ರ ನಾಡು ಉಳಿಯುತ್ತದೆ ಹಾಗೆಯೇ ಜೀವ ವೈವಿಧ್ಯತೆಯ ಉಳಿವೂ ಸಹ ಅಷ್ಟೇ ಮುಖ್ಯ ಎಂಬುದನ್ನು ಮೊದಲು ಅರಿತು ನಡೆಯಬೇಕಿದೆ. ಜೀವ ವೈವಿಧ್ಯ ಸಂರಕ್ಷಣೆ ನಮ್ಮ ಮನೋಧರ್ಮವಾಗಬೇಕು. ಈ ಕಾರಣದಿಂದಾಗಿ ದಿನಾಚರಣೆಗಳು ಕೇವಲ ಆಚರಣೆಗಳಿಗಷ್ಟೇ ಸೀಮಿತವಾಗದೆ ಪ್ರತಿಯೊಂದು ದಿನವನ್ನು ಜೀವ ವೈವಿಧ್ಯ ಸಂರಕ್ಷಣಾ ದಿನವೆಂದೇ ಭಾವಿಸಿ ಜೀವಿ ಪ್ರಬೇಧಗಳನ್ನು ಸಂರಕ್ಷಿಸೋಣ. ವಿಶ್ವ ಪರಿಸರ ದಿನಾಚರಣೆ, ವಿಶ್ವ ಭೂ ದಿನ, ವಿಶ್ವ ಜಲ ದಿನ , ವಿಶ್ವ ಅರಣ್ಯ ದಿನಗಳಂದು ಸಸಿಗಳನ್ನು ನೆಟ್ಟು, ನೀರೆರೆದು, ಪೋಷಿಸಿ ಬೆಳೆಸುವಂತೆ ಅರ್ಥಪೂರ್ಣವಾಗಿ ಆಚರಿಸೋಣ. ವಿಭಿನ್ನ ಜೀವ ಪ್ರಬೇಧಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಸಾರುತ್ತಾ ಎಲ್ಲರಲ್ಲೂ ಜಾಗೃತಿ ಮೂಡಿಸೋಣ.
-ಡಾ|| ಕೆ.ಎನ್. ಚಿದಾನಂದ . ಹಾಸನ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ