ಶಕ್ತಿ ಪೂರ್ವ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟನೆ, ಡಾ. ಶಶಿಕಿರಣ್ ಶೆಟ್ಟಿ ಶಿಷ್ಯ ವೇತನ ಬಿಡುಗಡೆ

Upayuktha
0

ಮಂಗಳೂರು: ಪ್ರಸ್ತುತ ಸಮಾಜದಲ್ಲಿ ಹಣಕ್ಕಾಗಿ ಮನುಷ್ಯತ್ವ ಮರೆಯಾಗುತ್ತಿರುವುದು ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳಿಗೆ ಹಣಕ್ಕಿಂತ ಸದ್ಗುಣ ಮುಖ್ಯ ಎಂಬುದನ್ನು ಕಲಿಸಿ ರಾಷ್ಟ್ರದ ಆಸ್ತಿಗಳನ್ನಾಗಿಸುವ ಕೆಲಸ ಶಕ್ತಿ ಶಿಕ್ಷಣ ಸಂಸ್ಥೆಯಿಂದ ಆಗುತ್ತಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಹೇಳಿದರು.


ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟನೆ ಹಾಗೂ ಡಾ.ಶಶಿಕಿರಣ್ ಶೆಟ್ಟಿ ಶಿಷ್ಯ ವೇತನ ಬಿಡುಗಡೆ ಕಾರ್ಯಕ್ರಮದಲ್ಲಿ ಗುರುವಾರ (ಮೇ 30) ಆರ್ಥಿಕವಾಗಿ ಹಿಂದುಳಿದ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ವಿತರಿಸಿ ಮಾತನಾಡಿದರು.


 ರಾಜರ ಕಾಲದಲ್ಲಿ ಒಳ್ಳೆಯ ಕೆಲಸ ಮಾಡಿದಾಗ ಮಾತಿನಿಂದ ಪುರಸ್ಕರಿಸುವ ಪದ್ಧತಿ ಇತ್ತು. ಈಗ ವ್ಯವಸ್ಥೆ ಬದಲಾಗಿದೆ. ಮಾತಿಗೆ ಮೌಲ್ಯ ಕಡಿಮೆಯಾಗಿ ಹಣಕ್ಕೆ ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಮೂಲಕ ಪ್ರೋತ್ಸಾಹವಷ್ಟೆ. ಹಣಕ್ಕಿಂತ ಉತ್ತಮ ಗುಣ ಮುಖ್ಯ ಎಂಬುದನ್ನು ಎಳವೆಯಿಂದಲೇ ಮಕ್ಕಳಿಗೆ ಮನದಟ್ಟು ಮಾಡಬೇಕು ಎಂದರು.



ಕಾರ್ಕಳ ಜ್ಞಾನಸುಧಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಅವರು ಶಕ್ತಿ ಪೂರ್ವ ಪ್ರಾಥಮಿಕ ಶಾಲಾ ಕಟ್ಟಡವನ್ನು ಉದ್ಘಾಟಿಸಿದರು. ಶಾಲೆಯ ಸಂಸ್ಥಾಪಕ ಡಾ. ಕೆ.ಸಿ. ನಾಯ್ಕ್ ಅವರು ಸಮಾಜದ ಉನ್ನತಿಗಾಗಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಪ್ರಜ್ವಲಿಸಲು ಕಾರಣರಾಗಿದ್ದಾರೆ. ಶಿಕ್ಷಕ ವೃಂದ, ಆಡಳಿತ ಮಂಡಳಿಯೊಂದಿಗೆ ಜತೆಗೂಡಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಸಂಘಟಿತವಾಗಿ ಶ್ರಮಿಸಿದಾಗ ಶಿಕ್ಷಣ ಸಂಸ್ಥೆ ಉತ್ತಮ ಫಲಿತಾಂಶ ಪಡೆದು ಗುರುತಿಸಿಕೊಳ್ಳಲು ಸಾಧ್ಯ ಎಂದರು.


ಶಕ್ತಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಸಂಜಿತ್ ನಾಯ್ಕ್‌ ಅಧ್ಯಕ್ಷತೆ ವಹಿಸಿದ್ದರು. ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಭಾರತೀಯ ಕಲೆ, ಸಂಸ್ಕೃತಿಗೆ ಒತ್ತು ನೀಡುವ ಮೂಲಕ ಜೀವನ ಮೌಲ್ಯ ಕಲಿಕೆಗೆ ಒತ್ತು ನೀಡಲಾಗುತ್ತಿದೆ. ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ರಾಜ್ಯದಾದ್ಯಂತ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗಿದೆ ಎಂದರು.


ಶಕ್ತಿ ಎಜುಕೇಶನ್ ಟ್ರಸ್ಟ್ ಪ್ರಧಾನ ಸಲಹೆಗಾರ ರಮೇಶ್ ಕೆ. ಸ್ವಾಗತಿಸಿ, ಪ್ರಸ್ತಾವನೆಗೈದರು. 20 ಸಾವಿರ ಚದರ ಅಡಿಯ ಪೂರ್ವ ಪ್ರಾಥಮಿಕ ಶಾಲಾ ಕಟ್ಟಡ 7 ತಿಂಗಳ ಒಳಗಾಗಿ ನಿರ್ಮಾಣಗೊಂಡಿದ್ದು, ಅಲ್ಲಿ 256 ಕಂಪ್ಯೂಟರ್‌ಗಳನ್ನು ಅಳವಡಿಸಿ, ವಿದ್ಯಾರ್ಥಿಗಳಿಗೆ ಕಲಿಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಉದ್ಯಮಿ ಡಾ.ಶಶಿಕಿರಣ ಶೆಟ್ಟಿ ಅವರು 10 ಲಕ್ಷ ರೂ. ಶಿಷ್ಯ ವೇತನ ನೀಡಿದ್ದು, ಅದಕ್ಕೆ ಶಕ್ತಿ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ 179 ವಿದ್ಯಾರ್ಥಿಗಳಿಗೆ 70,83,000 ಮೊತ್ತವನ್ನು ಸೇರಿಸಿ ಒಟ್ಟು ರೂ.80,83,000 ಶಿಷ್ಯ ವೇತನವನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದೆ ಎಂದರು.


ಶಕ್ತಿ ಎಜುಕೇಶನ್ ಟ್ರಸ್ಟ್ ಸಂಸ್ಥಾಪಕರಾದ ಡಾ.ಕೆ.ಸಿ. ನಾಯ್ಕ್‌, ಟ್ರಸ್ಟಿ ಸಗುಣ ಸಿ. ನಾಯ್ಕ್‌, ಉದ್ಯಮಿ ಡಾ.ಶಶಿಕಿರಣ ಶೆಟ್ಟಿ ಅವರ ತಾಯಿ ಸುಶೀಲ ಜನಾರ್ದನ ಶೆಟ್ಟಿ, ಟ್ರಸ್ಟಿ ಡಾ.ಮುರಳೀಧರ ನಾಯಕ್, ಶಕ್ತಿ ಪ.ಪೂ.ಕಾಲೇಜು ಪ್ರಾಂಶುಪಾಲ ವೆಂಕಟೇಶ ಮೂರ್ತಿ ಎಚ್ ಉಪಸ್ಥಿತರಿದ್ದರು.


ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ವಂದಿಸಿದರು. ಶಿಕ್ಷಕಿ ಚೇತನಾ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಆರಂಭದಲ್ಲಿ ವಿದ್ಯಾರ್ಥಿನಿ ಮಾನ್ಯ ಆರ್.ಶೆಟ್ಟಿ ಅವರು ಭರತನಾಟ್ಯ ಪ್ರಸ್ತುತಿ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಭಿಜ್ಞಾ ಪ್ರಾರ್ಥಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top