ಎಂ.ಆರ್.ಪಿ.ಎಲ್- ಮಣಿಪಾಲ್ ನೇತ್ರ ಸಂಜೀವಿನಿ ಕಾರ್ಯಕ್ರಮ ಉದ್ಘಾಟನೆ
ಮಂಗಳೂರು: ಗ್ರಾಮೀಣ ಪ್ರದೇಶದ ಜನರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಬೇಕಾಗಿದೆ ಎಂದು ಮಾಹೆ ಪರಿಗಣಿತ ವಿಶ್ವವಿದ್ಯಾನಿಲಯದ ಸಹ ಕುಲಪತಿ ಡಾ.ಎಚ್.ಎಸ್. ಬಲ್ಲಾಳ್ ತಿಳಿಸಿದ್ದಾರೆ.
ಅವರು ಶನಿವಾರ ಕಟೀಲು ದುರ್ಗಾ ಸಂಜೀವಿನಿ ಮಣಿಪಾಲ್ ಅಸ್ಪತ್ರೆಯಲ್ಲಿ ಎಂ.ಆರ್.ಪಿ.ಎಲ್ ಮಣಿಪಾಲ ನೇತ್ರ ಸಂಜೀವಿನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ,ದುರ್ಗಾ ಸಂಜೀವಿನಿ ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ವ್ಯವಸ್ಥೆಯನ್ನು ಹೊಂದಿರುವ ಆಸ್ಪತ್ರೆಯಾಗಿದೆ, ಕಟೀಲು ಸುರೇಶ್ ರಾಯರ ಕನಸಿನಂತೆ ಈ ಅಸ್ಪತ್ರೆ ನಿರ್ಮಾಣವಾಗಿದೆ ಎಂದು ಡಾ ಎಚ್.ಎಸ್ ಬಲ್ಲಾಳ್ ಹೇಳಿದರು.
ಮಿತ ದರದಲ್ಲಿ ಈ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಗ್ರಾಮೀಣ ಪ್ರದೇಶದ ಬಡಜನರಿಗೆ ಈ ಅಸ್ಪತ್ರೆ ಅತ್ಯಂತ ಅನುಕೂಲವಾಗಿದೆ, ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆಯನ್ನು ಮನೆ ಮನೆಗೆ ತಲುಪಿಸುವ ಗುರಿ ಇದೆ. ಎಂಆರ್ಪಿಎಲ್ ಸಹಕಾರದಿಂದ ಇದೀಗ ರೋಗಿಗಳಿಗೆ ಉನ್ನತ ಗುಣಮಟ್ಟದ ಕಣ್ಣಿನ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಮತ್ತು ಸೇವೆಯನ್ನು ನೀಡುವಂತಾಗುತ್ತಿದೆ ಎಂದರು.
ದುರ್ಗಾ ಸಂಜೀವಿನಿ ಮಣಿಪಾಲ್ ಅಸ್ಪತ್ರೆಯ ಸ್ಥಾಪಕ ಸಂಚಾಲಕ ಸುರೇಶ್ ರಾವ್ ಮಾತನಾಡಿ ಕಟೀಲಿನ ದೇವಳದ ವತಿಯಿಂದ ವಿದ್ಯಾದಾನ, ಅನ್ನದಾನ ಸಿಗುತ್ತಿದೆ, ಉತ್ತಮ ಆರೋಗ್ಯ ಸೇವೆಗಾಗಿ ಮಂಗಳೂರುನಂತಹ ಮಹಾನಗರಕ್ಕೆ ಹೋಗಬೇಕು ಈ ಸಮಸ್ಯೆಯ ಪರಿಹಾರಕ್ಕೆ ಕಟೀಲಿನಲ್ಲಿ ದುರ್ಗಾಸಂಜೀವಿನಿ ಮಣಿಪಾಲ್ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ. ಸುತ್ತಮುತ್ತಲ ಸುಮಾರು 30 ಹಳ್ಳಿಗಳಿಗೆ ಮುಖ್ಯವಾಗಿ ಅನುಕೂಲವಾಗುವಂತೆ ಅಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ ಎಂದರು.
ಎಂ.ಆರ್.ಪಿ ಎಲ್ ನ ಜಿಜಿಎಂ ಕೃಷ್ಣ ಹೆಗ್ಡೆ ಮಾತನಾಡಿ, ನಮ್ಮ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಸಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ, ಶಿಕ್ಷಣ ಆರೋಗ್ಯ, ಸಂಸ್ಕ್ರತಿ ಕಲೆ ಹೀಗೆ ಎಲ್ಲಾ ಕ್ಷೇತ್ರಗಳಿಗೂ ಸಹಕಾರ ನೀಡಿದೆ, ಕಟೀಲು ದುರ್ಗಾ ಸಂಜೀವಿನೀ ಆಸ್ಪತ್ರೆಗೆ ಕಣ್ಣಿನ ಚಿಕಿತ್ಸೆಗೆ ಸಂಬಂಧಿಸಿದ ಯಂತ್ರವನ್ನು ನೀಡಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಎಂ.ಆರ್.ಪಿ.ಎಲ್ ನ ಕೃಷ್ಣ ಹೆಗ್ಡೆಯವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಡಾ ಶಿವಾನಂದ ಪ್ರಭು, ಡಾ. ಉನ್ನಿಕೃಷ್ಣನ್, ಡಾ ಆನಂದ್ ವೇಣುಗೋಪಾಲ್, ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರು ಗುತ್ತು ಮತ್ತಿತರರು ಉಪಸ್ಥಿತರಿದ್ದರು. ಕಟೀಲು ದೇವಳದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ ಆಶೀರ್ವಚನ ನೀಡಿದರು. ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ