ಎಸ್.ಡಿ.ಎಂ ಕಾಲೇಜಿನಲ್ಲಿ ಕುವೆಂಪು ಕುರಿತ ರಾಜ್ಯಮಟ್ಟದ ವಿಚಾರಸಂಕಿರಣ
ಉಜಿರೆ: ಮನುಷ್ಯ ಕೇಂದ್ರಿತ ಸೀಮಿತ ಯೋಚನಾ ಲಹರಿಯಿಂದ ಹೊರಬಂದು ಜೀವಕೇಂದ್ರಿತವಾಗಿ ಯೋಚಿಸಲು ಕುವೆಂಪು ಅವರ ಸಾಹಿತ್ಯ ಪ್ರೇರಣೆ ನೀಡುತ್ತದೆ ಎಂದು ಲೇಖಕಿ, ಹೊಳೆಹೊನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾದ್ಯಾಪಕಿ ಡಾ. ಭಾರತೀದೇವಿ ಪಿ. ಹೇಳಿದರು.
ಉಜಿರೆ ಶ್ರೀ. ಧ.ಮಂ.ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ಸಹಯೋಗದಲ್ಲಿ ʼಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನʼ ಕುರಿತು ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಧಾನ ಉಪನ್ಯಾಸ ನೀಡಿ ಮಾತನಾಡಿದರು.
ಕುವೆಂಪು ಅವರ ವ್ಯಾಪ್ತಿ ಸಾಹಿತ್ಯ ವಲಯವನ್ನೂ ಮೀರಿ ಬದುಕಿನ ಎಲ್ಲಾ ಸ್ತರಗಳಿಗೆ ಆವರಿಸಿದೆ. ರಾಜಕೀಯ, ಸಾಮಾಜಿಕ, ಆಧ್ಯಾತ್ಮಿಕ ಹೀಗೆ ಹತ್ತು ಹಲವು ವಿಷಯಗಳಲ್ಲಿ ಕುವೆಂಪು ಅವರನ್ನು ಕಾಣಬಹುದು. ಅವರು ಕೇವಲ ಸಾಹಿತಿಯಷ್ಟೇ ಅಲ್ಲದೇ ಸಾಂಸ್ಕೃತಿಕ ರಾಯಭಾರಿಯೂ ಹೌದು.ಪ್ರಪಂಚದಲ್ಲಿನ ದೌರ್ಜನ್ಯ , ಕೆಡುಕುಗಳನ್ನು ವಿರೋಧಿಸಿ ಪ್ರತಿಭಟಿಸುವಲ್ಲಿ ಕುವೆಂಪು ಸಾಹಿತ್ಯ ನಮಗೆ ನೆರವಾಗುತ್ತದೆ. ವೈಜ್ಞಾನಿಕತೆ, ವೈಚಾರಿಕತೆ, ವಿಚಾರಕ್ರಾಂತಿ, ವಿಜ್ಞಾನ ಬುದ್ಧಿಯಿಂದ ನಿರಂಕುಶಮತಿಗಳಾಗಿ ಎದೆಯ ಧ್ವನಿಗೆ ಕಿವಿಕೊಟ್ಟು ನೊಂದವರ ಕಣ್ಣೊರೆಸಲು ಕುವೆಂಪುರವರ ಸಾಹಿತ್ಯ ನಮಗೆ ಮಾರ್ಗದರ್ಶನವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಪ್ರಜಾಪ್ರಭುತ್ವ ಎನ್ನುವುದು ಕೇವಲ ಆಡಳಿತ ಕ್ರಮವಲ್ಲದೇ ಚಿಂತನೆ ಮತ್ತು ತಾತ್ವಿಕತೆಯಾಗಿದೆ ಎನ್ನುವುದು ಕುವೆಂಪುರವರ ನಿಲುವಾಗಿತ್ತು.ಅಭಿಪ್ರಾಯ ಭೇದವಿದ್ದವರ ಜೊತೆಗೂ ಸಮನ್ವಯತೆಯಿಂದ ಬದುಕಲು ನಮ್ಮನ್ನು ಬಂಧಿಸಿರುವ ಮತ - ಮೌಢ್ಯಗಳನ್ನು ಮೀರಿ ನಿರಂಕುಶಮತಿಗಳಾಗಬೇಕು ಎನ್ನುವ ವಿಚಾರಗಳನ್ನು ಅವರ ಕೃತಿಗಳಲ್ಲಿ ಕಾಣಬಹುದಾಗಿದೆ. ಮತ ಭ್ರಾಂತಿಯಾಚೆಗಿನ , ಸಮಾಜದಲ್ಲಿರುವ ಕೇಡನ್ನು ತೊಲಗಿಸುವ ಮೊದಲು ನಮ್ಮೊಳಗಿನ ಕಲ್ಮಶಗಳನ್ನು ತೆಗೆದು ಹಾಕುವ ಆಧ್ಯಾತ್ಮದಿಂದ ಮಾತ್ರ ಸುಧಾರಣೆ ಸಾಧ್ಯ ಎಂದರು.
ಕುವೆಂಪುರವರ ಸರ್ವೋದಯ, ಸಮನ್ವಯ ಮೌಲ್ಯಗಳು ಭಾರತದ ಸಂವಿಧಾನದ ಸಮಾಜವಾದಿ, ಜಾತ್ಯತೀತ ತತ್ವಗಳನ್ನು ಒಳಗೊಂಡಿದೆ. ಎಲ್ಲವನ್ನೂ ಓದಿಕೊಂಡು ಬುದ್ಧಿಯನ್ನು ಒರೆಗೆ ಹಚ್ಚಿ ಸತ್ಯವನ್ನು ತಿಳಿದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲ ಬಿ. ಎ. ಕುಮಾರ ಹೆಗ್ಡೆ ಮಾತನಾಡಿದರು. ವಿದ್ಯಾರ್ಥಿಗಳು ಕುವೆಂಪು ಅವರ ಮಾತಿನಂತೆ ಯಾವುದೇ ಪೂರ್ವಾಗ್ರಹಗಳಿಲ್ಲದೆ ಸಂಪರ್ಕಕ್ಕೆ ಸಿಗುವ ಎಲ್ಲಾ ಗ್ರಂಥಗಳನ್ನು ಅಧ್ಯಯನ ಮಾಡಿ, ಅವರ ದರ್ಶನವನ್ನು ಅವರೇ ಕಂಡುಕೊಳ್ಳಬೇಕು. ಕುವೆಂಪುರವರ ಬರಹಗಳು ವೈಜ್ಞಾನಿಕ ಚಿಂತನೆಯನ್ನು ಮೂಡಿಸಿ ವಿಶ್ವಪ್ರಜೆಯಾಗಲು ಸ್ಫೂರ್ತಿ ನೀಡುತ್ತವೆ. ಯುವಜನರಿಗೆ ತಮ್ಮ ಸಾಹಿತ್ಯದ ಮೂಲಕ ಸ್ಪಷ್ಟ ಮಾರ್ಗದರ್ಶನ ನೀಡಿರುವ ಕುವೆಂಪು ಅವರು ಎಲ್ಲಾ ಕಾಲಕ್ಕೂ ಪ್ರಸ್ತುತ ಎಂದು ಅಭಿಪ್ರಾಯಪಟ್ಟರು.
ವಿಚಾರ ಸಂಕಿರಣವನ್ನು ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಮೂಡಬಿದ್ರೆಯ ಆಡಳಿತ ನಿರ್ದೇಶಕ ಡಾ. ಬಿ.ಪಿ. ಸಂಪತ್ ಕುಮಾರ ಉದ್ಘಾಟಿಸಿದರು. ಕಾರ್ಯಕ್ರಮ ನಡೆಯಲು ಕಾರಣವಾಗಿರುವ ಕಾಲೇಜಿನ ಕನ್ನಡ ವಿಭಾಗ ಹಾಗೂ ಕುವೆಂಪು ಪ್ರತಿಷ್ಠಾನದ ಒಡನಾಟವನ್ನು ಸ್ಮರಿಸಿದ ಅವರು ವಿದ್ಯಾರ್ಥಿಗಳು ಕುವೆಂಪು ವಿಚಾರ, ಮೌಲ್ಯಗಳನ್ನು ಅರಿಯದು ಇದು ಸಹಕಾರಿಯಾಗಿದೆ ಎಂದರು.
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಪ್ರತಿಷ್ಠಾನದ ಸದಸ್ಯ ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕ ದಯಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀವಿದ್ಯಾ ಐತಾಳ್ ರಾಮಾಯಣ ದರ್ಶನಂ ಗಮಕ ವಾಚನ, ಮದನ್ಎಂ, ವೈದೇಹಿ, ನವನೀತ್ದಾಮ್ಲೆ ಕುವೆಂಪು ಗೀತಾ ಗಾಯನ ಮಾಡಿದರು. ಮಾಧವಿ ಎನ್.ಎಸ್ ಅವರಿಂದ ಜಲಗಾರ ನಾಟಕದ ಏಕವ್ಯಕ್ತಿ ದೃಶ್ಯ ಪ್ರದರ್ಶನ ಹಾಗೂ ಕುವೆಂಪು ಗೀತೆಗಳ ನೃತ್ಯ ರೂಪಕವು ಐಚ್ಛಿಕ ಕನ್ನಡ ವಿದ್ಯಾರ್ಥಿಗಳಿಂದ ನಡೆಯಿತು. ಕುವೆಂಪು ವಿಚಾರಗಳ ಕುರಿತಾಗಿ ಸುಚೇತಾ ಹೆಗಡೆ ಮತ್ತು ಜಿ.ಎಂ ಸಂಜಯ್ಪ್ರಬಂಧ ಮಂಡಿಸಿದರು.ಪ್ರಾಧ್ಯಾಪಕ ಡಾ.ದಿವಾಕರ ಕೊಕ್ಕಡ ನಿರೂಪಿಸಿದರು. ವಿದ್ಯಾರ್ಥಿಗಳಾದ ವೈದೇಹಿ ಹಾಗು ಪೂರ್ವಿ ದಾಮ್ಲೆ ಪ್ರಾರ್ಥಿಸಿದರು. ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಭೋಜಮ್ಮ ಸ್ಟಾಗತಿಸಿ, ಡಾ. ರಾಜಶೇಖರ್ ಹಳೆಮನೆ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ