- ಡಾ.ಪ್ರತಾಪ ಎಸ್. ಕುಲಕರ್ಣಿ
16ನೇ ಶತಮಾನದಲ್ಲಿ ಜೀವಿಸಿದ್ದ ಸಂತ ಏಕನಾಥರು ಸಂಸ್ಕೃತದಲ್ಲಿ ಬಂಧಿತವಾದ ಕಾವ್ಯ ಪುರಾಣಗಳನ್ನು ಜನಭಾಷೆಯಲ್ಲಿ ಒಡಮೂಡಿಸುವ ಅವಶ್ಯಕತೆ ಮನಗಂಡಿದ್ದರು. ಉತ್ತಮ ಧಾರ್ಮಿಕ ಕಾವ್ಯದಿಂದ ಜನ ವಿಮುಖರಾಗುವುದು ಅವರಿಗೆ ಹಿಡಿಸದಾಯಿತು. ತಮ್ಮ ಜೀವಿತದ ಕೊನೆಯಲ್ಲಿ ಭಾವಾರ್ಥ ರಾಮಾಯಣ ಬರೆದು ತಮ್ಮ ಜೀವನ ಧನ್ಯಗೊಳಿಸಿದರು. ಅದಕ್ಕಿಂತ ಹೆಚ್ಚಾಗಿ ಧಾರ್ಮಿಕ ಮನಸ್ಸುಗಳ ಕಲ್ಮಶ ದೂರ ಮಾಡಿದರು ಎಂದೇ ಹೇಳಬೇಕಿದೆ. ವಾಲ್ಮೀಕಿ ಕೃತ ಮೂಲ ಸಂಸ್ಕೃತ ರಾಮಾಯಣವನ್ನು ದೇಶ ಭಾಷೆಯಲ್ಲಿ ತರುವಾಗ ಮೂಲದ ಸೊಬಗನ್ನು ಸ್ವಲ್ಪವೂ ಬಿಡದೆ, ಜೊತೆಗೆ ಸಮಕಾಲೀನ ಪರಿಸ್ಥಿತಿಗೆ ಹೊಂದಿಕೆಯಾಗುವಂತೆ ತಿಳಿಯಾಗಿ ಬರೆಯುವ ಅವಶ್ಯಕತೆ ತುಂಬಾ ಇತ್ತು.
ಸಂತ ಏಕನಾಥರು ಮಹಾರಾಷ್ಟ್ರದ ಶ್ರೋತ್ರಿಯ ಕುಟುಂಬದಲ್ಲಿ ಪೈಠಣ ಎಂಬಲ್ಲಿ ಜನಿಸಿದರು. ಅವರ ಕಾರ್ಯಕಾಲ 1533-1599. ಪರಧರ್ಮೀಯರ ಆಕ್ರಮಣದಿಂದ ಕ್ಷೀಣವಾಗುತ್ತಿರುವ ಧರ್ಮಪ್ರಜ್ಞೆಯನ್ನು ಜಾಗೃತಗೊಳಿಸಲು ಅವರು ಅನೇಕ ಮಾರ್ಗಗಳನ್ನು ಬಳಸಿದರು.
ಉತ್ಪನ್ನಾ ದ್ರಾವಿಡೇ ಸಾಹಂ ! ವೃದ್ಧಿ ಕರ್ಣಾಟಕೇ ಗತಾ !
ಕ್ವಚಿತ್ ಕ್ವಚಿತ್ ಮಹಾರಾಷ್ಟ್ರೇ ! ಗುರ್ಜರೇ ಜೀರ್ಣತಾಂ ಗತಾ!
ಭಾಗವತ ಅಥವಾ ವೈಷ್ಣವ ಭಕ್ತಿ ಚಳುವಳಿ ಪ್ರಾರಂಭವಾದದ್ದು ದ್ರಾವಿಡ ದೇಶದಲ್ಲಿ. ಕರ್ನಾಟಕದಲ್ಲಿ ಅದು ಪರಿಪುಷ್ಟವಾಗಿ ವೃದ್ಧಿಯನ್ನು ಪಡೆಯಿತು. ಮಹಾರಾಷ್ಟ್ರದಲ್ಲಿ ಅದು ಅಲ್ಲಲ್ಲಿ ತನ್ನ ಪ್ರಭಾವ ತೋರಿಸಿ ಗುಜರಾತದಲ್ಲಿ ಕ್ಷೀಣ ಸ್ವರೊಪ್ಪಕ್ಕೆ ತಿರುಗಿ ವಿಲೀನವಾಯಿತು ಎಂಬ ಈ ಮೇಲಿನ ಸಾಲು ವೈಷಂವ ಧರ್ಮದ ಮಾರ್ಗಕ್ರಮವನ್ನು ಸೂತ್ರಬದ್ಧವಾಗಿ ತಿಳಿ ಹೇಳುತ್ತದೆ. ಸಂತ ಏಕನಾಥರು ಮರಾಠಿ ಭಾಷೆಯಲ್ಲಿ ಬರೆದದ್ದು ಈ ಭಾಗವತ ಪರಿಕ್ರಮದ ಭಾಗವಾಗಿಯೇ ಎನ್ನುವುದು ಸುಳ್ಳಲ್ಲ.
ವಿಜಯನಗರ ಸಾಮ್ರಾಜ್ಯದ ಪತನ ಆಗಿತ್ತು. ಅನ್ಯ ಧರ್ಮಿಯರ ಸ್ತ್ರೀಲಂಪಟತನ, ಕಪಟ, ಕ್ರೌರ್ಯ ಇತ್ತ್ಯಾದಿ ಅವರ ಕಾಲದಲ್ಲಿ ಮಾಮೂಲು ಆಗಿದ್ದವು. ಧರ್ಮಾಂತರದ ಬೆದರಿಕೆ ನಿತ್ಯದ ವಾರ್ತೆಯಾಗಿತ್ತು. ಇಂತಹ ಕಾಲದಲ್ಲೇ ಏಕನಾಥರಂಥ ಸಾಂಮಾಜಿಕತೆಗೆ ಒಡ್ಡಿಕೊಂಡ ಸಂತರ ಅವಶ್ಯಕತೆ ತುಂಬಾ ಇತ್ತು. ಪ್ರವಚನ, ಗ್ರಂಥರಚನೆ, ಭಕ್ತಿ ಮಾರ್ಗದ ಪ್ರಚಾರ ಇವುಗಳ ಮೂಲಕ ಅದನ್ನು ಅವರು ಸಾಧಿಸಿದರು.
ಪ್ರಭುತ್ವದ ಶೀಲ ಶೈಥಿಲ್ಯಗೊಳ್ಳುತ್ತಿರುವ ಕಾಲದಲ್ಲೇ ಶ್ರೀ ರಾಮನ ಆದರ್ಶ ಗುಣಗಳನ್ನು ಗಂಗೆಯಂತೆ ನಿರೂಪಿಸುವ ಅವಶ್ಯಕತೆ ತುಂಬಾ ಇತ್ತು. ಆದರ್ಶ ಪುತ್ರ, ಆದರ್ಶ ಬಂಧು, ಆದರ್ಶ ಶಿಷ್ಯ, ಆದರ್ಶ ರಾಜ, ಆದರ್ಶ ಮಿತ್ರ, ಆದರ್ಶ ಯೋಧ, ಇಂಥಾ ಆದರ್ಶಗಳು ಕೇವಲ ಕಲ್ಪನೆಯಲ್ಲ ,ಅದು ವ್ಯವಹಾರಯೋಗ್ಯವೂ ಹೌದು ಎಂದು ಸಾಧಾರವಾಗಿ ನಿರೂಪಿಸುವ ದಿಸೆಯಲ್ಲಿ ಅವರಿಗೆ ಸುಲಭವಾಗಿ ಸಿಕ್ಕಿದ್ದು ವಾಲ್ಮೀಕಿ ಕೃತ ರಾಮಾಯಣ.
ಎಲ್ಲ ಮಹಾಕಾವ್ಯಗಳು ಕಥನ ಕಾವ್ಯಗಳೇ. ಕಥೆಯ ಹಂದರ, ಪ್ರವಾಹ ಕಾವ್ಯಕ್ಕೆ ಪುಷ್ಟಿ ನೀಡುತ್ತದೆ. ಪಾತ್ರಗಳ ತೂಕ, ಕಥನದ ತೂಕ ಹಾಗು ಕವಿಯ ಪ್ರತಿಭೆಯ ತೂಕ ಒಂದೇ ಪಾತಳಿಯಲ್ಲಿ ರಿಂಗಣಿಸಿದಾಗ ಒಂದು ಉತ್ತಮ ಕಾವ್ಯ ರಚನಾಯೆಯಾಗುತ್ತದೆ. ಪ್ರಸ್ತುತ ಭಾವಾರ್ಥ ರಾಮಾಯಣ ಇಂಥ ರಾಸಾಯನಕ್ಕೆ ಒಂದು ಉತ್ತಮ ನಿದರ್ಶನ.
ಯುದ್ಧ ಕಾಂಡದ 44 ನೇ ಅಧ್ಯಾಯಗಳನ್ನು ಸ್ವತಃ ಸಂತ ಏಕನಾಥರೇ ರಚಿಸಿದ್ದು, ಉಳಿದ ಭಾಗಗಳನ್ನು ಅವರ ಪರಮ ಶಿಷ್ಯ ಶ್ರೀ ಗಾವಬಾ ಅವರು ಪೂರ್ಣ ಗೊಳಿಸಿದರು. ಶ್ರೀ ಗಾವಬಾ ಅವರು ಏಕನಾಥರ ಕೃಪೆಯೇ ಸಂಪೂರ್ಣವಾಗಿ ಪಾತ್ರ ರಾಗಿದ್ದರು. ಶಿಷ್ಯನ ತಲೆಯ ಮೇಲೆ ವಾರದಹಸ್ತ ಇಟ್ತು ತಮ್ಮ ನಂತರ ಮುಂದಿನ ಕಾಂಡಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಅದರಂತೆ ಶ್ರೀ ಗಾವಬಾ ಅವರು ತಮ್ಮ ಗುರುಗಳಾದ ಏಕನಾಥರ ರೀತಿಯಲ್ಲೇ ಉತ್ತರ ಕಾಂಡದ ವರೆಗಿನ ಭಾಗಗಳನ್ನು ಪೂರ್ಣ ಗೊಳಿಸಿದರು. ಓದುಗರಿಗೆ ಸಂತ ಏಕನಾಥರೇ ಬರೆದಿದ್ದಾರೆ ಏನೋ ಎಂಬಂತೆ ಭಾಸವಾಗ್ಗಿದ್ದರೆ ಅದೇನು ಕಾಕತಾಳೀಯವಲ್ಲ.
ರಾಮನಾಮದ ಮಹಿಮೆ ತಿಳಿಸಲು ಸಂತ ಏಕನಾಥರು ಜಟಾಯು ಪಕ್ಷಿಯ ಮೂಲಕ ಹೇಳಿಸಿದ್ದು ಅತ್ಯಂತ ವಿಶೇಷವಾಗಿದೆ.ಮಾನವರಿಗಿಂತ ಕೆಳಗಿನ ಶ್ರೇಣಿಯ ಪಕ್ಷಿಗೆ ರಾಮ ಮುಕ್ತಿ ಕೊಟ್ಟಿದ್ದು. ಜಟಾಯುವಿನ ಬಾಯಿಂದ ರಾಮ ನಾಮ ನುಡಿಸಿದ್ದು ನೋಡಿದರೆ ಏಕನಾಥರಿಗೆ ಭಕ್ತಿಯಲ್ಲಿ ಕೇವಲ ಮಾನವಜಾತಿಗೆ ಮಾತ್ರವಲ್ಲ ಉಳಿದ ಅಲಕ್ಷಿತ ಜೀವರಾಶಿಗೂ ಮುಕ್ತಿಯ ಅಧಿಕಾರ ಇದೆ ಎಂದು ತೋರಿಸಬೇಕಿದೆ. ನಾನು ನಿನಗೆ ಮತ್ತೆ ಪಂಖಗಳನ್ನು ಕೊಟ್ಟು ಉತ್ತಮ ಶರೀರ ಕೊಡಲೇ ಅಂದಾಗ ಜಟಾಯು ನಕ್ಕು ನಿರಾಕರಿಸುತ್ತಾನೆ. ನಿನ್ನ ಪಾದದಡಿಯಲ್ಲಿ ಮರಣವೇ ಜೀವನಕ್ಕಿಂತ ದೊಡ್ಡದು ಎನ್ನುತ್ತಾನೆ. ಜಟಾಯು ಮರಣಕಾಲದಲ್ಲಿ "ಶ್ರೀ ರಾಮ ಜಯ ರಾಮ ಜಯ ಜಯ ರಾಮ"* ಎಂದು ಹೇಳಿ ಪ್ರಾಣ ಬಿಡುತ್ತಾನೆ. ಜಟಾಯುಗೆ ರಾಮ ಯಾವ ಯೋಗಿಗೂ, ಸಾಧುವಿಗೂ ಸಿಗದ ಲೋಕವನ್ನು ದಯಪಾಲಿಸುತ್ತಾನೆ.
ವೇದದ ಜ್ಞಾನ ಕೇವಲ ಸೀಮಿತ ಜನರಿಗೆ ಸಾಧ್ಯ. ಅದನ್ನು ಗಳಿಸಲು ಕ್ರಮಾಗತ, ಸಂವರ್ಧಿತ ಪ್ರಯತ್ನಗಳ ಅವಶ್ಯಕತೆ ಇರುತ್ತದೆ. ಆದರೆ ಭಕ್ತಿಗೆ ಯಾವ ಅರ್ಹತೆಯ ಅಗತ್ಯವೂ ಇಲ್ಲ. ಕೇವಲ ಪ್ರಪತ್ತಿ (ಶರಣಾಗತಿ) ಇದ್ದರೆ ಸಾಕು. ಕಿಷ್ಕಿಂಧಾ ಕಾಂಡದಲ್ಲಿ ರಾಮನ ಸಖ್ಯ ಭಾವದ ಆತ್ಯಂತಿಕ ರೂಪವನ್ನು ಈ ಮುಂದಿನ ಸಾಲಿನಲ್ಲಿ ಮನೋಹರವಾಗಿ ವರ್ಣಿತವಾಗಿದೆ.
दोहीचें हृदय जालें एक । तेंचि निजसख्याचे सख्य ।
(ಎರಡು ಹೃದಯ ಒಂದಾದವು ! ಅದುವೇ ನಿಜಸಖನ ಸಖ್ಯ! )
ಸುಗ್ರೀವನ ದುಃಖ ತಿಳಿದಮೇಲೆ ಅವನ ಜೊತೆ ಸಖ್ಯ ಮಾಡಿಕೊಳ್ಲಲು ಶ್ರೀ ರಾಮ ಸಂತೋಷದಿಂದ ಅವಸರ ಮಾಡಿದನಂತೆ. ಬಲಿಷ್ಠ ವಾಲಿಯ ಪಕ್ಷ ಹಿಡಿಯದೇ ಸೀತೆಯ ಶೋಧ ಸುಲಭ ವಾಗುವುದಾದರೂ ಹೋಲಿಕೆಯಲ್ಲಿ ದುರ್ಬಲನಾದ ಸುಗ್ರೀವನ ಪರ ನಿಂತಿದ್ದೇ ಶ್ರೀರಾಮನ ಹೃದಯಸ್ಥ ಸಖ್ಯ ಭಾವದ ಅನಾವರಣವಾಗುತ್ತದೆ. ಇಂಥದ್ದುಅನ್ಯಾದೃಶ್ಯವಾದುದು.
जो मज होय अनन्य शरण । त्याचें दुःख निर्दाळून ।
सुखी करावें संपूर्ण । ब्रीर्द जाण हें माझें ॥४॥
(ಯಾನು ನನಗೆ ಅನನ್ಯ ಶರಣ ! ಅವನ ದುಃಖ ನಿರ್ಮೂಲನ !
ಕೊಡಿಸಿ ಸುಖ ಸಂಪೂರ್ಣ ! ಜೀವನಧ್ಯೇಯ ನನ್ನದು ! (ಭಾವಾನುವಾದ)
ಅದೇ ಕಾಂಡದ ಮೊದಲನೇ ಅಧ್ಯಾಯದಲ್ಲಿ ಶ್ರೀ ರಾಮ ಹನುಮಂತನ ಪ್ರಥಮ ಭೇಟಿಯಲ್ಲೇ
"वानरा ब्रह्मचर्यकांसोटी ।सगर्भ पोटीं आभासे ॥५३॥
"(ಈತ ಸಗರ್ಭ ಬ್ರಹ್ಮಚಾರಿ! ಕೌಪೀನವನ್ನು ಹುಟ್ಟಿದಾರಭ್ಯ ಪಡೆದು ಬಂದವನು")
ಎನ್ನುವ ಒಂದೇ ವಾಕ್ಯದಲ್ಲಿ ಏಕನಾಥರು ಹನುಮಂತನ ಹಿರಿಮೆ ಸಾರಿ ಬಿಟ್ಟಿದ್ದಾರೆ ಜೊತೆಗೆ ಒಂದೇ ಭೇಟಿಯಲ್ಲೇ ವ್ಯಕ್ತಿಯ ಯೋಗ್ಯತೆಯನ್ನು ಅಳಿಯುವ ಶ್ರೀ ರಾಮನ ಸಾಮರ್ಥ್ಯ ಅನಾವರಣಗೊಂಡಿದೆ.
ಅರಣ್ಯ ಕಾಂಡದ ಕೊನೆಯ ಅಧ್ಯಾಯದಲ್ಲಿ ಶಬರಿಯ ಸ್ಥಾನ ನಮ್ಮ ಹೆಮ್ಮೆಯ ಪಂಪಾ ತೀರ (ಹಂಪೆ) ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಮೂಲ ಸಂಸ್ಕೃತ ಶ್ಲೋಕ ಉದ್ಧರಿಸಿ ಮರಾಠಿಯ ಅನುವಾದಲ್ಲಿಯೂ ಅದನ್ನೇ ಉಲ್ಲೇಖಿಸಿದ್ದಾರೆ.
पंपायाः पश्चिमे तीरे उपविष्टो च राघवौ ।
ददर्शतुस्ततस्तत्र शबर्या रम्यमाश्रमम् ॥ १ ॥
तौ तमाश्रममासाद्य द्रुमैर्बहुभिरावृतम् ।
सुरभ्यमभिवीक्षंतौ शबरीमभ्युपेयतुः ॥ २ ॥
तौ दृष्ट्वा तु तदा सिद्धा समुत्थाय कृताञ्जलिः ।
पादौ जग्राह रामस्य लक्ष्मणस्य च धीमतः ॥ ३ ॥(ಸಂಸ್ಕೃತ ಶ್ಲೋಕ )
श्रीराम लक्ष्मण अति सत्वर । पावोनि पंपापश्चिमतीर ।
सेवोनियां पंपापवित्रनीर । विश्रांतीस वीर बैसले ॥ ३ ॥
(ಶ್ರೀ ರಾಮ ಲಕ್ಶ್ಮಣ ಅತಿ ತ್ವರೆಯಿಂದ ! ಕೂಡಿದರು ಪಂಪಾ ಪಶ್ಚಿಮತೀರ !
ಪಂಪಾ ಪವಿತ್ರ ನೀರ ಸೇವಿಸಿ ! ವಿಶ್ರಾಂತಿಗಾಗಿ ವೀರರು ವಿರಮಿಸಿದರು!)
(ಭಾವಾನುವಾದ)
ಮುಂದಿನ ಕಾಂಡದಲ್ಲಿ ಬರುವ ಸುಗ್ರೀವ ವೃತ್ತಾಂತ ಕೂಡ ಇದೆ ಪರಿಸರದಲ್ಲಿ ಆದದ್ದು ಇದರಿಂದ ಸ್ಪಷ್ಟವಾಗಿದೆ.
ಅಯೋಧ್ಯಾಕಾಂಡದ ಅಂತ್ಯದಲ್ಲಿ ಮಾತಂಗ ಮುನಿಗಳ ಸೇವೆಯಲ್ಲಿ ಅಹಂಕಾರಶೂನ್ಯ ಹಾಗು ಪರಮಾರ್ಥಕ್ಕೆ ಯೋಗ್ಯಳಾದ ಶಬರಿಗೆ ಶ್ರೀ ರಾಮ ಅದ್ವೈತ ತತ್ವದ ಉಪದೇಶ ಮಾಡುತ್ತಾನೆ. ಮಹಾರಾಷ್ಟ್ರದ ಎಲ್ಲ ಸಂತರು ಆದಿ ಶಂಕರರ ಅದ್ವೈತ ತತ್ವದ ಅನುಯಾಯಿಗಳು ಎನ್ನುವುದು ವಿಶೇಷ. ಇಲ್ಲಿ ಶ್ರೀ ರಾಮ ಶಬರಿಯ ಕುಲ, ಗೋತ್ರ, ವರ್ಣಾಶ್ರಮದಲ್ಲಿ ಯಾವ ಶ್ರೇಣಿಯವಳು ಎನ್ನುವದನ್ನು ಲೆಕ್ಕಿಸದೆ ಅವಳಿಗೆ ತತ್ವಜ್ಞಾನದ ಉಪದೇಶ ಮಾಡುತ್ತಾನೆ. ಆಧ್ಯಾತ್ಮಕ್ಕೆ ಮಾನವ ಒಳಿಗಿನಿಂದಲೇ ವಯಸ್ಸಿಗೆ ಬರಬೇಕಾಗುತ್ತದೆ ಎನ್ನುವುದು ಇದರಿಂದ ದಿಟವಾಗುತ್ತದೆ.
ಏಕನಾಥರಿಗೆ ಜನ ಜೀವನದ ಕಷ್ಟ ಸುಖಗಳು ಗೊತ್ತಿದ್ದವು. ಸೂಕ್ಷ್ಮ ದೃಷ್ಟಿ ಇತ್ತು. ಜೊತೆಗೆ ಅವುಗಳಿಗೆ ಅನುಷ್ಠಾನಯೋಗ್ಯ ಹಾಗೂ ವ್ಯಾವಹಾರಿಕ ಪರಿಹಾರವು ಗೊತ್ತಿದ್ದವು.
ಯುದ್ಧಕಾಂಡದಲ್ಲಿ (66ನೆ ಅಧ್ಯಾಯದ 17ನೆ ಶ್ಲೋಕ) ಎಲ್ಲ ಸಂಗ್ರಾಮ ಮುಗಿದ ನಂತರ, ಪರಶುರಾಮನಿಂದ ಕಡ ತಂಡ ಕ್ರೋಧವನ್ನು ಶ್ರೀರಾಮ ವಾಪಸ ಕಳಿಸುತ್ತಾನೆ. ಕ್ರೋಧವು ನಾಶ ಮಾಡುವಂತಹದು. ಅದರ ಸತತ ಸಹವಾಸ ಅತಿ ಕೆಟ್ಟದ್ದು. ಕಾರ್ಯಗೌರವಕ್ಕಾಗಿ ತಾತ್ಕಾಲಿಕವಾಗಿ ಇಟ್ಟುಕೊಳ್ಳಬೇಕಾದ ಭಾವಸಾರ ಅಷ್ಟೇ ಎಂಬುದನ್ನು ಶ್ರೀ ಏಕನಾಥರು ಮಾರ್ಮಿಕವಾಗಿ ನಮೂದಿಸುತ್ತಾರೆ.
परशुरामदत्त क्रोध । करावया रावणवध ।
झाला होता उद्बुद्ध । तोही निजानंद पावला ॥ १७ ॥
(ಪರಶುರಾಮ ಕೊಟ್ಟ ಕ್ರೋಧ ! ಆಗು ಮಾಡಲು ರಾವಣವಧ !
ಉದಯಿಸಿತ್ತು ಸಿದ್ಧ ! ಅದನ್ನು ವಿಲಯಿಸಿ ನಿಜಾನಂದದಲಿ!
(ಭಾವಾನುವಾದ)
ಕಲಿಯುಗದಲ್ಲಿ ಗಂಡು ಹೆಣ್ಣಿನ ಮಧ್ಯೆ ಕಾಮವು ಅತಿ ಪ್ರಧಾನ ಪಾತ್ರವಹಿಸುತ್ತದೆ. ಜೊತೆಗೆ ಅದು ಅವನತಿಗೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಮೊದಲೆಯದ್ದು. ಸಂತ ಏಕನಾಥರಿಗೆ ಇದನ್ನು ಓದುಗರಿಗೆ ಮನದಟ್ಟು ಮಾಡಬೇಕಿದೆ. ಅದಕ್ಕೆ ಯುದ್ಧಕಾಂಡದಲ್ಲಿ ಏಕಾಂತದಲ್ಲಿ ಸ್ತ್ರೀಯರ ಭೇಟಿ ಯಾವತ್ತಿಗೂ ಕೂಡದು. ಅದು ಸಹೋದರಿಯೋ ಅಥವಾ ಮಗಳೇ ಆಗಿದ್ದರೂ ಸರಿಯೇ ಎಂದು ಶ್ರೀರಾಮನಿಂದ ಏಕನಾಥರು ಹೇಳಿಸಿದ್ದಾರೆ. ಬಹುಶ ನಮ್ಮ ನೆಲದ ಸಂಸ್ಕೃತಿಗಿಂತ ಅನ್ಯನೆಲದ ಸಂಸ್ಕೃತಿ ನಡೆಸುವ ಆಡಳಿತದ ಪರಿಣಾಮ ಸಮಾಜದ ಮೇಲೆ ಖಂಡಿತ ಆಗುತ್ತಿರುವುದು ಅವರ ಗಮನಕ್ಕೆ ಬಂದಿತ್ತು ಎನಿಸುತ್ತದೆ.
ಏಕನಾಥರಿಗೆ ಜನರ ಮನೋವ್ಯಾಪಾರ ತಿಳಿಯಾಗಿ ಅರ್ಥಮಾಡಿಕೊಂಡವರು. ಅಹಲ್ಯಾ ಉದ್ಧಾರದಲ್ಲಿ ಗೌತಮ, ಇಂದ್ರ, ಅಹಲ್ಯಾ, ಮೂವರೂ ಆತ್ಮಪರೀಕ್ಷಣೆ ಮಾಡಿ ಕೊಂಡಿದ್ದು ಮನನೀಯವಾಗಿದೆ. ಪ್ರತಿಯೊಬ್ಬರ ಸ್ವಯಂ ವಿಮರ್ಶೆ ಕರುಣಾರಸದಲ್ಲಿ ಮಿಂದೆದ್ದಿದೆ.
ಹೊರಗಿನ ಜನರಗಿಂತ ಮನೆಯ ಜನರ ಹಿಯ್ಯಾಳಿಕೆ ಹೆಚ್ಚು ನೋವು ಕೊಡುತ್ತದೆ ಎನ್ನುವುದು ಏಕನಾಥರಿಗೆ ಚೆನ್ನಾಗಿ ಗೊತ್ತಿದೆ. ಜನಮಾನಸಲ್ಲಿ ಕೈಕಯಿ ರಾಮನ ವನವಾಸದ ನಂತರ ತನ್ನ ಕೊಂಕು ಬುದ್ಧಿ ಬಿಡುತ್ತಾಳೆ ಎಂದು ಪ್ರತೀತಿ ಇದೆ. ಆದರೆ ಭಾವಾರ್ಥ ರಾಮಾಯಣದಲ್ಲಿ ಉತ್ತರಕಾಂಡದ ಕೊನೆಯಲ್ಲಿ ಕೂಡ ಸೀತೆಗೆ ಚುಚ್ಚಿ ನುಡಿಯುತ್ತಾಳೆ. ಜನಮಾಸದಲ್ಲಿನ ಸಂಶಯ ನಿವಾರಣೆ ಆದರೂ ಮನೆಯಲ್ಲಿನ ವ್ಯಕ್ತಿ ಚುಚ್ಚಿ ಮಾತನಾಡಿದ್ದು ಸೀತೆಗೆ ಹೆಚ್ಚು ನೋವು ಕೊಡುತ್ತದೆ.
ಏಕನಾಥರ ಕಾವ್ಯದ ಮೇಲೆ ಸಂತ ಜ್ಞಾನೇಶ್ವರರ ಕೃತಿಗಳ ಪ್ರಭಾವ ಇದ್ದಂತಿದೆ. ಅವರು ಜ್ಞಾನೇಶ್ವರ ಕೃತಿಯಲ್ಲಿ ಸೇರಿದ ಅಪಪಾಠಗಳನ್ನು ಶುದ್ಧಗೊಳಿಸಿದವರು. ಆರಂಭದ ಗಣೇಶ ಸ್ತುತಿಯು ಬಹುತಾಂಶ ಜ್ಞಾನೇಶ್ವರಿ ಕೃತಿಯಂತೆಯೇ ಇರುವುದು ಒಂದು ನಿದರ್ಶನ. ಇದರ ಅರ್ಥ ಅವರು ಎಲ್ಲವನ್ನು ಅವರಂತೆ ಅನುಸರಿಸಿದರು ಅಂತಲ್ಲ. ೧೬ನೆ ಶತಮಾನಕ್ಕೆ ಯೋಗ್ಯವಾದ ಜನರಿಗೆ ಅರ್ಥವಾಗುವ ಭಾಷೆಯನ್ನೇ ಬಳಸಿದರು ಜೊತೆಗೆ ಸ್ವಂತಿಕೆಯನ್ನು ಮೆರೆದರು.
16ನೆ ಶತಮಾನಕ್ಕೆ ರಚಿತವಾಗಿದ್ದರೂ ಕಾವ್ಯದ ಭಾಷೆ ಓದುಗರಿಗೆ ಸಹಜ ಅರ್ಥವಾಗುವಂತಿವೆ. ಭಾಷೆಯು ಹೊರೆಯಾಗದಂತೆ ಜೊತೆಗೆ ಅದು ಲಘು ಅಥವಾ ಕೆಳಮಟ್ಟದು ಕೂಡ ಆಗದಂತೆ ಪಂಡಿತ ಮತ್ತು ಪಾಮರರಿಬ್ಬರು ತಲೆದೂಗುವಂತೆ ವ್ರತಸ್ಥ ನೀತಿಯಿಂದ ಸಂತ ಏಕನಾಥರು ಈ ಗ್ರಂಥ ರಚನೆ ಮಾಡಿದ್ದಾರೆ ಎಂದರೆ ಅದು ಅತಿಶಯೋಕ್ತಿಯಲ್ಲ. ಮೂಲ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖ ಇಲ್ಲದಿದ್ದರೂ, ಕಾವ್ಯದ ಸೊಗಸು ಹೆಚ್ಚು ಮಾಡಲು ಜನಪದದಲ್ಲಿ ರೂಢಿಯಿಂದ ಬಂದಿರುವ ಕಥೆಗಳನ್ನು, ಶಿವ ರಾಮಾಯಣದಂತಹ ಗ್ರಂಥಗಲ್ಲು ಕವಿ ಇಲ್ಲಿ ಬಳಿಸಿದ್ದಾರೆ. ಜೊತೆಗೆ ಕಾವ್ಯದಲ್ಲಿ ಅವನ್ನು ಹದವಾಗಿ ಎರಕ ಹೊಯ್ದಿದ್ದಾರೆ. ಇಡೀ ಕಾವ್ಯದಲ್ಲಿ ವ್ಯಕ್ತಿಯ ಶೀಲಕ್ಕೆ ಅತ್ತ್ಯುನ್ನತ ಸ್ಥಾನ ಕೊಟ್ಟಿದ್ದಾರೆ. ಮಾನವ ದಾರಿ ತಪ್ಪುವ ಎಲ್ಲ ರೀತಿಗಳನ್ನು ಮೃದುವಾಗಿ ಎಚ್ಚರಿಸಿ ಕಥೆಯ ಓಘ ಕೆಡದಂತೆ ನಿರೂಪಿಸಿದ್ದಾರೆ.
ಲೇಖನದ ಮಿತಿಯಲ್ಲಿ ಇಂಥ ಪ್ರಭಾವಿ ಹಾಗು ಗಾತ್ರದಲ್ಲಿ ದೊಡ್ಡದಾದ ಗ್ರಂಥವನ್ನು ಇಡಿಯಾಗಿ ಓದುಗರ ಮುಂದಿಡಲು ಸಾಧ್ಯವಾಗಲಿಕ್ಕಿಲ್ಲ. ಆದಾಗ್ಯೂ ಇಂಥ ಗ್ರಂಥದ ಓದಿಗೆ ಅದು ಪ್ರೇರಣೆಯಾಗಲಿ ಎಂದೇ ಆಶಿಸುವೆ. ಈ ಲೇಖನ ಶ್ರೀರಾಮನ ಸೇವೆ ಎಂದೇ ನನ್ನ ಅಭಿಮತ.
- ಡಾ.ಪ್ರತಾಪ ಎಸ್. ಕುಲಕರ್ಣಿ
ಸಹ ಪ್ರಾಧ್ಯಾಪಕರು
ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ
ಹೊಸಪೇಟೆ. 9449654119
ಲೇಖಕರ ಸಂಕ್ಷಿಪ್ತ ಪರಿಚಯ
ಡಾ. ಪ್ರತಾಪ ಎಸ್ ಕುಲಕರ್ಣಿ ಅವರು ಪ್ರಸ್ತುತ ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕ ವೃತ್ತಿಯಲ್ಲಿ ಇದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಗೆ ಸೇರಿದ ಅವರು ಮರಾಠಿ ಮತ್ತು ಕನ್ನಡ ಎರಡು ಭಾಷೆಯನ್ನೂ ಬಲ್ಲವರು. ಸಾಹಿತ್ಯದಲ್ಲಿ ಗಂಭೀರ ಆಸಕ್ತಿಯನ್ನು ಹೊಂದಿದ ಅವರು ಕನ್ನಡದಿಂದ ಇಂಗ್ಲಿಷಿಗೆ ಹಲವು ಭಾಷಾಂತರ ಲೇಖನಗಳನ್ನು ಕೈಗೊಂಡಿದ್ದಾರೆ. ಅವರ ಸೇಂಟ್ಸ್ ಆಫ್ ಕರ್ನಾಟಕ ಇತ್ತೀಚಿಗೆ ಪ್ರಕಟವಾದ ಕೃತಿ. ಪ್ರಸ್ತುತ ಮರಾಠಿಯಲ್ಲಿ ಸಂತ ಏಕನಾಥರು ಬರೆದ "ಭಾವಾರ್ಥ ರಾಮಾಯಣ" ಕುರಿತ ಲೇಖನವನ್ನು ಕನ್ನಡದ ಓದುಗರಿಗೆ ಪರಿಚಯಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ