ಕಾಸರಗೋಡು: ಕಾಸರಗೋಡಿನ ಕೂಡ್ಲಿನಲ್ಲಿ ದೇಶೀಯ ಅಧ್ಯಾಪಕ ಪರಿಷತ್ ಕಾರ್ಯಾಲಯ ಉದ್ಘಾಟನೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ವೀರಮಣಿ ಕಾಳಗ ಎಂಬ ಪ್ರಸಂಗವು ಯಶಸ್ವಿಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು.
ಶತ್ರುಘ್ನನಾಗಿ ಮಾ. ಮನ್ವಿತ್ ಕೃಷ್ಣ ನಾರಾಯಣಮಂಗಲ ಅವರ ರಂಗನಡೆಗಳು, ಹನುಮನಾಗಿ ಕು. ಅಭಿಜ್ಞಾ ಭಟ್ ಅವರ ಉತ್ತಮ ವಾಕ್ಸರಣಿ, ವೀರಮಣಿಯ ಗತ್ತುಗಾರಿಕೆಯೊಂದಿಗೆ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ, ಶಿವನಾಗಿ ಶ್ರೀ ಶಶಿಧರ ಕುದಿಂಗಿಲ ಅವರ ರಂಗವೈಖರಿ, ಲಾಲಿತ್ಯ ಗಾಂಭೀರ್ಯದೊಂದಿಗೆ ಶ್ರೀರಾಮನಾಗಿ ವಿನಯ ಚಿಗುರುಪಾದೆ ಅವರು ಪ್ರಸಂಗದ ಯಶಸ್ಸಿಗೆ ಕಾಣಿಕೆಯಿತ್ತರು.
ಭಾಗವತರಾಗಿ ಶ್ರೀ ಕೇಶವ ಪ್ರಸಾದ, ಚೆಂಡೆ ಹಾಗೂ ಮದ್ದಳೆಗಳಲ್ಲಿ ಶ್ರೀ ಚೇವಾರು ಶಂಕರ ಕಾಮತ್, ಯಕ್ಷಗಾನ ಗುರು ಶ್ರೀ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಹಾಗೂ ಶ್ರೀ ಕೃಷ್ಣಮೂರ್ತಿ ಎಡನಾಡು ಹಿಮ್ಮೇಳಗಳಲ್ಲಿ ಸಹಕರಿಸಿದರು. ಪ್ರಬುದ್ಧ ಪ್ರೇಕ್ಷಕ ಗಡಣ ಮೌನವಾಗಿ ವೀಕ್ಷಿಸಿ, ಸೂಕ್ತ ಪ್ರತಿಕ್ರಿಯೆ ನೀಡಿದರು. ಕಾಸರಗೋಡು ಕೂಡ್ಲು ರಾಮದಾಸ ನಗರದಲ್ಲಿ ಎನ್ ಟಿ ಯು ಕಾರ್ಯಾಲಯ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದ ಅಂದ ಹೆಚ್ಚಿಸುವಲ್ಲಿ ಕಾಸರಗೋಡಿನ ಗಂಡುಮೆಟ್ಟಿನ ಕಲೆ ಯಕ್ಷಗಾನವು ಯಶಸ್ವಿಯಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ