ಕಾಸರಗೋಡು: ಕೇರಳದ ರಾಜ್ಯಪಾಲರೂ ಕಣ್ಣೂರು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ಆರಿಫ್ ಮಹಮ್ಮದ್ ಖಾನ್ ಅವರು ನಾಮನಿರ್ದೇಶನ ಮಾಡಿದ ಯೂನಿವರ್ಸಿಟಿಯ ಸೆನೆಟ್ ಸದಸ್ಯರ ಪಟ್ಟಿಯಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಯವರ ಹೆಸರಿದೆ. ಒಟ್ಟು ಹತ್ತೊಂಬತ್ತು ಮಂದಿಯನ್ನು ಸನ್ಮಾನ್ಯ ರಾಜ್ಯಪಾಲರು ನಾಮನಿರ್ದೇಶನ ಮಾಡಿದ್ದು, ಇದರಲ್ಲಿ ಭಾಷಾ ಅಲ್ಪಸಂಖ್ಯಾಕ ಕ್ಷೇತ್ರವನ್ನು ಡಾ.ರತ್ನಾಕರ ಮಲ್ಲಮೂಲೆಯವರು ಪ್ರತಿನಿಧಿಸಲಿದ್ದಾರೆ.
ಕಣ್ಣೂರು ವಿಶ್ವವಿದ್ಯಾನಿಲಯವು ರಚನೆಯಾದ ಬಳಿಕ ಸೆನೆಟ್ನಲ್ಲಿ ಸ್ಥಾನ ಪಡೆಯುವ ಮೊದಲ ಕನ್ನಡಿಗನೆಂಬ ಹೆಗ್ಗಳಿಕೆಗೆ ಡಾ.ರತ್ನಾಕರ ಮಲ್ಲಮೂಲೆಯವರು ಪಾತ್ರರಾಗಿದ್ದಾರೆ. ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಸೆನೆಟ್ನಲ್ಲಿ ಕನ್ನಡಿಗರಿಗೆ ಸ್ಥಾನವಿತ್ತು. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿ ಸಂಸದರಾಗಿದ್ದ ರಾಜಕೀಯ ಧುರೀಣರೂ ಕನ್ನಡಿಗರೂ ಆಗಿದ್ದ ಶ್ರೀ ರಾಮಣ್ಣ ರೈ ಹಾಗೂ ಕಾಸರಗೋಡು ಶಾಸಕರಾಗಿದ್ದ ಕನ್ನಡ ಹೋರಾಟಗಾರ ದಿ. ಯು.ಪಿ ಕುಣಿಕುಳ್ಳಾಯರು 1970 ರಿಂದ 1973ರ ತನಕ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿದ್ದರು.
ಕಣ್ಣೂರು ವಿಶ್ವವಿದ್ಯಾನಿಲಯವು 1996 ರಲ್ಲಿ ಪ್ರಾರಂಭವಾಯಿತು. ಕಾಸರಗೋಡು, ಕಣ್ಣೂರು ಹಾಗೂ ವಯನಾಡು ಜಿಲ್ಲೆಗಳನ್ನು ಕೇಂದ್ರೀಕರಿಸಿ ಈ ವಿಶ್ವವಿದ್ಯಾನಿಲಯವು ಪ್ರಾರಂಭ ಆಗಿದ್ದರೂ ಕಣ್ಣೂರು ವಿಶ್ವವಿದ್ಯಾನಿಲಯದ ಸೆನೆಟ್ ನಲ್ಲಿ ಇದುತನಕ ಕನ್ನಡಿಗರಿಗೆ ಪ್ರಾಶಸ್ತ್ಯವನ್ನೇ ನೀಡಿರಲಿಲ್ಲ. ಕೇರಳದ ಭಾಷಾ ಅಲ್ಪಸಂಖ್ಯಾಕ ಪ್ರದೇಶವನ್ನು ಒಳಗೊಂಡ ಹಿಂದುಳಿದ ಕಾಸರಗೋಡು ಜಿಲ್ಲೆಯೂ ಕಣ್ಣೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಪ್ರಧಾನ ಜಿಲ್ಲೆಯಾಗಿದ್ದರೂ ಕನ್ನಡಿಗರಿಗೆ ಸೆನೆಟ್ ಸ್ಥಾನಮಾನ ಕೊಡಲು ವಿಶ್ವವಿದ್ಯಾನಿಲಯವು ಕಳೆದ 28 ವರ್ಷಗಳಿಂದ ಹಿಂದೇಟು ಹಾಕುತ್ತಿತ್ತು. ಭಾಷಾ ಅಲ್ಪಸಂಖ್ಯಾಕ ಪ್ರದೇಶದ ನಾಡಿಮಿಡಿತ ಅರಿತ ಹಾಗೂ ಕನ್ನಡ ಚಟುವಟಿಕೆ, ಹೋರಾಟಗಳಲ್ಲಿ ಸಕ್ರೀಯರಾಗಿ ದುಡಿಯುವ ಅಕಾಡೆಮಿಕ್ ಗುಣಮಟ್ಟದ ವ್ಯಕ್ತಿಯೋರ್ವರಿಗೆ ವಿಶ್ವವಿದ್ಯಾನಿಲಯದ ಸೆನೆಟ್ ನಲ್ಲಿ ಸ್ಥಾನಕೊಡಬೇಕಾದುದು ಸಂವಿಧಾನಬದ್ಧವಾದ ಕರ್ತವ್ಯವೆಂದು ಕನ್ನಡ ಧುರೀಣ ದಿ.ಯುಪಿ ಕುಣಿಕುಳ್ಳಾಯರು, ಕನ್ನಡ ಸಂತರೆಂದೇ ಗುರುತಿಸಿಕೊಂಡ ದಿ.ಪುರುಷೋತ್ತಮ ಮಾಸ್ತರ್ ಅವರು ದಶಕಗಳಿಂದ ಮನವಿಗಳ ಮೂಲಕ ಸರಕಾರಕ್ಕೂ ವಿಶ್ವವಿದ್ಯಾನಿಲಯದ ಅಧಿಕೃತರಿಗೂ ಭಾಷಾ ಅಲ್ಪಸಂಖ್ಯಾಕ ಆಯೋಗಕ್ಕೂ ನಿರಂತರ ಎಚ್ಚರಿಸುತ್ತಿದ್ದರು. ಆದರೆ ಅದು ಈ ಮಹನೀಯರ ಜೀವಿತಾವಧಿಯಲ್ಲಿ ಕೈಗೂಡಲೇ ಇಲ್ಲ.
ಆದರೆ ಈಗ ಅದು ಕೈಗೂಡಿ ಬಂದಿದೆ. ವಿಶೇಷ ಅಂದರೆ ದಿ.ಯು.ಪಿ ಕುಣಿಕುಳ್ಳಾಯ ಹಾಗೂ ದಿ.ಪುರುಷೋತ್ತಮ ಮಾಸ್ತರ್ ಅವರ ಕಿರಿಯ ಯುವ ಒಡನಾಡಿಯಾಗಿ ವಿದ್ಯಾರ್ಥಿ ದೆಸೆಯಿಂದಲೇ ದುಡಿಯುತ್ತಿರುವ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆಯವರಿಗೆ ಈ ಅವಕಾಶ ಒದಗಿಬಂದುದು ಕನ್ನಡಿಗರ ಹಾಗೂ ಕನ್ನಡ ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ಅಭಿಮಾನದ ವಿಷಯ.
ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ಸೆನೆಟ್ ಗೆ ಸೂಕ್ತ ಹಾಗೂ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂಬ ದಿ. ಪುರುಷೋತ್ತಮ ಮಾಸ್ತರ್ ಅವರು ತಯಾರಿಸಿದ ಹಲವು ಮನವಿಗಳನ್ನು ಅವರ ಶಿಷ್ಯನೂ ಅವರಿಗೆ ಬಲಗೈಯ ಹಾಗೆ ಕನ್ನಡ ಕೆಲಸಕಾರ್ಯಗಳಲ್ಲಿ ಸಹಾಯ ಮಾಡುತ್ತಾ ಬರುತ್ತಿದ್ದ ರತ್ನಾಕರ ಮಲ್ಲಮೂಲೆಯವರು ತಮ್ಮ ಕಂಪ್ಯೂಟರ್ ನಲ್ಲಿ ಟೈಪಿಸಿ ಸಂಬಂಧಪಟ್ಟವರಿಗೆಲ್ಲ ಕಳಿಸಿಕೊಡುತ್ತಿದ್ದರು. ಇದಕ್ಕಾಗಿ ತಮ್ಮದೇ ಕಿಸೆಯಿಂದ ಹಣವನ್ನು ಉಪಯೋಗಿಸುತ್ತಿದ್ದರು. ಕಾಕತಾಳೀಯವೆಂದರೆ ಅದೇ ಸ್ಥಾನಕ್ಕೆ ಈ ಸಲ ರಾಜ್ಯಪಾಲರು ಮಲ್ಲಮೂಲೆಯವರ ಹೆಸರನ್ನು ನಾಮನಿರ್ದೇಶನ ಮಾಡಿದ್ದಾರೆ. ಈಗಾಗಲೇ ಶೈಕ್ಷಣಿಕ ವಾಗಿ ಸಾಮಾಜಿಕವಾಗಿ ಹಾಗೂ ನೈತಿಕವಾಗಿ ಇವರು ಕನ್ನಡಕ್ಕಾಗಿ ಧ್ವನಿ ಎತ್ತುತ್ತಾ ಬಂದವರು. ಅಕಾಡೆಮಿಕ್ ಗಟ್ಟಿ ಯೋಗ್ಯತೆಯಿರುವ ಇವರು ದಿ. ಕುಣಿಕುಳ್ಳಾಯ ಹಾಗೂ ದಿ. ಪುರುಷೋತ್ತಮರ ನಿಡುಗಾಲದ ಒಡನಾಡಿಯೂ ಹೌದು. ಹಲವು ಕನ್ನಡ ಪರ ನ್ಯಾಯಕ್ಕಾಗಿ ಹಿರಿಯ ಜತೆ ಹೆಗಲು ಕೊಟ್ಟವರು. ಸ್ಥಾನಮಾನ ಇಲ್ಲದಾಗಲೂ, ವಿವಿಯಲ್ಲಿ ಕನ್ನಡಕ್ಕೆ ಅಪಚಾರವಾದಾಗ ಮನವಿ, ಹಾಗೂ ತಮ್ಮದೇ ಧ್ವನಿಯ ಮೂಲಕ ಶೈಕ್ಷಣಿಕ ಸಮಸ್ಯೆಯನ್ನು ಬಗೆಹರಿಸಿದ ಸಾಕಷ್ಟು ಹಿನ್ನೆಲೆ ಮಲ್ಲಮೂಲೆಯವರಿಗಿದೆ. ಕೇರಳ ಕೇಂದ್ರೀಯ ವಿವಿಯಲ್ಲಿ ಕನ್ನಡ ವಿಭಾಗ ಪ್ರಾರಂಭ ಆಗಲು ದಿ. ಪುರುಷೋತ್ತಮ ಹಾಗೂ ರಾಜಕೀಯ ಧುರೀಣ ಶ್ರೀಕಾಂತರ ಜತೆ ದುಡಿದು ಅದರಲ್ಲಿ ಯಶಸ್ಸು ಕಂಡ ರತ್ನಾಕರ ಅವರು ಎಲ್ಲೇ ಆದರೂ ಕನ್ನಡಕ್ಕಾಗಿ ಧ್ವನಿ ಎತ್ತಿ ನ್ಯಾಯಕಾಗಿ ಮಾತನಾಡಲು ಬಗ್ಗದವರು. ಕಾಸರಗೋಡಿನ ಕನ್ನಡಿಗ ವಲಯದಲ್ಲಿ ಮಾತ್ರವಲ್ಲ ಕರ್ನಾಟಕ ಕೇರಳದ ಸಾಹಿತ್ಯಕ ಸಾಂಸ್ಕೃತಿಕ ಸಾಮಾಜಿಕ ವಲಯಗಳಲ್ಲಿ ಮಲ್ಲಮೂಲೆ ಯವರು ಈಗಾಗಲೇ ಗಟ್ಟಿ ಛಾಪು ಮೂಡಿಸಿದ್ದಾರೆ.
ದಶಕಗಳ ಹಿಂದೆ ಎನ್ನೆಸ್ಸೆಸ್ ಉತ್ತಮ ಯೋಜನಾಧಿಕಾರಿಯಾಗಿ ರಾಷ್ಟ್ರಪತಿಯವರಿಂದ ರಾಷ್ಟ್ರಪ್ರಶಸ್ತಿಯನ್ನು ಪಡೆದ ಇವರು ಕಣ್ಣೂರು ವಿಶ್ವವಿದ್ಯಾನಿಲಯ ಹಾಗೂ ಕಾಸರಗೋಡು ಸರಕಾರಿ ಕಾಲೇಜಿನ ಎನ್ನೆಸ್ಸೆಸ್ ಯೋಜನೆಗೆ ಮೊದಲ ಬಾರಿ ರಾಷ್ಟ್ರ ಮನ್ನಣೆಯ ಕಿರೀಟ ತೊಡಿಸಿದವರು. ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ಪೀಡಿತ ಜನರಿಗೆ ಮನೆ, ರಸ್ತೆ ಹಾಗೂ ಇತರ ಅನುಕೂಲತೆಗಳನ್ನು ಮಾಡಲು ನೇತೃತ್ವವಹಿಸಿದವರು. ಈ ಮೊದಲು ಕಣ್ಣೂರು ವಿಶ್ವವಿದ್ಯಾನಿಲಯ ಹಾಗೂ ಕೇರಳ ರಾಜ್ಯ ಸರಕಾರವು ಉತ್ತಮ ಯೋಜನಾಧಿಕಾರಿ ಪ್ರಶಸ್ತಿಯನ್ನು ಇವರಿಗೆ ನೀಡಿತ್ತು. ಕೇರಳ ಸರಕಾರವು ಉತ್ತಮ ಸೇವೆಗಾಗಿ ಸರಕಾರಿ ಉದ್ಯೋಗಿಗಳಿಗೆ ನೀಡುವ 'ಗುಡ್ ಸರ್ವೀಸ್ ಎಂಟ್ರಿ' ವಿಶೇಷ ಗೌರವಕ್ಕೆ ಮಲ್ಲಮೂಲೆ ಭಾಜನರಾಗಿದ್ದಾರೆ.
ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ವಿಶೇಷ ಪ್ರೀತಿ ಗೌರವ ಇರುವ ಇವರು ತನ್ನ ಒಡನಾಡಿ ಸ್ನೇಹಿತರ ಜತೆಗೂಡಿ ಪುನರ್ನವ ಎಂಬ ಟ್ರಸ್ಟ್ ಮೂಲಕ ಪ್ರತಿ ವರ್ಷವೂ ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೆ ಸಹಾಯಧನ ಮತ್ತು ಶೈಕ್ಷಣಿಕ ಪರಿಕರ ನೀಡುತ್ತಿದ್ದಾರೆ. ಮಣ್ಣು, ಜಲ, ಹಾಗೂ ಪರಿಸರ ಕಾಳಜಿಗೆ ವಿಶೇಷ ಒತ್ತು ಕೊಡುವ ಮಲ್ಲಮೂಲೆ ತನ್ನ ವಿದ್ಯಾರ್ಥಿ ಯುವಮನಸ್ಸುಗಳನ್ನು ಜತೆಸೇರಿಸಿ, ಕನ್ನಡ ಕಂದನ ಸಿರಿಚಂದನ ಗಿಡ ಯೋಜನೆ ಮೂಲಕ, ಜಿಲ್ಲೆಯ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ಮನೆಗೆ ತೆರಳಿ ಅವರ ಪರಿಸರ ಕಾಳಜಿಯನ್ನು ಪೋಷಿಸುವ ಮನೋಭಾವಕ್ಕೆ ನೀರೆರೆಯುತ್ತಿದ್ದಾರೆ. ತಮ್ಮ ಸ್ವಂತ ಮಕ್ಕಳ ಜನ್ಮದಿನವನ್ನು ಗಿಡನೆಟ್ಟು ಆಚರಿಸುವ ಮೂಲಕ ಗಮನಸೆಳೆದ ಇವರು ಪರಿಸರ ಜಾಗೃತಿಯನ್ನು ತನ್ನ ನಿತ್ಯಬದುಕಿನ ಭಾಗವಾಗಿ ಕ್ರಿಯಾತ್ಮಕವಾಗಿ ನೆರವೇರಿಸುತ್ತಿದ್ದಾರೆ. ಕಳೆದ ಎರಡು ವರುಷಗಳಿಂದ ನೀರ್ಚಾಲು ನೀರಿಲ್ಲದ ಬರಡು ಭೂಮಿಯಲ್ಲಿ ಮಾದರಿ ಕೃಷಿ ಮಾಡುವ ಮೂಲಕ ಗುರುತಿಸಿಕೊಂಡಿರುವ ಇವರು ಇಲ್ಲಿ ವಿಶೇಷ ಮಳೆಕೊಯ್ಲು ವ್ಯವಸ್ಥೆಗಾಗಿ ವಿಶೇಷ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ.
ಸುಮಾರು ಎರಡು ದಶಕಗಳ ಕಾಲೇಜು ಅಧ್ಯಾಪನ ಮತ್ತು ಸಂಶೋಧನೆಯ ಅನುಭವವಿರುವ ಮಲ್ಲಮೂಲೆಯವರು ಈಗಾಗಲೇ ನಾಡಿನ ಹಾಗೂ ಹೊರನಾಡಿನ ವಿಶ್ವವಿದ್ಯಾನಿಲಯಗಳ ರಾಷ್ಟ್ತೀಯ ಹಾಗೂ ಅಂತಾರಾಷ್ಟ್ರೀಯ ವಿಚಾರಗೋಷ್ಟಿಗಳಲ್ಲಿ ಸಂಶೋಧನ ಪ್ರಬಂಧಗಳನ್ನು ಮಂಡಿಸಿರುವ ಇವರ ಸೃಜನಶೀಲ, ಸೃಜನೇತರ ಹಾಗೂ ಸಂಶೋಧನ ಲೇಖನಗಳು ನಾಡಿನ ವಿವಿಧ ಪತ್ರಿಕೆ ಹಾಗೂ ಸಂಶೋಧನ ನಿಯತಕಾಲಿಕಗಳಲ್ಲಿ ಪ್ರಕಟವಾಗುತ್ತಿವೆ. ಹಳೆಗನ್ನಡ, ಜಾನಪದ ಮತ್ತು ಸಂಸ್ಕೃತಿ ಅಧ್ಯಯನ ಇವರ ವಿಶೇಷ ಆಸಕ್ತಿಯ ಕ್ಷೇತ್ರವಾಗಿದ್ದು, ಕರಾವಳಿ ಜಿಲ್ಲೆಗಳ ಮಣಿಯಾಣಿ ಸಮುದಾಯದ ಸಂಸ್ಕೃತಿಯ ಕುರಿತು ವಿಶೇಷ ಅಧ್ಯಯನವನ್ನು ಮಾಡಿದ್ದಾರೆ. ಕಣ್ಣೂರು ವಿವಿಯ ಸಂಶೋಧನ ಮಾರ್ಗದರ್ಶಕರಾದ ಇವರ ಮಾರ್ಗದರ್ಶನದಲ್ಲಿ ಒಬ್ಬರು ಪಿಎಚ್ಡಿ ಪದವಿಯನ್ನೂ ಮೂವರು ಎಂಪಿಲ್ ಪದವಿಯನ್ನು ಪಡೆದಿದ್ದು ಈಗ ಐದು ಮಂದಿ ಪಿಎಚ್ಡಿ ಸಂಶೋಧನ ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಪಿಎಚ್ಡಿ ಪದವಿಗಾಗಿ ಅಧ್ಯಯನ ಮಾಡುತ್ತಿದ್ದಾರೆ. ಚಪ್ಪರ ಮದುವೆ, ಮಳೆನಿಂತ ಮೇಲೆ, ಸುಳಿಗಾಳಿ ಇವು ಪ್ರಕಟಿತ ಕೃತಿಗಳು.
ಕನ್ನಡ, ಮಲೆಯಾಳ, ಇಂಗ್ಲಿಷ್ ಅನುವಾದ ಕ್ಷೇತ್ರದಲ್ಲೂ ಇವರು ಈಗಾಗಲೇ ಗುರುತಿಸಿಕೊಂಡಿದ್ದು ವಿವಿಧ ವಿಶ್ವವಿದ್ಯಾನಿಲಯಗಳ, ಪ್ರಾಧಿಕಾರ ಹಾಗೂ ಅಕಾಡೆಮಿಗಳ ಅನುವಾದ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಸುಮಾರು ಹದಿನೈದು ವರ್ಷಗಳಿಂದ ಕಣ್ಣೂರು ವಿಶ್ವವಿದ್ಯಾನನಿಲಯದ ಕನ್ನಡ ಅಧ್ಯಯನ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕನ್ನಡ ವಿದ್ಯಾರ್ಥಿಗಳ ಅಧ್ಯಯನ ಪ್ರವಾಸವನ್ನು ಪಠ್ಯಕ್ರಮದಲ್ಲಿ ಅಳವಡಿಸಲು ಏಕಾಂಗಿಯಾಗಿ ಶ್ರಮಿಸಿ ಯಶಸ್ವಿಯಾದವರು. ಕನ್ನಡ ಅಧ್ಯಯನ ಮಂಡಳಿಯಲ್ಲಿ ಕನ್ನಡೇತರರ ಪ್ರವೇಶವಾದಾಗ ತಕ್ಷಣ ಅದನ್ನು ಅಧಿಕೃತರಿಗೆ ತಿಳಿಸಿ ಸರಿಪಡಿಸಿರುವವರು. ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಮಂಡಳಿಯ ಸದಸ್ಯರಾಗಿದ್ದಾರೆ. ವಿವಿಧ ವಿಶ್ವವಿದ್ಯಾನಿಲಯಗಳ ಸಂಶೋಧನ ಪರೀಕ್ಷಾ ಮಂಡಳಿಗಳಲ್ಲಿ ಹೊರಸಂಪನ್ಮೂಲ ವ್ಯಕ್ತಿಯಾಗಿ ಸ್ಥಾನಪಡೆದಿದ್ದಾರೆ.
ಕಣ್ಣೂರು ವಿಶ್ವದ್ಯಾನಿಲಯದ ಸ್ನಾತಕೋತ್ತರ ಪರೀಕ್ಷಾ ಮಂಡಳಿ ಅಧ್ಯಕ್ಷ, ಪರೀಕ್ಷಾ ತನಿಖಾ ಸಮಿತಿ ಸಂಯೋಜಕ, ಕೇರಳ ಸರಕಾರ ಎಸ್.ಇ.ಆರ್.ಟಿ ಕನ್ನಡ ಪಠ್ಯಪುಸ್ತಕ ಸಮಿತಿಯ ಸಂಪನ್ಮೂಲ ವ್ಯಕ್ತಿ, ಕೇರಳ ಸಾಕ್ಷರತಾ ಮಿಷನ್ ನ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷ ಹಾಗೂ ಕೇರಳ ಸರಕಾರದ ವಿವಿಧ ಪರೀಕ್ಷಾ ಮಂಡಳಿಗಳ ಕನ್ನಡ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲೇಜಿನ ಸಂಶೋಧನ ಸಮಿತಿಯ ಅಧ್ಯಕ್ಷನಾಗಿ, ಸದಸ್ಯನಾಗಿ ದುಡಿಯುತ್ತಿದ್ದಾರೆ.
ಯಕ್ಷಗಾನ, ನಾಟಕ, ಕಿರುಚಿತ್ರ ಈ ಮುಂತಾದ ರಂಗಗಳಲ್ಲಿಯೂ ಗುರುತಿಸಿಕೊಂಡು ವಿದ್ಯಾರ್ಥಿಗಳನ್ನು ಮುನ್ನಡೆಸುತ್ತಿದ್ದಾರೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ 2015 ರಲ್ಲಿ ಪ್ರಾರಂಭವಾಗಿರುವ ಯಕ್ಷಗಾನ ಸಂಶೋಧನ ಕೇಂದ್ರದ ಸ್ಥಾಪಕ ಸಂಯೋಜನಾಧಿಕಾರಿಯಾಗಿ ದುಡಿಯುತ್ತಿದ್ದು, 2017 ರಲ್ಲಿ ಸಂಶೋಧನ ಕೇಂದ್ರವು ಸರಕಾರದ ವಿಶೇಷ ಅನುದಾನದೊಂದಿಗೆ ಎಡನೀರು ಮಠದಲ್ಲಿ ಆಯ್ಕೆಯಾದ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ನಡೆಸಿದ ಒಂದು ತಿಂಗಳ ಯಕ್ಷಗಾನ ಶಿಬಿರದ ಸಂಯೋಜನಾಧಿಕಾರಿಯಾಗಿ ದುಡಿದವರು. ಕೊರೊನ ಸಂದರ್ಭದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಕೇಂದ್ರ ಹಾಗೂ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ವತಿಯಿಂದ ನಡೆದ ಕೊರೊನ ಯಕ್ಷಜಾಗೃತಿ ವಿಶೇಷ ಯೋಜನೆಯಲ್ಲಿ ಇವರು ಸಹಕರಿಸಿದ್ದರು. ಮಂಗಳೂರು ಆಕಾಶವಾಣಿ ಯಕ್ಷಗಾನ ತಾಳಮದ್ಸದಳೆ ಕಾರ್ಯಕ್ರಮದ ಬಿ ಗ್ರೇಡ್ ಕಲಾವಿದರಾಗಿ ಸುಮಾರು ಹತ್ತು ವರುಷಗಳ ಕಾಲ ಗುರುತಿಸಿಕೊಂಡಿದ್ದಾರೆ.
ಕನ್ನಡದ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನ ವಿದ್ಯಾರ್ಥಿ ಬದುಕಿನಿಂದಲೇ ನಿಸ್ಪೃಹವಾಗಿ ಹಿರಿಯರ ಜತೆ ದುಡಿಯುತ್ತಿರುವ ಮಲ್ಲಮೂಲೆ ಯವರಿಗೆ ಕಾಸರಗೋಡಿನ ಕನ್ನಡ ಶಾಲೆ, ಕಾಲೇಜು ಹಾಗೂ ಉನ್ನತ ಶಿಕ್ಷಣಗಳ ಆಗುಹೋಗುಗಳು, ಸಮಸ್ಯೆಗಳು, ಸವಾಲುಗಳು ಸ್ಪಷ್ಟವಾಗಿ ತಿಳಿದಿವೆ. ಆದ ಕಾರಣ ಕಾಸರಗೋಡಿನ ಕನ್ನಡ ಪರಂಪರೆ, ಭಾಷೆ, ಸಾಹಿತ್ಯ, ಸಮಸ್ಯೆ, ಸವಾಲು, ಪರಿಹಾರೋಪಾಯಗಳ ಬಗ್ಗೆ ಚರ್ಚೆ, ಉಪನ್ಯಾಸ ಅಥವಾ ಕಮ್ಮಟಗಳು ನಡೆವಾಗ ಅಲ್ಲಿ ಮಲ್ಲಮೂಲೆಯವರು ಸಂಪನ್ಮೂಲ ವ್ಯಕ್ತಿಯಾಗಿ ಇರುತ್ತಾರೆ. ಕೇರಳದ ಕನ್ನಡ ಭಾಷಾ ಅಲ್ಪಸಂಖ್ಯಾಕರಿಗೆ ಸಂವಿಧಾನ ಬದ್ಧ ಸವಲತ್ತುಗಳೇನು? ಸರಕಾರದ ಆದೇಶಗಳೇನು? ಅವುಗಳ ಸರಿಯಾದ ಪಾಲನೆಗಾಗಿ ಕನ್ನಡಿಗರು ಮಾಡಲೇಬೇಕಾದ ಕರ್ತವ್ಯಗಳೇನೆಂಬುದರ ಬಗ್ಗೆ ಮಲ್ಲಮೂಲೆಯವರು ನಿಖರವಾಗಿ ಸ್ಪಷ್ಟವಾಗಿ ಮತ್ತು ಅಧಿಕೃತವಾಗಿ ಮಾತನಾಡಬಲ್ಲರು. ಕನ್ನಡದ ಶೈಕ್ಷಣಿಕ, ಔದ್ಯೋಗಿಕ ಸಮಸ್ಯೆಗಳು ಎದುರಾದಗೆಲ್ಲ ಕಾಸರಗೋಡಿನ ಕನ್ನಡಿಗರು, ವಿದ್ಯಾರ್ಥಿಗಳು ಇವರನ್ನು ಸಂಪರ್ಕಿಸುತ್ತಾರೆ. ಯಾವುದೇ ಕನ್ನಡಪರ ಸಂಸ್ಥೆಗಳ ಪದಾದಿಕಾರಿಯಲ್ಲದಿದ್ದ ವೇಳೆಯಲ್ಲೂ ಶಕ್ತಿಮೀರಿ ದುಡಿದು ಸಮಸ್ಯೆಗಳನ್ನು ಪರಿಹರಿಸಿದ ಉದಾಹರಣೆಗಳು ಮಲ್ಲಮೂಲೆಯವರೆದುರಿಗಿವೆ. ಮಲ್ಲಮೂಲೆಯವರ ಸುಧೀರ್ಘಕಾಲದ ಈ ಅನುಭವವು ಅವರಿಗೆ ಈ ಕ್ಷೇತ್ರದಲ್ಲಿ ಅವರಿಗೆ ಮುಂದೊತ್ತಿ ಸಾಗಲು ಅನುಕೂಲವಾಗಬಹುದು. ಕನ್ನಡ ಕಲಿತವರು ಹಾಗೂ ಕನ್ನಡದಿಂದ ಔದ್ಯೋಗಿಕ ಬದುಕು ಕಟ್ಟಿಕೊಂಡ ಕಾಸರಗೋಡಿನ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಸರಕಾರಿ ಅಥವಾ ಸರಕಾರಿ ಅನುದಾನಿತ ಶಾಲೆಗೆ ಕಳುಹಿಸುವ ಮೂಲಕ ಸೊರಗುತ್ತಿರುವ ಕಾಸರಗೋಡಿನ ತಲಸ್ಪರ್ಶಿ ಕನ್ನಡಕ್ಕೆ ಶಕ್ತಿಯಾಗಬೇಕೆಂದು ಭಾಷಣಗಳಲ್ಲೂ ಬರವಣಿಗೆಯಲ್ಲೂ ಸದಾ ಎಚ್ಚರಿಸುವ ಅವರು ತನ್ನ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಕಳುಹಿಸಿ ತನ್ನ ನುಡಿ, ಬರವಣಿಗೆ ಮತ್ತು ನಡೆಯಲ್ಲಿ ಒಮ್ಮತವನ್ನು ರೂಪಿಸಿಕೊಂಡವರು.
ಸರಳತೆ, ಸಮಾನತೆ, ಮಾನವೀಯತೆ, ಜಾತ್ಯತೀತ ಮನೋಭಾವ, ಪ್ರಜಾಸತ್ತಾತ್ಮಕ ನಿಲುವು, ಪರಿಸರಪ್ರೀತಿ, ಕಠಿಣಪರಿಶ್ರಮ, ಅಧ್ಯಯನ, ನಿರಂತರ ಬರವಣಿಗೆ, ನಿಖರತೆ, ನಡೆ ನುಡಿಯಲ್ಲಿನ ಸಮಭಾವ ಮತ್ತು ನ್ಯಾಯಕ್ಕಾಗಿ ಧ್ವನಿಯೆತ್ತುವ ಸ್ಥೈರ್ಯಗುಣ, ಭಾಷೆ,ದೇಶ, ಪರಂಪರೆ ಮತ್ತು ಸಂಸ್ಕೃತಿ ಬಗೆಗಿನ ನಿಷ್ಠೆ ಹಾಗೂ ಕಾನೂನಿನ ಜ್ಞಾನ ಹೀಗೆ ರಾಷ್ಟ್ರದ ಸಂವಿಧಾನದ ಮೌಲ್ಯತತ್ವಗಳಿಗೆ ಪೂರಕವಾಗಿ ಬದುಕು ರೂಪಿಸಿಕೊಂಡ ಮಲ್ಲಮೂಲೆಯವರ ಅರ್ಹತೆ ಮತ್ತು ಯೋಗ್ಯತೆಗೆ ಸಂದ ಸೆನೆಟ್ ಸದಸ್ಯ ಸ್ಥಾನವು ಕಾಸರಗೋಡಿನ ಕನ್ನಡಕ್ಕೆ ಮತ್ತು ಉನ್ನತ ಶಿಕ್ಷಣ ವಲಯಕ್ಕೆ ಶಕ್ತಿ ಮತ್ತು ಸ್ಪೂರ್ತಿಯಾಗುವುದರಲ್ಲಿ ಸಂಶಯವಿಲ್ಲ. ಮೂರು ದಶಕಗಳಿಂದ ಕಾಸರಗೋಡಿನ ಕನ್ನಡಿಗರು ಎದುರು ನೋಡುತ್ತಾ ಬಂದಿರುವ ವಿಶ್ವವಿದ್ಯಾನಿಲಯದ ಪ್ರಧಾನ ಆಡಳಿತ ಸಮಿತಿಗೆ ನಾಮನಿರ್ದೇಶನಗೊಂಡ ಡಾ.ರತ್ನಾಕರ ಮಲ್ಲಮೂಲೆಯವರಿಗೆ ಸನ್ಮನಸ್ಸಿನಿಂದ ಶುಭಹಾರೈಸಿ ಅಭಿನಂದಿಸೋಣ. ಅವರ ಆಡಳಿತ ಕಾಲದಲ್ಲಿ ಕನ್ನಡಿಗರು ಕಳೆದುಕೊಂಡುದನ್ನು ಮರಳಿಪಡೆಯುವ ಹಾಗೂ ಹೊಸತನ್ನು ಗಳಿಸುವ ಶುಭ ನಿರೀಕ್ಷೆಯನ್ನಿರಿಸೋಣ.
ಕಾರ್ತಿಕ್ ಪಡ್ರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ