ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಅವರು ಇಂದು ಬೆಳಗ್ಗೆ ಬೃಹತ್ ಮೆರವಣಿಗೆಯೊಂದಿಗೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಮೊದಲು ಪಕ್ಷದ ಚುನಾವಣಾ ಕಾರ್ಯಾಲಯದಲ್ಲಿ ಗೋಪೂಜೆ ನೆರವೇರಿಸಿದ ಬಳಿಕ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಆಗಮಿಸಿದ ಸಾವಿರಾರು ಕಾರ್ಯಕರ್ತರ ಜತೆಗೆ ಚುನಾವಣಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ನಡೆಸಲಾಯಿತು. ಚೆಂಡೆ, ಡೋಲು, ಕಹಳೆಗಳೊಂದಿಗೆ ಬಿರು ಬಿಸಿಲಿನಲ್ಲೂ ಸಾವಿರಾರು ಜನರು ಕೇಸರಿ ಬಾವುಟಗಳನ್ನು ಬೀಸುತ್ತ ಪುರಭವನದ ವರೆಗೆ ಮೆರವಣಿಗೆ ನಡೆಸಿದರು.
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳು ಕಳುಹಿಸಿದ ಮಂತ್ರಾಕ್ಷತೆ ಮತ್ತು ಶಾಲನ್ನು ಈ ಸಂದರ್ಭದಲ್ಲಿ ಅಭ್ಯರ್ಥಿ ಬೃಜೇಶ ಚೌಟರಿಗೆ ಚುನಾವಣಾ ಪ್ರಭಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ನೀಡಿ ಹರಸಿದರು.
ನಾಮಪತ್ರ ಸಲ್ಲಿಕೆ ಮೆರವಣಿಗೆ, ಸಮಾವೇಶದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಕುಂಪಲ, ಬಿಜೆಪಿ ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ ಭರತ್ ಶೆಟ್ಟಿ, ಹರೀಶ್ ಪೂಂಜಾ, ರಾಜೇಶ್ ನಾಯಕ್ ಉಳೆಪಾಡಿಗುತ್ತು, ಉಮಾನಾಥ ಕೋಟ್ಯಾನ್, ಭಾಗೀರಥಿ ಮುರುಳ್ಯ, ಯಶಪಾಲ್ ಸುವರ್ಣ, ಸುನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಅರುಣ್ ಪುತ್ತಿಲ, ಚುನಾವಣಾ ಪ್ರಭಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಸಿ.ಟಿ ರವಿ, ಮಿತ್ರ ಪಕ್ಷ ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.
ಇದು ಐತಿಹಾಸಿಕ ಚುನಾವಣೆ: ಸಂಸದ ನಳಿನ್ ಕಟೀಲು
ಮತ್ತೊಮ್ಮೆ ಬಿಜೆಪಿಗೆ ಅವಕಾಶ ಕೊಡಲು ಜನತೆ ನಿರ್ಧರಿಸಿದ್ದಾರೆ. 15 ವರ್ಷ ಸೇನೆಯಲ್ಲಿ ಕೆಲಸ ಮಾಡಿ ಬಳಿಕ ಬಿಜೆಪಿ ಸೇರಿ ವಿವಿಧ ಹಂತಗಳಲ್ಲಿ ಕೆಲಸ ಮಾಡಿ ಇಂದು ಲೋಕಸಭಾ ಅಭ್ಯರ್ಥಿಯಾಗಿ ವರಿಷ್ಠರಿಂದ ಆಯ್ಯೆಯಾಗಿ ನಿಮ್ಮ ಮುಂದೆ ನಿಂತಿದ್ದಾರೆ. ಅವರನ್ನು ಗೆಲ್ಲಿಸಿಕೊಳ್ಳಬೇಕು. ಕಳೆದ 15 ವರ್ಷಗಳಿಂದ ಲೋಕಸಭಾ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಈ ಬಾರಿ ನಮ್ಮ ಅಭ್ಯರ್ಥಿಯಾಗಿರುವ ಬೃಜೇಶ್ ಚೌಟರನ್ನು ಹಿಂದಿನ ಅಂತರಕ್ಕಿಂತಲೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿಕೊಳ್ಳುತ್ತೇವೆ. ಹಿಂದಿನ ಸಲ 2.74 ಲಕ್ಷ ಮತಗಳ ಅಂತರದ ಗೆಲವು ಸಾಧಿಸಿದ್ದೆ. ಈ ಬಾರಿ ಚೌಟರಿಗೆ 3 ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು ನಿಶ್ಚಿತ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕನಸು ಸಾಕಾರವಾಗಿದೆ. ಇವತ್ತು ನಮ್ಮೊಂದಿಗೆ ಬಂದಿರುವ ಜನಸಾಗರ ನೋಡಿದರೆ ಈ ಬಾರಿ ಭಾರೀ ಅಂತರದ ಗೆಲುವು ನಿಶ್ಚಿತ. ಆದರೆ ಅತಿಯಾದ ಆತ್ಮವಿಶ್ವಾಸದಲ್ಲಿ ಮೈಮರೆಯಬಾರದು. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ 1 ಲಕ್ಷದ 14 ಸಾವಿರ ಕೋಟಿ ರೂ.ಗಳ ಅನುದಾನ ಕೊಟ್ಟಿರುವ ಮೋದಿ ಅವರಿಗೆ ಈ ಬಾರಿ 400 ಸೀಟುಗಳನ್ನು ಗೆಲ್ಲಿಸಿ ಕೊಡುಗೆ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ನನಗೆ ಹೇಗೆ ಆಶೀರ್ವಾದ ಮಾಡಿ ಸಹಕಾರ ಕೊಟ್ಟಿದ್ದೀರೋ, ಅದೇ ರೀತಿ ಬೃಜೇಶ್ ಚೌಟರಿಗೆ ಆಶೀರ್ವಾದ ಮಾಡಿ ಬೆಳೆಸಿ ಎಂದು ನಳಿನ್ ವಿನಂತಿಸಿದರು.
ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಕೋಟ ಶ್ರೀನಿವಾಸ ಪೂಜಾರಿ ಅವರು ಹಲವು ಕೊಡುಗೆಗಳನ್ನು ಕೊಟ್ಟಿದ್ದಾರೆ. ಈ ಬಾರಿಯ ಲೋಕಸಭೆಗೆ ಮಂಗಳೂರಿನಿಂದ ಚೌಟ, ಉಡುಪಿಯಿಂದ ಕೋಟ ನಿಶ್ಚಿತ ಎಂದು ಅವರು ನುಡಿದರು.
ಲಕ್ಷಾಂತರ ಮತಗಳಿಂದ ಗೆಲ್ಲಿಸಿ: ಕೋಟ
ವೇದಿಕೆಗೆ ಬರುವಾಗ ನಮ್ಮೆಲ್ಲರ ಪ್ರೀತಿಯ ಬೃಜೇಶ್ ಚೌಟರ ಕೈ ಹಿಡಿದುಕೊಂಡು ಬಂದಿದ್ದೇನೆ. ಅದೇ ಕೈಹಿಡಿದುಕೊಂಡು ನಾಡಿದ್ದು ಸಂಸತ್ ಭವನಕ್ಕೆ ಪ್ರವೇಶ ಮಾಡುತ್ತೇವೆ. ಈ ಚುನಾವಣೆ ಭಾರತದ ಭವಿಷ್ಯ ಬರೆಯುವ ಚುನಾವಣೆ. ಭಾರತದ ಆರ್ಥಿಕ ವ್ಯವಸ್ಥೆ ಹೇಗಿರಬೇಕು, ಸಮೃದ್ಧವಾಗಿರಬೇಕು ಎಂದು ಚಿಂತನೆ ಮಾಡುವ ಚುನಾವಣೆ. ಸೈನಿಕರಿಗೆ ಬೆಂಬಲ ಕೊಟ್ಟು ಶಕ್ತಿ ಕೊಡುವ ಚುನಾವಣೆ. ಭಾರತೀಯರಿಗೆ ನೆಮ್ಮದಿಯ ಬದುಕನ್ನು ಕೊಡಲು ಸಮರ್ಥರು ಯಾರು ಅವರಿಗೆ ಅಧಿಕಾರ ಕೊಡುವ ಚುನಾವಣೆ. ಇದು ಕೇವಲ ಬಿಜೆಪಿಯ ಚುನಾವಣೆ ಅಲ್ಲ. ಭಾರತದ ಮುಂದಿನ ಪ್ರಧಾನಿ ಮೋದಿ ಮತ್ತೊಮ್ಮೆ ಆಗಬೇಕು ಎಂದು ಚೌಟರನ್ನು ಲಕ್ಷಾಂತರ ಮತಗಳಿಂದ ಗೆಲ್ಲಿಸುವ ಚುನಾವಣೆ ಆಗಬೇಕು ಎಂದು ಉಡುಪಿ ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ನುಡಿದರು.
ಕಾಂಗ್ರೆಸ್ಗೆ ಚಾಟಿ ಬೀಸಿದ ಕೋಟ
ಕರ್ನಾಟಕದ ಆತ್ಮ ವಿಧಾನ ಸೌಧದಲ್ಲಿ ಕೆಂಗಲ್ ಹನುಮಂತಯ್ಯನವರು ಕಟ್ಟಿದ ಸೌಧದಲ್ಲಿ ಭಾರತಕ್ಕೆ ಜೈಕಾರ ಹಾಕಬೇಕಾದಲ್ಲಿ ಪಾಕ್ಗೆ ಜೈಕಾರ ಹಾಕುತ್ತಾರೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದವರನ್ನು ಮೃದು ನೀತಿಯಿಂದ ನೋಡುವವರು ನಮಗೆ ಬೇಕಾ? ಕುಕ್ಕರ್ ಬಾಂಬರ್ಗೆ ಬ್ರದರ್ ಅನ್ನುವವರು ಬೇಕಾ? ಎಂದು ಪ್ರಶ್ನಿಸಿದರು.
ಸಮರ್ಥ ಭಾರತ, ಸಮೃದ್ಧ, ಶಕ್ತಿಶಾಲಿ ಶಾಂತಿಯುತ ಭಾರತ ನಿರ್ಮಾಣ ಮಾಡಲು ಶಕ್ತರಾದವರು ಪ್ರಧಾನಿ ಮೋದಿ. ಒಂದು ಕಾಲದಲ್ಲಿ ಭಾರತದ ಸ್ಥಿತಿ ಹೇಗಿತ್ತು ಯೋಚಿಸಿ. ಭಾರತದ ಚಿನ್ನವನ್ನು ವಿದೇಶಕ್ಕೆ ಅಡವಿಟ್ಟಿದ್ದರು. ಆದರೆ ಇಂದು ನಮ್ಮ ಭಾರತ 70 ದೇಶಗಳಿಗೆ ಸಾಲ ಕೊಡುವ ಸ್ಥಿತಿಗೆ ಬೆಳೆದಿದೆ. ಅಂತಹ ಸ್ಥಿತಿಯಿಂದ ಭಾರತದ ಆರ್ಥಿಕತೆಯನ್ನು ಇಂದಿನ ಈ ಸ್ಥಿತಿಗೆ ಬೆಳೆಸಿದ್ದು ಪ್ರಧಾನಿ ಮೋದಿ ಅವರ ನಾಯಕತ್ವ. ಇದನ್ನು ನಾವು ನೆನಪಿಟ್ಟುಕೊಳ್ಳಬೇಕು ಎಂದರು.
ಒಂದು ಕಾಲದಲ್ಲಿ ಭಾರತದ ಸೈನಿಕರಿಗೆ ಯಾವುದೇ ಸೌಲಭ್ಯವಿರಲಿಲ್ಲ. ಆ ಬಗ್ಗೆ ಬ್ರಿಗೇಡಿಯರ್ ಜಾನ್ ಪಿ ದಳವಿ ಬರೆದ ಹಿಮಾಲಯನ್ ಬ್ಲಂಡರ್ ಪುಸ್ತಕ ಓದಿದರೆ ಗೊತ್ತಾಗುತ್ತದೆ. ಈ ಪುಸ್ತಕವನ್ನು ಓದಿದ ಬಳಿಕವೂ ಅಂದಿನ ಪ್ರಧಾನಿ ನೆಹರೂ ಬಗ್ಗೆ ನಂತರವೂ ಗೌರವ ಉಳಿದರೆ ಅಂಥವರ ದೇಶಭಕ್ತಿಗೆ ನನ್ನ ಧಿಕ್ಕಾರ ಎಂದು ಆ ಪುಸ್ತಕ ಬರೆದ ಬ್ರಿಗೇಡಿಯರ್ ಜಾನ್ ಪಿ ದಳವಿ ಹೇಳಿದ್ದರು. ಆ ಮಾತನ್ನು ಈಗ ನೆನಪಿಸಿಕೊಳ್ಳಬೇಕಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ನುಡಿದರು. ಇಂದು ಕ್ಯಾಪ್ಟನ್ ಚೌಟರ ನಾಮಪತ್ರವನ್ನು ಸ್ವೀಕರಿಸಿದ ಅಧಿಕಾರಿಗಳು ನಾಡಿದ್ದು ಗೆಲುವಿನ ಸರ್ಟಿಫಿಕೇಟ್ ಕೊಡುತ್ತಾರೆ ಅನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈಗ ಇರುವುದು ಗೆಲುವಿನ ಅಂತರವನ್ನು ಹೆಚ್ಚಿಸುವುದು ಅಷ್ಟೆ ಎಂದು ಅವರು ಹೇಳಿದರು.
**********************
ಹಿಂದುತ್ವದ ಭದ್ರಕೋಟೆಯ ಧ್ವನಿ ದೇಶಕ್ಕೆ ಕೇಳಿಸಲಿ: ಚೌಟ
ಕ್ಯಾಪ್ಟನ್ ಚೌಟರು ನಾಮಪತ್ರ ಸಲ್ಲಿಕೆಗೆ ಮೊದಲು ನಗರದ ಪುರಭವನದಲ್ಲಿ ಪಾದಯಾತ್ರೆ ಕೊನೆಗೊಳಿಸಿದ ಬಳಿಕ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಬೋಲೋ ಭಾರತ್ ಮಾತಾಕಿ. ವಂದೇ ಮಾತರಂ ಘೋಷಣೆಯೊಂದಿಗೆ ಮಾತು ಆರಂಭಿಸಿದರು.
ಹಿಂದುತ್ವದ ಭದ್ರಕೋಟೆಯ ಶಕ್ತಿಯನ್ನು ಇಡೀ ದೇಶಕ್ಕೆ ಕೇಳಿಸುವ ಅವಶ್ಯಕತೆ ಇದೆ. 2024ರಲ್ಲಿ ವಿಶೇಷವಾದ ಚುನಾವಣೆ ಇದು. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ನನ್ನಂತಹ ಯುವ ಕಾರ್ಯಕರ್ತನಿಗೆ ಅವಕಾಶ ಸಿಕ್ಕಿದೆ. ನಿಮ್ಮ ಪ್ರೀತಿ ವಿಶ್ವಾಸ ಇದ್ದರೆ ಮೋದಿಯವರ ವಿಕಸಿತ ಭಾರತದ ಕಲ್ಪನೆಗೆ ವಿಕಸಿತ ದಕ್ಷಿಣ ಕನ್ನಡ ನಿರ್ಮಿಸಬಹುದು ಎಂದರು.
ಜಿಲ್ಲೆಯ ಜನರ ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಂಡು ಅಭಿವೃದ್ಧಿ ಮಾಡೋಣ. ಹಿಂದುತ್ವದ ಭದ್ರಕೋಟೆಯಾಗಿ ಉಳಿಸಿಕೊಂಡು ಅಭಿವೃದ್ಧಿ. ಹಿಂದುತ್ವಕ್ಕೆ ಬದ್ಧತೆ, ಅಭಿವೃದ್ಧಿಗೆ ಆದ್ಯತೆ ಎಂದು ಪುನರುಚ್ಚರಿಸಿದರು.
ಕಮಲದ ಹೂವಿನ ಬಗ್ಗೆ ಮನೆ ಮನೆಗೆ ತೆರಳಿ ಮಾತನಾಡಿ. ಮೋದಿಯವರ ಸಾಧನೆಗಳ ಬಗ್ಗೆ ಮಾತನಾಡಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
***********
ದ.ಕ.ಗೆ ಚೌಟ, ಉಡುಪಿಗೆ ಕೋಟ, ಕಾಂಗ್ರೆಸ್ಗೆ ಗೂಟ: ಸಿ.ಟಿ. ರವಿ
ಇದು ಜಾತಿ ಉಳಿಸುವ ಚುನಾವಣೆ ಅಲ್ಲ, ದೇಶ ಉಳಿಸುವ ಚುನಾವಣೆ
ಕೇಸರಿ ಶಾಲು ಬೀಸಿ ಭಾರತ್ ಮಾತಾಕಿ ಜೈ, ಜೈಶ್ರೀರಾಂ ಹರೋಹರ ಘೋಷಣೆ ಕೂಗಿ ಮಾತು ಆರಂಭಿಸಿದ ಪಕ್ಷದ ನಾಯಕ ಸಿ.ಟಿ ರವಿ ಅವರು, ಈಗ ಭಾರತದಲ್ಲಿ ಬೀಸುತ್ತಿರುವದು ಕೇಸರಿ ಗಾಳಿ, ಹಿಂದುತ್ವದ ಗಾಳಿ, ರಾಷ್ಟ್ರ ಭಕ್ತಿಯ ಗಾಳಿ ಎಂದು ಹೇಳಿದರು.
''ಬಸನಗೌಡ ಪಾಟೀಲ್ ಯತ್ನಾಳರು ಒಂದು ಮಾತು ಹೇಳಿದ್ರು. ಉಡುಪಿಗೆ ಕೋಟಾ ಮಂಗಳೂರಿಗೆ ಚೌಟ ಅಂತ. ನಾನು ಅದಕ್ಕೆ ಇನ್ನೊಂದು ಮಾತು ಸೇರಿಸಿ ಹೇಳುತ್ತೇನೆ ಕಾಂಗ್ರೆಸ್ಗೆ ಗೂಟ, ಬಗಣಿ ಗೂಟ. ಒಮ್ಮೆ ಬಿತ್ತು ಅಂದ್ರೆ ಮತ್ತೆ ಮೇಲೆ ಏಳುವಂತಿಲ್ಲ. ಕಾಂಗ್ರೆಸ್ಗೆ ಅಂತಹ ಗೂಟ ಹೊಡೆಯಬೇಕು. ಎನ್ಡಿಎ 28 ಅಭ್ಯರ್ಥಿಗಳು ಗೆದ್ದುಬೇಕು, ನರೇಂದ್ರ ಮೋದಿ ಅವರಿಗೆ ಬೆಂಬಲ ಕೊಡಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರ ಬಂಧುಗಳು ಮನೆ ಮನೆಗೆ ತೆರಳಿ ಕಮಲದ ಹೂವಿಗೆ ಮತ ಹಾಕುವಂತೆ ಮತದಾರ ಬಂಧುಗಳಲ್ಲಿ ವಿನಂತಿ ಮಾಡಿಕೊಳ್ಳಿ'' ಎಂದು ಸಿ.ಟಿ ರವಿ ನುಡಿದರು.
ಕೇರಳ ಸರಕಾರ ಸಾಲ ಕೊಡಿ ಅಂತ ಕೋರ್ಟಿಗೆ ಹೋಗಿದೆ. ಕೇರಳ ಸರಕಾರ ಈಗ ಪೂರ್ಣ ದಿವಾಳಿಯಾಗಿದೆ. ಕಂಠಪೂರ್ತಿ ಸಾಲ ಮಾಡಿಕೊಂಡು ಮೇಲೆ ಏಳದಂತಹ ಸ್ಥಿತಿಗೆ ತಲುಪಿದೆ. ಕರ್ನಾಟಕವೂ ಈಗ ಅದೇ ದಾರಿಯಲ್ಲಿ ಹೋಗುತ್ತಿದೆ. ಸಿದ್ದರಾಮಿಕ್ಸ್ ಬಂದ ಮೇಲೆ ಯಾವ್ಯಾವುದರ ಬೆಲೆ ಏರಿಸಿದ್ದಾರೆ ಗೊತ್ತಾ? ಎಂದು ಪ್ರಶ್ನಿಸಿದ ಸಿ.ಟಿ ರವಿ, ಒಂದೊಂದರ ವಿವರವನ್ನೂ ಬಿಡಿಸಿಟ್ಟರು. ಸಿದ್ದರಾಮಯ್ಯ ಎಕನಾಮಿಕ್ಸ್ ಎಂಬುದನ್ನು ಸಿದ್ದರಾಮಿಕ್ಸ್ ಎಂದು ಗೇಲಿ ಮಾಡಿದ ಅವರು, ಸಿದ್ದರಾಮಯ್ಯ ಮದ್ಯದ ಬೆಲೆ ಏರಿಸಿದ್ರು, ಕರೆಂಟ್ ಬೆಲೆ ಏರಿಸಿದ್ರು, ಪಹಣಿ ಶುಲ್ಕ 15ರಿಂದ 25 ರೂ ಮಾಡಿದ್ರು., ಆರ್ಟಿಸಿ ಶುಲ್ಕ 25 ರೂ ಮಾಡಿದ್ರು.. ಸ್ಟಾಂಪ್ ಪೇಪರ್ ಶುಲ್ಕ ಕನಿಷ್ಠ 25 ರೂ ಇದ್ದುದನ್ನು 500 ರೂ. ಮಾಡಿದ್ರು. ಒಂದು ಬೆಲೆ ಏರಿಸಿ ಇನ್ನೊಂದು ಕಡೆ ಬಿಟ್ಟಿ ಭಾಗ್ಯಗಳನ್ನು ಕೊಟ್ಟೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಚಾಟಿ ಬೀಸಿದರು ಸಿ.ಟಿ ರವಿ.
ಉಚಿತ ಗ್ಯಾರಂಟಿಗಳ ಹೆಸರು ಹೇಳಿ, ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಜನರ ಕಿಸೆಗೆ ಕನ್ನ ಹಾಕಿ, ಅದನ್ನೇ ಕೊಡುವಂತೆ ನಾಟಕ ಮಾಡಿ ತಾನೇ ಕೊಟ್ಟೆ, ಬಿಟ್ಟಿ ಗ್ಯಾರಂಟಿಗಳನ್ನು ಜಾರಿ ಮಾಡಿದೆ ಎಂದು ಹೇಳಿಕೊಳ್ಳುತ್ತಿದೆ. ಜನರಿಗೆ ಅಕ್ಕಿ ಕೊಟ್ಟಿದ್ದು ಕೇಂದ್ರ ನರೇಂದ್ರ ಮೋದಿ ಸರಕಾರ, ಸಿದ್ದರಾಮ್ಯ ಸರಕಾರದ್ದು ಒಂದು ಕಾಳೂ ಅಕ್ಕಿಯೂ ಇಲ್ಲ. ನಾನು ಕೊಟ್ಟೆ ನಾನು ಕೊಟ್ಟೆ ಅನ್ನುತ್ತ ಬುರುಡೆ ಬಿಡುತ್ತಿದ್ದಾರೆ ಅಷ್ಟೆ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅನ್ನು ಪರ್ಮನೆಂಟ್ ಆಗಿ ಕಾಡಿಗೆ ಕಳಿಸಬೇಕು. ಕಾಂಗ್ರೆಸ್ ಗೆದ್ದಾಗ ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗುವವರು ಬೇಕೆ? ಅವರಿಗೆ ಶಕ್ತಿ ಕೊಟ್ಟರೆ ಪಂಚಾಯತ್ನಿಂದ ಪಾರ್ಲಿಮೆಂಟ್ ವರೆಗೆ ಅದೇ ಮನಸ್ಥಿತಿಯವರಿಗೆ ಮಣೆ ಹಾಕಿದಂತಾಗುತ್ತದೆ. ದೇಶದ್ರೋಹಿಗಳ ಬೆಂಬಲ ಪಡೆದು ಗೆಲ್ಲಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಗೆಲುವನ್ನು ಪಾಕಿಸ್ತಾನ ಸಂಭ್ರಮಿಸುತ್ತದೆ. ದೇಶದ್ರೋಹಿಗಳು ಸಂಭ್ರಮಿಸುತ್ತಾರೆ. ಹಾಗಾಗ ಭಾರತವನ್ನು ಬಲಿಷ್ಠಗೊಳಿಸಲು ಕೇಸರಿ ಗಾಳಿ ಮನೆ ಮನೆಗೆ ತಲುಪಬೇಕು. ಒಂದೊಂದು ಓಟೂ ಮುಖ್ಯ. ಒಂದೊಂದು ಸೀಟೂ ಮುಖ್ಯ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಒಂದೇ ಮತದಿಂದ ಸೋತಿರುವುದನ್ನು ನೆನಪಿಸಿಕೊಳ್ಳಿ ಎಂದು ರವಿ ಹೇಳಿದರು.
ಜಾತಿ ಹೆಸರಿನಲ್ಲಿ ಗೆಲ್ಲುವ ಕಾಂಗ್ರೆಸ್ ತಂತ್ರಕ್ಕೆ ತಿರುಗೇಟು ನೀಡಿದ ಅವರು, ಇದು ಜಾತಿ ಉಳಿಸುವ ಚುನಾವಣೆ ಅಲ್ಲ; ದೇಶ ಉಳಿಸುವ ಚುನಾವಣೆ. ದೇಶ ಉಳಿದರೆ ಮಾತ್ರ ನೀನು- ನಾನು, ನಮ್ಮ ಜಾತಿ, ದೇಶವೇ ಇಲ್ಲದಿದ್ದರೆ ನಾವ್ಯಾರೂ ಇಲ್ಲ ಎಂದು ಎಚ್ಚರಿಸಿದರು. ದೇಶದ ನೇತೃತ್ವ ಮೋದಿಗೆ, ದಕ್ಷಿಣ ಕನ್ನಡದ ನೇತೃತ್ವ ಚೌಟರಿಗೆ, ಉಡುಪಿ ನೇತೃತ್ವ ಕೋಟ ಶ್ರೀನಿವಾಸ ಪೂಜಾರಿ ಅವರ ಕೈಯ್ಯಲ್ಲಿರಬೇಕು ಎಂದು ಅವರು ಹೇಳಿದರು.
************
ಜಾತಿ-ಧರ್ಮದ ವಿಷಯ ಅಲ್ಲ, ದೇಶ ಉಳಿಸುವ ವಿಷಯ: ಪ್ರಮೋದ್ ಮಧ್ವರಾಜ್
ಇವತ್ತು ದೇಶದ ಜನತೆಗೆ ನರೇಂದ್ರ ಮೋದಿಯವರನ್ನು ಇನ್ನೊಮ್ಮೆ ದೇಶದ ಪ್ರಧಾನಿಯಾಗಿ ಮಾಡುವ ದೊಡ್ಡ ಗುರಿ ಇದೆ. ಅದರ ಮುಂದೆ ಯಾವ ಜಾತಿಯೂ ಇಲ್ಲ, ಯಾವ ಧರ್ಮವೂ ಇಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಕೋಟ ಶ್ರೀನಿವಾಸ ಪೂಜಾರಿಯವರು 37 ವರ್ಷದ ಹಿಂದೆಯೂ ಎಂಪಿ (ಮೆಂಬರ್ ಆಫ್ ಪಂಚಾಯತ್) ಆಗಿದ್ದರು; ಈಗಲೂ ಎಂಪಿ (ಮೆಂಬರ್ ಆಫ್ ಪಾರ್ಲಿಮೆಂಟ್) ಆಗುತ್ತಿದ್ದಾರೆ . ಪಂಚಾಯತ್ ಸದಸ್ಯನನ್ನು ಸೈನಿಕನ್ನು ಪಾರ್ಲಿಮೆಂಟಿಗೆ ಕಳಿಸುವ ಶಕ್ತಿ ಇದ್ದರೆ ಅದು ಬಿಜೆಪಿಗೆ ಮಾತ್ರ. ಪ್ರಧಾನಿ ಮೋದಿಯವರು 400 ಸೀಟುಗಳ ಬೇಡಿಕೆ ಇಟ್ಟಿದ್ದಾರೆ. ಅದರಲ್ಲಿ ಮೊದಲ ಸೀಟು ದಕ್ಷಿಣ ಕನ್ನಡದಿಂದ ಹೋಗಬೇಕು. ಚೌಟರು ಗೆಲ್ಲುವುದರಲ್ಲಿ ಸಂದೇಹ ಇಲ್ಲ. 5 ಲಕ್ಷ ಅಂತರದಿಂದ ಗೆಲ್ಲಿಸಿ ಎಂದು ಕರೆ ನೀಡಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರುವಾರ ವಂದನಾರ್ಪಣೆ ನೆರವೇರಿಸಿದರು, ದೇವದಾಸ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ