ತ್ಯಾಗದ ಪ್ರತೀಕ ‘ಸ್ತ್ರೀ’

Upayuktha
0

 ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ತನ್ನಿಮ್ಮಿತ ಸಕಾಲಿಕ ಲೇಖನ




ಹಿಳೆಯರು  ಪುರುಷರೊಡನೆ ಸಮಾನವಾಗಿ ಸ್ವತಂತ್ರವಾಗಿ ತಲೆಯೆತ್ತಿಕೊಂಡು ದಿಟ್ಟತನದಿಂದ ಬದುಕಬೇಕೆಂಬುದರಲ್ಲಿ ಸ್ವಲ್ಪವೂ ಭಿನ್ನಾಭಿಪ್ರಾಯವಿಲ್ಲ. ಬದುಕಾಗಲಿ, ಜ್ಞಾನವಾಗಲಿ, ಅನುಭವವಾಗಲಿ ಪೂರ್ಣಗೊಳ್ಳಬೇಕಾದರೆ ಇಬ್ಬರೂ ಸಮರಸವಾಗಿ ಬೆರೆಯಬೇಕು. ಬದುಕು ಸ್ವರಸ್ಯವಾಗಬೇಕಾದರೆ, ಸಮಾಜ ಹಸನಾಗಬೇಕಾದರೆ, ದೇಶದ ಹಿತ ಸಾಧನೆಯಾಗಬೇಕಾದರೆ ಇಬ್ಬರೂ ಒಮ್ಮತದಿಂದ ದುಡಿಯಬೇಕು. ರಥಕ್ಕೆ ಎರಡು ಚಕ್ರಬೇಕು; ಮನುಷ್ಯನಿಗೆ ಎರಡು ಕಣ್ಣು, ಎರಡು ಕಾಲು, ಎರಡು ಕೈ ಬೇಕು. ಎರಡದಿದ್ದರೇನೆ ಪೂರ್ಣಸುಖ. ದ್ವೈತದ ಮೂಲಕ ಅದ್ವೈತವನ್ನು ಸಾಧಿಸಬೇಕು. ‘ಸತಿಪತಿಗಳೊಂದಾದ ಭಕ್ತಿ ಹಿತವಷ್ಟುದು ಶಿವಂಗೆ’ ನಿಜವಾದ ಸುಖ ಹಣ ಆಸ್ತಿಗಳಿಂದ ಲಭಿಸುವುದಿಲ್ಲ ಪರಸ್ಪರ ಪ್ರೀತಿ ಗೌರವಗಳಿಂದ ಮಾತ್ರ ನಿರ್ಮಲ ಪರಿಪೂರ್ಣ ಸುಖ ಸಾಧ್ಯವೆಂಬುದನ್ನು ಸ್ತ್ರೀ ಪುರುಷರಿಬ್ಬರೂ ಅರಿತಾಗ ಭೂಮಿಯೇ ಸ್ವರ್ಗವಾಗುತ್ತದೆ.


ಸಮಾಜದ ಎರಡು ಪ್ರಮುಖ ಚಾಲಕ ಶಕ್ತಿಗಳು ಸ್ತ್ರೀ ಮತ್ತು ಪುರುಷ. ಪ್ರಾಚೀನ ಮಾನವರಲ್ಲಿ ಸ್ತ್ರೀ ಪುರುಷರಿಬ್ಬರೂ ತಮ್ಮ ಕರ್ತವ್ಯಗಳ ಹೊರೆಯನ್ನು ವಿಭಾಗಿಸಿಕೊಂಡು ಜೀವನ ಸಾಗಿಸಲು ಮುಂದಾದರು. ಹೀಗಾಗಿ ಸಂಸಾರದ  ಹೊರಾಂಗಣದಲ್ಲಿ ದುಡಿದು ಕುಟುಂಬವನ್ನು ಆರ್ಥಿಕವಾಗಿ ಪೋಷಿಸುವ ಹೊಣೆ, ಹಾಗೂ ಕುಟುಂಬದ ಕರ್ತನಾಗಿ ನಿಲ್ಲುವ ಹೊಣೆ ಪುರುಷನಿಗೆ ಮೀಸಲಾಯಿತು. ಕುಟುಂಬದ ಒಳಾಂಗಣದ ಹೊಣೆಗಳಾದ ಮನೆ, ಮಕ್ಕಳು ಅವರನ್ನು ಪೋಷಿಸಿ ಪಾಲಿಸುವ ಕರ್ತವ್ಯಗಳು ಆದಿಯಾಗಿ, ಸಂಪೂರ್ಣ ಜವಾಬ್ದಾರಿ, ಸ್ತ್ರೀಯ ಮೇಲೆ ಬಿದ್ದಿತು. ಆರ್ಥಿಕ, ದೈಹಿಕ ದೃಷ್ಟಿಯಿಂದ ಹೆಚ್ಚು ಬಲಾಢ್ಯನಾಗಿ ಬೆಳೆದು ನಿಂತ ಪುರುಷ ತನ್ನದೇ ಆದ ನೀತಿ-ನಿಯಮಗಳನ್ನು ರಚಿಸಿ ಕಾಲಸಂದಂತೆ ತಾನು ರೂಢಿಸಿದ ವಿಚಾರ ನಿಯಮಗಳೇ ಸಮಾಜದಲ್ಲಿ ಪರಿಪಾಲಿಸಲ್ಪಡುವಂತೆ ನಂಬಿಕೆಗಳನ್ನು ರಚಿಸಿ ಪ್ರಚಾರ ಪಡಿಸಿದ. ಕುಟುಂಬದ ಒಳಾಂಗಣದಲ್ಲಿ ಬಾಹ್ಯ ಪ್ರಪಂಚದ ಆಗುಹೋಗುಗಳ ಅರಿವಿನ ಪರಿವೆಯೇ ಇಲ್ಲದೆ ಎನಗೆ ನಿಯಮಿಸಿದ ಕಾರ್ಯಗಳ ಪೂರೈಕೆಯ ಸೀಮಾ ರೇಖೆಗೇ ತನ್ನನ್ನು ತನ್ನ ಅನಿಸಿಕೆ ಧ್ಯೇಯಗಳನ್ನು ಸ್ತ್ರೀ ರೂಪಿಸಿಕೊಂಡಳು.


ಹೀಗಾಗಿ ಸ್ತ್ರೀಯ ಸೀಮಿತ ಸ್ಥಾನಮಾನದಿಂದಾಗಿ ಅವಳ ಶೋಷಣೆ ಪ್ರಾರಂಭವಾಯಿತು. ಬಾಲ್ಯ ವಿವಾಹ, ವರದಕ್ಷಿಣೆ ಇವೇ ಮುಂತಾಗಿ ಅನೇಕಾನೇಕ ಸಮಸ್ಯೆಗಳ ದಾಳಿಯ ಸುಳಿಯಲ್ಲಿ ಸಿಕ್ಕಿ ಸ್ತ್ರೀ ಶಕ್ತಿಯ ಅಧಃಪತನವಾಯಿತು. ಇಂತಹ ಸಮಸ್ಯೆಗಳು ಅವಿರತವಾಗಿ ಉಕ್ಕಿ ಪ್ರವಾಹದಂತೆ ಮೊರೆದು ಸ್ತ್ರೀಯರನ್ನು ಅಪೋಷನೆ ತೆಗೆದುಕೊಳ್ಳತೊಡಗಿದಾಗ, ಸ್ತ್ರೀ ವರ್ಗದಲ್ಲಿ ಚಿಂತನೆ ಮೂಡತೊಡಗಿತು. ತಾವು ಈ  ಪ್ರವಾಹದ ವಿರುದ್ಧ ಈಜಿ, ದಡ ಸೇರಬೇಕೆಂಬ ದೃಢ ನಿಶ್ಚಯ ಇಣುಕಿ ತೊಡಗಿದಾಗ, ಜಾಗೃತಿಯ ಬೆಳಕು ಮನೆಮಾಡಿ ಪ್ರತಿಭಟನೆಯ ಫಲಗಳು ಏಳತೊಡಗಿದವು.


ಸ್ತ್ರೀ ವಿದ್ಯಾವಂತಳಾಗಬೇಕು. ಆರ್ಥಿಕವಾಗಿ ಸಾಮಾಜಿಕವಾಗಿ, ಬೆಳೆಯಬೇಕು. ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅಡಿಯನ್ನು ಮೂಡಿಸಬೇಕು ಎಂಬ ವಿಚಾರಗಳು ಚಿಂತನೆಗಳು ಹೊರಬರತೊಡಗಿದವು. ಇಂತಹ ಪರಿವರ್ತನೆಗೆ ಅನೇಕ ಪುರುಷರು ಸಹ ಇಂಬುಕೊಟ್ಟರು. ಸ್ತ್ರೀಯರ ಪ್ರಗತಿಯಾಗಬೇಕೆಂಬ ವಿಶಾಲ ವಿಸ್ತೃತ ಮನಸ್ಸುಳ್ಳ ಪುರುಷರೂ ಸಹ ಸ್ತ್ರೀಯರ ಜೊತೆಗೂಡಿದರು. 


ಮಾನವರು ಎಂಬ ಪದ, ಸ್ತ್ರೀ ಪುರುಷರಿಬ್ಬರನ್ನು ಒಳಗೊಳ್ಳುತ್ತದೆ. ಜೀವನವೆಂಬುದು ಲಲಿತ ಕಲೆ. ಇಂತಹ ಕಲೆಯ ನೆಲೆಯನ್ನು ನಾವು ಅರಿತುಕೊಳ್ಳಬೇಕು. ಜೀವನದಲ್ಲಿ ಬಾಳುವ ಪರಿ ಹೇಗೆ,  ಜೀವನವನ್ನು ಎದುರಿಸಿ ನಿಲ್ಲಬೇಕಾದ ರೀತಿ ಯಾವುದು ಎಂಬೆಲ್ಲ ಜೀವನದ ರಹಸ್ಯಗಳನ್ನು ಭೇದಿಸಿ ಜೀವಿತವನ್ನು ಸಾರ್ಥಕಗೊಳಿಸುವ ಸೂಕ್ತಿಯನ್ನು ತಿಳಿಸಿಕೊಟ್ಟಿದ್ದಾರೆ. ಮನುಸ್ಮೃತಿಯಲ್ಲೂ ಸಹ. ‘ಯಾರ ಕುಟುಂಬದಲ್ಲಿ ಸ್ತ್ರೀಯರು ಸಂತೋಷವಾಗಿರುತ್ತಾರೋ ಅವರ ಕುಟುಂಬವು ಸುಖ ಶಾಂತಿಗಳಿಂದ ಕೂಡಿರುತ್ತದೆ ಎಂದಿದೆ.


ನೃತ್ಯ ಕಲೆಗೆ ಸಂಗೀತ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿಯೂ ಸ್ತ್ರೀ ತನ್ನನ್ನು ವಿಸೃತಗೊಳಿಸಿ ತನ್ನ ಸಮರ್ಥತೆಯನ್ನು ತೋರಿಸಿದಳು. ತಾನು ಪುರುಷರಷ್ಟೇ ಶಕ್ತಳು ವಿದ್ಯಾವಂತೆಯಾಗಿ, ತನ್ನ ಬುದ್ಧಿವಂತಿಕೆಯಿಂದ ಉದ್ಯೋಗಸ್ಥೆಯಾಗಿ ಸ್ವಂತಿಕೆ ಸ್ವತಂತ್ಯ್ರ ದ ಅಭಿವ್ಯಕ್ತಿಯಾಗಿ ನಿಂತು ಸ್ವಾವಲಂಬಿ ಜೀವನ ನಡೆಸಬಲ್ಲಳು.


ಸ್ತ್ರೀಯರು ಅನಾದಿ ಕಾಲದಿಂದಲೂ ಅತಿಥಿ ಸೇವೆಯಲ್ಲಿ ಅನ್ನಪೂರ್ಣೆ ಎಂದು ಹೆಸರನ್ನು ಪಡೆದಿದ್ದಾಳೆ ಹಾಗೂ ದೀನ ದಲಿತರ ಸೇವೆಗೂ ತನ್ನ  ಸಮಯವನ್ನು  ವಿನಿಯೋಗಿಸಿದ್ದಾಳೆ ಹಾಗೂ ಇಂದು ಸ್ನೇಹ ಎಂಬ  ಪದಕ್ಕೆ ಹೆಚ್ಚು ಒತ್ತುಕೊಟ್ಟು ಅನೇಕ ಸಂಘ ಸಂಸ್ಥೆಗಳನ್ನು ರಚಿಸಿ ಸ್ತ್ರೀವರ್ಗದ ಒಗ್ಗಟ್ಟಿಗಾಗಿ ಒಮ್ಮತದ ನಡಿಗೆಗಾಗಿ ಶ್ರಮಿಸಿದ್ದಾರೆ. ಹಾಗೂ ಸೇವೆಯ ಅನೇಕ ಅಂಶಗಳನ್ನು ಮುಂದಿಟ್ಟುಕೊಂಡು ವಿವಿಧ ಕಾರ್ಯಕ್ರಮಗಳನ್ನು  ಹಮ್ಮಿಕೊಂಡು ಸೇವೆಯ ಸಾರ್ಥಕತೆಯನ್ನು ಪಸರಿಸಿದ್ದಾರೆ.


ಹೀಗೆ ಸ್ತ್ರೀ ಇಂದು ಎಲ್ಲ ವಸ್ತು ವಿಷಯ ಜ್ಞಾನಗಳ ರೀತಿಯ ಗತಿಯನ್ನು ಅರಿತು ನೀತಿಗಳ ಶೈಲಿಯ ಭಾಷೆಗಳ ಅರಿವನ್ನು ಮೂಡಿಸಿಕೊಂಡು ವೈವಿಧ್ಯತೆಯ ಸ್ತರದಲ್ಲಿ ಮಿನುಗಿ ಮಹತ್ವಪೂರ್ಣವಾದ ಸ್ಥಾನವನ್ನು ಸಮಾಜದಲ್ಲಿ ಗಳಿಸಿದ್ದಾರೆ. ಆದರೂ ಇಂದು ಇನ್ನೂ ಹೆಣ್ಣೆ !  ಎಂಬ ಧ್ವನಿಯ ಅಣಕದ ನುಡಿಯು ನಶಿಸಿಲ್ಲ.


ಅಸಮಾನತೆ ಪೂರ್ಣವಾಗಿ ನಶಿಸದೆ ಸ್ತ್ರೀಯರ ಮೇಲಿನ ಹಿಂಸೆ ಕ್ರೌರ್ಯ ಅಳಿದಿಲ್ಲ. ಸ್ತ್ರೀ ತಾನು ಸ್ವತಂತ್ರ ಅಭಿವ್ಯಕ್ತಿಯಾಗಿ ನಿಲ್ಲಲು ಹೊರಟು ಮುಂದಡಿ ಇಟ್ಟಿರುವಾಗ ಸವೆಸುವ  ದಾರಿ ಸಾಕಷ್ಟಿದೆ.


ಶಾರೀರಿಕವಾಗಿ ಹಾಗೂ ಭಾವನಾತ್ಮಕವಾಗಿ ಹೆಣ್ಣು ಗಂಡಿಗಿಂತ ಭಿನ್ನಳಾದರೂ ಬೌದ್ಧಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಇಬ್ಬರೂ ಅಭಿನ್ನರೆಂಬ ವಿಷಯದಲ್ಲಿ ಭಿನ್ನಾಭಿಪ್ರಾಯವಿಲ್ಲ. ಶಾರೀರಕ ಬಲಸ್ವಭಾವೊಂದೆ ಗಂಡಿನ ಮೇಲ್ಗೇತನಕ್ಕೆ ಕಾರಣವೆಂಬುದು ಸುಸ್ಪಷ್ಟ. ಇದೇ ನಿಸರ್ಗ ನಿಯಮವೆಂಬಂತೆ ಪ್ರಾಣಿ ವರ್ಗದಲ್ಲಿಯೂ ನಿದರ್ಶನ ದೊರೆಯುತ್ತದೆ. ಸಂತಾನ ವೃದ್ಧಿಯಲ್ಲಿ ಹೆಂಗಸಿನ ಪಾತ್ರವೇ ಮುಖ್ಯವಾದದ್ದರಿಂದ, ಅವಳ ಚಟುವಟಿಕೆಗಳು ಗೃಹಸಾಮ್ರಾಜ್ಯಕ್ಕೆ ಸೀಮಿತಗೊಂಡು, ಗಂಡಸು ಬಾಹ್ಯ ವ್ಯವಹಾರಗಳಿಗೆ ತನ್ನ ಸರ್ವಲಕ್ಷ್ಯವನ್ನು ಹರಿಸಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ಮನೆಯ ಕೆಲಸಕ್ಕೇನೆ ಒಂದೆರಡಾಳು ಬೇಕಾಗುತ್ತಿತ್ತು. ಆದ್ದರಿಂದ ಶ್ರಮವಿಭಜನೆ ಅನಿವಾರ್ಯವಾಗಿತ್ತು. ಗಂಡಸು ಬಹುಕಾಲ ಹೊರಗಿದ್ದು, ಮನೆಯ ಜವಾಬ್ದಾರಿಯೆಲ್ಲ ಹೆಂಗಸಿನ ಮೇಲೆ  ಬಿದ್ದದ್ದರಿಂದ ‘ಗೃಹಣೀ ಗೃಹಮುಚ್ಯತೇ’ ಎಂಬ ಸಾರೋಕ್ತಿ ಪ್ರಕಾಶಕ್ಕೆ  ಬಂತು. ಪುರುಷ-ಸ್ತ್ರೀಯೆನ್ನುವ ಪದಗಳಿಗೆ ಹಿಂದಿನಿಂದ ಗುಣಲಕ್ಷಣಕರ್ಮಗಳು ಅಂಟಿಕೊಂಡು ಬಂದಿವೆ. ದೈಹಿಕ ಬಲ ಗಡಸುತನಗಳೇ ಕಾರಣವಾಗಿ ಕೃಷಿಯುದ್ಧಾದಿ ಕೆಲವು ಕರ್ಮಗಳು ಪುರುಷನಿಗೆ ಮಾತ್ರವೇ ಮೀಸಲಾಗಿದ್ದಿರಬೇಕು. ಇಷ್ಟಾದರೂ ಸ್ತ್ರೀ ಪುರುಷನ ದಾಸಿ. ಭೋಗ್ಯವಸ್ತವೆಂದು ಹೇಳಲಾಗುತ್ತಿರಲಿಲ್ಲ. ಭೋಗದಲ್ಲಿಯಾದರೂ ಇಬ್ಬರೂ ಸಮಭಾಗಿಗಳೆಂಬುದನ್ನು ಮರೆಯಲಾಗದು.


ಪ್ರಾಚೀನ ಕಾಲದಲ್ಲಿ ಅಂದರೆ ವೇದಪೂರ್ವ ಹಾಗೂ ವೇದೋಪನಿಷತ್ತುಗಳ ಕಾಲದಲ್ಲಿ ಸ್ತ್ರೀಯನ್ನೆಂದೂ ಕೀಲಾಗಿ ಕಂಡದ್ದಿಲ್ಲ. ದೇವತೆಗಳ ಪಾಲಿನಲ್ಲಿ ಅವಳಿಗೂ ಸಮಾನ ಸ್ಥಾನವಿತ್ತು. ಅರ್ಧನಾರೀಶ್ವರ ಕಲ್ಪನೆಯಲ್ಲಿ ಸ್ತ್ರೀ ಪುರುಷ ಸಮಾನ ಭಾವನೆ ಸ್ಪಷ್ಟವಾಗಿ ಗೋಚರಿಸುತ್ತದೆ; ಪ್ರಕೃತಿ ಪುರುಷರ ಕಲ್ಪನೆಯಲ್ಲಿಯೂ ಇದೇ ಭಾವನೆ ನೆಲೆಗೊಂಡಿದೆ. ಅಷ್ಟೇ ಅಲ್ಲ, ಮಹೇಶ್ವರಿ, ಮಹಾಕಾಳಿ, ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿಯರೇ ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಸಕಲ ಶ್ರೇಯಸ್ಸುಗಳಿಗೆ ಕಾರಣವೆಂಬಂತೆ ವರ್ಣಿತರಾಗಿದ್ದಾರೆ. ಮಹೇಶ್ವರಿ ಸಕಲಜೀವರಾಶಿಗಳಿಗೆ ಕ್ಷೇಮಂಕರಿ; ಮಹಾಕಾಳಿ ದುಷ್ಟದಮನಕ್ಕೆ ಶಿಷ್ಟ ಸಂರಕ್ಷಣೆಗೆ ಬದ್ಧಳಾದವಳು; ಮಹಾಲಕ್ಷ್ಮೀ ಸೌಂದರ್ಯ ಸಂಪತ್ತುಗಳ ಅಧಿದೇವತೆ, ಮಹಾಸರಸ್ವತಿ ಜ್ಞಾನಪ್ರದೆ. ಇದೆಲ್ಲ ಬರಿಯ ಹುಸಿ ಕಲ್ಪನೆಯಾಗಿರಲಿಕ್ಕಿಲ್ಲ. ಮಾನವನ ಅಭೀಪ್ಸೆ, ಹಾಗೂ ವಾಸ್ತವ ಪ್ರಜ್ಞೆ ಈ ಕಲ್ಪನೆಯಲ್ಲಿ ಪ್ರತಿಬಿಂಬಿಸುತ್ತವೆಂದೇ ಹೇಳಬೇಕು. ಪೂಜಾ ಸಮಯದಲ್ಲಿ ‘ಪಿತೃದೇವೋಭವ’ ಎಂದು ಹೇಳುವಾಗ ‘ಮಾತೃದೇವೋಭವ’ ಎಂದು ಕೂಡ ಪ್ರಾರ್ಥಿಸುತ್ತಿದ್ದುದುಂಟು. ‘ಯತ್ರನಾರ್ಯಸ್ತು ಪೂಜ್ಯಂತೇ ರಮಂತೆ ತತ್ರ ದೇವತಾಃ’ ಎಂಬ ವಿಶ್ವಾಸವೂ ಸಮಾಜದಲ್ಲಿ ಬೇರೂರಿತ್ತು. 


ಭಾರತೀಯ ಮಹಿಳೆ ತನ್ನನ್ನು ತಾನರಿತುಕೊಂಡಿದ್ದಾಳೆ; ತನ್ನ ಮುಂದಿನ ಭವಿಷ್ಯವೇನೆಂಬುದನ್ನು ತಾನು ಅಭಿನಯಿಸಬೇಕಾದ ಪಾತ್ರವನ್ನು ಸ್ಪಷ್ಟವಾಗಿ ಚಿತ್ರಿಸಿಕೊಂಡಿದ್ದಾಳೆ. ಬದುಕಿನ ಎಲ್ಲ ಕ್ಷೇತ್ರಗಳನ್ನು ಪ್ರವೇಶಿಸಿ ತನ್ನ ವ್ಯಾಪಕ ಸಾಮರ್ಥ್ಯವನ್ನು ಬುದ್ಧಿವಂತಿಕೆಯನ್ನು ಪ್ರತಿಭೆಯನ್ನು ತೋರಿಸಿಕೊಳ್ಳುತ್ತಿದ್ದಾಳೆ. ಪುರುಷರಿಗೇನೂ ಕಡಿಮೆ ಇಲ್ಲದಂತೆ ಪ್ರಧಾನಿಯಾಗಿ, ರಾಜ್ಯಪಾಲೆಯರಾಗಿ, ನ್ಯಾಯಮೂರ್ತಿಗಳಾಗಿ, ಪೋಲೀಸ್ ಅಧಿಕಾರಿಗಳಾಗಿ, ಕುಲಪತಿಗಳಾಗಿ, ವಕೀಲರಾಗಿ, ವಿಜ್ಞಾನಿಗಳಾಗಿ, ನಾನಾ ಇಲಾಖೆಗಳ ಮುಖ್ಯಸ್ಥರಾಗಿ ದಕ್ಷತೆಯಿಂದ  ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ. ನಾಡಿನ ಅರ್ಧಪಾಲು ಜನರನ್ನು ಕತ್ತಲೆಯಲ್ಲಿಟ್ಟಿದ್ದಾಗ, ನಾಡಿನ ಅರ್ಧಭಾಗವನ್ನು ಅಂಧಕಾರ ಮುಸುಕಿಕೊಂಡಿತ್ತೆನ್ನುವುದನ್ನು ಕತ್ತಲೆಯಿಂದ  ಹೊರಬಂದು ಪುರುಷರಿಗೆ ತೋರಿಸಿಕೊಟ್ಟಿದ್ದಾರೆ.


ನಾಗರಿಕ ಮಹಿಳೆಯರ ಸಮಸ್ಯೆಗಳಿಗೂ ಗ್ರಾಮೀಣ ಮಹಿಳೆಯರ ಸಮಸ್ಯೆಗಳಿಗೂ ಮಹದಂತರವಿದೆ. ಬಹು ಸಂಖ್ಯಾತರಾದ ಅಶಿಕ್ಷಿತ ಗ್ರಾಮೀಣ ಮಹಿಳೆಯರ ಕಡೆಗೆ ನಾಗರಿಕ ಮಹಿಳೆಯರು ಆದ್ಯ ಗಮನ ಹರಿಸಬೇಕಾಗಿದೆ. ಶಿಕ್ಷಕರ ವರ್ತನೆಯನ್ನು ಅಶಿಕ್ಷಿತರು ಕಣ್ಮುಚ್ಚಿಕೊಂಡು ಅನುಸರಿಸುತ್ತಾರೆ. ಹಳ್ಳಿಯ ಕುಟುಂಬ ವಿಚ್ಛಿದ್ರವಾದ ಪಕ್ಷದಲ್ಲಿ ಸಮಾಜ ಆಘಾತಕ್ಕೊಳಗಾಗುತ್ತದೆ. ವರ್ಣಸಂಸ್ಕೃತಿಯ ಕಪಿಮುಷ್ಟಿಯಿಂದ ಗ್ರಾಮೀಣ ಸಮಾಜವನ್ನು ಪಾರು ಮಾಡಬೇಕಾಗಿದೆ. ಹೀಗೆ ಪಾರು ಮಾಡುವಾಗ ಸಾಮಾಜಿಕ ವ್ಯವಸ್ಥೆ ಸಂಪೂರ್ಣವಾಗಿ ಬದಲಾವಣೆಯಾದರೂ ಸರಿಯೆ. ವರ್ಣಸಂಸ್ಕೃತಿ ಮತ್ತು ಪುರೋಹಿತ ಶಾಹಿಗಳ ನಿರ್ಮೂಲನಕ್ಕಾಗಿ ಎಂಥ ತ್ಯಾಗಕ್ಕಾದರೂ ಸಮಾಜ ಸಿದ್ಧವಾಗಬೇಕು. ಹೊರಗೆ ಓಡಾಡುವ ಗಂಡಸು ಮೌಢ್ಯಗಳಿಗೆ ದಾಸನಾಗದಿದ್ದರೂ, ಆ ಪರಂಪರೆಯನ್ನು ಅನೂಚಾನವಾಗಿ ಪಾಲಿಸುವಲ್ಲಿ, ಪೋಷಿಸುವಲ್ಲಿ ಮಹಿಳೆಯ ಪಾತ್ರ ದೊಡ್ಡದೆಂದು ಹೇಳಲಾಗಿದೆ.



-ಸುಮಚಂದ್ರಶೇಖರ್

ನಂ 35, 11ನೇ ಬಿ. ಕ್ರಾಸ್

ವೈಯಾಲಿಕಾವಲ್ 

ಮಲ್ಲೇಶ್ವರಂ , ಬೆಂಗಳೂರು

9880060354


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top