ವಿಷ್ಣುತೀರ್ಥಃ ಕಲ್ಪವೃಕ್ಷೆ ವಿಷ್ಣುತೀರ್ಥಶ್ಚ ಕಾಮಧುಕ್ |
ಚಿಂತಾಮಣಿರ್ವಿಷ್ಣುತೀರ್ಥೋ ಯತೀಂದ್ರಃ ಸರ್ವಕಾಮದಃ ||
ದ್ವೈತ ವೇದಾಂತ ಪರಂಪರೆಯಲ್ಲಿ ಅನೇಕ ವಿಭೂತಿ ಪುರುಷರನ್ನು ಅಪರೋಕ್ಷಜ್ಞಾನಿಗಳನ್ನು ಕಾಣಬಹುದು. ಅಂತಹ ಅವಧೂತ ಯತಿಶ್ರೇಷ್ಟರು ಅಡವಿ ಸ್ವಾಮಿಗಳು , ಆರಣ್ಯಕಾಚಾರ್ಯರು ಮೊದಲಾಗಿ ಖ್ಯಾತರಾದ ಮಾದನೂರಿನ ಶ್ರೀ ವಿಷ್ಣುತೀರ್ಥರು.(1756-1806) ಪೀಠವನ್ನು ಅಪೇಕ್ಷಿಸದೆ ವಿಶೇಷ ಜ್ಞಾನಕಾರ್ಯಕ್ಕೆಂದು ಮಾತ್ರವೇ ಪರಮಹಂಸ ಪೀಠ ಸ್ವೀಕರಿಸಿ ಪಾಠಪ್ರವಚನ ಮತ್ತು ಗ್ರಂಥರಚನೆಗಳಿಂದ ಜನಜಾಗೃತಿಯನ್ನುಂಟು ಮಾಡಿ ಭಗವತ್ಸೇವೆಯನ್ನು ಮಾಡಿದ ‘ಬಿಡಿಸನ್ಯಾಸಿ’ಗಳೆಂಬ ವಿಶಿಷ್ಠವರ್ಗವನ್ನೇ ವೇದಾಂತದ ಇತಿಹಾಸದಲ್ಲಿ ಕಾಣಬಹುದು.
ಸವಣೂರಿನ ಬಳಿಯ ಕೃಷ್ಣಾ-ತುಂಗಾನದಿಗಳ ಮಧ್ಯದಲ್ಲಿ ವರದಾ ನದಿಯ ಸಮೀಪದ ಸಿದ್ದಾಪುರದಲ್ಲಿ ಈಶ್ವರ ಸಂ|| ಕೃಷ್ಣಾಷ್ಟಮಿಯಂದು ಬಾಳಾಚಾರ್ಯ - ಭಾಗಿರಥಿಬಾಯಿ ದಂಪತಿಗಳಿಗೆ ಶ್ರೀ ಜಯತೀರ್ಥರ ಪರಮಾನುಗ್ರಹದಿಂದ ಜನನ . ಇದು ಶ್ರೀ ಕೃಷ್ಣಜನ್ಮಾಷ್ಟಮಿಯಂದು ಜನಿಸಿದ ಈ ಶಿಶು ಕೃಷ್ಣ ಪ್ರತಿಪಾದ್ಯ ಭಾಗವತಕ್ಕೆ ವ್ಯಾಖ್ಯಾನ ಬರೆಯಲು ಸೂಚನೆಯಿದ್ದೀತು.
‘ಮಂಚ ಬಾರದು ,ಮಡದಿ ಬಾರಳು,ಕಂಚು ಕನ್ನಡಿ ಬಾರದು ,ಸಂಚಿತಾರ್ಥವು ಮತ್ತೆ ಬಾರದು ಮುಂಚೆ ಮಾಡಿರಿ ಧರ್ಮವ” ಎಂಬ ಪುರಂದರದಾಸರ ದೇವರನಾಮದ ಪ್ರಭಾವಿತರಾಗಿ ಸಂಸಾರಭಾರವನ್ನು ತ್ಯಜಿಸಿ ,ಅವಧೂತಚರ್ಯೆ ಸ್ವೀಕರಿಸಿದರು. ಯತ್ಯಾಶ್ರಮವನ್ನು ಕೇವಲ ಯದುಪತಿಯನ್ನು ಒಲಿಸಿಕೊಲ್ಲಲು ಮಾತ್ರ ಉಪಯೋಗಿಸಿಕೊಂಡ ಭಾಗವತ ಶಿರೋರತ್ನರೆನಿಸಿದ್ದಾರೆ. ಜೀವನದಲ್ಲಿ ನಾಲ್ಕು ಆಶ್ರಮಗಳನ್ನು ,ಆಶ್ರಮೋಚಿತ ನಿಯತ ಕರ್ಮಗಳಿಂದ ಆಚರಿಸಿ ಸಾರ್ಥಕ ಜೀವನ ಸಾಗಿಸಿದ ಮಹಾನುಭಾವರು .
ಬ್ರಹ್ಮಚರ್ಯದಲ್ಲಿ ಸ್ವಾಧ್ಯಾಯಾದಿ ನಿಯತ ‘ಧರ್ಮ’ವನ್ನು , ಗಾರ್ಹಸ್ಥದಲ್ಲಿ ದಾನಧರ್ಮಾದಿ ಅತಿಥಿ ಪೂಜಾದಿಗಳಿಂದ ‘ಅರ್ಥ’ವಿನಿಮಯ, ವಾನಪ್ರಸ್ಥದಲ್ಲಿ ಅವಧೂತರಾಗಿ ವನ(ಶಾಸ್ತ್ರ)ವನ್ನು ಆಖಂಡ ಜ್ಞಾನಯಜ್ಞವನ್ನು , ಭಗವಂತನ ‘ಕಾಮ’ಪರರಾಗಿ ,ಸನ್ಯಾಸಾಶ್ರಮದಲ್ಲಿ ವಿರಕ್ತ ಶಿಖಾಮಣಿಗಳಾಗಿ ತಪಸ್ಸಿದ್ಧಿ ಪಡೆಯಲು ‘ಮೋಕ್ಷ’ ಮಾರ್ಗದಲ್ಲಿ ನಡೆದರು . ಹೀಗೆ ನಾಲ್ಕು ಪುರುಷಾರ್ಥಗಳನ್ನು ಪಡೆದಿದ್ದ ,ಮಹಿಮರಾಗಿ ವಿರಾಜಿಸಿದರು. ಅವರು ಬಾಳಿದ ಕೇವಲ 50 ವರ್ಷಗಳಲ್ಲಿ ಅವರ ಸಾಧನೆ ಅದರೈವತ್ತರಷ್ಟು ಸಾಧಕರಿಗೆ ಸಾಧನ ಮಾರ್ಗವನ್ನು ತೋರಿ , ಸಜ್ಜನಿಕೆಯೇ ಸಜ್ಜನರನ್ನುದ್ದರಿಸುವ ಸಂಜೀವಿನಿ ಎಂದು ಅನುಸರಿಸಿ ,ಸುಖತೀರ್ಥರ ಸುತೀರ್ಥವೇ ಸುಜ್ಞಾನವೆಂದು ಸುಜನರಿಗೆ ಭೋಧಿಸಿ, ಸರ್ವೋತ್ತಮನಾದ ಭಗವಂತನಿಂದ ಉತ್ತಮ ಸ್ಥಾನ ಪಡೆದ ಸುಚರಿತರಿವರು.
ಶ್ರೀ ವಿಷ್ಣುತೀರ್ಥರ ಮಾಧ್ವವಾಙ್ಮಯಕ್ಕೆ ನೀಡಿದ ಕೊಡುಗೆ ಅಪಾರ , ಇವರ ಗ್ರಂಥ ರಚನಾವ್ಯಾಪ್ತಿ ಚಿಕ್ಕಸ್ತೋತ್ರದಿಂದಾರಂಭಿಸಿ ಟಿಪ್ಪಣ್ಯಾದಿ ಉದ್ಗೃಂಥಗಳವರೆಗೆ ಹಬ್ಬಿದೆ. ವಿದ್ವಾಂಸರಿಂದ ಪಾಮರರವರೆಗೆ ಉಪಕಾರವಾಗಿದೆ. ಇವರ ಶಿಷ್ಯರು ಪ್ರಶಿಷ್ಯರು ಗ್ರಂಥಕಾರರಾದುದು ವಿಶೇಷ. ಶ್ರೀವ್ಯಾಸತತ್ವಜ್ಞ ತೀರ್ಥರಲ್ಲಿ ಶಾಸ್ತಾçಧ್ಯಯನ ನಡೆಸಿದ ವಿಷ್ಣುತೀರ್ಥರು ಭಕ್ತಿಯಿಂದ ಮಾಡಿದ ರಮಾಸ್ತೋತ್ರದ ಪಾರಾಯಣದಿಂದ ತಾಮ್ರದ ನಾಣ್ಯಗಳನ್ನು ಚಿನ್ನವನ್ನಾಗಿ ಮಾಡಿ ಅದರ ಮಹತ್ವವನ್ನು ತೋರಿಸಿ ಆಗ ಪ್ರಾಪ್ತವಾಗಿದ್ದ ಭೀಕರ ಕ್ಷಾಮ ಡಾಮರ ಸಂದರ್ಭದಲ್ಲಿ ಯೂ ಆಶ್ರಯವಿತ್ತು ತನ್ನನ್ನು ನಂಬಿದವರನ್ನು ಸಲಹಿದರು. ಶ್ರದ್ಧೆಯಿಂದ ಮಾಡಿದ ನರಸಿಂಹ ಮಂತ್ರ ಜಪದಿಂದ ಗುರುಪುತ್ರನ ಅಪಮೃತ್ಯುವನ್ನು ಪರಿಹರಿಸಿದರು .ಮಹಾವೈರಾಗ್ಯನಿಧಿಗಳಾಗಿ ಅರಣ್ಯದಲ್ಲಿದ್ದು , ನೂರಾರು ಶಿಷ್ಯರನ್ನು ವಿದ್ವಾಂಸರನ್ನಾಗಿ ಮಾಡುತ್ತ ಅರಣ್ಯಕಾಚಾರ್ಯರೆಂದೇ ಜಗತ್ತಿನಲ್ಲಿ ಪ್ರಸಿದ್ಧರಾದರು.
ಆಧ್ಯಾತ್ಮಿಕ ಮಾರ್ಗದಲ್ಲಿ ಕುರುಡರಾದ ಜನರಿಗೆ ಷೋಡಶಿ, ಚತುರ್ದಶಿ, ಆಧ್ಯಾತ್ಮಿಕ ರಸರಂಜನಿ , ಮುಂತಾದ ಕೃತಿಗಳನ್ನು ರಚಿಸಿ , ನಿತ್ಯ ಭಾಗವತ ಸಂಪೂರ್ಣ ಪಾರಾಯಣ ಮಾಡಿದ ಪುಣ್ಯ ಬರಲು ಎಲ್ಲವನ್ನು ಸಂಗ್ರಹಿಸಿ ರಸಮಯವಾದ “ಭಾಗವತ ಸಾರೋದ್ಧಾರ” ಎಂಬ ಕೃತಿಯು ಸಾಧಕರಿಗೆ ಸೋಪಾನದಂತಿದೆ. ವೈಷ್ಣವ ವೇದಾಂತದ ರಸಋಷಿಗಳೆನಿಸಿ ಮೋದ ಪುರಿಯೆನಿಸಿದ ಮಾದನೂರಿನಲ್ಲಿ ಮಾಘ ಬಹುಳ ಚತುದರ್ಶಿ ಶಿವರಾತ್ರಿಯಂದು ನಾರಾಯಣಧ್ಯಾನ ಮಗ್ನರಾದ 108 ಬಾರಿ ಸುಧಾ ಮಂಗಳ ಮಾಡಿದ ಶ್ರೀ ಮಂತ್ರಾಲಯ ಪ್ರಭುಗಳ ಅಂತರಂಗಭಕ್ತರು. ಶ್ರೀವಿಷ್ಣುತೀರ್ಥರು ತಮ್ಮ ಪರಮಾಪ್ತ ಶಿಷ್ಯರಾದ ಪೂರ್ವಾಶ್ರಮದ ಅಣ್ಣಂದಿರಾದ ಗೋಕಾವಿ ಅನಂತಾಚಾರ್ಯರಿಗೆ ನೀಡಿದ ಉಪದೇಶಪೂರ್ವಕ ರಾಯಸ ಬಹು ಪ್ರಸಿದ್ದ ಮತ್ತು ಅನಂತಾಚಾರ್ಯರಿಗೆ ಅನುಗ್ರಹಿಸಿದ ಮೃತ್ತಿಕಾ ಬೃಂದಾವನವು ಇಂದಿಗೂ ಭಕ್ತರ ಅಭೀಷ್ಟಗಳನ್ನು ಪೂರೈಸುತ್ತಿದೆ.
– ಡಾ. ಗುರುರಾಜ ಪೋಶೆಟ್ಟಿಹಳ್ಳಿ -9739369621
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ