ಉಡುಪಿ: ವಸತಿ ಹಂಚಿಕೆಯಾದ ಫಲಾನುಭವಿಗಳು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ವಸತಿ ಸಮುಚ್ಛಯಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಹಂತಹಂತವಾಗಿ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಉಡುಪಿ ನಗರಸಭೆ ವ್ಯಾಪ್ತಿಯ ಹೆರ್ಗ ಸರಳಬೆಟ್ಟು ಪ್ರದೇಶದಲ್ಲಿರುವ 240 ಸರ್ಕಾರಿ ವಸತಿ ಸಮುಚ್ಛಯಗಳ ಕಟ್ಟಡವನ್ನು ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ನವರು ನಿನ್ನೆ ವರ್ಚುವಲ್ ಮೂಲಕ ಲೋಕಾರ್ಪಣೆ ಮಾಡಿದರು. ಇದರ ನೇರ ಪ್ರಸಾರವನ್ನು ವಸತಿ ಸಮುಚ್ಛಯದ ಅಂಗಳದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಾಗೂ ನಗರಸಭೆಯ ಅನುದಾನದ ಅಡಿಯಲ್ಲಿ 240 ಮನೆಗಳನ್ನು ಹೆರ್ಗ ವ್ಯಾಪ್ತಿಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಸುಂದರವಾಗಿ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಪೂರ್ತಿ ಪ್ರಮಾಣದಲ್ಲಿ ಮನೆಯ ಹಂಚಿಕೆಯಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರತಿಯೊಬ್ಬರೂ ಸ್ವಂತ ಮನೆ ಹೊಂದಬೇಕೆಂಬ ಕನಸನ್ನು ಬಡವ ಹಾಗೂ ಶ್ರೀಮಂತರು ಹೊಂದಿರುತ್ತಾರೆ. ಇದನ್ನು ನನಸಾಗಿಸಲು ಸರಕಾರ ಅನೇಕ ಯೋಜನೆಗಳಡಿಯಲ್ಲಿ ಕಾರ್ಯರೂಪಕ್ಕೆ ತರಲು ಮುಂದಾಗಿದೆ ಎಂದರು.
ಇಂದು ರಾಜ್ಯದಾದ್ಯಂತ 1,80,000 ಮನೆಗಳ ನಿರ್ಮಾಣಕ್ಕೆ ಗುರಿ ಹೊಂದಿತ್ತು. ಈಗಾಗಲೇ 36,000 ಮನೆಗಳ ನಿರ್ಮಾಣ ಪೂರ್ಣಗೊಂಡು ಮಾನ್ಯ ಮುಖ್ಯಮಂತ್ರಿಗಳು ಇಂದು ಲೋಕಾರ್ಪಣೆ ಮಾಡುತ್ತಿದ್ದಾರೆ. ಇದು ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ ಎಂದರು.
ಹೆರ್ಗಾ ಸರಳಬೆಟ್ಟು ಪ್ರದೇಶದಲಿರುವ ಸರಕಾರಿ ವಸತಿ ಸಮುಚ್ಛಯ ಕಟ್ಟಡಕ್ಕೆ ತಲುಪಲು ಇರುವ ಕಚ್ಛಾ ರಸ್ತೆಯನ್ನು ಪಕ್ಕಾ ಕಾಂಕ್ರೀಟ್ ರಸ್ತೆಯನ್ನಾಗಿಸಬೇಕು. ವಿದ್ಯುತ್ ದಾರಿದೀಪ, ಸುಸಜ್ಜಿತ ಆಟದ ಮೈದಾನ, ಉದ್ಯಾನವನ, ಅಂಗನವಾಡಿ ಕೇಂದ್ರ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬ ಸ್ಥಳೀಯ ಜನರ ಬೇಡಿಕೆ ಇದೆ. ಇವುಗಳನ್ನು ಹಂತಹಂತವಾಗಿ ಕಲ್ಪಿಸಲಾಗುವುದು ಎಂದ ಅವರು, ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳಕರ್ ಅವರು ಲೋಕಾರ್ಪಣೆ ಕುರಿತು ಶುಭ ಕೋರಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ವಿಜಯಲಕ್ಷ್ಮೀ, ಅಮೃತ ಕೃಷ್ಣಮೂರ್ತಿ, ಪೌರಾಯುಕ್ತ ರಾಯಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಪಾಲಕ ಅಭಿಯಂತರ ರಂಗಯ್ಯ ಬಡಿಗೆರೆ ಸ್ವಾಗತಿಸಿದರೆ, ವಿಜಯ್ ಕುಮಾರ್ ನಿರೂಪಿಸಿ ವಂದಿಸಿದರು
ಇದೇ ಸಂದರ್ಭದಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆಯ ಕೀ ಹಾಗೂ ದಾಖಲೆ ಪತ್ರವನ್ನು ಹಸ್ತಾಂತರಿಸಲಾಯಿತು.
ಪ್ರತೀ ವಸತಿ ಗೃಹಗಳು 394 ಸ್ಕಯರ್ ಫೀಟ್ ಅಳತೆಯಿದ್ದು, 8.22 ಎಕರೆ ವಿಸ್ತೀರ್ಣದಲ್ಲಿ ತಲಾ 10 ರಂತೆ 24 ಫ್ಲಾಟ್ಗಳಲ್ಲಿ 240 ಮನೆಗಳನ್ನು ಪ್ರತೀ ಮನೆಗೆ 7.42 ಲಕ್ಷ ರೂ. ವ್ಯಯಿಸಿ ನಿರ್ಮಾಣ ಮಾಡಲಾಗಿದೆ. ಸಾಮಾನ್ಯ ವರ್ಗದವರಿಗೆ ಬ್ಯಾಂಕ್ ವತಿಯಿಂದ 3.8 ಲಕ್ಷ ಸಾಲ, ಕೇಂದ್ರ ಸರ್ಕಾರ 2 ಲಕ್ಷ, ರಾಜ್ಯ ಸರ್ಕಾರ 1,20,000 ರೂ., ಹಾಗೂ ನಗರಸಭೆ 75,000 ರೂ, ಬಾಕಿ ಉಳಿದ ಹಣವನ್ನು ಫಲಾನುಭವಿಗಳು ಸಂದಾಯದೊಂದಿಗೆ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಬ್ಯಾಂಕ್ ಸಾಲ 2.58 ಲಕ್ಷ, 2 ಲಕ್ಷ ರೂ. ಕೇಂದ್ರ ಸರ್ಕಾರ, 1.5 ಲಕ್ಷ ರೂ, ರಾಜ್ಯ ಸರ್ಕಾರ, 75,000 ರೂ. ನಗರಸಭೆ ಬಾಕಿ ಉಳಿದ ಹಣವನ್ನು ಫಲಾನುಭವಿಗಳು ಭರಿಸಿದ್ದು, ಈಗಾಗಲೇ 240 ಮನೆಗಳಲ್ಲಿ 31 ಮನೆಗಳಲ್ಲಿ ಜನರು ವಾಸಿಸಲು ಪ್ರಾರಂಭಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ