ಅಯೋಧ್ಯಾ ಮಂಡಲೋತ್ಸವದ ಹಿನ್ನೆಲೆ: ಬೆಂಗಳೂರಿನಲ್ಲಿಂದು ರಾಮೋತ್ಸವ, ಪೇಜಾವರ ಶ್ರೀಗಳಿಗೆ ಅಭಿವಂದನೆ

Upayuktha
0




ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಬಾಲರಾಮನ ಪ್ರತಿಷ್ಠೆಯ ನಂತರ 48 ದಿನಗಳ ಮಂಡಲೋತ್ಸವವನ್ನು ನಡೆಸಲು ತೀರ್ಮಾನಿಸಿ ಅದರ ನೇತೃತ್ವವನ್ನು ಪೇಜಾವರ ಮಠದ ಶ್ರೀಶ್ರೀ 1008 ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ನೀಡಿತು. ಅದು ಮಾರ್ಚ್ 10ರಂದು ಸಂಪನ್ನಗೊಂಡಿದೆ. ಅದರ ಸಮಾರೋಪದ ಅಂಗವಾಗಿ ರಾಮೋತ್ಸವವನ್ನು ಮತ್ತು ಬೆಂಗಳೂರು ನಾಗರಿಕರ ಪರವಾಗಿ ಶ್ರೀಪಾದರಿಗೆ ಭವ್ಯವಾದ ಪುರಪ್ರವೇಶ ಸ್ವಾಗತ ಹಾಗೂ ಅಭಿವಂದನೆಗಳನ್ನು ಹಮ್ಮಿಕೊಳ್ಳಲಾಗಿದೆ.


ಇಂದು ಸಂಜೆ 3.30 - ಪಿಇಎಸ್ ಕಾಲೇಜಿನ ಹಿಂಭಾಗದ ನೈಸ್ ರಸ್ತೆಯ ಟೋಲ್‌ನ ಬಳಿಯಿಂದ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ ವರೆಗೆ ಬೈಕ್ ರ‍್ಯಾಲಿ, ಸಂಜೆ 5.00 - ದೊಡ್ಡ ಗಣಪತಿ ದೇವಸ್ಥಾನದಿಂದ ಪೂರ್ಣಪ್ರಜ್ಞ ವಿದ್ಯಾಪೀಠದ ವರೆಗೆ ಶ್ರೀರಾಮ-ರಾಮಾಯಣಗಳ ಜೊತೆ ಶ್ರೀಪಾದರ ಭವ್ಯ ಶೋಭಾಯಾತ್ರೆ, ಸಂಜೆ 6.00ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ.


ರಾಮಮಂದಿರ - ರಾಷ್ಟ್ರಮಂದಿರ:

ಐದು ಶತಮಾನಗಳ ಬಹುಜನರ ಕನಸಾದ ಅಯೋಧ್ಯೆಯ ಬಾಲರಾಮಮಂದಿರ ನನಸಾಗಿದೆ. ದೇಶದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣಗಳ ಕೊಡುಗೆಗಳೊಂದಿಗೆ ನಿರ್ಮಾಣಗೊಂಡ ಈ ಮಂದಿರ ನಿಜವಾದ ಅರ್ಥದಲ್ಲಿ ರಾಷ್ಟ್ರ ಮಂದಿರವಾಗಿದೆ. ಅದರಲ್ಲೂ ಈ ಮಂದಿರಕ್ಕೆ ಕರ್ನಾಟಕದ ಸಂಬಂಧ ವಿಶಿಷ್ಟವಾಗಿದೆ. ಪ್ರತಿಮೆ ಮತ್ತು ಪ್ರತಿಮೆಯ ನಿರ್ಮಾತೃ ಕರ್ನಾಟಕದವರು. ಶ್ರೀರಾಮ ತನ್ನ ಸನ್ನಿಧಾನಕ್ಕೆ ಹಾಗೂ ಸೇವೆಗೆ ಆರಿಸಿಕೊಂಡ ಸಂತರಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರು ಇದ್ದಾರೆ. ಜನವರಿ 22ರಂದು ಭಾರತ ದೇಶದ ಪ್ರಧಾನಮಂತ್ರಿಯವರ ಯಜಮಾನತನದಲ್ಲಿ ಭವ್ಯವಾದ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನಡೆಯುವಾಗ ಶ್ರೀವಿಶ್ವಪ್ರಸನ್ನತೀರ್ಥರನ್ನು ಪ್ರಧಾನಿಗಳ ಪಕ್ಕದಲ್ಲಿ ಕಂಡ ಕರ್ನಾಟಕದ ಜನ ಸಂಭ್ರಮ ಪಟ್ಟಿದ್ದರು.


ಪೂಜಾಕೈಂಕರ್ಯ, ಹೋಮ-ಹವನ, ದೇವಾಲಯಗಳಿಗೆ ಹೆಸರುವಾಸಿಯಾದ ಉಡುಪಿ ಪರಿಸರದ ಹಿನ್ನೆಲೆ ಇರುವ ಶ್ರೀಪಾದರು ಪ್ರತಿಷ್ಠೆಯ ನಂತರ ತಮಗೆ ವಹಿಸಿದ  ಮಂಡಲೋತ್ಸವದ ಜವಾಬ್ದಾರಿಯನ್ನು ಸಂತೋಷದಿಂದ ಒಪ್ಪಿಕೊಂಡರು.


ಉತ್ಸವದ ಸ್ವರೂಪ:

ಪ್ರತಿ ದಿನ ನಾನಾವಿಧ ಹೋಮಗಳು, ವೇದ-ರಾಮಾಯಣಗಳ ಪಾರಾಯಣಗಳು ಮತ್ತು ಸಂಜೆ ಅಷ್ಟಾವಧಾನ ಸೇವೆಯೊಂದಿಗೆ ಪಲ್ಲಕ್ಕಿ ಉತ್ಸವ - ಇವಿಷ್ಟು ಪ್ರಮುಖ ಕಾರ್ಯಕ್ರಮಗಳು.

'ಈ ಮಂದಿರ ಉಳಿದ ಮಂದಿರಗಳಂತೆ ಕೇವಲ ಧರ್ಮಮಂದಿರವಾಗಿರದೆ ರಾಷ್ಟ್ರ ಮಂದಿರವೂ ಆಗಿದೆ. ಸಹಸ್ರಮಾನಗಳ ಭವಿಷ್ಯದ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಈ ಮಂದಿರ ಸಾರ್ಥಕವಾಗುವುದು ರಾಮರಾಜ್ಯದ ಕಡೆಗೆ ಸಾಗಿದಾಗ ಮಾತ್ರ'- ಇದು ಟ್ರಸ್ಟಿನ ಖಚಿತ ನಿಲುವು. ಮಂದಿರ ಹೊರಗೆ ಕಲ್ಲುಗಳಿಂದ ನಿರ್ಮಿತವಾಗಿರುತ್ತದೆ, ನಿಜ. ತನ್ನತ್ತ ಬಂದವರ ಹೃದಯದಲ್ಲಿ ಭಕ್ತಿಭಾವವನ್ನು ಮೂಡಿಸುವುದು ಹಾಗೂ ಸಮಾಜದ ಎಲ್ಲ ವರ್ಗದವರ ಹಿತವನ್ನು ಸಾಧಿಸುವುದು ಮಂದಿರ ನಿರ್ಮಾಣದ ನಿಜವಾದ ಗುರಿ. ಈ ಹಿನ್ನೆಲೆಯಲ್ಲಿ ಟ್ರಸ್ಟಿನಲ್ಲಿ ಚರ್ಚಿಸಿದ ಶ್ರೀಪಾದರು ಈ ಉತ್ಸವಗಳಿಗೆ ಸಮಾಜಿಕ, ಧಾರ್ಮಿಕ ಹಾಗೂ ಮನೋವೈಜ್ಞಾನಿಕ ಆಯಾಮಗಳನ್ನು ನೀಡಿದರು. ಪ್ರತಿಷ್ಠೆಗೆ ಆರು ತಿಂಗಳು ಮೊದಲಿನಿಂದ ಜನರು ಶ್ರೀರಾಮತಾರಕಮಂತ್ರವನ್ನು ಕೋಟಿಗಟ್ಟಲೆ ಪಾರಾಯಣ ಮಾಡುವಂತೆ ಪ್ರೇರಿಸಲಾಯಿತು. ನೂರು ಜಪಕ್ಕೆ ಒಂದು ಆಹುತಿ ನೀಡಿದಾಗ ಜಪಕ್ಕೆ ವಿಶೇಷ ಶಕ್ತಿ ಬರುವ ಕಾರಣ ಪ್ರತಿದಿನ ರಾಮತಾರಕ ಮಂತ್ರ ಹೋಮವನ್ನು ನಡೆಸಲಾಯಿತು. ಇದಲ್ಲದೆ ಶಾಸ್ತ್ರ ತಿಳಿಸುವ ಸುಮಾರು ನೂರು ಮಂತ್ರಗಳಿಂದ ಹೋಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಬೇಕಾಗುವ ಸುಮಾರು 500 ಕೆಜಿ ಶುದ್ಧ ದೇಸಿ ಗೋವಿನ ತುಪ್ಪವನ್ನು ದೇಶದ ಮೂಲೆ ಮೂಲೆಗಳಿಂದ ಸಂಗ್ರಹಿಸಲಾಗಿತ್ತು. ಮೊದಲ ನಾಲ್ಕು ಹಾಗೂ ಕೊನೆಯ ನಾಲ್ಕು ದಿನಗಳಲ್ಲಿ ಹೆಚ್ಚಿನ ಧಾರ್ಮಿಕ ಆಚರಣೆಗಳನ್ನು ನಡೆಸಿ ಕೊನೆಯಲ್ಲಿ ಬ್ರಹ್ಮಕಲಶ ಎಂಬ ಹೆಸರಿನ ಸಾವಿರ ಕಲಶಗಳ ಸೇವೆಯನ್ನು ನಡೆಸಲಾಯಿತು.


ಧಾರ್ಮಿಕ ಮ್ಯಾನೇಜ್ಮೆಂಟ್:

ಇದಕ್ಕೆ ಪ್ರತಿನಿತ್ಯ ಕನಿಷ್ಠ ಎಂಟು ಜನ, ಕೊನೆಯ ನಾಲ್ಕು ದಿನ 25 ಜನ ಪುರೋಹಿತರು ಪ್ರತಿನಿತ್ಯ ಬೇಕಾಗಿದ್ದರು. ಮಂಗಳ ವಾದ್ಯಗಳನ್ನು ನುಡಿಸುವವರು ಇರಬೇಕಿತ್ತು. ಇದರ ಖರ್ಚು ವೆಚ್ಚಗಳು ಎಷ್ಟೇ ಇದ್ದರೂ ಟ್ರಸ್ಟ್ ವಹಿಸಲು ಶಕ್ತವಾಗಿತ್ತು. ಶ್ರೀಪಾದರು ಟ್ರಸ್ಟಿಗಳೊಂದಿಗೆ ವಿಚಾರ ಮಾಡಿ ಜನತೆಗೆ ತಮ್ಮ ಹಿನ್ನೆಲೆಯಂತೆ ತನು, ಮನ, ಧನಗಳಿಂದ  ಸೇವೆ ಮಾಡಲು ಅವಕಾಶ ನೀಡಿ ಉತ್ಸವದ ಹಲವು ವೆಚ್ಚವನ್ನು ಭಕ್ತರಿಂದ ಮಾಡಿಸಿದರು.


ಶಾಸ್ತ್ರ, ಗೀತ, ನೃತ್ಯ, ವಾದ್ಯ ಮುಂತಾದ ಹಲವು ಸೇವೆಗಳನ್ನೂ ಉಚಿತವಾಗಿ ಸಲ್ಲಿಸಲು ಅವಕಾಶ ಇತ್ತು ಭಕ್ತರ ಚಿತ್ತಶುದ್ಧಿ, ಉತ್ಸವದ ವೆಚ್ಚ ನಿರ್ವಹಣೆ ಎರಡನ್ನೂ ಸರಿದೂಗಿಸಿದರು. ಈ ಎಲ್ಲಾ ಕಾರ್ಯಗಳು ಧಾರ್ಮಿಕ ಮ್ಯಾನೇಜ್ಮೆಂಟ್ ನ ಹೊಸ ಕೌತುಕ!


ದೇವಾಲಯಗಳ ಉತ್ಸವಗಳು ಧಾರ್ಮಿಕತೆಯ ಜೊತೆಗೆ ಕಲಾಶ್ರೀಮಂತಿಕೆಯನ್ನು ಪೋಷಿಸುತ್ತವೆ. ಆಸಕ್ತ ಪುರೋಹಿತರು ಮತ್ತು ಕಲಾವಿದರು ಬಂದು ಶ್ರೀರಾಮನ ಸೇವೆಯನ್ನು ನಡೆಸಬಹುದು ಎಂದು ಶ್ರೀಪಾದರು ಹೇಳಿದ್ದು ಇಂದಿನ ವಾಟ್ಸಾಪ್ ಯುಗದಲ್ಲಿ ವಿವಿಧ ಗುಂಪುಗಳಿಗೆ ತಲುಪಿತು. ಹಿಂದೂಸಮಾಜದ ಎಲ್ಲ ಪುರೋಹಿತರು ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳಿಂದ ದಿನಕ್ಕೆ 25, 30ರಂತೆ ತಾವಾಗಿಯೇ ಹೋದರು. ದಿನಕ್ಕೊಂದು ವಾದ್ಯಗಳ ತಂಡ ಸೇವೆಯ ರೂಪದಿಂದ ಅಯೋಧ್ಯೆಗೆ ಹೋಗಿ ಬಂದಿತು. ಕೆಲವೊಮ್ಮೆ ಮೂರು ನಾಲ್ಕು ತಂಡಗಳು ಇರುತ್ತಿದ್ದವು. ದಕ್ಷಿಣ ಭಾರತದ ವಿವಿಧ ವಾದ್ಯಗಳ ಹತ್ತಾರು ಜನ ಸಂಜೆಯ ಅಷ್ಟಾವಧಾನ ಸೇವೆಯಲ್ಲಿ ಪಾಲ್ಗೊಂಡಿದ್ದು ದರ್ಶನಕ್ಕೆ ಬಂದ ಜನರನ್ನು ಮಂತ್ರಮುಗ್ಧಗೊಳಿಸಿತು. ಮೊದಲು ಸಣ್ಣದಾಗಿ ಆರಂಭವಾದ ಉತ್ಸವಕ್ಕೆ ಕ್ರಮೇಣ ಹೊಸ ಹೊಸ ತರಹದ ಮೆರಗುಗಳು ಸೇರಿಕೊಂಡವು. ಕಾಶಿಮಠದ ಭಕ್ತರು ಶ್ರೀರಾಮನ ಉತ್ಸವಮೂರ್ತಿಗೆ ಬಂಗಾರದ ಪ್ರಭಾವಳಿ ಮತ್ತು ಬೆಳ್ಳಿಯ ಪಲ್ಲಕ್ಕಿಗಳನ್ನು ಸಮರ್ಪಿಸಿದರು. ಆಕರ್ಷಕ ಉಯ್ಯಾಲೆ ರಾಜಸ್ಥಾನದಿಂದ ಬಂದಿತು. ಬುಡಕಟ್ಟು ಜನಾಂಗದ ಪಲ್ಲಕ್ಕಿಯೂ ಉತ್ಸವಕ್ಕೆ ಸೇರಿತು. ಹೀಗೆ ಎಲ್ಲರೂ ಕಾರ್ಯಕ್ರಮವನ್ನು ನಿರೀಕ್ಷೆ ಮೀರಿ ಚಂದಗಾಣಿಸಿದರು. ಶ್ರೀರಾಮ ಇವರೆಲ್ಲರಿಂದ ಸೇವೆಯನ್ನು ಸ್ವೀಕರಿಸಿದ.


ಹೂವಿನ ಅಲಂಕಾರ: 

ಈ ಎಲ್ಲ ವಿಧದ ಸೇವಕರೊಂದಿಗೆ ದಕ್ಷಿಣದಿಂದ ಹೋಗುತ್ತಿದ್ದ ಬಗೆ ಬಗೆಯ ಹೂಗಳ ಅಲಂಕಾರ, ಉತ್ತರದ ಅಲಂಕಾರಗಳ ಜೊತೆಗೆ ಸೇರಿ ಪ್ರಪಂಚದಾದ್ಯಂತದ ಎಲ್ಲ ರಾಮಭಕ್ತರ ಕಣ್ಣು ಮತ್ತು ಮನಸ್ಸುಗಳನ್ನು ಅರಳಿಸಿತು. ನಗುಮುಖದ ಬಾಲರಾಮನ ಸುಂದರ ಅಲಂಕಾರದ ಭವ್ಯ ವಿಗ್ರಹ ಡಿಜಿಟಲ್ ರೂಪದಲ್ಲಿ ದಾಖಲಾಗಿ ಫೋಟೋಗಳ ಮೂಲಕ ಮನೆ ಮನೆಗಳಲ್ಲಿ ಪ್ರತಿಷ್ಠಿತಗೊಂಡಿದೆ.


ಕ್ರಾಂತಿಕಾರಕ ಆಯಾಮ:

ಸಮಾಜದ ಒಂದು ವರ್ಗದಲ್ಲಿ ಇಂದು ಹಣಕ್ಕೆ ಕೊರತೆ ಇಲ್ಲ. ಶಾಲೆ, ಆಸ್ಪತ್ರೆ, ಬಡವರಿಗೆ, ಗೋಶಾಲೆಗಳಿಗೆ ಜನಸಂಗ್ರಹ ಮಾಡಲು ಎಷ್ಟು ಕಷ್ಟವೋ ದೇವಾಲಯಗಳಿಗೆ ಸಂಗ್ರಹ ಮಾಡುವುದು ಅಷ್ಟೇ ಸುಲಭ! ಬೇರೆ ದಾನ ಮಾಡಲು ಹಿಂಜರಿಯುವ ಜನ ದೇವಾಲಯಗಳಿಗೆ ಯಥೇಷ್ಟ ಕೊಡುತ್ತಾರೆ. ಪ್ರತಿಯೊಂದು ದೇವಾಲಯ ಶಾಲೆ, ಆಸ್ಪತ್ರೆಗಳನ್ನು ಪೋಷಿಸಬೇಕು ಎನ್ನುವುದು ಶ್ರೀಪಾದರ ನಿಲುವು, ಪ್ರಾಚೀನ ಭಾರತದ ಸಮೃದ್ಧಿಯ ರಹಸ್ಯವೂ ಕೂಡ. ಈ ಹಿನ್ನೆಲೆಯಲ್ಲಿ ಶ್ರೀಪಾದರು ಮಂಡಲೋತ್ಸವದ ಕಲಶಸೇವೆಗೆ ಕ್ರಾಂತಿಕಾರಕವಾದ ಹೊಸ ಆಯಾಮವನ್ನು ನೀಡಿದರು. 5 ಲಕ್ಷಕ್ಕೆ ಕಡಿಮೆ ಇಲ್ಲದಂತೆ ನಡೆಸಿದ ಸಾಮಾಜಿಕ ಸೇವೆಗೆ ದಾಖಲೆಯನ್ನು ಒದಗಿಸಿದವರಿಗೆ ಅವರೇ ತಂದ ಕಲಶದಿಂದ ರಾಮನನ್ನು ಪೂಜಿಸಿ ಪ್ರಸಾದರೂಪವಾಗಿ ಆ ಐತಿಹಾಸಿಕ ಕಲಶವನ್ನು ಅವರಿಗೆ ನೀಡುವುದು ಎಂದು ರಾಮಮಂದಿರಟ್ರಸ್ಟ್ ನಿಲುವು ತೆಗೆದುಕೊಳ್ಳಲು ಶ್ರೀಪಾದರು ಪ್ರೇರಿಸಿದರು. ನೂರಾರು ಜನ ವ್ಯಾಪಾರೋದ್ಯಮಿಗಳು, ಶಾಸಕರು, ರಾಜಕಾರಣಿಗಳು, ವಿವಿಧ ಮಠಗಳ ಭಕ್ತರು ಈ ತರಹದ ಸೇವೆಗಳನ್ನು ಸಲ್ಲಿಸಿದರು!! ತಮಗೆ ಗೌರವಾದರಗಳನ್ನು ಸಲ್ಲಿಸಲು ಬರುವ ದೊಡ್ಡ ಸಂಸ್ಥೆಗಳಿಗೆ ಶ್ರೀಪಾದರು ಈ ಕರಾರನ್ನು ಹಾಕುತ್ತಿದ್ದಾರೆ! ಪುರಪ್ರವೇಶದ ಈ ಕಾರ್ಯಕ್ರಮದ ಸಭೆಯಲ್ಲೂ ಕೂಡ ದೊಡ್ಡಮಟ್ಟದಲ್ಲಿ ಸಮಾಜಸೇವೆಯನ್ನು ಮಾಡಲಾಗುತ್ತಿದೆ.


ಪಕ್ಷಾತೀತ ಜನಬೆಂಬಲ:

ಬಾಲರಾಮನ ಮಂಡಲೋತ್ಸವ ಯಶಸ್ವಿಯಾಗಿ ನಡೆದಿರುವ ಈ ಸಂದರ್ಭದಲ್ಲಿ ವಿಶಿಷ್ಟವಾದ ರಾಮೋತ್ಸವವನ್ನು ನಡೆಸುವುದು ಅತ್ಯಂತ ಔಚಿತ್ಯಪೂರ್ಣ. ಜೊತೆಗೆ ಇದರ ನೇತಾರರಾದ ಶ್ರೀಪಾದರಿಗೆ ಸ್ವಾಗತವನ್ನು ಕೋರುವ ಮೂಲಕ ಸಮಾಜ ಸಾರ್ಥಕತೆಯನ್ನು ಕಂಡುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ವಿಚಾರ ಮಾಡಿದಾಗ ಇದರ ನೇತೃತ್ವವನ್ನು ವಹಿಸಲು ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ರಾಜಕೀಯ ಜನರು ಮುಂದೆ ಬಂದು ನಡೆಸುತ್ತಿದ್ದಾರೆ. ಇದಕ್ಕಾಗಿ ರಚನೆ ಮಾಡಿದ ಅಭಿವಂದನಾ ಸಮಿತಿಯಲ್ಲಿ ಎಲ್ಲರೂ ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಶುಭಾಶಂಸನೆಯನ್ನು ನಡೆಸಬೇಕು ಎಂದು ಕೇಳಿಕೊಂಡಾಗ ಬೇಲಿ ಮಠದ ಶ್ರೀಶಿವಾನುಭವ ಚರಮೂರ್ತಿ ಶ್ರೀಶಿವಯೋಗಿ ಸ್ವಾಮೀಜಿಯವರು ಸಂತೋಷದಿಂದ ಒಪ್ಪಿಕೊಂಡಿದ್ದಾರೆ ಎಂದು ಅಯೋಧ್ಯಾ ಬಾಲರಾಮ ಮಂಡಲೋತ್ಸವ ನೇತಾರ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥರ ಅಭಿವಂದನಾ ಸಮಿತಿ ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top