ಶಿವಮೊಗ್ಗ: ಅಪೂರ್ವ ಸಂಗಮ ಎಂಬ ತಂಡವು ಶಿವಮೊಗ್ಗ ನಗರದ ಗಾಂಧಿ ಪಾರ್ಕ್ ನಲ್ಲಿ ಸಾಹಿತ್ಯಾಸಕ್ತ ಅಪರಿಚಿತರೆಲ್ಲ ನಿಗದಿತ ಕಾಲದಲ್ಲಿ ಸೇರಿ ಪರಿಚಿತರಾಗಿ ಓದುವ ಹವ್ಯಾಸವನ್ನು ಕೆಲವು ತಿಂಗಳುಗಳಿಂದ ನಡೆಸಿಕೊಂಡು ಬರುತ್ತಿದೆ. ಈ ಒಂದು ಭೇಟಿ ಕೇವಲ ಓದಿಗೆ ಮೀಸಲಾಗದೆ ಪ್ರಬಂಧ ಸ್ಪರ್ಧೆ, ಅಂಕಣ ಬರೆಯುವುದು, ಕಥೆ, ಕವನ ರಚನೆ ಹೀಗೆ ಸಾಹಿತ್ಯದ ಹಲವು ಮಗ್ಗಲುಗಳ ಮೇಲೆ ಸ್ಪರ್ಧೆ ಏರ್ಪಡಿಸಲಾಗುತ್ತದೆ. ತೀರ್ಪುಗಾರರಾಗಿ ಪರಿಣಿತಿ ಹೊಂದಿರುವ ವ್ಯಕ್ತಿಗಳಿಂದ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ವಿಜೇತರಿಗೆ ಪುಸ್ತಕವನ್ನು ಬಹುಮಾನವಾಗಿ ನೀಡಲಾಗುತ್ತಿದೆ. ಇದು ಒಂದು ಸ್ಪರ್ಧೆಯಾಗಿ ಉಳಿಯದೆ ತಂಡದ ಅನೇಕರಲ್ಲಿ ಬರೆಯುವ ಹುಮ್ಮಸ್ಸು ಹಾಗೂ ಧೈರ್ಯದಿಂದ ತಮ್ಮ ಅನುಭವಗಳನ್ನು ಬರೆಯಲು ಪ್ರೇರೇಪಿಸುತ್ತದೆ. ಪ್ರತಿ ಭೇಟಿಯಿಂದ ಭೇಟಿಗೆ ಹೊಸತನ ಹೊಸ ಹುರುಪಿನಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿಯ ಭೇಟಿಯಲ್ಲಿ ಸಾಹಿತ್ಯಾಸಕ್ತ ಓದುಗರು ಸೇರಿ ತಮ್ಮ ಆಸಕ್ತಿಯ ಪುಸ್ತಕವನ್ನು ಕೆಲಕಾಲ ಓದಿ ನಂತರ ಎಲ್ಲಾ ಸೇರಿ ತಮ್ಮ ಪರಿಚಯ ಮಾಡಿಕೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಜನಪದ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳು ಎಂಬ ವಿಷಯದ ಕುರಿತ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗೌಸ್ ಪೀರ್, ದ್ವಿತೀಯ ಬಹುಮಾನ ನವೀನ್ ಚಂದ್ರ ಹಾಗೂ ಅಕ್ಷತಾ ಜೊತೆಗೆ ಹಳ್ಳಿಗಳ ವಿಕಾಸ ಯೋಜನೆಯಲ್ಲಿ ಪರಿಸರ ನಾಶ ಎಂಬ ವಿಷಯದ ಕುರಿತ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ನವೀನ್ ಚಂದ್ರ, ದ್ವಿತೀಯ ಬಹುಮಾನ ಗೌಸ್ ಪೀರ್, ತೃತೀಯ ಬಹುಮಾನವನ್ನು ಅಕ್ಷತಾರವರಿಗೆ ಪುಸ್ತಕ ರೂಪದಲ್ಲಿ ಅಪೂರ್ವ ಸಂಗಮ ತಂಡದ ಮುಖ್ಯಸ್ಥರಾದ ಹಾಗೂ ಕಾರ್ಯಕ್ರಮದ ಆಯೋಜಕರಾದ ಗುರುದತ್ತ್ ನೀಡಿದರು.
ನಂತರ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ನದಿ ತೀರದಲ್ಲಿ ಸ್ವಚ್ಛತೆ ಮಾಡುವ ಬಗ್ಗೆ ಹಾಗೂ ಜನರಿಗೆ ನದಿಯ ಪ್ರಾಮುಖ್ಯತೆಯ ಅರಿವು ಮೂಡಿಸುವ ಬಗ್ಗೆ ಚರ್ಚೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹಲವು ಕಾಲೇಜಿನ ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಹಾಗೂ ಅನೇಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಓದುಗರು ಪಾಲ್ಗೊಂಡಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ