ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲೊಂದು ವಿಶಿಷ್ಠ ಪ್ರಯೋಗ; ಅಭೂತಪೂರ್ವ ಪ್ರತಿಸ್ಪಂದನೆ
ಶ್ರೀರಾಮಾಯಣ– ಜ್ಞಾನ ದರ್ಪಣ
‘ರಾಘವೋ ವಿಜಯಂ ದದ್ಯಾತ್ ಮಮ ಸೀತಾಪತಿ ಪ್ರಭುಃ’
ಸದಭಿರುಚಿಯ ಸಕಾರಾತ್ಮಕ ಸುದ್ದಿ ಪ್ರಸರಣ ನಿರತ ಪತ್ರಕರ್ತ ಚಂದ್ರಶೇಖರ ಕುಳಮರ್ವರ ಸಾರಥ್ಯದ ಉಪಯುಕ್ತ.ಕಾಂನಲ್ಲಿ ನಮ್ಮ ಜೀವಮಾನದಲ್ಲೇ ನಡೆದಿರುವ ಮೋಕ್ಷದಾಯಕ ದೇವಭೂಮಿ ಅಯೋಧ್ಯಯಲ್ಲಿ ಸೌಹಾರ್ದ, ರಾಷ್ಟ್ರೀಯತೆಯ ಪ್ರತೀಕವಾಗಿ ದಿವ್ಯ ಶ್ರೀ ರಾಮ ಮಂದಿರ ನಿರ್ಮಾಣಗೊಂಡು, ಐತಿಹಾಸಿಕ ಪುನಃ ಪ್ರತಿಷ್ಠಾಪನೆಯ ನಿಮಿತ್ತ 2023ರ ಡಿಸೆಂಬರ್ 15ರಿಂದ ಪ್ರಾರಂಭಿಸಿದ ಲೇಖನ ಅಭಿಯಾನ ಮಾಲೆಯಲ್ಲಿ ಭಾರತೀಯರ ಪಾಲಿನ ಬಹು ದೊಡ್ಡ ರೂಪಕ ಶ್ರೀರಾಮ- ಅವನ ಅವತಾರದ ಹಿನ್ನೆಲೆ, ಶ್ರೀರಾಮಾಯಣ ಆಧರಿಸಿ ಈ ನಾಡಿನ ಖ್ಯಾತ ನಾಮರು– ವಿಚಾರಪರ ಲೇಖಕನೇಕರು ನಮ್ಮ ಮನವಿಗೆ ನಿರೀಕ್ಷೆ ಮೀರಿ ಸ್ಪಂದಿಸಿ ವಿವಿಧ ಆಯಾಮದಿಂದ ರಾಮಾಯಣದ ಪುನರಾವಲೋಕನವನ್ನು ಮಾಡಿ ಈ ಅಭಿಯಾನದಲ್ಲಿ ಲೇಖನ ಬರೆಯುವ ಮೂಲಕ ತಮ್ಮ ಭಕ್ತಿ –ಶ್ರದ್ಧೆಯನ್ನು ತೋರಿದ್ದಾರೆ. ಚಿರನೂತನವಾದ ಮಹಾಕಾವ್ಯ ನೀಡುವ ಸನಾತನ ಸಂದೇಶದ ನವೋದಿತ ಭಾರತೀಯತ್ವದ ಕಹಳೆ ಮೊಳಗಿಸಿದ್ದಾರೆ.
ಶತಮಾನಗಳ ಕನಸೊಂದು ಸಾಕಾರಗೊಳ್ಳುತ್ತ ಇಡೀ ದೇಶ ಭಾವಪರವಶರಾಗಿ ಸಾಂಸ್ಕೃತಿಕ ಪುನರುತ್ಥಾನದ ದಿಕ್ಕಿನತ್ತ ಸಾಗುತ್ತಿರುವ ಈ ಹೊತ್ತಿನಲ್ಲಿ ಇಂಥಹೊಂದು ಜ್ಞಾನ ಸತ್ರ ನಡೆಸುವುದು ಬಹು ಸೂಕ್ತವೆಂದು ನಾವು ನಿಧರಿಸಿ ಕಾರ್ಯಪ್ರವೃತ್ತರಾದೆವು, ಶ್ರೀರಾಮನ ಬದುಕು, ನಡವಳಿಕೆ, ಮಾತು ಕೃತಿಗಳೆಲ್ಲವೂ ಭರತವರ್ಷಕ್ಕೆ ಆದರ್ಶವೇ, ಶ್ರೀರಾಮಾಯಣದ ಅಪೂರ್ವ ಮಾಹಿತಿಗಳ ಮೇಲೆ ಬೆಳಕು ಚೆಲ್ಲುವ ಈ ಲೇಖನ ಸರಣಿ ಯಲ್ಲಿ ಆಸಕ್ತಿದಾಯಕ ವಿಚಾರಗಳನ್ನು ಅನಾವರಣಗೊಳಿಸುತ್ತ ಅಕ್ಷರ ಮಂಡಲೋತ್ಸವ ನಡೆಸಿ ಶ್ರೀ ರಾಮನ ಪಾದಗಳಿಗೆ ನುಡಿ ಪುಷ್ಪ ಸಮರ್ಪಿಸುತ್ತ ಸಾರಸ್ವತ ಕೈಂಕರ್ಯ ನಡೆಸುತ್ತಿರುವ ಲೇಖಕರೆಲ್ಲರೂ ಅಭಿವಂದನೀಯರು ಎಂದು ತಿಳಿಸ ಬಯಸುತ್ತೇನೆ.
ಶ್ರೀರಾಮಚಂದ್ರನ ಗುಣಲೀಲೆಮಹಿಮೆಗಳ ಅನುಸಂಧಾನ ನಡೆಸಿ ಶ್ರೀರಾಮಾಯಣದ ವಿವಿಧ ಮಜಲುಗಳನ್ನು ,ಪಾತ್ರಗಳನ್ನು ಪರಿಚಯಿಸುವ ಮೌಲಿಕ ಲೇಖನಗಳ ಸರಮಾಲೆಯ ಐವತ್ತರ ಸಂಭ್ರಮ ಇದಾಗಿದೆ. ನಿರಂತರವಾದ ಈ ನುಡಿಪಯಣ ಶತಚಿಂತನೆಗಳತ್ತ ನಡೆಯುವ ವಿಶ್ವಾಸ ನನಗಿದೆ. ಈ ಮಾಲೆಯ ಲೇಖನಗಳ ಸಂಕಲನವನ್ನು ಕೃತಿರೂಪದಲ್ಲೂ ಹೊರತಂದು ಪ್ರಕಟಿಸಬೇಕೆಂದು ಬಹುಜನರು ಅಪೇಕ್ಷಿಸಿದ್ದಾರೆ. ಶ್ರೀರಾಮ ಕಥಾ ಲೇಖನ ಅಭಿಯಾನ ಲೇಖಕರ ಸಮ್ಮಿಲನ ನಡೆಸಿ; ರಾಮ ಭಕ್ತ ಸಮಕ್ಷಮದಲ್ಲಿ ಜ್ಞಾನ ಯಜ್ಞದ ಪೂರ್ಣಾಹುತಿ ನಡೆಸಲು ಸಂಕಲ್ಪಿಸಿದ್ದೇವೆ. ಆ ಕಾರ್ಯಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಪೇಕ್ಷಿಸುತ್ತ ಶ್ರೀ ಸೀತಾಪತಿ ರಾಮಚಂದ್ರನು ನಮ್ಮೆಲ್ಲರನ್ನು ಹರಸಲಿ ಎಂದು ವಿನಮ್ರವಾಗಿ ಪ್ರಾರ್ಥಿಸುವೆ.
ಶೋಭನಕೃತ್ ಸಂ|| ಪುಷ್ಯ ಬಹುಳ ಸಪ್ತಮಿ ಶ್ರೀ ನರಹರಿ ತೀರ್ಥರ ಆರಾಧನೆ ಫೆ.2.2024 ಶುಕ್ರವಾರ
-ಡಾ. ಗುರುರಾಜ ಪೋಶೆಟ್ಟಿಹಳ್ಳಿ,
ಕಾರ್ಯನಿರ್ವಾಹಕರು, ಪ್ರಣವ ಮೀಡಿಯಾ ಹೌಸ್ ಪ್ರಕಾಶನ, ಬೆಂಗಳೂರು
ಸಂಚಾಲಕರು, ಶ್ರೀರಾಮ ಕಥಾ ಲೇಖನ ಅಭಿಯಾನ, ಉಪಯುಕ್ತ.ಕಾಂ 9739369621
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ