ದೇವರ ಪೂಜೆ, ಅಭಿಷೇಕದಿಂದ ಪಾಪಗಳ ಕ್ಷಯವಾಗಿ, ಪುಣ್ಯ ಸಂಚಯ: ಪೂಜ್ಯ ದಿವ್ಯಸಾಗರ ಮುನಿಮಹಾರಾಜರು
ಉಜಿರೆ: ದೇವರ ಪೂಜೆ, ಆರಾಧನೆ, ಅಭಿಷೇಕದಿಂದ ಪಾಪಗಳ ಕ್ಷಯವಾಗಿ ಪುಣ್ಯ ಸಂಚಯವಾಗುತ್ತದೆ ಎಂದು ಪೂಜ್ಯ ದಿವ್ಯಸಾಗರ ಮುನಿಮಹಾರಾಜರು ಹೇಳಿದರು.
ಅವರು ಶುಕ್ರವಾರ ಧರ್ಮಸ್ಥಳದ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಪಾದಾಭಿಷೇಕದ ಸಂದರ್ಭ ಮಂಗಲ ಪ್ರವಚನ ನೀಡಿದರು. ಶ್ರದ್ಧಾ-ಭಕ್ತಿಯಿಂದ ದೇವರಪೂಜೆ, ಅಭಿಷೇಕ ಮಾಡುವುದರಿಂದ ಎಲ್ಲಾ ಸಂಕಟಗಳ ನಿವಾರಣೆಯಾಗಿ ಜೀವನ ಪಾವನವಾಗುತ್ತದೆ. ಆತ್ಮಕಲ್ಯಾಣವಾಗುತ್ತದೆ. ಸುಖ-ಶಾಂತಿ ಸಿಗುತ್ತದೆ ಎಂದು ಹೇಳಿದರು.
ಪೂಜ್ಯ ಆದಿಸಾಗರ ಮುನಿಮಹಾರಾಜರು ಪ್ರವಚನ ನೀಡಿ ನಾವು ಬೀಜ ಬಿತ್ತಿದಂತೆ ಫಲಸಿಗುವ ಹಾಗೆ ಸ್ವಾರ್ಥ ರಹಿತರಾಗಿ ಸತ್ಕಾರ್ಯ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ನಿತ್ಯವೂ ವೃತ-ನಿಯಮಗಳ ಪಾಲನೆಯೊಂದಿಗೆ ದೇವರ ಪೂಜೆ, ಮುನಿಗಳಿಗೆ ಆಹಾರದಾನ ಮಾಡಿದರೆ ಆತ್ಮಕಲ್ಯಾಣವಾಗುತ್ತದೆ ಎಂದು ಹೇಳಿದರು.
ಕಾರ್ಕಳದ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಪೂಜ್ಯ ನಿರ್ದೋಷಸಾಗರ ಮುನಿಮಹಾರಾಜರು ಮತ್ತು ಕ್ಷುಲ್ಲಕ ನಿರ್ವಾಣಸಾಗರ ಮಹಾರಾಜರು ಉಪಸ್ಥಿತರಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಪಾದಾಭಿಷೇಕದಲ್ಲಿ ಭಾಗವಹಿಸಿದರು. ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ರತ್ನಗಿರಿಯಲ್ಲಿ 216 ಕಲಶಗಳಿಂದ ಜಲಾಭಿಷೇಕ ಹಾಗೂ ಎಳನೀರು, ಗಂಧ, ಚಂದನ, ಅಷ್ಟಗಂಧ ಮೊದಲಾದ ಮಂಗಳದ್ರವ್ಯಗಳಿಂದ ಪಾದಾಭಿಷೇಕ ನಡೆಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ