-ಡಾ. ಎನ್.ಜಿ. ವಿಜಯಲಕ್ಷ್ಮಿ ರಾಘವೇಂದ್ರಾಚಾರ್ಯ, ಬೆಂಗಳೂರು
‘ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲೆಲ್ಲಿ ನೋಡಿದರು ಅಲ್ಲಿ ಶ್ರೀರಾಮ...’ ಜಗತ್ತನೇ ವ್ಯಾಪಿಸಿರುವ ಶ್ರೀರಾಮನ ಚರಿತೆಗೆ ಧರ್ಮಕ್ಷೇತ್ರವಾದ ಈ ಭಾರತದಲ್ಲಿ ಕೊರತೆಯೇ... ? ಅಂದೇ ಕುಮಾರವ್ಯಾಸ ಹೇಳಿರುವರು- ‘ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ ರಘುವರರ ಚರಿತೆಯಲಿ ಕಾಲಿಡಲು ತೆರಪಿಲ್ಲ’. ಸಂಸ್ಕøತ, ಹಳೆಗನ್ನಡ, ಹೊಸಗನ್ನಡ, ತೆಲಗು , ತಮಿಳು, ಅವಧಿ, ವ್ರಜ, ಹಿಂದೀ ಇತ್ಯಾದಿ ಸಮಸ್ತ ಭಾಷೆಗಳಲ್ಲಿ ರಾಮರ ಚರಿತೆ ರಾಮಾಯಣ ಮೂಡಿ ಬಂದಿದೆ.
ಉತ್ತರ ಭಾರತದಲ್ಲಿ ಗೋಸ್ವಾಮಿ ತುಳಸೀದಾಸ್, ಸ್ವಾಮಿ ಅಗ್ರದಾಸ್, ನಾಭಾದಾಸ್, ಪೂರ್ಣಚಂದ್ ಚೌಹಾನ್ ಮುಂತಾದವರು ರಾಮಾಯಣ ಬರೆದಿದ್ದಾರೆ. ಅವರಲ್ಲಿ ತುಳಸೀದಾಸರು ಅಗ್ರಗಣ್ಯರು. ಅವರು ಸುಮಾರು ನಲವತ್ತು ಕೃತಿಗಳನ್ನು ರಚಿಸಿದ್ದರೂ ಮೇರುಕೃತಿ ಎಂದು ಹೆಸರು ಪಡೆದಿರುವುದು ‘ರಾಮಚರಿತಮಾನಸ’, ಒಂದು ಬೃಹತ್ ಗ್ರಂಥ. ಇತ್ತೀಚೆಗೆ ಅವರ ‘ಹನುಮಾನ ಚಾಲೀಸ’ ಸಹ ದಕ್ಷಿಣ ಭಾರತದಲ್ಲೂ ಎಲ್ಲರ ನಾಲಿಗೆ ಮೇಲೆ ನಲಿದಾಡುತ್ತಿದೆ.
ಈ ಮೇರು ಗ್ರಂಥ ರಾಮಚರಿತಮಾನಸ ಸಾಮಾನ್ಯ ಜನರ ಭಾಷೆಯಾದ ಅವಧಿ ಭಾಷೆಯಲ್ಲಿದೆ. ಅದುವರೆಗೂ ಸಾಮಾನ್ಯ ಜನರು ಸಂಸ್ಕøತ ರಾಮಾಯಣವನ್ನು ಜ್ಞಾನಿಗಳಿಂದ ಹೇಳಿಸಿ ಇಲ್ಲವೇ ಓದಿಸಿ ತಿಳಿದುಕೊಳ್ಳುತ್ತಿದ್ದರು. ತುಳಸೀದಾಸರ ರಾಮಚರಿತಮಾನಸ ಎಲ್ಲರ ಕೈಗೂ ಎಟಕುವಂತಾಯಿತು. ತುಳಸೀ ರಾಮಾಯಣ ಎಂದ ಕೂಡಲೇ ನಮಗೆ ನೆನಪಾಗುವುದು ಎಂಭತ್ತರ ದಶಕದಲ್ಲಿ ಹೊಸ ಅಲೆ ಎಬ್ಬಿಸಿದ್ದ ರಾಮಾಯಣ ಧಾರಾವಾಹಿ. ಈ ಧಾರಾವಾಹಿಯ ಶೀರ್ಷಿಕೆ ಗೀತೆ ತುಳಸೀ ರಾಮಾಯಣದಿಂದಲೇ ಆರಿಸಲಾಗಿತ್ತು-
‘ಮಂಗಲ್ ಭವನ್ ಅಮಂಗಲಹಾರೀ|
ದ್ರ ಬಹು ಸುದಸರಥ್ ಅಚರ್ ಬಿಹಾರೀ||
ಹೈ ಸುಖಲದಾಯಿನೀ ರಾಮಾಯಣ್ ಸುಖ ಧಾಮ್ ಕೀ|
ಅದ್ಭುತ್ ಹೈ ಮಹಿಮಾ ದೋ ಅಕ್ಷರ್ ಕೆ ನಾಮ್||
ಸುನೋ ರಾಮ್ ಕಥಾ ಔರ್ ಜೈ ಬೋಲೋ ಶ್ರೀರಾಮ್ ಕೀ|
ಈ ರಾಮಚರಿತಮಾನಸದಲ್ಲಿ ಏನೇನು ಅಡಕವಾಗಿವೆ ಎಂದು ತಿಳಿದುಕೊಳ್ಳುವುದಕ್ಕೆ ಮುಂಚೆ ತುಳಸೀದಾಸರ ಸಂಕ್ಷಿಪ್ತ ಪರಿಚಯ ಮಾಡಿಕೊಳ್ಳೋಣ.
ಉತ್ತರ ಪ್ರದೇಶದಲ್ಲಿ ರಾಜಾಪುರ ಒಂದು ಗ್ರಾಮ. ಅಲ್ಲಿ ಹುಲಸೀ ಹಾಗೂ ಆತ್ಮಾರಾಮ್ ಎಂಬ ದಂಪತಿಗಳಿದ್ದರು. ಹುಲಸೀ ಒಮ್ಮೆ ಗರ್ಭವತಿ ಆದಾಗ ಆ ಗರ್ಭವನ್ನು ಹನ್ನೆರಡು ತಿಂಗಳು ಹೊತ್ತಿದ್ದಳು. ನಂತರ ಗಂಡು ಮಗುವಿನ ಜನನವಾಯಿತು. ಹುಟ್ಟಿದಾಗ ಆ ಮಗು ಅಳಲಿಲ್ಲ. ‘ರಾಮ’, ‘ರಾಮ’ ಎನ್ನುತ್ತಿತ್ತು. ಹಾಗಾಗಿ ಆ ಮಗುವಿಗೆ ‘ರಾಮ್ ಬೋಲಾ’ ಎಂದು ನಾಮಕರಣ ಮಾಡಿದರು. ಆ ನವಜಾತ ಶಿಶು ಐದು ವರ್ಷದ ಬಾಲಕನಂತೆ ಬೆಳೆದಿತ್ತು. ಬಾಯಿಯಲ್ಲಿ ಮೂವತ್ತೆರಡು ಹಲ್ಲುಗಳು ಮೂಡಿದ್ದವಂತೆ. ಅಲ್ಲದೆ ಆ ಮಗು ಹುಟ್ಟುತ್ತಿದ್ದಂತೆ ತಾಯಿ ಸ್ವರ್ಗಸ್ಥಳಾದಳು. ಆ ಮಗು ‘ಅನಿಷ್ಟ’ ಮಗು ಎನಿಸಿಕೊಂಡಿತು. ಇದು ‘ಬಚ್ಚ’ ಅಲ್ಲ ‘ಬಿಚ್ಚು’ ಎಂದು ಎಲ್ಲರೂ ದೂರ ಮಾಡಿದರಂತೆ. ಕೆಲವು ದಿವಸದ ನಂತರ ತಂದೆಯೂ ತೀರಿ ಹೋದರು. ಈಗ ರಾಮಬೋಲಾ ನಿಜವಾಗಿಯೂ ಅನಾಥನಾದ. ಅಲ್ಲಿ ಇಲ್ಲಿ ಆಶ್ರಯ ಪಡೆದು ಊರೂರು ಅಲೆಯುತ್ತಾ ಸೂಕರ್ ಖೇತ್ ಎಂಬ ಊರು ಸೇರಿದ. ಅಲ್ಲಿ ಹನುಮಾನ್ ಮಂದಿರದಲ್ಲಿ ಆಶ್ರಯ ಪಡೆದ. ರಾಮ ಭಕ್ತ ಹನುಮಂತನ ಸೇವೆ ಶ್ರದ್ಧಾ, ಭಕ್ತಿ ಹಾಗೂ ನಿಷ್ಠೆಯಿಂದ ಮಾಡತೊಡಗಿದ. ಇವನ ಸೇವಾ ವೈಖರಿಯನ್ನು ಕಂಡ ಅಲ್ಲಿದ್ದ ಸಂತ ನರಹರಿದಾಸರು ಇವನನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು. ಅಯೋಧ್ಯೆಯಲ್ಲಿ ಅವನ ಉಪನಯನ ಸಂಸ್ಕಾರ ನೆರವೇರಿಸಿದರು. ವಟು ರಾಮ್ ಬೋಲಾ ಭಗವಾನ್ ಶ್ರೀರಾಮನಿಗೆ ನಮಸ್ಕರಿಸುವಾಗ ದೇವರಿಗೆ ಹಾಕಿದ್ದ ತುಳಸೀ ಮಾಲೆ ಈ ಹುಡುಗನ ಮೇಲೆ ಬಿತ್ತು. ಆ ಕ್ಷಣದಿಂದ ರಾಮ್ ಬೋಲಾ ‘ತುಳಸೀದಾಸ’ ರೆನಿಸಿದರು. ವರಾಹ ಕ್ಷೇತ್ರಕ್ಕೆ ಕರೆದುಕೊಂಡು ಹೋಗಿ ಅಲ್ಲ ರಾಮಕಥೆ ಹೇಳಿದರು. ತಮಗೆ ತಿಳಿದಿದ್ದ ಕಾಶೀ ಪಂಡಿತರೊಬ್ಬರ ಬಳಿ ಅಧ್ಯಯನ ಮಾಡಲು ಕಳುಹಿಸಿಕೊಟ್ಟರು.
ಗುರುಗಳಲ್ಲಿ ಶ್ರದ್ಧೆ, ಭಕ್ತಿ ಮತ್ತು ನಿಷ್ಠೆಯಿಂದ ಹನ್ನೆರಡು ವರ್ಷ ಅಧ್ಯಯನ ಮಾಡಿದರು. ವೇದ ವೇದಾಂತ ಶಾಸ್ತ್ರಗಳನ್ನೆಲ್ಲಾ ಕಲಿತು ಪ್ರಕಾಂಡ ಪಂಡಿತರೆನಿಸಿದರು. ಮತ್ತೆ ತಮ್ಮ ಹುಟ್ಟೂರಾದ ರಾಜಾಪುರಕ್ಕೆ ತೆರಳಿದರು. ಊರೂರುಗಳಿಗೆ ತೆರಳಿ ತಮ್ಮ ಅಪಾರ ಜ್ಞಾನವನ್ನು ಜನರಿಗೆ ಹಂಚತೊಡಗಿದರು. ತುಳಸೀದಾಸರ ಅಪಾರ ಜ್ಞಾನ,ಕೀರ್ತಿ ಹಾಗೂ ಘನತೆಗಳನ್ನು ಕಣ್ಣಾರೆ ಕಂಡ ದೀನಬಂಧು ಪಾಠಕ್ ಎಂಬುವರು ತಮ್ಮ ಏಕಮಾತ್ರ ಪುತ್ರಿ ರತ್ನಾವಳಿಯ ವಿವಾಹ ತುಳಸೀದಾಸರೊಂದಿಗೆ ಮಾಡಿದರು. ಈಗ ತುಳಸೀದಾಸರಿಗೆ ತಮ್ಮ ಸಂಸಾರ ಹಾಗೂ ಪತ್ನಿ ಬಹಳ ಹಿತ ಎನಿಸಿತು. ದಿನದ ಇಪ್ಪತ್ನಾಲ್ಕು ಗಂಟೆಯೂ ಆಕೆಯ ನೆರಳಾದರು. ಒಮ್ಮೆ ಆಕೆ ತನ್ನ ತವರು ಮನೆಗೆ ಹೋಗಿದ್ದಾಗ ಅವಳನ್ನು ಬಿಟ್ಟಿರಲಾರದೆ ರಾತ್ರೋರಾತ್ರಿ ನದಿಯಲ್ಲಿ ಈಜಿಕೊಂಡು ಹೋಗಿ ಆಕೆಯನ್ನು ಸೇರಿದರು. ಆಕೆ ತನ್ನ ಪತಿಯನ್ನು ತನ್ನ ಸೆರಗಿನಲ್ಲಿ ಕಟ್ಟಿಕೊಂಡಿರಲು ಇಚ್ಛಿಸುತ್ತಿರಲಿಲ್ಲ. ಅವರನ್ನು ಓರ್ವ ಮಹಾ ಪುರುಷನನ್ನಾಗಿ, ಜ್ಞಾನಿಯನ್ನಾಗಿ ಮತ್ತು ರಾಮಭಕ್ತನನ್ನಾಗಿ ನೋಡಲು ಅಪೇಕ್ಷೆ ಪಡುತ್ತಿದ್ದಳು. ಹೀಗೆ ಅಪರಾತ್ರಿಯಲ್ಲಿ ಕಳ್ಳನಂತೆ ಬಂದ ತನ್ನ ಪತಿಯನ್ನು ತುಚ್ಛವಾಗಿ ಕಂಡು ಕ್ರೋಧದಿಂದ ಬಹಳ ಕಟುವಾಗಿ ನಿಂದಿಸಿದಳು. ‘ನನ್ನ ಮೇಲಿಟ್ಟಿರುವ ಪ್ರೀತಿಯನ್ನು ಶ್ರೀರಾಮನ ಮೇಲೆ ಇಟ್ಟರೆ ನಿಮ್ಮ ಉದ್ಧಾರವಾಗುತ್ತದೆ ಎಂದು ಹಂಗಿಸಿ ನುಡಿದಳು. ಅಷ್ಟೇ ಸಾಕಾಯಿತು.. ತುಳಸೀದಾಸರು ಹೇಗೆ ಬಂದಿದ್ದರೋ ಹಾಗೇ ಹಿಂದಿರುಗಿದರು. ವಿರಕ್ತರಾದರು ಕಾಮವನ್ನು ತ್ಯಜಿಸಿದರು; ರಾಮನನ್ನು ಭಜಿಸಿದರು.
ತೀರ್ಥಕ್ಷೇತ್ರಗಳನ್ನೆಲ್ಲಾ ಸಂದರ್ಶಿಸಿ ಅಯೋಧ್ಯೆಯಲ್ಲಿ ನೆಲೆಸಿದರು. ಅವರಿಗೆ ಧನುರ್ಧಾರಿಯಾದ ಸಾಕ್ಷಾತ್ ಶ್ರೀರಾಮಚಂದ್ರನ ದರ್ಶನವಾಯಿತೆಂದು ಪ್ರತೀತಿ. ರಾಮನ ಆಜ್ಞೆ ಪಡೆದು ‘ರಾಮಚರಿತಮಾನಸ’ ಮಹಾಕಾವ್ಯ ಬರೆಯಲು ಪ್ರಾರಂಭಿಸಿದರು. ಮಧು ಮಾಸ ಮಂಗಳವಾರ ರಾಮನವಮಿ ಶುಭ ದಿನ ಶ್ರೀಕಾರ ಹಾಕಿದರು. ಎರಡು ವರ್ಷ, ಏಳು ತಿಂಗಳು ಹಾಗೂ ಇಪ್ಪತ್ತಾರು ದಿನಗಳಲ್ಲಿ ಮಹಾಕಾವ್ಯ ಬರೆದು ಮುಗಿಸಿದರು ಎಂದು ಪ್ರತೀತಿ. ಮಧ್ಯೆ ಮಧ್ಯೆ ಕಾಶಿಗೂ ಹೋಗುತ್ತಿದ್ದರು. ಅಲ್ಲಿ ವಿಶೇಷವಾಗಿ ‘ಕಿಷ್ಕಿಂಧಾ ಕಾಂಡ’ ರಚಿಸಿದರು ಎಂದು ಹೇಳುತ್ತಾರೆ. ಆ ಗ್ರಂಥವನ್ನು ಮೊದಲು ವಾರಣಾಸಿಯಲ್ಲಿ ಶಿವ-ಪಾರ್ವತಿಯ ಸಮ್ಮುಖ ಪಠಣಮಾಡಿ ಶಿವ-ಪಾರ್ವತಿಗೆ ಸಮರ್ಪಿಸಿದರು. ನಂತರ ಮಹಾ ಮಹಾ ವಿದ್ವಜ್ಜನರಿಂದ ಅದರ ಚರ್ಚೆಯಾಯಿತು. ವಾದ ವಿವಾದ ನಡೆಯಿತು. ಕೊನೆಯಲ್ಲಿ ವಿದ್ವಾನ್ ಮಧುಸೂದನ್ ಸರಸ್ವತಿ ಅವರು ಉದ್ಗಾರ ತೆಗೆದರಂತೆ –
ಆನಂದ ಕಾನನೇ ಕಶ್ಚಿದ್ಜಂಗಮಮಸ್ತುಲಸೀ ತರುಃ | ಕವಿತಾ ಮಂಜರಿಯಸ್ಯ ರಾಮ ಭ್ರಮರ ಭೂಷಿತಾ ||
ಅಂದರೆ ಕಾಶೀ ರೂಪಿ ಆನಂದ ವನದಲ್ಲಿ ಗೋಸ್ವಾಮಿ ತುಳಸೀ ರೂಪಿ ತರು ಇದೆ. ಅದರಲ್ಲಿ ಮಂಜರೀ ರೂಪಿ ಕವಿತೆಗಳು ಬಹಳ ಸುಂದರವಾಗಿ ಅರಳಿವೆ. ಅವುಗಳ ಸುತ್ತ ಶ್ರೀರಾಮ ರೂಪಿ ಭ್ರಮರ ನಿರಂತರ ಸುತ್ತುತ್ತಿರುತ್ತದೆ.
ರಾಮಚರಿತ ಮಾನಸ ಚರಿತ್ರೆ ಪ್ರಧಾನವಲ್ಲ... ಭಕ್ತಿ ಪ್ರಧಾನ. ಭಕ್ತಿಯ ಬೃಹತ್ ಗ್ರಂಥ. ಧರ್ಮ ಗ್ರಂಥ ಮತ್ತು ಮಹಾ ಕಾವ್ಯ. ಇದರಲ್ಲಿ ತುಳಸೀದಾಸರು ವ್ಯಕ್ತಿ ಕಲ್ಯಾಣ ಹಾಗೂ ಲೋಕ ಕಲ್ಯಾಣದ ಬಗ್ಗೆ ವಿಶೇಷ ಗಮನ ನೀಡಿದ್ದಾರೆ. ಯುಗ ಧರ್ಮ ಹಾಗೂ ಲೋಕ ಧರ್ಮಗಳು ಸುರಕ್ಷಿತವಾಗಿರುವಂತೆ ರಾಮ ಭಕ್ತಿಧಾರಾ ಹರಿಸಿದ್ದಾರೆ. ದೀನ ದರಿದ್ರರ ಮೊರೆ ಕೇಳಿ ಅವರ ದುಃಖಗಳನ್ನು ನಿವಾರಿಸುವ, ಅಧರ್ಮ ನಾಶಮಾಡಿ ಧರ್ಮವನ್ನು ಪ್ರತಿಷ್ಠಾಪಿಸುವ, ಜಗತ್ತಿಗೆ ನೀತಿ ಪಾಠ ಹೇಳುವ, ಜೊತೆಗೆ ತಾನೂ ಸ್ವತಃ ನ್ಯಾಯ ನಿಷ್ಠಾವಂತನಾಗಿ, ಸಕಲ ಗುಣ ಸಂಪನ್ನನಾದ ಮರ್ಯಾದಾ ಪುರುಷೋತ್ತಮ ಧನುರ್ಧಾರಿ ರಘುಕುಲತಿಲಕ ಶ್ರೀರಾಮಚಂದ್ರನೇ ತುಳಸೀದಾಸರಿಗೆ ಸರ್ವಸ್ವ. ಗ್ರಂಥದಲ್ಲಿ ಸರ್ವತ್ರ ಶ್ರೀರಾಮನ ದಾಸ್ಯ ಭಕ್ತಿಯನ್ನು ಪ್ರತಿಪಾದಿಸಿದ್ದಾರೆ. ರಾಮನೇ ಅವರ ಏಕಮಾತ್ರ ದೈವ. ಏಕಮಾತ್ರ ವಿಶ್ವಾಸ. ಮತ್ತು ಏಕಮಾತ್ರ ಭರವಸೆ. ಶ್ರೀರಾಮಚಂದ್ರ ಮೇಘವಾದರೆ ತುಳಸೀದಾಸರು ಚಾತಕ ಪಕ್ಷಿ; ಚಂದ್ರನಾದರೆ ದಾಸರು ಚಕೋರ. ರಾಮ ಜಲವಾದರೆ ಅದರಲ್ಲಿ ಬಾಯಾರಿದ (ಪ್ಯಾಸೀ) ಮೀನು ನಮ್ಮ ತುಳಸೀದಾಸರು.
ರಾಮಚರಿತಮಾನಸದಲ್ಲಿ ತರ್ಕ, ಭಕ್ತರ ಭಕ್ತಿ ಭಾಗೀರಥೀ, ಸಾಹಿತ್ಯದ ಕಾವ್ಯ ಲಕ್ಷಣಗಳಾದ ಅಲಂಕಾರಗಳು, ರಸಗಳು, ಪ್ರಕೃತಿ ವರ್ಣನೆಗಳು ಇತ್ಯಾದಿ ತುಂಬಿ ತುಳುಕುತ್ತಿವೆ. ಹಾಗೆಯೇ ಸಮಾಜ ಕಲ್ಯಾಣದ ರೀತಿ ನೀತಿ, ಧರ್ಮ ನೀತಿ ಸಮಸ್ತವೂ ಇವೆ. ಒಟ್ಟಿನಲ್ಲಿ ಮಾನಸದಲ್ಲಿ ಮೊದಲಿನಿಂದ ಕೊನೆಯವರೆಗೂ ಭಕ್ತಿ ರಸ ಓತಪ್ರೋತವಾಗಿ ಹರಿದಿದೆ. ಇದೊಂದು ಭಕ್ತಿಯ ಮಹಾಸಾಗರ. ಭಕ್ತಿಯನ್ನು ಸಾಧಿಸುವ ಉಪಾಯಗಳು ಇವೆ.
‘ಮಾನಸ’ ಶಬ್ದದ ಅರ್ಥವನ್ನು ಇದರಲ್ಲಿ ಎರಡು ವಿಧದಲ್ಲಿ ವಿವರಿಸಲಾಗಿದೆ. ಒಂದು ಮನಸು ಮತ್ತೊಂದು ಮಾನಸ ಸರೋವರ. ಶಿವ ತನ್ನ ಮನಸ್ಸಿನಲ್ಲಿ ಅಂದರೆ ಮಾನಸದಲ್ಲಿ ರಾಮಕಥೆಯನ್ನು ಭಕ್ತಿ ಹಾಗೂ ವಿಶ್ವಾಸ ಪೂರ್ವಕವಾಗಿ ತುಂಬಿಕೊಂಡಿದ್ದರು. ಕಾಲ ಕೂಡಿಬಂದಾಗ ಅದನ್ನು ತಮ್ಮ ಅರ್ಧಾಂಗಿ ಪಾರ್ವತಿದೇವಿಗೆ ಹೇಳಿದರು. ರಾಮ ರೂಪಿ ಬೀಜವನ್ನು ಶಿವ ತಮ್ಮ ಪತ್ನಿಯ ಮಾನಸದಲ್ಲಿ ಬಿತ್ತಿದರು. ಶಿವ ಮನೋüಮಾನಿ ದೇವತೆ. ರಾಮನಲ್ಲಿ ಮನಸ್ಸನ್ನು ನಿಲ್ಲಿಸುವವರು ಅವರೇ.
ಮತ್ತೊಂದು ಮಾನಸ ಸರೋವರದ ಅರ್ಥ;- ಯಾರು ಈ ಮಾನಸ ಸರೋವರದ ಬಳಿ ಬರುತ್ತಾರೋ ಅವರ ಪಾಪಗಳು, ಶ್ರಮ, ದುಃಖ ಇತ್ಯಾದಿ ಎಲ್ಲವೂ ನಾಶವಾಗುತ್ತವೆ. ಅಖಂಡವಾದ ಆನಂದ ಪ್ರಾಪ್ತವಾಗುತ್ತದೆ. ಇನ್ನು ಈ ಸರೋವರದಲ್ಲಿ ಮುಳುಗು ಹಾಕಿದರಂತೂ ರಾಮ ರಕ್ಷೆ ಖಂಡಿತ.
ರಾಮಚರಿತಮಾನಸ ಯೇಹಿ ನಾಮ್| ಸುನತ್ ಶ್ರವಣ ಪಾಯಬ ವಿಶ್ರಾಮ್ ||
ಮನ ಕರಿ ವಿಷಯ್ ಅನಲ್ ಬನ್ ಜರ ಈ| ಹೋಯೀ ಸುಖಿ ಜೋಂ ಯೇಹಿ ಸರ್ ಪರ್ ಈ||
ಮಾನಸದಲ್ಲಿ ದುರ್ಗಮವಾದ ಏಳು ಸೋಪಾನಗಳಿವೆ. ಇವುಗಳನ್ನು ಏರಿ ಮೇಲೆ ಹೋದರೆ ಮಾನಸ ಸರೋವರದ ಆಳ ತಿಳಿಯುತ್ತದೆ. ಅದರಂತೆ ತುಳಸೀದಾಸರ ರಾಮಚರಿತಮಾನಸದಲ್ಲೂ ಏಳು ಸೋಪಾನಗಳಿವೆ. ಅಂದರೆ ಏಳು ಕಾಂಡಗಳು ಇವೆ. ಈ ಏಳು ಕಾಂಡಗಳ ಪಠಣ ಹಾಗೂ ಶ್ರವಣ ಮಾಡುವುದರಿಂದ ಶ್ರೀರಾಮನ ಗುಣ ಮತ್ತು ಮಹಿಮೆಯ ಆಳ ತಿಳಿಯುತ್ತದೆ.
ಏಳು ಸೋಪಾನಗಳು:- ಬಾಲ ಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಲಂಕಾ ಕಾಂಡ ಮತ್ತು ಉತ್ತರ ಕಾಂಡ. ವಾಲ್ಮೀಕಿ ರಾಮಾಯಣದಲ್ಲಿ ಇರುವಂತೆ ಇಲ್ಲಿಯೂ ಏಳು ಕಾಂಡಗಳಿವೆ . ಆದರೆ ಅಲ್ಲಿನ ಯುದ್ಧ ಕಾಂಡದ ಬದಲು ಇಲ್ಲಿ ಲಂಕಾ ಕಾಂಡ ಇದೆ. ಇದೊಂದು ಕಲ್ಪವೃಕ್ಷವೂ ಹೌದು. ಈ ಏಳು ಸೋಪಾನಗಳನ್ನು ಹತ್ತಿ ಸ್ವಾದಿಷ್ಟವಾದ ಭಕ್ತಿ ಫಲಗಳನ್ನು ಸವಿಯಬಹುದು.
ಮಾನಸ ಸರೋವರದಲ್ಲಿ ಹೇಗೆ ಮಧುಭರಿತ ಅರಳಿದ ಕಮಲಗಳು ಇರುತ್ತವೆಯೋ ಹಾಗೆ ರಾಮಚರಿತಮಾನಸದಲ್ಲಿ ಚೌಪಾಯಿಗಳು, ದೋಹೆಗಳು, ಸೋರಟ್ ಇತ್ಯಾದಿಗಳು ಇವೆ.
1. ಬಾಲಕಾಂಡ:- ಶಿವನ ಪತ್ನಿ ಸತಿಯ ಪರಿತ್ಯಾಗ. ಪಾರ್ವತೀ ತಪಸ್ಸು. ಕಾಮದಹನ. ಶಿವ-ಪಾರ್ವತಿಯರ ವಿವಾಹ. ಸೀತಾ- ರಾಮರ ವಿವಾಹದಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಮೂವರೂ ಇರುತ್ತಾರೆ. ಅವಧ, ಸರಯೂ, ರಾಮನವಮಿ, ರಾಮ ಚರಿತೆ ಇತ್ಯಾದಿಗಳ ವರ್ಣನೆ ಈ ಕಾಂಡದಲ್ಲಿ ಇರುವುದರಿಂದ ಬಾಲಕಾಂಡವನ್ನು ಅಯೋಧ್ಯಾಪುರ ಎಂದು ಹೆಸರಿಸಲಾಗಿದೆ. ಅಲ್ಲದೆ ಮಿಥಿಲೆಯ ರಾಜಕುಮಾರಿಯರು ಸೀತಾ, ಊರ್ಮಿಳಾ, ಶ್ರುತಕೀರ್ತಿ ಮತ್ತು ಮಾಂಡವಿ ಇವರನ್ನು ಪ್ರಜ್ಞೆಯ ನಾಲ್ಕು ಸ್ಥಿತಿಗಳಿಗೆ ಹೋಲಿಸಿ ರೂಪಕ ಅಲಂಕಾರದಿಂದ ಅಲಂಕರಿಸಿದ್ದಾರೆ. ಇದನ್ನು ‘ವಿಮಲ ಸಂತೋಷ’ ಎನ್ನುತ್ತಾರೆ.
2.ಅಯೋಧ್ಯಾಕಾಂಡ:- ಇದರಲ್ಲಿ ಶ್ರೀರಾಮನ ಪಟ್ಟಾಭಿಷೇಕದ ಸುಂದರ ಚಿತ್ರಣ ಇದೆ. ಆದರೆ ರಾಮ ಅಯೋಧ್ಯೆಯನ್ನು ಬಿಟ್ಟು ಹೋಗುತ್ತಾನೆ. ಶ್ರೀಕೃಷ್ಣನೂ ಹೀಗೆ ಗೋಕುಲ- ವೃಂದಾವನ ಬಿಟ್ಟು ಮಥುರಾಪುರಿಗೆ ಹೋಗಿರುತ್ತಾನೆ . ಅದರ ಸ್ಮರಣಾರ್ಥವಾಗಿ ಇದನ್ನು ‘ಮಥುರಾ ಪುರಿ’ ಎಂದು ಹೇಳುತ್ತಾರೆ. ಈ ಕಾಂಡದಲ್ಲಿ ಶ್ರೀರಾಮ ಸಂಪೂರ್ಣ ಐಶ್ವರ್ಯದ ತ್ಯಾಗ ಮಾಡಿ ಅನಾಸಕ್ತನಾಗುವುದರಿಂದ ಇದಕ್ಕೆ ‘ವಿಮಲ ವಿಜ್ಞಾನ ವೈರಾಗ್ಯ ಸಂಪಾದನ’ ಎಂಬ ಹೆಸರಿಟ್ಟಿದ್ದಾರೆ
3.ಅರಣ್ಯಕಾಂಡ:- ಸೀತಾಪಹರಣವಾಗುವುದರಿಂದ ಇದು ‘ವಿಮಲ ವೈರಾಗ್ಯ’. ಇಲ್ಲಿ ಮಾಯೆಯ ಹೆಚ್ಚಳ ಇರುವುದರಿಂದ ಇದು ‘ಮಾಯಾ ಪುರಿ’.
4.ಕಿಷ್ಕಿಂಧಾಕಾಂಡ:- ತೃಷ್ಣಾ, ಆಸಕ್ತಿ ಹಾಗೂ ಭೋಗ ಸಾಧನೆಯ ನಿಷೇಧ ಇಲ್ಲಿ ಇದೆ. ಆದ್ದರಿಂದ ಇದು ‘ವಿಮಲ ಜ್ಞಾನ’. ಕಾಶಿಯ ಮಹತ್ವ ತಿಳಿಸಿರುವುದರಿಂದ ಇದು ‘ಕಾಶಿ ಪುರಿ’.
5. ಸುಂದರಕಾಂಡ:- ರಾಮ ಶಕ್ತಿಯಿಂದ ನಡೆಯುವ ಸೃಷ್ಟಿ, ಸ್ಥತಿ ಹಾಗೂ ಲಯಕಾರ್ಯಗಳ ಬಗ್ಗೆ ತಿಸಿದ್ದಾರೆ. ಶಿವ ಕಾಂಚಿ ಹಾಗೂ ವಿಷ್ಣು ಕಾಂಚಿಗೆ ಅನುಸಾರವಾಗಿ ಹನುಮಂತನ ಚರಿತೆ ಮತ್ತು ರಾಮ ಚರಿತೆ ವರ್ಣಿಸಲ್ಪಟ್ಟಿದೆ. ಹಾಗಾಗಿ ಇದು ಕಾಂಚೀ ಪುರಿ.
6. ಲಂಕಾಕಾಂಡ:- ಇದರಲ್ಲಿ ಬ್ರಹ್ಮಾಂಡವನ್ನು ರಾಮನ ವಿಶ್ವರೂಪ ಎಂದು ಪ್ರಸ್ತುತ ಪಡಿಸಿದ್ದಾರೆ. ರಾಮ ರೂಪವೇ ಎಲ್ಲಾ ಅವತಾರ ರೂಪಗಳಿಗೆ ಮೂಲ. ರಾಮನೇ ಕೃಷ್ಣ, ನರಸಿಂಹ, ಪರಶುರಾಮ, ವಾಮನ ಇತ್ಯಾದಿ ಎಲ್ಲಾ. ಜಗತ್ತನ್ನು ರಾತ್ರಿ ಅಥವಾ ಕನಸಿಗೆ ಹೋಲಿಸಿದ್ದಾರೆ. ಜಗತ್ತು ರಾಮನ ರೂಪವಾಗಿದೆ ಹಾಗೂ ಅವನ ಮಾಯೆಯಿಂದ ಭಿನ್ನವಾಗಿ ಕಾಣುತ್ತದೆ. ರಾವಣ ಮಹಾ ಮೋಹದ ಪ್ರತೀಕ. ಆ ಮಹಾ ಮೋಹದ ನಾಶವಾಗುತ್ತದೆ. ಮಹಾಕಾಲದ ವರ್ಣನೆ ಇಲ್ಲಿ ಇರುವುದರಿಂದ ಇದು ‘ಆವಂತಿಕಾ ಪುರಿ’.
7. ಉತ್ತರ ಕಾಂಡ:- ಇಲ್ಲಿ ಕಾಕಭುಶುಂಡಿ ಮತ್ತು ಗರುಡರ ಸಂಭಾಷಣೆಯಲ್ಲಿ ತತ್ತ್ವ-ತತ್ತ್ವ ಶಾಸ್ತ್ರಗಳು ಮೂಡಿ ಬಂದಿವೆ. ಮತ್ತೆ ರಾಮ ರಾಜ್ಯ ಸ್ಥಾಪನೆ. ಭಕ್ತಿಯ ಪ್ರವಾಹ. ಅವಿರಲ ಹರಿಭಕ್ತಿ. ಎಲ್ಲಾ ಸಂದೇಹಗಳಿಗೂ ಇಲ್ಲಿ ಸಮಾಧಾನ ಉತ್ತರ ಸಿಗುತ್ತದೆ. ಶ್ರೀರಾಮ ಶ್ರೀಕೃಷ್ಣನಂತೆ ರಾಜ್ಯಭಾರ ಮಾಡುತ್ತಾನೆ. ಆದ್ದರಿಂದ ಇದು ದ್ವಾರಕಾಪುರಿ.
ಈ ಪ್ರಕಾರವಾಗಿ ವಿದ್ವಾಂಸರು ರಾಮಚರಿತಮಾನಸ ಗ್ರಂಥದ ಏಳು ಕಾಂಡಗಳನ್ನು ಏಳು ಪ್ರಸಿದ್ಧ ಪುರಿ (ಪಟ್ಟಣ) ಗಳಿಗೆ ಹೋಲಿಸಿದ್ದಾರೆ.
ರಾಮಚರಿತಮಾನಸದಲ್ಲಿ ಇಪ್ಪತ್ತೈದು ಸ್ತುತಿಗಳು, ಇಪ್ಪತ್ತೆರಡು ಗೀತೆಗಳು, ಋತುಗಳ ವರ್ಣನೆ ಇತ್ಯಾದಿಗಳು ಇವೆ. ಕೆಲವು ಪಾತ್ರಗಳು ನವವಿಧ ಭಕ್ತಿಗಳನ್ನು ಪ್ರತಿಪಾದಿಸುತ್ತವೆ. ಪಾರ್ವತಿ-ಶ್ರವಣ, ಭರತ-ಸ್ಮರಣ, ಲವ ಕುಶ-ಕೀರ್ತನ, ಪಾದ ಸೇವ-ಗುಹ, ಅರ್ಚನ-ಶ್ರೀರಾಮ, ವಂದನ- ಲಕ್ಷ್ಮಣ, ದಾಸ್ಯ-ಹನುಮಂತ, ಸಖ್ಯ-ಸುಗ್ರೀವ, ಆತ್ಮ ನಿವೇದನ-ಸೀತಾ ಮಾತೆ.
ವಾತ್ಸಲ್ಯ ರಸವನ್ನ ಹರಿಸುವವರು ಕೌಸಲ್ಯಾ, ದಶರಥ ಮುಂತಾದವರು. ದಶರಥನಂತೂ ಪ್ರಿಯ ರಾಮನನ್ನು ಬಿಟ್ಟು ಒಂದು ಕ್ಷಣವೂ ಇರಲಾರ. ರಾಮ ಅವನಿಂದ ದೂರವಾಗುತ್ತಿದ್ದಂತೇ ಅವನ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ.
-ಡಾ. ಎನ್. ಜಿ. ವಿಜಯಲಕ್ಷ್ಮಿರಾಘವೇಂದ್ರಾಚಾರ್ಯ.
ಪದನಾಮ (ಅಂಕಿತ): ಮಂಗಳಾಂಗಹರಿವಿಟ್ಠಲ.
ವಿಳಾಸ: ಡಾ. ಎನ್. ಜಿ. ವಿಜಯಲಕ್ಷ್ಮಿರಾಘವೇಂದ್ರಾಚಾರ್ಯ.
333, 12ನೇ ಮುಖ್ಯ ರಸ್ತೆ.ಮೊದಲನೇ ಹಂತ ಮೊದಲನೇ ಘಟ್ಟ.
ಗೋಕುಲ ಬಡಾವಣೆ.ಬೆಂಗಳೂರು 560054.
ಮೊಬೈಲ್ ಸಂಖ್ಯೆ:- 9035185102.ಇ-ಮೈಲ್: vijayalakshming71@gmail.com
ಲೇಖಕಿಯ ಪರಿಚಯ:
ಡಾ. ಎನ್ .ಜಿ. ವಿಜಯಲಕ್ಷ್ಮಿ ಅವರು ನಿವೃತ್ತ ಪ್ರೌಢಶಾಲಾ ಶಿಕ್ಷಕಿಯಾಗಿದ್ದು, B.Sc; B.Ed. M. A. (Hindi) Ph.D.(Hindi) ಪದವಿಗಳನ್ನು ಪಡೆದಿದ್ದಾರೆ. ವಲ್ಲಭ ಸಂಪ್ರದಾಯದ ಕೃಷ್ಣ ಕಾವ್ಯ ಹಾಗೂ ಮಧ್ವ ಸಂಪ್ರದಾಯದ ಕೃಷ್ಣ ಕಾವ್ಯದ ತುಲನಾತ್ಮಕ ಅಧ್ಯಯನ- ಎಂಬ ವಿಷಯದಲ್ಲಿ ಪಿ.ಹೆಚ್. ಡಿ. ಪ್ರೌಢ ಪ್ರಬಂಧವನ್ನು ರಚಿಸಿದ್ದಾರೆ. ಹರಿದಾಸ ಸಾಹಿತ್ಯದಲ್ಲಿ ಎಂ.ಫಿಲ್. ಪದವಿ ಗಳಿಸಿದ್ದಾರೆ. ಮಂಗಳಾಂಗಹರಿ ವಿಟ್ಠಲ ಎಂಬ ಅಂಕಿತದಲ್ಲಿ ಸಾಹಿತ್ಯ ರಚಿಸುತ್ತಿದ್ದಾರೆ. ಮಂಡ್ಯದ ಶ್ರೀ ವರಾಹಹರಿವಿಟ್ಠಲ ದಾಸರು ಇವರಿಗೆ ಅಂಕಿತ ನೀಡಿದ ಗುರುಗಳು. ಇದುವರೆಗೆ ಇಪ್ಪತ್ತೈದು ಪುಸ್ತಕಗಳನ್ನು ರಚಿಸಿ ಲೋಕಾರ್ಪಣೆ ಮಾಡಿದ್ದಾರೆ. ಒಂದು ಸಾವಿರದ ನೂರು ದೇವರನಾಮಗಳನ್ನು ರಚಿಸಿದ್ದಾರೆ. ಶ್ರೀ ರಾಮ ಪಾರಿಜಾತ ಎಂಬ ಒಂದು ಖಂಡ ಕಾವ್ಯವನ್ನು ರಚಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ