- ವ್ಯಾಸರಾವ್ ಜೆ.ಎಸ್
ʻಕನ್ನಡದ ಆಸ್ತಿʼ ಎಂದು ಹೆಸರಾಗಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರರು ಕನ್ನಡ ಸಣ್ಣಕತೆಗಳ ಜನಕ ಎಂದೇ ಖ್ಯಾತರಾದವರು. ಅವರು ಸಣ್ಣಕತೆಗಳಿಗೆ ಸೀಮಿತರಾದವರಲ್ಲ. ಕಾವ್ಯ, ನಾಟಕ, ಕಾದಂಬರಿ ಕ್ಷೇತ್ರಗಳಲ್ಲಿಯೂ ತಮ್ಮ ಪ್ರತಿಭೆಯ ಛಾಪನ್ನು ಮೂಡಿಸಿದ ಕವಿಯಾಗಿದ್ದಾರೆ. ಅವರ ಸಮಸ್ತ ಕೃತಿಗಳಲ್ಲಿ ʻಶ್ರೀರಾಮ ಪಟ್ಟಾಭಿಷೇಕʼ ಎಂಬ ಕಾವ್ಯವು ಸಹಾ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ನವಿರಾದ ಶೈಲಿಯಲ್ಲಿ ಓದಿಸಿಕೊಂಡು ಹೋಗುವ ಕಾವ್ಯವು ರಾಮಾಯಣದ ಸಹಜ ಸೊಬಗನ್ನು ಹೊಸ ಬಗೆಯಲ್ಲಿ ಕಂಡುಕೊಳ್ಳುವಂತೆ ಮಾಡುತ್ತದೆ. ರಾಮಾಯಣದ ಕೆಲವು ಭಾಗಗಳನ್ನು ಪ್ರಕ್ಷಿಪ್ತ ಎಂದು ಗುರುತಿಸುವ ಕವಿವರ್ಯರು, ಅದರಲ್ಲಿ ತಮ್ಮದೇ ಆದ ಕಲ್ಪನೆಯನ್ನು ಕೃತಿಯೊಳಗೆ ಅಳವಡಿಸಿ ಮೂಲಕ್ಕೆ ದೋಷವಾಗದಂತೆ, ಸಹಜತೆಗೆ ಹತ್ತಿರವಾಗುವಂತೆ ರಚಿಸಿರುವುದು ಅವರ ಕವಿಪ್ರತಿಭೆಗೆ ಸಾಕ್ಷಿ. ಮಾಸ್ತಿ ಅವರ ಈ ಕಾವ್ಯವು ಪಾರಾಯಣಕ್ಕೂ, ಆಸ್ವಾದನಕ್ಕೂ ಹೊಂದುವಂತಹದು.
ಮಾಸ್ತಿ ಅವರೇ ಹೇಳುವಂತೆ ಬಹುಜನರು ರಾಮಾಯಣವನ್ನು ಪುನರ್ ರಚಿಸಿದರ ಫಲವಾಗಿ ಕೀರ್ತಿಯ ಜೊತೆ ಕೊಂಚ ದೋಷವೂ ಬಂದೊದಗಿತು. ಹಾಗಾಗಿ ರಾಮಾಯಣವನ್ನು ಪವಾಡವೆಂಬಂತೆ ಬಿಂಬಿಸದೆ ಸಹಜ ಕಾವ್ಯವೆಂಬಂತೆ ರಚಿಸಿರುವ ಪ್ರಯತ್ನ ಈ ಕಾವ್ಯದ ಮೊದಲ ಓದಿನಲ್ಲಿಯೇ ಅರಿವಿಗೆ ಬರುತ್ತದೆ. ಇಲ್ಲಿ ಬರುವ ಒಂದೊಂದು ಪಾತ್ರಕ್ಕೂ ತನ್ನದೇ ಆದ ಉದಾತ್ತತೆ, ಗಂಭೀರತೆ ಇದೆ. ಯಾವ ಪಾತ್ರವೂ ಗುಣಹೀನವಲ್ಲ. ರಾವಣನೂ ಸಹಾ ಒಂದು ಕಡೆ ಸಚ್ಚಾರಿತ್ರ್ಯವನ್ನು ತೋರಿದವನೇ ಆಗಿದ್ದಾನೆ. ಇಡೀ ಕಾವ್ಯವೂ ಕೇವಲ ಶ್ರೀರಾಮನ ಕತೆಯ ಅವಲೋಕನಕ್ಕೆ ಮಾತ್ರ ಸೀಮಿತವಾಗದೇ, ಅವನ ಮೂಲಕ ಇತರ ಪಾತ್ರಗಳು ಸಹಾ ತಮ್ಮ ವ್ಯಕ್ತಿತ್ವದ ಅನಾವರಣವನ್ನು ಮಾಡುತ್ತವೆ. ರಾಮಾಯಣದಲ್ಲಿ ಕೆಲವು ಭಾಗಗಳಲ್ಲಿ ಮಾತ್ರವೇ ಪ್ರಸ್ತಾಪವಾಗುವ ಶತ್ರುಜ್ಞ, ಸುಮಂತ್ರ, ಗುಹ, ಕೌಸಲ್ಯೆ, ಊರ್ಮಿಳೆ ಇಂತಹ ಪಾತ್ರಗಳು ಇಲ್ಲಿ ಹೊಸ ಜೀವ ತಳೆದಿವೆ. ಶ್ರೀರಾಮ ಪಟ್ಟಾಭಿಷೇಕ ಎಂಬ ಹೆಸರೇ ಸೂಚಿಸುವಂತೆ ಶ್ರೀರಾಮನು ವನವಾಸವನ್ನು ಮುಗಿಸಿ ಮರಳಿ ಅಯೋಧ್ಯೆಗೆ ಬರುವ, ಆ ಬಳಿಕ ನಡೆದ ಪಟ್ಟಾಭಿಷೇಕದ ಚಿತ್ರವನ್ನು ಕೊಡುವುದು ಮುಖ್ಯಕತೆ ಎಂದೆನಿಸಿದರೂ, ವನವಾಸದ ಪ್ರಮುಖ ಘಟನಾವಳಿಗಳನ್ನು ಪ್ರತ್ಯಕ್ಷಸಾಕ್ಷಿಗಳ ಮೂಲಕ ಕೇಳಲ್ಪಡುವುದು ಇಲ್ಲಿನ ಕಥಾತಂತ್ರವಾಗಿದೆ. ಶ್ರೀಸಾಮಾನ್ಯರ ಬಳಿ ಚರಿತ್ರೆಯನ್ನು ಕೇಳುವುದರಲ್ಲಿ ಸಹಜತೆಯು ಅಧಿಕ, ವಾಸ್ತಾವಂಶಗಳ ಪಾಲು ಹೆಚ್ಚು. ಹಾಗಾಗಿ ಪ್ರಜೆಗಳ ಔದಾರ್ಯತೆ, ಅವರ ನಿಸ್ವಾರ್ಥತೆ ಇವೆಲ್ಲವೂ ಈ ಕಾವ್ಯದಲ್ಲಿ ವ್ಯಕ್ತಗೊಂಡ ಅಪರೂಪದ ಅಂಶಗಳಾಗಿವೆ.
ಇಲ್ಲಿ ಶ್ರೀರಾಮನು ಸರ್ವಜನಪ್ರಿಯ. ಸೀತೆಯಂತೂ ಕಾರುಣ್ಯದಾತೆ, ಭರತನು ಒಂದು ತರಹದ ತ್ಯಾಗಮೂರ್ತಿಯಾದರೇ, ಲಕ್ಷ್ಮಣ ಮತ್ತು ಊರ್ಮಿಳೆಯರು ಮತ್ತೊಂದು ತರಹದ ತ್ಯಾಗಮೂರ್ತಿಗಳು. ಇಲ್ಲಿ ಕೈಕೆಯು ಸಹಾ ಪ್ರಾಯಶ್ಚಿತ್ತದ ಬೆಂಕಿಯಲ್ಲಿ ಬೆಂದಿರುತ್ತಾಳೆ. ಕೇಂದ್ರವ್ಯಕ್ತಿಯ ಉದಾತ್ತಗುಣಗಳು ಸರ್ವಮಾನ್ಯವಾದರೆ ಒಂದು ಕುಟುಂಬ, ಒಂದು ರಾಜ್ಯ ಎಷ್ಟು ಬಗೆಯಾಗಿ ಮುನ್ನಲೆಗೆ ಬರಬಹುದು ಎಂಬುದಕ್ಕೆ ರಾಮಾಯಣ ಒಂದು ಉತ್ತಮ ಉದಾಹರಣೆ.
ಶ್ರೀರಾಮನು ಎಂದಿಗೂ ಧರ್ಮವನು ದಾಟಿದವನಲ್ಲ. ಆತನು ಧರ್ಮಸೂಕ್ಷ್ಮವನ್ನು ಬಲ್ಲವನು. ಪಿತೃವಾಕ್ಯಪರಿಪಾಲನಾರ್ಥವಾಗಿ ವನವಾಸಕ್ಕೆ ತೆರಳುವ ಸಂದರ್ಭದಲ್ಲಿ ಕೌಸಲ್ಯೆಯು ಶ್ರೀರಾಮನನ್ನು ತಡೆಯುತ್ತಾಳೆ. ತಂದೆಯಾಣತಿಯಂತೆ ತಾಯಿಯಾಣತಿಯು ಎಂಬುದು ಒಂದು ಉಂಟಲ್ಲ ಎಂದು ಪ್ರಶ್ನಿಸುತ್ತಾಳೆ. ಆಗ ಶ್ರೀರಾಮ ತೋರುವ ಸೂಕ್ಷ್ಮದೃಷ್ಟಿ ಹೀಗಿದೆ.
……ಮಗ ತಂದೆಯಾಜ್ಞೆಯನು ನಡೆಸುವುದು ಬೇಡ ಎನೆ ಸರಿಯಾದದಲ್ಲ
ಯುವರಾಜ ಆಗೆಂದಿರಲು, ಆಗುವೆನು ಎಂದೆನು
ಕಾಡು ಹೊಗು ಎನುತಿಹರು ಹೊಗುವೆನೆನಬೇಕು
ಬೇರೆಯ ಮಾತು ಸಲ್ಲದೆ. ಇದು ಸನಾತನ ಧರ್ಮ
ಇದು ಶ್ರೀರಾಮನ ನೀತಿ, ಇದನ್ನು ಅವನು ಸನಾತನತೆ ಎಂದು ಹೇಳುತ್ತಾನೆ. ಕೈಕೆಯ ನಡೆಗೆ ಕೋಪಗೊಂಡ ಲಕ್ಷ್ಮಣನು ಆ ಕ್ಷಣದಿ ಕೋಪಗೊಂಡಾಗ ರಾಮನು ಅವನನ್ನು ಸಮಾಧಾನಿಸುವ ಪರಿ ಹೀಗೆ
ಕೋಪವೇತಕೆ ಅಪ್ಪ? ಪದವಿ ತಪ್ಪಿತು ಎಂದೆ?
ಪದವಿ ತಪ್ಪಿತು, ಪದವಿಮಾತ್ರ ತಪ್ಪಿತು. ಧರ್ಮ ತಪ್ಪಿತೇ……
ಇದು ಶ್ರೀರಾಮನ ಮತ್ತೊಂದು ನಿಲುವು. ಯುವರಾಜಪಟ್ಟ ತಪ್ಪಿದಾಗಲೂ, ವನವಾಸಕ್ಕೆ ತೆರಳೆಂದಾಗಲೂ ಅವನ ಮುಖಕಾಂತಿ ಕುಂದಲಿಲ್ಲ. ಇದು ಅವನ ಅಂತಃಶಕ್ತಿ.
ಮಂಥರೆಯ ಪ್ರಲೋಭನೆಗೆ ಒಳಗಾದ ಕೈಕೆಯು ಸಹಾ ರಾಮನು ವನವಾಸಕ್ಕೆ ತೆರಳಿದ ನಂತರ ಅವನ ನೆನಪಿನಲ್ಲಿಯೇ ಬೆಂದುಹೋಗುತ್ತಾಳೆ. ಒಟ್ಟಿನಲ್ಲಿ ದಶರಥನ ಮೂವರು ರಾಣಿಯರು ಕೂಡ ಒಂದೊಂದು ಗುಣದಲ್ಲಿ ಆದರ್ಶವನ್ನು ಹೊಂದಿದವರೇ ಆಗಿದ್ದಾರೆ. ಈ ಮೂವರ ಗುಣಗಳು ಶತ್ರುಜ್ಞ ಮತ್ತು ಗುಹನ ಸಂಭಾಷಣೆಯಲ್ಲಿ ಹೀಗೆ ಪ್ರಸ್ತಾಪವಾಗುತ್ತದೆ.
ಹಿರಿಯವರು ಗಾಂಭೀರ್ಯ, ನಿಮ್ಮವ್ವ ನಿಃಸ್ವಾರ್ಥ
ಸಹನೆ, ಕನಿಕರಗೊಂದೆರಕ, ಕಿರಿರಾಣಿಯರು
ನಿಷ್ಕರ್ಷೆಯುಕ್ಕೆ. ಏನೆತ್ತರವ ಮುಟ್ಟಿಹುದು ಇವರೆಲ್ಲರಲಿ ಇವರಗುಣ!
ಹೀಗೆ ಮೂವರ ಗುಣಗಳು ಸವತಿ ಮಾತ್ಸರ್ಯಕ್ಕೆ ಎಡೆ ಮಾಡಿಕೊಡದಂತೆ ಇರುವುದು ರಾಜ್ಯದ ಉನ್ನತಿಗೆ ಕಾರಣಕರ್ತವಾಗುತ್ತವೆ. ಇವರ ಗುಣಗಳು ಇಷ್ಟು ಉದಾರವಾಗಿರುವುದಕ್ಕೂ ಶ್ರೀರಾಮನ ಆದರ್ಶವೇ ಪರೋಕ್ಷ ಕಾರಣವೂ ಆಗುತ್ತದೆ. ಶ್ರೀರಾಮನ ಸ್ಥಿತಪ್ರಜ್ಞೆಯೇ ಕೈಕೆಯ ಮನಸ್ಥಿತಿ ಬದಲಾಗಲು ಕಾರಣ ಎಂಬುದನ್ನು ಮರೆಯಬಾರದು.
ಮಾಸ್ತಿ ಅವರ ಕಾವ್ಯಕಲ್ಪನೆಗಳು ಮನಮುಟ್ಟುವಂತಹದ್ದು. ರಾಮನೊಂದಿಗೆ ಸೀತೆಯೂ ವನವಾಸಕ್ಕೆ ತೆರಳುವ ವೇಳೆಗೆ ಸುಮಂತ್ರನ ಸೊಸೆಗೆ ನವಮಾಸ ತುಂಬಿರುತ್ತದೆ. ಸೀತೆಯು ಮುಂದೆ ಹುಟ್ಟಲಿರುವ ಆ ನವಜಾತ ಮಗುವಿಗೆ ಒಂದು ಒಳಲೆ ಕೊಡಬೇಕೆಂದು ನಿಶ್ಚಯಿಸಿ, ಅದನ್ನು ನೀಡುವ ಭಾಗ ಸೀತೆಯು ಸಾಮಾನ್ಯರೊಂದಿಗೆ ಬೆರೆಯುತ್ತಿದ್ದ ರೀತಿಯನ್ನು ತೋರ್ಪಡಿಸುತ್ತದೆ. ಅದು ಸುಮಂತ್ರನ ಬಾಯಲ್ಲಿ ಈ ರೀತಿ ವ್ಯಕ್ತವಾಗುತ್ತದೆ.
ಪರಿವಾರ, ಬಳಿಯ ಜನ, ಎಲ್ಲರೂ ಸುಖ ಸಂತಸದೊಳಿಹುದ
ನೋಡುವುದರಲಿ ಅವರ ಸುಖ, ಅವರ ಸಂತಸ.
ಸೀತೆ ಮತ್ತು ರಾಮ ಈ ಇಬ್ಬರು ಒಬ್ಬರಿಗಿಂತೊಬ್ಬರು ಧರ್ಮವಂತರು. ಇಲ್ಲಿ ಧರ್ಮವೆಂದರೆ ಮತ್ತೊಬ್ಬರಿಗೆ ನೋವಾಗದ ಹಾಗೆ ಬಾಳುವುದೆಂಬುದೆ ಆಗಿದೆ. ತನ್ನ ಸುತ್ತಲಿನ ಬಳಗ ಸಂತೋಷದಿಂದರಬೇಕೆಂಬುದೆ ಅದರ ಹಿಂದಿನ ಆಶಯ. ತನ್ನತನವನು ಕಳೆದುಕೊಳ್ಳದೇ ಬಾಳುವುದು ಇದರ ಮತ್ತೊಂದು ಆಯಾಮ. ಈ ಇಬ್ಬರ ಧರ್ಮನಿಷ್ಠೆಯನ್ನು ಕುರಿತು ಗುಹ ಈ ರೀತಿ ಹೇಳುವನು.
ಈ ಎರಡು ಚೇತನದಲೂ, ಧರ್ಮವನು ಕುರಿತು ಒಂದು ಅಕುಂಠಿತ ಪ್ರಜ್ಞೆ,
ಅದ ನಡೆಸುವುದರಲಿ ಅಚಲ ನಿಷ್ಠೆ, ಆತ್ಮದ ಮುಖ್ಯ ಲಕ್ಷಣ…………
…… ನಿಃಸ್ವಾರ್ಥ ಋತ ಸತ್ಯ ಧರ್ಮಗಳ ಒರೆಗಲ್ಲು. ಅದನಿವರು ಮಾಡುವರು; ಮಾಡಿಯೇ ಮಾಡುವರು.
ಇದು ಸತಿಪತಿಗಳಿಬ್ಬರು ಅಳವಡಿಸಿಕೊಂಡು ಬಂದಿದ್ದ ಧರ್ಮಮಾರ್ಗ.
ಈ ಕಾವ್ಯದಲ್ಲಿ ಬರುವ ವಾಲಿ-ಸುಗ್ರೀವ-ಹನುಮರು ವಾನರರಲ್ಲ ಅವರು ಕೂಡ ಮನುಷ್ಯರೇ. ಅವರನ್ನು ಕಾವ್ಯದಲ್ಲಿ ʻವಾನಾರʼರು ಎಂದು ಕರೆಯಲಾಗಿದೆ. ವಾಲಿ-ಸುಗ್ರೀವರ ಕತೆಯಲ್ಲಿ ವಾಲಿಯು ಸಾಮಂತ ದೊರೆ ಎಂಬ ಅಂಶವನ್ನು ಪ್ರಸ್ತಾಪಿಸುತ್ತಾರೆ. ವಾಲಿಯು ತನ್ನ ಕೊನೆ ಸಮಯದಲ್ಲಿ ಶ್ರೀರಾಮನಿಗೆ
ತಪ್ಪಿ ನಡೆಯುತಲಿದ್ದ ಸಾಮಂತನೊಬ್ಬನಿಗೆ,
ಸಾರ್ವಭೌಮರು ಬಿಜಯಗೇಯ್ದು ದಂಡನೆ ವಿಧಿಸಿ
ನಿಮ್ಮ ಕರ್ತವ್ಯವನು ನಡೆಸಿದಿರಿ; ಒಳಿತಾಯ್ತು;
ಎಂದು ಪಶ್ಚಾತ್ತಾಪ ಪಡುತ್ತಾನೆ. ಸುಗ್ರೀವನು ಕೊನೆಯವರೆಗೂ ರಾಮನಿಗೆ ಪರಮಾಪ್ತನಾಗಿರುತ್ತಾನೆ. ಕಷ್ಟಕ್ಕೆ ಹೆಗಲು ಕೊಡುವ ಗೆಳೆತನದ ಬಗೆಗೆ ಸುಗ್ರೀವ ಮತ್ತು ರಾಮ ಈ ಇಬ್ಬರು ಉತ್ತಮ ಉದಾಹರಣೆಗಳಾಗಿ ನಿಲ್ಲುತ್ತಾರೆ. ಇಲ್ಲಿ ಹನುಮಂತನು ಸಮುದ್ರಲಂಘನ ಮಾಡುವುದಿಲ್ಲ. ಬದಲಾಗಿ ಈಜಿಕೊಂಡು ಲಂಕೆಯನ್ನು ಸೇರುತ್ತಾನೆ. ಅಲ್ಲಿ ಸೀತೆಯು ರಾವಣನೊಂದಿಗೆ ನಡೆಸುವ ದೈರ್ಯಯುಕ್ತ ಸಂಭಾಷಣೆಯನ್ನು ಕೇಳುತ್ತಾನೆ. ಆ ಬಳಿಕ ಸೀತೆಗೆ ತನ್ನ ಗುರುತನ್ನು ಹೇಳಿ, ರಾಮ ಕೊಟ್ಟ ಗುರುತನ್ನು ನೀಡಿದಾಗ ಹನುಮನ ಕುರಿತು ಸೀತೆ ಆಡುವ ನುಡಿಗಳಿವು,
ಬೇಸಗೆಯ ದಿನ ಸರೋವರ ತೀರ ನೀರಿಂಗಿ
ಕೆಸರ ತಳವನು ತೋರಿದಂತೆ ಮನದಲಿ ಆಸೆ
ಇಂಗಿಯೇ ಹೋಗಿದ್ದ ನನ್ನ ಬಾಳುವೆಗೆ
ನೀ ಕಾರದಿನದಂತೆ ಬಂದು ಸೌಖ್ಯವ ತಂದೆ, ಓ ತಂದೆ, ಒಳ್ಳಿತು.
ಎಂದು ಅವನ ಉಪಕಾರವನ್ನು ಮತ್ತೆ ಮತ್ತೆ ನೆನೆಯುತ್ತಾಳೆ. ಇಲ್ಲಿ ಇತರ ಕಾವ್ಯಗಳಂತೆ ಹನುಮನು ಲಂಕಾ ದಹನವನ್ನು ಕೈಗೊಳ್ಳುವುದಿಲ್ಲ. ತಾನು ಬಂದದು ಯಾರಿಗೂ ತಿಳಿಯದಿರುವುದೇ ಒಳಿತು ಎಂದು ಭಾವಿಸಿ ಬಂದಹಾಗೆ ತೆರಳುತ್ತಾನೆ.
ಲಂಕೆಗೆ ಹೋಗಲು ಕಡಲಿಗೆ ಸೇತುವೆಯನ್ನು ನಿರ್ಮಿಸುವ ಭಾಗದಲ್ಲೂ ಕಲ್ಲುಗಳನ್ನು ಬಳಸಿದರು ಎಂಬುದರ ಬದಲಾಗಿ ಮರದ ಒಣಕೊಂಬೆಗಳ ಮೂಲಕ ನಳನ ನೇತೃತ್ವಲ್ಲಿ ಸೇತುವೆಯನ್ನು ನಿರ್ಮಿಸಿದರು ಎಂದು ಕವಿ ಕಲ್ಪಿಸುತ್ತಾರೆ. ಸೀತೆಯ ಅಗ್ನಿ ಪ್ರವೇಶವನ್ನು ಇಲ್ಲಿ ಅಗ್ನಿದಿವ್ಯ ಎಂದು ಕರೆಯಲಾಗಿದೆ. ಸತ್ಯವನ್ನು ಪ್ರತಿಪಾದಿಸಲು ನಡೆದ ಪರೀಕ್ಷೆ ಎಂದು ಇಲ್ಲಿ ಭಾವಿಸಲಾಗಿದೆ.
ಭರತ ಮತ್ತು ಶತ್ರುಜ್ಞರು ರಾಮನ ಮೇಲಿರಿಸಿದ್ದ ವಾತ್ಸಲ್ಯವು ಇಂದಿನ ಕುಟುಂಬ ವ್ಯವಸ್ಥೆಗೆ ಒಂದು ಮಾದರಿಯಾಗುತ್ತದೆ. ರಾಜ್ಯವನ್ನು ರಾಮನಿಗೆ ಮರಳಿ ಒಪ್ಪಿಸುವಾಗ ತೋರಿದ ವಿನೀತ ಭಾವ ಸದಾಕಾಲ ಓದುಗ ಸ್ಮರಣೆಯಲ್ಲಿ ಉಳಿಯುತ್ತದೆ. ಶತ್ರುಜ್ಞನು ಪಟ್ಟಾಭಿಷೇಕದ ಪೂರ್ಣ ಜವಾಬ್ದಾರಿಯನ್ನು ಹೊರುವ ಮೂಲಕ ಕರ್ತವ್ಯ ಪ್ರಜ್ಞೆಯನ್ನು ಮೆರೆಯುತ್ತಾನೆ. ಪ್ರಜೆಗಳ ಬಾಯಲ್ಲಿ ಶ್ರೀರಾಮನ ಗುಣಗಾನ ಕೇಳುವುದೇ ಮನಸ್ಸಿಗೆ ಆನಂದವನ್ನು ಉಂಟುಮಾಡಿಸುತ್ತದೆ. ಕಾವ್ಯದಲ್ಲಿ ಪಟ್ಟಾಭೀಷೇಕದ ಚಿತ್ರವು ಕಣ್ಣಿಗೆ ಕಟ್ಟುವಂತೆ ವರ್ಣಿಸಲಾಗಿದೆ. ವಸಿಷ್ಠರು ಹೇಳುವ ರಾಜ್ಯಾಂಗದ ಪಾಠವು ಇಂದಿನ ಆಡಳಿತ ವ್ಯವಸ್ಥೆ ಹೇಗಿರಬೇಕು ಎಂಬುದನ್ನು ತಿಳಿಸುತ್ತದೆ. ಒಟ್ಟಂದದಲ್ಲಿ ರಾಮಾಯಣದ ಪ್ರತಿಯೊಂದು ಪಾತ್ರವೂ ಒಂದಲ್ಲೊಂದು ಮೌಲ್ಯವನ್ನು ಬಿತ್ತುವಂತಹದೆ ಆಗಿದೆ. ಮಾನವ ಮತ್ತು ರಾಷ್ಟ್ರದ ಸರ್ವಾಂಗೀಣ ಏಳಿಗೆಗೆ ರಾಮಾಯಣವು ಅಮೃತ ಕಳಶದಂತೆ ಸದಾ ಹೊಸ ಜೀವವನ್ನು ತುಂಬುತ್ತಿರುತ್ತದೆ. ಮಾಸ್ತಿ ಅವರ ಕಾವ್ಯವೂ ಸಹ ಇದನ್ನೇ ಪ್ರತಿಪಾದಿಸುತ್ತದೆ.
ಸಂಶೋಧನಾ ವಿದ್ಯಾರ್ಥಿ
ದ್ರಾವಿಡ ವಿಶ್ವವಿದ್ಯಾಲಯ
ಕುಪ್ಪಂ, ಆಂಧ್ರಪ್ರದೇಶ
ಮೊ. 7259337048
Gmail: vyasa90@gmail.com
ಲೇಖಕರ ಸಂಕ್ಷಿಪ್ತ ಪರಿಚಯ:
ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಜರಬಂಡಹಳ್ಳಿಯವರು, ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಎಂ.ಎ ಕನ್ನಡ ಸ್ನಾತಕೋತ್ತರ ಪದವಿಯನ್ನು ಪೂರೈಸಿ. ನಾಲ್ಕು ವರ್ಷಗಳ ಕಾಲ ಜನಸೇವಾ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದಲ್ಲಿ ಪಿಹೆಚ್ಡಿ ಅಧ್ಯಯನವನ್ನು ಕೈಗೊಂಡಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ