ಅಷ್ಟಾಂಗಯೋಗಕ್ಕೆ ಸೂರ್ಯನೇ ಆರಾಧ್ಯ ದೇವರು: ಪುಂಡರೀಕಾಕ್ಷ ಬೆಳ್ಳೂರು
ಬದಿಯಡ್ಕ: ಭಾರತದ ಅಷ್ಟಾಂಗಯೋಗಕ್ಕೆ ಸೂರ್ಯನೇ ಆರಾಧ್ಯ ದೇವರು. ಉಸಿರಿನ ಕ್ರಿಯೆ ಹಾಗೂ ಸೂರ್ಯನಮಸ್ಕಾರ ಮಂತ್ರದ ಬೀಜಾಕ್ಷರದೊಂದಿಗೆ ಸೂರ್ಯನಮಸ್ಕಾರವನ್ನು ಮಾಡಿದರೆ ಎಲ್ಲಾ ರೋಗಗಳು ನಿವಾರಣೆಯಾಗುವುದು. ಸೂರ್ಯದೇವ ವೇದದ ಮೂಲ, ಸತ್ವ, ರಜ, ತಮೋಗುಣಗಳ ಗಣಿ ಆದ ಆತನ ಆರಾಧನೆಯಿಂದ ಜಗತ್ತಿಗೆ ಯೋಗ್ಯ ಶಕ್ತಿಯನ್ನು ಆತ ನೀಡುತ್ತಾನೆ ಎಂದು ಯೋಗಾಚರ್ಯ ಪುಂಡರೀಕಾಕ್ಷ ಬೆಳ್ಳೂರು ಹೇಳಿದರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ರಥಸಪ್ತಮಿ ಪ್ರಯುಕ್ತ ಶುಕ್ರವಾರ ಜರಗಿದ ಸೂರ್ಯನಮಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ರಥಸಪ್ತಮಿ ಮಾಘಮಾಸದ ಏಳನೇ ದಿನ ಬರುತ್ತದೆ. ಸೂರ್ಯದೇವ ಹಳೆಯ ರಥವನ್ನು ಬಿಟ್ಟು ಹೊಸರಥವನ್ನೇರಿ ಜಗತ್ತಿನ ಎಲ್ಲಾ ರೋಗರುಜಿನಾದಿಗಳನ್ನು ಪರಿಹರಿಸುತ್ತಾನೆ ಎಂಬುದು ನಮ್ಮೆಲ್ಲರ ನಂಬಿಕೆಯಾಗಿದೆ. ಚಂದ್ರನಿಂದ ವಿಟಮಿನ್ ಬಿ ಲಭ್ಯವಾದರೆ ಸೂರ್ಯನಿಂದ ವಿಟಮಿನ್ ಡಿ. ಹೇರಳವಾಗಿ ದೊರೆಯುತ್ತದೆ. ನಮ್ಮ ನರ, ನಾಡಿ, ರಕ್ತ, ಕಣ್ಣು ಇನ್ನಿತರ ಎಲ್ಲಾ ಅಂಗಾಂಗಗಳಿಗೆ ಶಕ್ತಿಯನ್ನು ನೀಡಿ ಆರೋಗ್ಯವಂತರನ್ನಾಗಿ ಮಾಡುವ ಕಾರ್ಯವನ್ನು ಸೂರ್ಯದೇವ ಮಾಡುತ್ತಾನೆ. ಮಧ್ಯ ಏಷ್ಯಾ, ಮಧ್ಯ ಆಫ್ರಿಕಾ, ಈಜಿಪ್ಟ್, ಗ್ರೀಸ್ ದೇಶಗಳಲ್ಲಿ ಸೂರ್ಯನ ಆರಾಧನೆ ಮಾಡುತ್ತಾರೆ ಎಂದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಅಧ್ಯಕ್ಷತೆಯನ್ನು ವಹಿಸಿದ್ದರು.
ಹಿರಿಯ ಅಧ್ಯಾಪಿಕೆ ಸರೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯೋಗ ಅಧ್ಯಾಪಕ ವಿನಯಪಾಲ್ ವಿವಿಧ ಆಸನಗಳ ಮಾರ್ಗದರ್ಶನ ಗಳನ್ನಿತ್ತರು. ವಿದ್ಯಾರ್ಥಿಗಳು ಸೂರ್ಯನಮಸ್ಕಾರದಲ್ಲಿ ಪಾಲ್ಗೊಂಡಿದ್ದರು. 8ನೇ ತರಗತಿಯ ಶಾತೋದರಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, 8ನೇ ತರಗತಿಯ ಗೌತಮ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ