-ಡಾ. ಹೆಚ್.ಎಸ್. ಸುರೇಶ್ ಬೆಂಗಳೂರು
ದಿ. ಡಾ.ಹೊಸ್ಕೆರೆ ಶಿವಸ್ವಾಮಿಯವರು ಮಕ್ಕಳಿಗಾಗಿಯೇ ಬರೆದ 'ಶ್ರೀ ರಾಮ ಪಯಣ' ಸುಮಾರು 3750 ಸಾಲುಗಳ ಕಥನ ಕವನ. ಅಲ್ಲಲ್ಲಿ ಸಾಂದರ್ಭಿಕ ಚಿತ್ರಗಳೂ ಇವೆ.
2007 ಜನವರಿಯಿಂದ 'ತುಷಾರ' ಮಾಸಪತ್ರಿಕೆ ಇದನ್ನು 13 ಕಂತುಗಳಲ್ಲಿ ಪ್ರಕಟಿಸಿತು. 2011ರಲ್ಲಿ ಮೈಸೂರಿನ ಸರಸ್ವತಿ ಬುಕ್ ಏಜೆನ್ಸೀಸ್ ಇದನ್ನು ಕಿರು ಪುಸ್ತಿಕೆಯಾಗಿ ಹೊರತಂದಿದ್ದಾರೆ.
'ಉತ್ತರ ಭಾರತದಲ್ಲಿ ಅಯೋಧ್ಯೆ ಎಂಬ ಪುರವೊಂದಿತ್ತು' ಎಂದು ಪ್ರಾರಂಭಗೊಂಡು 'ಜನಪದರ ರಾಮರಾಜ್ಯದ ಕನಸು ನನಸಾಯಿತು' ಎಂದು ಅಂತ್ಯಗೊಳ್ಳುವ 'ಶ್ರೀ ರಾಮ ಪಯಣ'ದ ಉದ್ದಕ್ಕೂ ಅಲ್ಲಲ್ಲಿ ಕೆಲ ಹೊಳವುಗಳಿವೆ.
ದಶ ದಿಕ್ಕುಗಳಲ್ಲೂ ರಥ ಓಡಿಸಬಲ್ಲ ದಶರಥನಿಗೆ ನಾಲ್ವರು ಪುತ್ರರ ಜನನವಾದದ್ದು 'ಮೂಡಿದಂತಾಯ್ತು ನಾಲ್ಕು ಭುಜ' ಇದನ್ನು ಕೇಳಿಯೇ 'ಹೆದರಿದರು ದಕ್ಷಿಣಾ ಪಥದಲ್ಲಿದ್ದ ರಾವಣ ದೈತ್ಯ ಕುಲರು'
ಬಾಲ್ಯದ ಕಥೆ, ನಂತರ, ವಿಶ್ವಾಮಿತ್ರರ ಆಗಮನ. ಈ ಪುಟ್ಟ ಬಾಲಕರಿಂದ ದೈತ್ಯ ಸಂಹಾರವೇ?
ದಶರಥನ ಮನದ ತಳಮಳ ಅರಿತ ರಾಜಗುರು ವಸಿಷ್ಠರು ಆದೇಶಿಸುತ್ತಾರೆ, "ಲೋಕೋದ್ಧಾರಕೆ ಬಂದಿಹ ರಾಮನ, ವ್ಯಾಮೋಹ ಬಂಧನದಲ್ಲಿ ಕಟ್ಟಿ ಹಾಕದಿರು".
ವಿಶ್ವಾಮಿತ್ರರನ್ನು ಹಿಂಬಾಲಿಸಿ ನಡೆದ ರಾಮ ಲಕ್ಷ್ಮಣರಿಗೆ ಮಾರ್ಗಾಯಾಸ ಕಳೆಯಲು ನೆನಪಿನಾಳದಿಂದ ಹೆಕ್ಕಿ ತೆಗೆದ ಪರಮ ಋಷಿ ವಿಶ್ವಾಮಿತ್ರ ಯುಗ ಯುಗಾಂತರಗಳ ಕಥೆಯ 'ಸಂಭವಾಮಿ ಯುಗೇ ಯುಗೇ’ ಅನ್ನುವುದನ್ನು ಈ ದಶಾವತಾರದ ಪುರುಷ ಶ್ರೇಷ್ಠನಿಗೆ ಗುರು ವಿಶ್ವಾಮಿತ್ರ ಪರಿಚಯಿಸಿದ ಪರಿ ಇದು.
ಆಯೋದ್ಯೆ ಮತ್ತು ಮಿಥಿಲೆ ನಡುವಿನ ಅಂತರ ಸುಮಾರು ಐದು ನೂರು ಕಿ.ಮೀ. ಶ್ರೀ ರಾಮ ಪಯಣ ನೈಮಿಷಾರಣ್ಯದಿಂದ ದಂಡಕಾರಣ್ಯದವರೆಗೂ ಹಬ್ಬಿದೆ. ರಾಮ ಪಯಣಿಸಿದ ದಾರಿ ಭರತ ವರ್ಷದ ಉದ್ದಕ್ಕೂ ಪಸರಿಸಿದೆ. ದಂಡಕನೆಂಬ ಅಸುರನ ರಾಜ್ಯ ದಂಡಕಾರಣ್ಯ. ರಾವಣನ ಲಂಕಾ ಸಾಮ್ರಾಜ್ಯ ಈ ತನಕ ವ್ಯಾಪಿಸಿತ್ತು ಎಂಬ ನಂಬಿಕೆ. ಈ ಅರಣ್ಯದ ವಿಸ್ತಾರ ಸರಿ ಸುಮಾರು ಒಂದು ಲಕ್ಷ ಕಿ.ಮೀ. ಎಂದು ಅಂದಾಜಿಸಲಾಗಿದೆ.
ಉಷ್ಣವಲಯದ ಈ ಅರಣ್ಯಗಳಲ್ಲಿ ವೈವಿಧ್ಯಮಯ ಹಣ್ಣುಗಳನ್ನು ನೀಡುವ ಮರ, ಮುಳ್ಳು ಕಂಟೆಗಳಿವೆ. ರಾಮ ಲಕ್ಷ್ಮಣರಿಗೆ 'ಅರಮನೆಯ ಸೊಗದ ತಿನಿಸುಗಳೆಲ್ಲ ಮರೆಯಾಯ್ತು' ಅರಣ್ಯವಾಸಿ ವಿಶ್ವಾಮಿತ್ರರಿಗೆ ಇವೆಲ್ಲ ಚಿರಪರಿಚಿತ. 'ಇದು ಬುಗುರಿ, ಇದು ಪರಗಿ, ಇದು ಬುಕ್ಕೆ, ಅದು ಕವಳಿ, ದ್ರಾಕ್ಷಿಗಿಂತಲೂ ಮಿಗಿಲು ಈ ಕವಳಿ ಹಣ್ಣು. ಮಾವು ನೇರಲೆಯಂತು ನೀವೆ ಕಂಡಿರುವಿರಿ' ಎಂದು ಕಾನನದ ಹಣ್ಣುಗಳನ್ನು ಪರಿಚಯಿಸುತ್ತಾರೆ.
ಯಾನ ಮುಂದುವರೆದಂತೆ 'ಬಿದಿರ ಮೆಳೆ, ಜಡ ಗಾಳಿ, ಮಾಗಿ ಆಕ್ರಮಣಕ್ಕೆ ಉದುರಿದೆಲೆ, ಬೋಳು ಮರ, ಶಾಪಗ್ರಸ್ತ ಕಾನನಕ್ಕೆ ಚೈತ್ರ ಜೀವ ತುಂಬುವ ಪರಿ' ಇದನ್ನೆಲ್ಲಾ ವಿಶ್ವಾಮಿತ್ರರು ವಿವರಿಸುತ್ತಾ ಸಾಗುತ್ತಾರೆ. 'ನಾಡ ಮಕ್ಕಳಿಗೆ ಇವೆಲ್ಲ ಹೊಸದು'
'ಅನತಿ ದೂರದಲ್ಲೇ ಕರಿಗಲ್ಲ ಬಳಿ ಎಲ್ಲೋ ಅಬಲೆ ಆಕ್ರಂದನ' ಕೇಳಿಸಿದ್ದು ರಾಮನಿಗೆ ಮಾತ್ರ. "ಋತದ ಘಟನೆಯೊಂದಕ್ಕೆ ನಿನ್ನಣ್ಣ ಕಾರಣನಾಗಲಿಹ. ನಿಂತು ನೋಡುವ ನಾವು ದೂರದಿಂದ", ಮುನ್ನುಗ್ಗುತ್ತಿದ್ದ ಲಕ್ಷ್ಮಣನಿಗೆ ವಿಶ್ವಾಮಿತ್ರರ ಸಲಹೆ. ಅಹಲ್ಯೆಯ ಶಾಪ ವಿಮೋಚನೆ. ಗೌತಮ ಮುನಿ ಪ್ರತ್ಯಕ್ಷ. 'ಗೌತಮಾಲಿಂಗನದ ಕೃಪೆ' ಶ್ರೀ ರಾಮನಿಗೆ ವಜ್ರ ಶರೀರ.
ಮುಂದೆ ಮಿಥಿಲೆಗೆ ಪಯಣ. ಹರ ಧನುವ ಹೂವಿನಂತೆ ಎತ್ತಿ ಸೀತೆ ವರಿಸಿ ಅಯೋಧ್ಯೆ ಮಿಥಿಲೆ ಒಂದಾದ ಪರಿ - ಹೀಗೆ ಬಂದಿದೆ ಕಥನ.
ದಶರಥನಿಗೆ ರಾಜ್ಯಭಾರದ ಭಾರ ಇಳಿಸಿಕೊಳ್ಳುವ ತವಕ, ಶ್ರೀ ರಾಮ ಪಟ್ಟಾಭಿಷೇಕಕ್ಕೆ ತಯಾರಿ. ಸಜ್ಜುಗೊಂಡ ಸಾಕೇತಪುರಿ. ಮಂಥರೆ ಮಾತಿಗೆ ಕಿವಿಗೊಟ್ಟ ಕೈಕೇಯಿ. ಪುತ್ರ ಭರತನಿಗಾಗಿ ರಾಜ್ಯಾಡಳಿತ ಹಕ್ಕು ಮಂಡನೆ.
"ಭರತಗೆ ಪಟ್ಟದ ಬೇಡಿಕೆ ಸರಿಯೆ, ಸಹಜ ಮಾತೃ ವಾತ್ಸಲ್ಯಕ್ಕೆ.ಆದರೆ ರಾಮನಿಗೇಕೆ ವನವಾಸ?"
ಇದು ದಶರಥನ ಪ್ರಶ್ನೆ. ಇದಕ್ಕೆ ಕೈಕೇಯಿ ನೀಡಿದ ಉತ್ತರ 'ರಾಮನಿದ್ದಂತೆ ಜನ ಒಪ್ಪಿಕೊಳ್ಳರು ತನ್ನ ಕಂದನ'.
ಇದೇ ಮಹಾಭಾರತದಿಂದ ನವಭಾರತದವರೆಗಿನ ದೇಶದ ವ್ಯಥೆಯ ಕಥೆ!
ಕಥೆ ಮುಂದುವರೆದಂತೆ ದಶರಥ ಶೋಕ, ಭರತನ ಭ್ರಾತೃ ಪ್ರೇಮ, ನಂದಿಗ್ರಾಮ ವಾಸ್ತವ್ಯ. ಚತುರಂಗ ಬಲದೊಂದಿಗೆ ರಾಮನ ಶೋಧನೆಯಲ್ಲಿ ಹೊರಟ ಭರತನ ನಡೆ ಬಗ್ಗೆ ಜನರಾಡುವುದು ಹೀಗೆ.
"ದಾನರೂಪದ ಸಿಂಹಾಸನ ನಿರಾಕರಿಸಿ, ಬಲದಲ್ಲಿ ಗೆದ್ದು ಸಿಂಹಾಸನಾರೋಹಣವೇ?" ಈ ದಿನಮಾನಗಳ ರಾಜಕಾರಣಕ್ಕೆ ಪ್ರಜೆಗಳು ಆಗಲೇ ಭಾಷ್ಯ ಬರೆದಿದ್ದರೇ? ಎಂದು ಅನ್ನಿಸದಿರದು
ನಂತರ ಭರತ ಮಿಲನ, ಪಾದುಕಾ ಪಟ್ಟಾಭಿಷೇಕ. ಹೀಗೆ ಕಥೆ ಮುಂದುವರಿಯುತ್ತದೆ.
ಹತ್ತು ವರ್ಷಗಳ ದಂಡಕಾರಣ್ಯ ಪಯಣದಲ್ಲಿ ಅನೇಕ ಋಷ್ಯಾಶ್ರಮಗಳ ಸಂದರ್ಶನ, ದೇವಕಾರ್ಯಕ್ಕೆ ಉಪಟಳ ನೀಡುತ್ತಿದ್ದ ಅಸುರರ ನಿಗ್ರಹ, ಋಷಿ ಮುನಿಗಳಿಂದ ಆಶೀರ್ವಾದ, ಶೂರ್ಪನಖಿ ನಾಸಿಕ ಛೇಧ, ಅಪಮಾನಿತ ರಕ್ಕಸಿಯಿಂದ ರಾಕ್ಷಕ ಕುಲಕ್ಕೆ ದೂರು. "ಹೆಣ್ಣದು ಶಿವನುರಿಗಣ್ಣೋ" ಅನ್ನುವ ಗೀತೆ ಸತ್ಯವಾಗುವ ಎಲ್ಲ ಸಂದರ್ಭಗಳೂ ಇನ್ನು ಮುಂದೆ!
ಮಾರೀಚ ಪ್ರವೇಶ. ಸೀತೆಗೆ 'ಹೊನ್ನ ಮಿರುಗ ತನಗೆ' ಬೇಕೆಂಬ ಬಯಕೆ. ಮಾಯಾಮೃಗ ಬೆನ್ನಟ್ಟಿದ ರಾಮ. ತಾಪಸಿಯ ಮಾರುವೇಷದಲ್ಲಿ ಪುಲಸ್ತ್ಯ ಪುತ್ರ ರಾವಣನ ಆಗಮನ. ಲಕ್ಷ್ಮಣ ರೇಖೆ ದಾಟಿದ ಜಾನಕಿ. ಸೀತಾಪಹರಣ.
’ಕೇವಲ ಸೀತೆಯನು ಪಡೆಯಲಲ್ಲ ಈ ಅಪಹರಣ. ದಾನವರ ಕೆಣಕಿದ ಮನುಜ ಕುಲಕೆ ಹೊಸದೊಂದು ಪಾಠ'. ‘ಅಂಜುವರು ಮರ್ಯಾದೆಗೆ ಮಾನವರು'. ಇದು ಸೀತಾಪಹರಣಕ್ಕೆ ರಾವಣನ ಸಮರ್ಥನೆ. ಅವನಲ್ಲೂ ಎಲ್ಲೋ ಒಂದು ಮಾನವೀಯತೆಯ ಕಿರು ಒರತೆ ಇತ್ತೇ?!
ಅನುಜನೊಂದಿಗೆ ತನ್ನ ವಿಸ್ಮೃತಿಯ ಪರಿಣಾಮವನ್ನು ಹಂಚಿಕೊಂಡ ವಿರಹಿ ರಾಮ ಹೇಳುವ ಮಾತು - "ಎಚ್ಚೆತ್ತು ಎಡವಿದರೂ, ಎಚ್ಚರತಪ್ಪಿ ಎಡವಿದರೂ ಫಲಿತ ಒಂದೇ" ನಮಗೆಲ್ಲರಿಗೂ ಒಂದು ಸಾರ್ವಕಾಲಿಕ ಪಾಠ. ಮುಂದಿನದು ಸೀತಾನ್ವೇಷಣೆ ಕಾರ್ಯ. ಜಟಾಯುವಿನಿಂದ ಜಾಡು ಅರಿತು ವಿಂಧ್ಯಾಟವಿಗೆ ಯಾನ. ಋಷಿ ಅಗಸ್ತ್ಯರ ದರ್ಶನ. ಜಂಬೂ ದ್ವೀಪದ ಪ್ರವೇಶ. ಇದನ್ನೇ ವಿಪ್ರರು ಶುಭಾಶುಭ ಕಾರ್ಯ ಸಂಕಲ್ಪದಲ್ಲಿ "ಭರತ ವರ್ಷೆ, ಭರತ ಖಂಡೆ, ಜಂಬೂ ದ್ವೀಪೇ, ದಂಡಕಾರಣ್ಯೇ, ಗೋದಾವರ್ಯಾ, ದಕ್ಷಿಣೆ ತೀರೆ, ಶ್ರೀ ರಾಮ ಕ್ಷೇತ್ರೆ" ಎನ್ನುವುದು.
ಕದಂಬ ರಕ್ಕಸನ ಬಾಹು ಛೇದನ, ಅವನ ಪೂರ್ವ ವೃತ್ತಾಂತ, ರಾಕ್ಷಸ ದೇಹಕ್ಕೆ ಮಂತ್ರಾಗ್ನಿ ಸ್ಪರ್ಶ. ಅವನ ಸೂಚನೆಯಂತೆ ಪಂಪಾ ಸರೋವರದತ್ತ ಪಯಣ ಮುಂದೆ ಸುಗ್ರೀವ ಸಖ್ಯ. ವಾಲಿಯ ವಧೆ. ಅಣ್ಣ ತಮ್ಮಂದಿರ ನಡುವಿನ ಘನ ಘೋರ ಕದನದಲ್ಲಿ ಮರೆಯಲ್ಲಿ ನಿಂತು ಬಿಟ್ಟ ರಾಮಬಾಣದಿಂದ ಅಪ್ರತಿಭನಾದ ವಾಲಿ ರಾಮನನ್ನು ಕೇಳುತ್ತಾನೆ. "ಯಾವ ಧರ್ಮಕ್ಕಾಗಿ ಈ ಅಧರ್ಮದ ವಧೆ?" ಅದಕ್ಕೆ ರಾಮನ ಉತ್ತರ. "ಒಂದೇ ತಾಯ ಬಸರಿನಲ್ಲಿ ಜನಿಸಿದ ನಿನ್ನ ತಮ್ಮನ ಪತ್ನಿಯ ಬಯಸಿದುದು ತಂಗಿಯನೆ ಬಯಸಿದಂತೆ. ನಿನ್ನ ಚಾಪಲ್ಯಕ್ಕೆ ತಕ್ಕ ಶಿಕ್ಷೆ. ಪರಿತಾಪವೇನಗಿಲ್ಲ."
ಸುಗ್ರೀವ, ರಾಮನಿಗೆ ಇತ್ತ ವಚನವ ಮರೆತು ಕಪಿ ಸಹಜ ಆಮೋದ ಪ್ರಮೊದದಲ್ಲಿಯೇ ಕಾಲಹರಣ ಮಾಡುತ್ತಿದ್ದುದು ಲಕ್ಷ್ಮಣನ ಕೋಪಕ್ಕೆ ಕಾರಣವಾಯಿತು. ಮೈಮರೆತುದಕ್ಕೆ ಪರಿತಪಿಸಿದ ಸುಗ್ರೀವ ವಾನರ ಸೇನೆಯನ್ನು ತಿಂಗಳೊಂದರಲ್ಲಿ ಒಗ್ಗೂಡಿಸಲು ಆಜ್ಞಾಪಿಸಿದ. ಭರತ ಖಂಡದ ಎಲ್ಲೆಡೆಯಿಂದ ಬಂದ ವಾನರ ಸಂಖ್ಯೆ ನಾಲ್ಕು ಕೋಟಿ !
ನಿಶಾಕರನೆಂಬ ಮುನಿಯ ತಪೋ ಭೂಮಿಯಲ್ಲಿ ಅಂಗದನಿಗೆ ಜಟಾಯುವಿನ ಅಣ್ಣ ಸಂಪಾತಿಯಿಂದ ಪುಷ್ಪಕ ವಿಮಾನವೊಂದರಲ್ಲಿ ಹೆಣ್ಣೊಂದು ರಾಕ್ಷಸ ಹಿಡಿತದಲ್ಲಿ ರಕ್ಷಣೆಗೆಗಾಗಿ ಗೊಳಿಡುತ್ತಾ ದಕ್ಷಿಣಾ ಪಥದತ್ತ ಹಾರಿದ ಮಸಕು ನೆನಪು.
ನೂರು ಯೋಜನ ವಿಸ್ತಾರದ ಈ ಶರಧಿಯನ್ನು ದಾಟುವ ಬಗೆ ಕುರಿತು ದಕ್ಷಿಣದ ಮಹಾ ಕಡಲ ತಡಿಯಲ್ಲಿ ನಿಂತ ವಾನರರ ಚಿಂತೆ! "ಇದೇನು ಕಡಲೋ,ಆಗಸದ ಅಂತ್ಯವೋ?"
ಇಪ್ಪತ್ತು, ನಲ್ವತ್ತು, ಅರವತ್ತು ಯೋಜನೆಗಳ ತಮ್ಮ ಸಾಮರ್ಥ್ಯವನ್ನು ಆಂಗದನಿಗೆ ನಿವೇದಿಸಿಕೊಂಡವು. "ಬಾವಿಯ ಇಳಿಯಬಲ್ಲವರಾದರೆ ಸಾಕೇ? ಮರಳಿ ಮೇಲೇರಿ ಬರಬೇಕು." "ನಾಲ್ಕಾರು ವಾನರರ ಸಾಮರ್ಥ್ಯವನು ಒಗ್ಗೂಡಿಸಿ, ಕೂಡಿಸಿ, ಕಳೆದು ಆಡುವ ಆಟವಲ್ಲ" ಅನ್ನುವ ಅಂಗದನ ಮಾತು ಕುಮಾರ ವ್ಯಾಸ ಭಾರತದಲ್ಲಿನ 'ಹೊಗಲು ಬಲ್ಲನು, ಹೊಕ್ಕವೊಲು ಹೊರದೆಗೆಯ ಲರಿಯನು, ವೀರ ಪಾರ್ಥನ ಮಗನು' ಎಂದು ಚಕ್ರವ್ಯೂಹ ಭೇದಿಸುವ ಕುರಿತ ಕವಿಯ ಮಾತುಗಳು ಅನುರಣಿಸುತ್ತವೆ.
ಮುಂದೆ ಅಂಜನಾಸುತ ಆಂಜನೇಯ ಭೂವ್ಯೋಮಕ್ಕೆ ಅತಿಶಯನಾಗಿ ಬೆಳೆದದ್ದು, ಮಾರ್ಗದಲ್ಲಿ ಎದುರಾದ ಸುರಸೆ, ಮೈನಾಕಾ, ಸಿಂಹಿಕೆ, ಲಂಕಿಣಿ ಇವರನ್ನು ನಿಗ್ರಹಿಸಿ ಲಂಕೆ ತಲುಪಿ ಮಂಡೋದರಿಯ ಮಗ್ಗುಲಲ್ಲಿ ಪವಡಿಸಿದ ರಾವಣನ ನೋಡಿ, ಸೀತೆ ಇಲ್ಲದುದ ಕಂಡು ನೆಮ್ಮದಿಯಾಯ್ತು ಮಾರುತಿಗೆ. ಸೀತೆಗೆ ಮುದ್ರೆ ಉಂಗುರ, ಅಶೋಕವನ ಧ್ವಂಸ, ಅಸುರರೊಂದಿಗೆ ಹೋರಾಟ, ಲಂಕಾದಹನ, ಹೀಗೆ ಬಂದಿದೆ ಕಥನ.
ಸೀತೆಗೆ ಸುದ್ದಿ ಮುಟ್ಟಿಸಿದ ಮೇಲೆ ಈ ಆಟಾಟೋಪವೇಕೆ ಕೋತಿಗೆ? ಅದಕ್ಕೆ ಹನುಮನ ಉತ್ತರ ಹೀಗೆ- "ಧೂತಕಾರ್ಯದಲಿ ಶತ್ರುವಿನ ಬಲಾಬಲವ ಅರಿತು ಬರುವುದೂ ಒಂದು". ಇದು ಇಂದಿನ ರಾಷ್ಟ್ರಗಳ 'ವಿದೇಶೀ ನೀತಿ’ಯ ನೆಲೆಗಟ್ಟೂ ಹೌದು !
ದಿನಕ್ಕೆ 20 ಯೋಜನ ದೂರದಂತೆ ಸೇತುಬಂಧ ಐದು ದಿನದಲ್ಲಿ ಮುಕ್ತಾಯ. ಶಿವಾಲಯ ಹೊಕ್ಕ ದಶಕಂಠ ಪರಮೇಶ್ವರನನ್ನು ಪ್ರಾರ್ಥಿಸಿದ "ರಾವಣನ ಸಾಮ್ರಾಜ್ಯ ರಾಮನಿಂದ ರಕ್ಷಿಸಲ್ಪಡಲಿ". ವಿಸ್ಮೃತಿಯೇ? ಬಾಯ್ತಪ್ಪಿತೆ? ತುಟಿ ಕಚ್ಚಿದ ರಾವಣ ತನ್ನ ಬೇಡಿಕೆಯ ಎರಡರ್ಥಕೆ ಬೆದರಿ.
ಅಂದು ಇಂದಿನ ವಿದ್ಯಮಾನಗಳಂತೆ ಹಾಗಲ್ಲ, ಹೀಗೆ ಅನ್ನುವಂತೆ ಇರಲಿಲ್ಲವೇ! ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು- ಅನ್ನುವ ಲೋಕ ನುಡಿಯ ಹಾಗೆ.
ಮುಂದೆ ರಾಮ ರಾವಣರ 'ಯುಗಾವಸಾನವೋ' ಅನ್ನುವಂತಿದ್ದ ಯುದ್ಧದಲ್ಲಿ' ವಿಜಯಾಂಗನೆ ತೂಗುವ ತಕ್ಕಡಿಯಾದಳು'. ಬಸವಳಿದ ಭುವನಾಭಿರಾಮನಿಗೆ ಋಷಿ ಅಗಸ್ತ್ಯರಿಂದ 'ಆದಿತ್ಯ ಹೃದಯ' ಮಂತ್ರೋಪದೇಶ. 'ದೈವೀ ಶಕ್ತಿಗೂ ಇತಿಮಿತಿ ಉಂಟು ಮಾನವ ಶರೀರದಲಿ’ ಅನ್ನುವ ಮಾತು ನಮಗೆ ಗ್ರಾಹ್ಯಾರ್ಹ.
ರಾವಣನ ಮರಣಾನಂತರ ವಿಭೀಷಣನ ಪಟ್ಟಾಭಿಷೇಕ, ಸೀತೆ ಅಗ್ನಿ ಪರೀಕ್ಷೆ. 'ರಾಜಧರ್ಮ ಪ್ರಜೆಗಳಲಿ ಶಂಕೆಯನು ನೀಗಿಸುವುದು, ಅದಕಾಗಿ ಈ ಅಗ್ನಿ ಪರೀಕ್ಷೆ ರಾಮನ ಸಮರ್ಥನೆ. ಕಾಂತೆಯನು ಬರಮಾಡಿಕೊಂಡ ರಾಮ, ಮರಳಿ ಅಯೋಧ್ಯೆಗೆ. ಶ್ರೀ ರಾಮ ಪಟ್ಟಾಭಿಷೇಕ. ಪುರಜನರ ಸಂತಸ. 'ಜನಪದರ ರಾಮರಾಜ್ಯದ ಕನಸು ನನಸಾಯಿತು’ ಅನ್ನುವಲ್ಲಿ ಕಥನ ಮುಕ್ತಾಯ.
- ಡಾ. ಎಚ್.ಎಸ್. ಸುರೇಶ್,
9448027400
ಲೇಖಕರ ಸಂಕ್ಷಿಪ್ತ ಪರಿಚಯ:
ದಿ. ಡಾ. ಹೊಸ್ಕೆರೆ ಶಿವಸ್ವಾಮಿ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಪಕರಾಗಿ ಸೇವೆಸಲ್ಲಿಸಿ ನಿವೃತ್ತರಾದರು. ಸಂಶೋಧನಾ ಶಾಸ್ತ್ರ, ಕಂದಕ ಮತ್ತು ಇತರ ಕಥೆಗಳು, ಪರಿನಿರ್ವಾಣ, ಇದುವರೆಗಿನ ಕವಿತೆಗಳು, ಕನಸಿನ ನಲಿವಿನ ಕವನಗಳು,ಚಿತ್ರ ಕುಂತಲ, ಇವರ ಇತರ ಪ್ರಕಟಿತ ಕೃತಿಗಳು. ‘ಚಿತ್ರ-ಕುಂತಲ' ಪತಿತ್ಯಕ್ತರಾದ ಚಿತ್ರಾಂಗದೆ- ಶಕುಂತಲೆ ಈ ಇಬ್ಬರು ಹೆಣ್ಣು ಮಕ್ಕಳ ಮಾನಸಿಕ ತುಮುಲಗಳ ಮನೋವೈಜ್ಞಾನಿಕ ವಿಶ್ಲೇಷಣೆಯ ವಸ್ತುವನ್ನು ಒಳಗೊಂಡಿದೆ.
ಡಾ. ಹೆಚ್.ಎಸ್. ಸುರೇಶ್ ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿ. ಸದ್ಯ ಕರ್ನಾಟಕ ಸರ್ವೋದಯ ಮಂಡಲ ಬೆಂಗಳೂರು ಇದರ ಅಧ್ಯಕ್ಷರು. ಬರಹಗಾರರು ದಿ. ಹೊಸ್ಕೆರೆ ಅವರ ಸಹೋದರರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ