ಪೇಜಾವರ ಶ್ರೀಗಳಿಂದ ಪ್ರೇರಣೆ
ಅಯೋಧ್ಯೆ: ಅಯೋಧ್ಯೆಯ ರಾಮನಿಗೆ ಮಂದಿರ ಕಟ್ಟುವಲ್ಲಿಂದ ಆರಂಭಿಸಿ ಜಗತ್ತಿನಾದ್ಯಂತ ಕೋಟ್ಯಂತರ ಭಕ್ತರು ಇನ್ನಿಲ್ಲವೆಂಬಂತೆ ಧನಕನಕ ವಸ್ತುಗಳನ್ನು ತಂದೊಪ್ಪಿಸುತ್ತಲೇ ಇದ್ದಾರೆ. ಈ ನಡುವೆ ತಾಯಿ ಶಬರಿ ರಾಮನಿಗಾಗಿ ಸಂಗ್ರಹಿಸಿಟ್ಟಿದ್ದ ಹಣ್ಣು ಹಂಪಲಗಳನ್ನೇ ಅರ್ಪಿಸಿದಂತೆ ವನವಾಸಗೈದ ಅಯೋಧ್ಯಾ ರಾಮನಿಗೆ ಕರ್ನಾಟಕ ಪ್ರಾಂತ ವನವಾಸಿ ವಿಭಾಗದ ಉತ್ತರ ಕನ್ನಡ ಜಿಲ್ಲೆಯ ಬಂಧುಗಳು ಅತ್ಯಂತ ಶ್ರದ್ಧೆಯಿಂದ ತಾವೇ ಸುಂದರವಾಗಿ ತಯಾರಿಸಿದ ಬೆತ್ತದ ಪಲ್ಲಕ್ಕಿಯನ್ನು ಸೋಮವಾರ ಅಯೋಧ್ಯೆಗೆ ತೆರಳಿ ರಾಮನಿಗೆ ಅರ್ಪಿಸಿ ಧನ್ಯರಾದರು. ಮಂಡಲೋತ್ಸವದ ಪ್ರಯುಕ್ತ ಸೋಮವಾರ ಸಂಜೆನಡೆದ ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಸುಂದರವಾಗಿ ಅಲಂಕರಿಸಲಾದ ಇದೇ ಪಲ್ಲಕ್ಕಿಯಲ್ಲಿ ಶ್ರೀರಾಮದೇವರ ಉತ್ಸವ ಮೂರ್ತಿಯನ್ನಿಟ್ಟು ಉತ್ಸವ ನಡೆಸಲಾಯಿತು.
ಅಯೋಧ್ಯೆಯ ಉತ್ಸವದಲ್ಲಿ ಸಮಾಜದ ಎಲ್ಲ ವರ್ಗದ ಜನ ಭಾಗವಹಿಸುವಂತಾಗಬೇಕು ಅದರಂತೆ ವನವಾಸಿ ಬಂಧುಗಳೂ ಒಂದು ಬೆತ್ತದ ಪಲ್ಲಕ್ಕಿಯನ್ನು ತಯಾರಿಸಿ ಕೊಡುವಂತೆ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವನವಾಸಿ ವಿಭಾಗದ ಪ್ರಮುಖರಲ್ಲಿ ಅಪೇಕ್ಷೆ ವ್ಯಕ್ತಪಡಿಸಿದ್ದರು. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಈ ಸುಂದರವಾದ ಬೆತ್ತದ ಪಲ್ಲಕ್ಕಿಯನ್ನು ನಿರ್ಮಿಸಿ ಅರ್ಪಿಸುತ್ತಿದ್ದು ಇದನ್ನು ಕೇಶವ ಮರಾಟಿ, ವಿನಾಯಕ ಮರಾಟಿ, ಸುನಿಲ್ ನಾಯ್ಕ, ಅರುಣ್ ನಾಯ್ಕ ಎಂಬ ನಾಲ್ವರು ಕಾರಿನಲ್ಲಿ ಇಟ್ಟುಕೊಂಡು ಅಯೋಧ್ಯೆಗೆ ತಂದು ಶ್ರೀಗಳ ಮೂಲಕ ರಾಮದೇವರಿಗೆ ಅರ್ಪಿಸಿದ್ದು ವಿಶೇಷ. ಶ್ರೀಗಳು ಇದಕ್ಕೆ ಶ್ರಮಿಸಿದ ಎಲ್ಲರನ್ನೂ ರಾಮದೇವರು ವಿಶೇಷವಾಗಿ ಅನುಗ್ರಹಿಸಲಿ ಎಂದು ಹಾರೈಸಿದ್ದಾರೆ.
ಇವತ್ತು (ಫೆ.19) ಬೆಳಿಗ್ಗೆ ರಾಜ್ಯದ ಮಾಜಿ ಸಚಿವ ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಹಾಗೂ ಶಾಸಕಿ ಮಂಜುಳಾ ಲಿಂಬಾವಳಿ ದಂಪತಿ ಹಾಗೂ ಬೆಂಗಳೂರಿನ ಮಾಜಿ ಕಾರ್ಪೋರೇಟರ್ ಶ್ರೀಧರ ರೆಡ್ಡಿ ರಾಮ ದೇವರಿಗೆ ಕಲಧಾಭಿಷೇಕ ಸೇವೆ ನಡೆಯಿತು. ಸಂಜೆಯ ಉತ್ಸವದಲ್ಲಿ ಕೋಲಾರ ಸಂಸದ ಮುನಿಸ್ವಾಮಿ ಭಾಗವಹಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ