ಬೆಂಗಳೂರು ನಿಟ್ಟೆ ಕಾಲೇಜಿನಲ್ಲಿ ಕರ್ನಾಟಕ ಸರಕಾರದ ಮಾಸ್ಟರ್ ಟ್ರೈನಿಂಗ್ ಕಾರ್ಯಕ್ರಮ ಉದ್ಘಾಟನೆ

Upayuktha
0



ಬೆಂಗಳೂರು: ‘ಕೌಶಲ್ಯವರ್ಧನೆಗೋಸ್ಕರ ಕರ್ನಾಟಕ ಸರಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕೌಶಲ್ಯವರ್ಧನಾ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಧಿಕ ಜ್ಞಾನ ಹಾಗೂ ಜಾಣಾಕ್ಷತೆ ಪಡೆದವರಿಗೆ ಸರ್ಕಾರದ ವಲಯಗಳಲ್ಲೂ ಅನೇಕ ಅವಕಾಶಗಳು ಲಭ್ಯವಾಗಲಿವೆ. ತರಬೇತಿ, ಮರುತರಬೇತಿ, ಬೆಳೆಯುತ್ತಿರುವ ಹಾಗೂ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಸಾರವಾಗಿ ವಿವಿಧ ಕಾಲಘಟ್ಟಗಳಲ್ಲಿ ನವನವೀನ ಆವಿಷ್ಕಾರಗಳ ಅರಿವು ಅತ್ಯಂತ ಮುಖ್ಯ ಎಂಬುದನ್ನು ಸರ್ಕಾರ ಅರಿತಿದೆ. ಅದರಿಂದಲೇ ಹೊಸ ತಂಡದ ಕುಶಲಕರ್ಮಿಗಳಿಗೆ ಬೋಧಿಸಲು ಮಾಸ್ಟರ್‍ಟ್ರೈನರ್ (ಉನ್ನತ ತರಬೇತುದಾರ)ಗಳನ್ನು ಮೊದಲ ಹಂತದಲ್ಲಿ ಸಜ್ಜುಗೊಳಿಸುತ್ತೇವೆ. ಈ ಮಾಸ್ಟರ್ ಟ್ರೈನರ್‍ಗಳಿಗೆ ಹೊಸ ಹೊಸ ಅನ್ವೇಷಣೆಗಳನ್ನು ಪರಿಚಯ ಮಾಡಿಸುವ ಹಾಗೂ ಅವುಗಳಿಗೆ ಅವಶ್ಯವಿರುವ ಕೌಶಲ್ಯವನ್ನು ರೂಢಿಸುವ ಸಲುವಾಗಿ ಈಗಾಗಲೇ ತಂತ್ರಜ್ಞಾನ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ ಸೂಪರ್ ಟ್ರೈನರ್‍ಗಳನ್ನು (ಅತ್ಯುನ್ನತ ತರಬೇತುದಾರ) ಅಹ್ವಾನಿಸುತ್ತೇವೆ. ಇಂದು ಪ್ರಾರಂಭವಾಗುವ ತರಬೇತಿ ಕಾರ್ಯಕ್ರಮದಲ್ಲಿ ಸೂಪರ್ ಟ್ರೈನರ್‍ಗಳು ಮಾಸ್ಟರ್ ಟ್ರೈನರ್‍ಗಳನ್ನು ಸಜ್ಜುಗೊಳಿಸುತ್ತಾರೆ. ತದನಂತರ ಮಾಸ್ಟರ್ ಟ್ರೈನರ್‍ಗಳು ನಾಡಿನುದ್ದಕ್ಕೂ ತರಬೇತಿ ಶಿಬಿರಗಳನ್ನು ಹಮ್ಮಿಕೊಂಡು ಮೊದಲ ಹಂತದಲ್ಲಿ ಕಾರ್ಯತತ್ಪರರಾಗಿರುವವರ ಕೌಶಲ್ಯವರ್ಧನೆಗೆ ಶ್ರಮಿಸುತ್ತಾರೆ’ ಎಂದು ಕರ್ನಾಟಕ ಸರಕಾರದ ಕಂದಾಯ ಆಯುಕ್ತ  ಪೊಮ್ಮಲ ಸುನಿಲ್ ಕುಮಾರ್ ನುಡಿದರು. 



ಅವರು, ‘ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಮಾಸ್ಟರ್ ಟ್ರೈನಿಂಗ್  ಫೆಸಿಲಿಟಿ ಫಾರ್ ಆಲ್’, ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗಗಳು ಜಂಟಿಯಾಗಿ ಹಮ್ಮಿಕೊಂಡಿರುವ, ‘ಎತ್ತರದ ಬಹುಮಹಡಿ ಕಟ್ಟಡಗಳ ವಿನ್ಯಾಸ, ನಿಯೋಜನೆ ಹಾಗೂ ಸವಿವರ ವಿಶ್ಲೇಷಣೆ’ ಕುರಿತ ನಾಲ್ಕು ವಾರಗಳ ಅವಧಿಯ ಮಾಸ್ಟರ್ ಟ್ರೈನಿಂಗ್ ಕಾರ್ಯಕ್ರಮವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿ ಮಾತನಾಡುತ್ತಿದ್ದರು. 



‘ಕೌಶಲ್ಯವರ್ಧನೆಯ ಕಾರ್ಯದಲ್ಲಿ ಸರ್ಕಾರ ಅತೀವ ಆಸಕ್ತಿ ತಳಿದಿದೆ, ಸಾಧಾರಣ ಕಾರ್ಮಿಕರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸರಳ ಕನ್ನಡದಲ್ಲಿ ಹೊತ್ತಗೆಗಳನ್ನು ಸಿದ್ಧಪಡಿಸಿ ಆ ಮೂಲಕ ಆಡು ಭಾಷೆಯಲ್ಲಿಯೇ ತರಬೇತಿ ನೀಡುತಿದ್ದೇವೆ’, ಎಂದು ನುಡಿದರು.



ನಗರಗಳಷ್ಟೇ ಅಲ್ಲ, ಸಣ್ಣಪುಟ್ಟ ಪಟ್ಟಣಗಳಲ್ಲೂ ತಲೆಯತ್ತುತ್ತಿರುವ ಎತ್ತರದ ಬಹುಮಹಡಿ ಕಟ್ಟಡಗಳು ಸೂಕ್ತ ತಂತ್ರಜ್ಞಾನ ಹಾಗೂ ಇತ್ತೀಚಿನ ಸಂಶೋಧನೆಗಳಿಂದ ಹೊರಹೊಮ್ಮಿರುವ ವಿಧಿ ವಿಧಾನಗಳನ್ನು ಆಧರಿಸಿ ನಿರ್ಮಾಣವಾಗಬೇಕು ಎಂಬ ಉದ್ದೇಶದಿಂದ ನಾಲ್ಕು ವಾರಗಳ ಅವಧಿಯ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಿಯೋಜನೆಯ ಹಂತದಲ್ಲಿ ಬಳಸುವ ಸುಧಾರಿತ ಸಾಫ್ಟ್ ವೇರ್, ವೈಜ್ಞಾನಿಕ ವಿನ್ಯಾಸ, ಬಹುಮಹಡಿ ಕಟ್ಟಡಗಳು ಅತಿಯಾದ ಭಾರವನ್ನು (ಲೋಡ್) ನಿಭಾಯಿಸುವ ರೀತಿ, ಕಾಂಕ್ರೀಟ್, ಸಿಮೆಂಟ್ ಇತ್ಯಾದಿ ಪರಿಕರಗಳ ಸೂಕ್ತ ಬಳಕೆ ಇತ್ಯಾದಿಗಳ ಬಗ್ಗೆ ದೇಶದ ನುರಿತ ತಂತ್ರಜ್ಞರು ಹಾಗೂ ವಾಸ್ತುಶಿಲ್ಪಿಗಳಿಂದ ಮಾಹಿತಿ ಒದಗಿಸಲಾಗುತ್ತದೆ. ಪಠ್ಯ ಬೋಧನೆ ಹಾಗೂ ಪ್ರಾತ್ಯಕ್ಷಿಕೆಗಳೆರಡೂ ಹದವಾಗಿ ಮಿಲನಗೊಂಡಿರುವ ಈ ತರಬೇತಿ ಕಾರ್ಯಕ್ರಮದಲ್ಲಿ ಕರ್ನಾಟಕ ಹಾಗೂ ಭಾರತ ಸರ್ಕಾರಗಳ ನಗರಾಭಿವೃದ್ಧಿ ಇಲಾಖೆ, ಲೋಕೊಪಯೋಗಿ ಇಲಾಖೆ ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಗಳ ಕಾರ್ಯನಿರತ ಇಂಜಿನಿಯರ್‍ಗಳು ಭಾಗಿಯಾಗಿದ್ದಾರೆ.



ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿರಿಯ ಅನುಭವಿ ಸಿವಿಲ್ ಇಂಜಿನಿಯರ್ ರಾಜ್ ಪಿಳ್ಳೈ ಅವರು ಮಾತನಾಡಿ, ‘ಮುಂಬರುವ ದಶಕದಲ್ಲಿ ಜಗತ್ತಿನಾದ್ಯಂತ ನಡೆಯುವ ಕಟ್ಟಡ ಕಾಮಗಾರಿಗಳಲ್ಲಿ ಶೇಕಡಾ 70ರಷ್ಟು ಭಾರತ ದೇಶದಲ್ಲಿಯೇ ಜರುಗಲಿವೆ. ಹೀಗಾಗಿ ಯಾರು ನೂತನ ತಂತ್ರಜ್ಞಾನ ಹಾಗೂ ನವೀನ ಕೌಶಲ್ಯಗಳನ್ನು ಕರಗತ ಮಾಡಿಕೊಂಡವರಿಗೆ ಹೇರಳ ಅವಕಾಶಗಳು ಲಭ್ಯವಿವೆ’, ಎಂದರು. 



ಮುದ್ದೇನಹಳ್ಳಿಯ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಮಾಸ್ಟರ್ ಟ್ರೈನಿಂಗ್ ಫೆಸಿಲಿಟಿ ಫಾರ್ ಆಲ್ ಸಂಸ್ಥೆಯ ನಿರ್ದೇಶಕ ಶ್ರೀನಿವಾಸ್ ರಾವ್ ಕುಲಕರ್ಣಿ, ಖ್ಯಾತ ಸ್ಟ್ರಕ್ಚರಲ್ ಇಂಜಿನಿಯರ್ ಎಂ. ನಾಗರಾಜ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.


ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಮಾಸ್ಟರ್ ಟ್ರೈನಿಂಗ್ ಫೆಸಿಲಿಟಿ ಫಾರ್ ಆಲ್ ಸಂಸ್ಥೆಯ ಮುಖ್ಯಸ್ಥ ಡಾ. ಡಿ.ಎಲ್. ವೆಂಕಟೇಶ್ ಬಾಬು, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಶೈಕ್ಷಣಿಕ ಮುಖ್ಯಸ್ಥ ಡಾ. ವಿ. ಶ್ರೀಧರ್, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ನಾಗೇಂದ್ರ ವಿ, ಪ್ರಾಧ್ಯಾಪಕಿ ಡಾ. ಭಾರತಿ ಗಣೇಶ್ ಹಾಗೂ ರಾಜ್ಯದಾದ್ಯಂತ ಬಂದಿದ್ದ ನೂರಕ್ಕೂ ಅಧಿಕ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top