ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಸಹೋದರ ಡಿ. ಸುರೇಂದ್ರಕುಮಾರ್ ಇತ್ತೀಚೆಗೆ ಛತ್ತೀಸ್ಗಡದಲ್ಲಿ ಪೂಜ್ಯ ಮುನಿಮಹಾರಾಜರ ದರ್ಶನ ಮಾಡಿ, ಆಶೀರ್ವಾದ ಪಡೆದ ಸಂದರ್ಭ.
ಧರ್ಮಸ್ಥಳ: ಛತ್ತೀಸ್ಗಡದಲ್ಲಿ ಚಂದ್ರಗಿರಿತೀರ್ಥದ ಡೊಂಗರಗಡದಲ್ಲಿ ಸಮಾಧಿ ಮರಣ ಹೊಂದಿದ ಪೂಜ್ಯ ಆಚಾರ್ಯಶ್ರೀ 108 ವಿದ್ಯಾಸಾಗರ ಮುನಿಮಹಾರಾಜರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ವಿನಯಾಂಜಲಿ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಕ್ಕೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೆಗ್ಗಡೆಯವರು, ಮುನಿಮಹಾರಾಜರು ಇಂದು ಭಾನುವಾರ ಮುಂಜಾನೆ ಗಂಟೆ 2.30ಕ್ಕೆ ಛತ್ತೀಸ್ಗಡದಲ್ಲಿ ಚಂದ್ರಗಿರಿತೀರ್ಥದ ಡೊಂಗರಗಡದಲ್ಲಿ ಸಮಾಧಿಮರಣ ಹೊಂದಿದರು. ಆಚಾರ್ಯಶ್ರೀಯವರು ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಸದಲಗದವರು. ಈ ಹಿಂದೆ ನಾನು ಪೂಜ್ಯಶ್ರೀಗಳನ್ನು ಎರಡು ಬಾರಿ ದರ್ಶನ ಮಾಡುವ ಸದವಕಾಶ ದೊರಕಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಮೊದಲೇ ತಿಳಿದಿದ್ದ ಪೂಜ್ಯರು ಕ್ಷೇತ್ರದ ಬಗ್ಗೆ ತುಂಬಾ ಅಭಿಮಾನದಿಂದ ಮಾತನಾಡಿ ನನ್ನನ್ನು ಮನ:ಪೂರ್ವಕವಾಗಿ ಆಶೀರ್ವದಿಸಿದಾಗ ನಾನು ಧನ್ಯನಾದೆ ಎಂದು ತಿಳಿಸಿದ್ದಾರೆ.
ಆಚಾರ್ಯಶ್ರೀಗಳು 'ಮೂಕಮಾಟಿ' ಎಂಬ ಗ್ರಂಥವನ್ನು ಮರಾಠಿಯಲ್ಲಿ ಬರೆದಿದ್ದರು. ಈ ಗ್ರಂಥವು ಬರೀ ಧಾರ್ಮಿಕ ಗ್ರಂಥವಾಗಿ ಉಳಿಯದೆ ಕುಂಭ ಮತ್ತು ಕುಂಬಾರನ ಉದಾಹರಣೆಯನ್ನು ನೀಡಿ ಬಹಳ ಕಾವ್ಯಾತ್ಮಕವಾಗಿ ಧರ್ಮದ ತತ್ವಗಳನ್ನು ವಿವರಿಸಲಾಗಿದೆ. ಇದು ಎಲ್ಲಾ ಭಾಷೆಗಳಿಗೆ ಭಾಷಾಂತರಗೊಂಡು ಜನಜಾಗೃತಿಗೊಂಡಿದೆ. ಇತ್ತೀಚೆಗೆ ಕನ್ನಡದಲ್ಲೂ ಈ ಕೃತಿ ಭಾಷಾಂತರಗೊಂಡು ಬಿಡುಗಡೆಯಾಗಿ ಈ ಗ್ರಂಥವನ್ನು ಅವಲೋಕಿಸುವ ಭಾಗ್ಯ ಕನ್ನಡಿಗರಿಗೆ ದೊರಕಿತು ಎಂದು ಹೆಗ್ಗಡೆಯವರು ಸ್ಮರಿಸಿಕೊಂಡಿದ್ದಾರೆ.
ಪೂಜ್ಯ ಮುನಿಮಹಾರಾಜರು ನೂರಾರು ಮುನಿಗಳು ಹಾಗೂ ಆರ್ಯಿಕೆಯರನ್ನು ರೂಪಿಸಿ ಸಮಾಜಕ್ಕೆ ನೀಡಿರುತ್ತಾರೆ. ಮಾನ್ಯ ಪ್ರಧಾನಿ ನರೇಂದ್ರ ಮೋದಿಜಿಯವರು ಕೂಡಾ ಪೂಜ್ಯಶ್ರೀಗಳ ದರ್ಶನ ಮಾಡಿ ಆಶೀರ್ವಾದ ಪಡೆದಿರುತ್ತಾರೆ. ನಮ್ಮ ಸಮಾಜದ ಪ್ರತಿಷ್ಠಿತ ಆಚಾರ್ಯಶ್ರೀಗಳನ್ನು ಕಳೆದುಕೊಂಡು ಇಡೀ ಜೈನ ಸಮಾಜವು ಬಡವಾಗಿದೆ ಎಂದು ಹೆಗ್ಗಡೆಯವರು ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ