ಬೆಂಗಳೂರು: ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ಸಂಶೋಧನಾತ್ಮಕ ಕಿರುಸಂಪುಟ- ಕರ್ನಾಟಕದ ಸಂಕ್ಷಿಪ್ತ ಮರಾಠ ಸಾಂಸ್ಕೃತಿಕ ಪರಂಪರೆ ಎಂಬ ಕೃತಿಯು ನಾಳೆ (ಫೆ.19) ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಲೋಕಾರ್ಪಣೆಗೊಳ್ಳಲಿದೆ.
394ನೇ ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಜಂಟಿಯಾಗಿ ಏಪಡಿಸಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕಿರು ಸಂಪುಟವನ್ನು ಮತ್ತು ನಿಗಮದ ನೂತನ ಯೋಜನೆಗಳನ್ನು ಲೋಕಾರ್ಪಣೆಗೊಳಿಸುವರು. ಗೋಸಾಯಿ ಮಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು. ಸಚಿವ ಶಿವರಾಜ ತಂಗಡಗಿ ಹಾಗೂ ಸಮುದಾಯದ ಅನೇಕ ಗಣ್ಯಮಾನ್ಯರು ಉಪಸ್ಥಿತರಿರುವರು.
ಕರ್ನಾಟಕ ರಾಜ್ಯದಲ್ಲಿ ಮರಾಠ ಸಮುದಾಯವು ಕನ್ನಡ ಸಂಸ್ಕೃತಿಯೊಡನೆ ಬೆರೆತು ಕನ್ನಡ ನಾಡಿನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯನ್ನು ಒಪ್ಪಿ-ಅಪ್ಪಿ ಬದುಕುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಸಮುದಾಯದವರೊಂದಿಗೆ ಬೆರೆತು, ಸೌಹಾರ್ದತೆ, ಭಾತೃತ್ವದಿಂದ ಸಹಬಾಳ್ವೆ ಇವರು ನಡೆಸುತ್ತಿದ್ದಾರೆ. ಷಹಾಜಿರಾಜೆ ಭೋಸಲೆಯವರು ಕರ್ನಾಟಕ ಪ್ರಾಂತ್ಯದ ಬೆಂಗಳೂರು ಪ್ರದೇಶದ ಜಾಗೀರದಾರರಾಗಿ (ಆಡಳಿತಗಾರರು) ದಕ್ಷ ಮತ್ತು ಪ್ರಾಮಾಣಿಕತೆಯಿಂದ ಆಡಳಿತ ನಡೆಸಿ ಪರಕೀಯರು ನಮ್ಮ ನೆಲೆಯಲ್ಲಿ ಕಾಲಿಡದಂತೆ ಹಾಗೂ ಪ್ರದೇಶದ ಜನರು ಸುಖ ಶಾಂತಿ ನೆಮ್ಮದಿಯಿಂದ ಜೀವನ ಮಾಡುವಂತೆ ನೋಡಿಕೊಂಡರು. ಷಹಾಜಿರಾಜೆ ಭೋಸಲೆ ಮತ್ತು ಅವರ ಹಿರಿಯ ಮಗ ಸಂಭಾಜಿರಾಜೆ ಭೋಸಲೆರವರು ಬೆಂಗಳೂರು ಮತ್ತು ಅದರ ಸುತ್ತ-ಮುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡ್ಯೊಯಲು ಅಪಾರ ಕೊಡುಗೆ ನೀಡಿದ್ದಾರೆ. ಇವರ ಆಡಳಿತದ ಅವಧಿಯಲ್ಲಿ ಕನ್ನಡ ನಾಡಿನ ಸಾಂಸ್ಕೃತಿಕ ಸಂವರ್ಧನೆಗೆ ಈ ಮರಾಠ ಸಮುದಾಯದ ಪಾತ್ರ ಅತ್ಯಂತ ಮಹತ್ವವಾದದ್ದು. ಈ ಕುರಿತು ಕೃತಿಯಲ್ಲಿ ಅವಲೋಕನ ಮಾಡಲಾಗಿದೆ.
ಮರಾಠ ಸಮುದಾಯದ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರವು ಸ್ಥಾಪಿಸಿರುವ 'ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ'ವು ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮರಾಠ ಸಮುದಾಯದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿಕೊಂಡು ಮುನ್ನಡೆಯುತ್ತಿದೆ. ಈ ನಿಟ್ಟಿನಲ್ಲಿ ಸಮುದಾಯದ ಕುರಿತು ಸಮಾಜೋ-ಸಾಂಸ್ಕೃತಿಕ ಅಧ್ಯಯನವನ್ನು ನಡೆಸಿ ಡಾ. ಪ್ರಕಾಶ್ ಆರ್. ಪಾಗೋಜಿರವರ ಪ್ರಧಾನ ಸಂಪಾದಕತ್ವದಲ್ಲಿ ಸಮುದಾಯದ ಸಂಸ್ಕೃತಿ, ಇತಿಹಾಸ, ಸಾಹಿತ್ಯಗಳ ದರ್ಶನವನ್ನು ಮಾಡಿಸುವ "ಕರ್ನಾಟಕದ ಸಂಕ್ಷಿಪ್ತ ಮರಾಠ ಸಾಂಸ್ಕೃತಿಕ ಪರಂಪರೆ" ಎಂಬ ಕಿರುಸಂಪುಟವನ್ನು ಪ್ರಕಟಿಸಿ ಚರಿತ್ರೆಯ ಬಗೆಗೆ ಕುತೂಹಲ ಮೂಡಿಸಿ ಸಮುದಾಯವನ್ನು ಕುರಿತು ಉನ್ನತ ಅಧ್ಯಯನ ಮಾಡುವವರಿಗೆ ಈ ಕಿರುಸಂಪುಟವು ಪ್ರೇರಣೆಯಾಗುವುದರಲ್ಲಿ ಸಂಶಯವಿಲ್ಲ.
ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಅನೇಕ ಮರಾಠ ವೀರರು ಕರ್ನಾಟಕದಿಂದ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು. ಆಧುನಿಕ ಕಾಲದಲ್ಲಿ ಮರಾಠ ಸಮುದಾಯವು ಕನ್ನಡ ನಾಡಿನ ಪುರೋಭಿವೃದ್ಧಿಗೆ ಸಲ್ಲಿಸಿರುವ ಸೇವೆ ಗಮನಾರ್ಹವಾದುದು. ಕನ್ನಡ ಸಾಹಿತ್ಯ, ಸಂಗೀತ, ನಾಟಕ, ಸಿನಿಮಾರಂಗ, ಕೈಗಾರಿಕೆ, ಆಡಳಿತ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಮರಾಠ ಸಮುದಾಯವು ಕನ್ನಡ ನಾಡಿಗೆ ಸಲ್ಲಿಸಿರುವ ಸೇವೆ ಸ್ಮರಣೀಯವಾದುದು.ಪ್ರಸ್ತುತ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶರವರ ಸಂಪಾದಕತ್ವದಲ್ಲಿ ಮೂಡಿಬಂದಿರುವ ಈ ಕಿರುಸಂಪುಟವು ಅಪೂರ್ವ ಚಾರಿತ್ರಿಕ ದಾಖಲೆಯಾಗಿದೆ. ಈ ಸಂಪುಟದ ಓದಿನ ಮೂಲಕ ಎಲ್ಲಾ ಕ್ಷೇತ್ರದಲ್ಲೂ ಮರಾಠ ಸಮುದಾಯದ ಕೊಡುಗೆಯ ನೆಲೆ-ಬೆಲೆಯನ್ನು ತಿಳಿಯಲು ಸಾಧ್ಯವಾಗುತ್ತದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ