ಒಂದು ಸಣ್ಣ ಊರು. ಅಲ್ಲಿನ ಬಹಳಷ್ಟು ಜನ ಕೃಷಿಕರಾಗಿದ್ದರು. ಯಾವ ತರಲೆ ತಾಪತ್ರಯ ಇಲ್ಲದೆ, ಶಾಂತಿಯಿಂದ ಸಹಬಾಳ್ವೆಯಿಂದ ಜೀವನ ಮಾಡುತ್ತಿದ್ದರು. ಊರಿಗೊಬ್ಬರು ಗೌಡರು. ಅವರ ಮಾತನ್ನು ಯಾರೂ ತೆಗೆದುಹಾಕುತ್ತಿರಲಿಲ್ಲ. ಅವರ ಮಾತಿಗೆ ಅಷ್ಟೊಂದು ಬೆಲೆ ಗೌರವಗಳಿತ್ತು. ಬಹಳ ಒಳ್ಳೆಯ ಮನುಷ್ಯ ಆತ. ಆದರೆ ಅವರ ಹೆಂಡತಿ ಮಾತ್ರ ಅಹಂಕಾರದ ಸ್ವಭಾವದವಳು. ಆಕೆ ಮಾತ್ರ ಯಾರ ಬಗ್ಗೆಯೂ ಒಂದು ಒಳ್ಳೆಯ ಮಾತನ್ನು ಆಡಿದವಳಲ್ಲ, ತಾನು ಬಹಳ ಶ್ರೀಮಂತಳೆಂಬ, ದರ್ಪ, ಅಹಂಕಾರ ಅವಳಲಿತ್ತು.
ಒಂದು ಸಲ ಈ ಊರಿಗೆ ಒಬ್ಬ ಸಾಧುಗಳು ಆಗಮಿಸಿದರು. ಇವರು, ಸಿದ್ದಪುರುಷರು ಹಾಗೂ ಮಹಾಜ್ಞಾನಿಗಳೆಂದು ಜನ ಹೇಳುತ್ತಿದ್ದರು. ಊರಿನಲ್ಲಿ ಇದ್ದಷ್ಟು ದಿನವೂ ಈ ಸಾಧುಗಳ ಪ್ರವಚನ ಊರಿನ ರಾಮಮಂದಿರದಲ್ಲಿ ನಡೆಯುತ್ತಿತ್ತು. ಸಾಯಂಕಾಲದ ಅವರ ಪ್ರವಚನಕ್ಕೆ ಊರ ಜನರೆಲ್ಲರೂ ತಪ್ಪದೆ ಬರುತ್ತಿದ್ದರು. ಆದರೆ, ಈ ಗೌಡತಿ ಮಾತ್ರ ಹೋಗುತ್ತಿರಲಿಲ್ಲ. ಅವಳಿಗೆ ಹೋಗಬೇಕೆಂಬ ಆಸೆ ಇದ್ದರೂ, ಸಾಧಾರಣ ಜನರಂತೆ ಅಲ್ಲಿಗೆ ಹೋಗಿ, ಊರ ಜನರ ಜೊತೆಗೆ ಸಾಮಾನ್ಯಳಂತೆ ತಾನೂ ಕುಳಿತುಕೊಳ್ಳುವುದು ಅವಳಿಗೆ ಇಷ್ಟವಾಗುತ್ತಿರಲಿಲ್ಲ. ತಾನು ಮಹಾ ಶ್ರೀಮಂತೆ ಎಂಬ ಅಹಂಭಾವ ಅವಳಿಗೆ.
ಒಂದು ದಿನ ಗೌಡತಿಯ ಮನೆಯ ಮುಂದೆ, ಯಾರೋ, "ಭವತಿ ಭಿಕ್ಷಾಂ ದೇಹಿ, ಎಂದು ಕೂಗಿದ ಧ್ವನಿ ಕೇಳಿಸಿತು. ಇವಳು ಬಂದು ನೋಡಿದರೆ, ಆ ಮಹಾತ್ಮರೆ ಇವಳ ಮನೆಯ ಬಾಗಿಲಲ್ಲಿ ಬಂದು ಭಿಕ್ಷೆಗಾಗಿ ನಿಂತಿದ್ದಾರೆ. ಆಕೆಗೆ ಆಶ್ಚರ್ಯ ಸಂತೋಷ ಎರಡು ಒಟ್ಟಿಗೆ ಆಯಿತು. ಯಾರನ್ನು ಹೋಗಿ ನೋಡಲು ತನ್ನ ಅಹಂ ಅಡ್ಡ ನಿಲ್ಲುತ್ತಿತ್ತೊ, ಅವರೇ ಮನೆಯ ಮುಂದೆ ಬಂದು ನಿಂತಿದ್ದಾರೆ. ಒಂದು ನಿಮಿಷ ಇರಿ ಬಂದೆ, ಎಂದು ಒಳಗೆ ಹೋಗಿ ಮನೆಯಲ್ಲಿ ಸಿದ್ಧವಾಗಿದ್ದ ಆಹಾರ, ಒಳ್ಳೆಯ ಹಣ್ಣುಗಳನ್ನು ತಂದು ಸಾಧುಗಳ ಭಿಕ್ಷಾ ಪಾತ್ರೆಗೆ ಹಾಕಿ ನಮಸ್ಕರಿಸಿದಳು. ಅವರು ಆಕೆಯನ್ನು ಆಶೀರ್ವದಿಸಿ ಮುಂದೆ ನಡೆದರು. ಆಗ ಆಕೆ ಸ್ವಾಮಿ, ನನಗೆ ಭಗವಂತನ ಬಗ್ಗೆ ತಮ್ಮಿಂದ ತಿಳಿಯ ಬೇಕೆಂಬ ಆಸೆ ಇದೆ. ತಾವು ಒಳಗೆ ಬಂದು ದಯವಿಟ್ಟು ಸ್ವಲ್ಪ ಉಪದೇಶ ಮಾಡುತ್ತೀರಾ, ಎಂದು ಕೇಳಿದಳು. ಆಗ ಸಾಧುಗಳು ಕೆಲವು ಕ್ಷಣ ಅವಳನ್ನು ದಿಟ್ಟಿಸಿ ನೋಡಿ, ತಾಯಿ, ಈ ಸಮಯದಲ್ಲಿ, ಅದನ್ನೆಲ್ಲಾ ಮಾಡಲಾಗದು. ಈಗ ಸಮಯ ಬಹಳವಾಗಿ ಹೋಗಿದೆ, ನಾಳೆ ಸ್ವಲ್ಪ ಬೇಗ ಬಂದಾಗ ತಿಳಿಸುತ್ತೇನೆ ಎಂದು ಹೇಳಿ ಹೊರಟೇ ಬಿಟ್ಟರು.
ಮರುದಿನ ಈ ಹೆಂಗಸು ಮಹಾತ್ಮರು ತನ್ನ ಮನೆಗೆ ಬಂದೇ ಬರುತ್ತಾರೆಂದು ಬೇಗ ಎದ್ದು ಮನೆಯನ್ನೆಲ್ಲ ಶುಚಿಗೊಳಿಸಿ ತಾನು ಸ್ನಾನ ಮಾಡಿ, ಸಾಧುಗಳಿಗಾಗಿ ಘಮಘಮಿಸುವ ರುಚಿಕರವಾದ ಪಾಯಸವನ್ನು ಮಾಡಿದ್ದಳು. ಅದರ ಪರಿಮಳ ಮನೆಯನ್ನೆಲ್ಲಾ ತುಂಬಿತ್ತು. ಸ್ವಾಮಿಗಳ ಬರುವಿಕೆಯನ್ನೇ ನಿರೀಕ್ಷಿಸುತ್ತಾ ಬಾಗಿಲ ಬಳಿಯೇ ಕುಳಿತಿದ್ದಳು.
ಸುಮಾರು ಮಧ್ಯಾಹ್ನದ ಸಮಯದಲ್ಲಿ ಸಾಧುಗಳು, "ಭವತಿ ಭಿಕ್ಷಾಂ ದೇಹಿ", ಎನ್ನುತ್ತಾ ಭಿಕ್ಷಾ ಪಾತ್ರೆಯನ್ನು ಹಿಡಿದು ಬಂದರು. ಅವರಿಗಾಗಿ ಮಾಡಿದ ಪಾಯಸವನ್ನು ಅದಕ್ಕೆ ಸುರಿಯಬೇಕೆಂದು ಮುಂದೆ ಬಗ್ಗಿ ನೋಡಿದಾಗ, ಪಾತ್ರೆ ತುಂಬಾ ಕೊಳಕಾಗಿತ್ತು. ಅದರಲ್ಲಿ ಕಸ ಕಡ್ಡಿ ಮಣ್ಣುಗಳೆಲ್ಲಾ ಇದ್ದವು. ಇವಳು ಭಿಕ್ಷೆ ಹಾಕಲು ಹಿಂದೆ ಮುಂದೆ ನೋಡುತ್ತಿದ್ದಾಗ, ಪರ್ವಾಗಿಲ್ಲ ತಾಯಿ, ಇದರಲ್ಲೇ ಹಾಕು ಎಂದರು ಸಾಧುಗಳು. ಛೇ, ಛೇ ಇಷ್ಟು ಒಳ್ಳೆಯ ಪಾಯಸವನ್ನು ಇಂಥ ಕೊಳಕು ಪಾತ್ರೆಯಲ್ಲಿ, ಹಾಕುವುದೇ? ಅದನ್ನು ಕೊಡಿ ಸ್ವಲ್ಪ ತೊಳೆದು ತರುತ್ತೇನೆ, ಎಂದು ಅವರ ಕೈಯಿಂದ ಭಿಕ್ಷಾ ಪಾತ್ರೆ ಕಿತ್ತುಕೊಂಡು ಒಳಗೆ ಹೋಗಿ ಅದನ್ನು ಸ್ವಚ್ಛಮಾಡಿ, ಒರೆಸಿ, ಅದರ ತುಂಬಾ ಪಾಯಸವನ್ನು ಹಾಕಿ ತಂದುಕೊಟ್ಟು, ಅವರಿಗೆ ನಮಸ್ಕರಿಸಿದಳು. ಅವರು ಆ ಪಾತ್ರೆಯನ್ನು ತೆಗೆದುಕೊಂಡು ಅವಳಿಗೆ ಆಶೀರ್ವದಿಸಿ ಮುಂದೆ ಹೊರಟರು.
ಗೌಡತಿ, ಅವರನ್ನು ತಡೆದು, ಗುರುಗಳೇ, ಇಂದು ನನಗೆ ಉಪದೇಶ ನೀಡುತ್ತೇನೆ ಎಂದು ಹೇಳಿದ್ದೀರಲ್ಲ? ಎಂದು ನೆನಪಿಸಿದಳು. ಆಗ ಅವರು, ಉಪದೇಶ ಆಯಿತಲ್ಲಮ್ಮ, ಎಂದರು. ಹೌದೇ, ಯಾವಾಗ ಏನು ಉಪದೇಶ ಮಾಡಿದಿರಿ? ಎಂದು ಆಶ್ಚರ್ಯದಿಂದ ಕೇಳಿದಳು. ಈಗ ತಾನೆ, ನೀನೇ ಮಾಡಿ ತೋರಿಸಿದೆಯಲ್ಲ! ಕೊಳಕು ಪಾತ್ರೆಯಲ್ಲಿ ಶುದ್ಧ ವಸ್ತುಗಳನ್ನು ಹಾಕಬಾರದೆಂದು, ಎಂದರು. ಅವಳು ಆಶ್ಚರ್ಯದಿಂದ ಅವರ ಮುಖವನ್ನೇ ನೋಡುತ್ತಿದ್ದಳು. ನಿನ್ನ ಮನಸೆಂಬ ಪಾತ್ರೆಯಲ್ಲಿ ದ್ವೇಷ, ಅಸೂಯೆ, ಅಹಂಕಾರ, ಕೋಪ ತಾಪಗಳೆಂಬ, ಕೊಳಕು ತುಂಬಿದೆ. ಅತ್ಯಂತ ಪರಿಶುದ್ಧವಾದ ಪರಮಾತ್ಮನ ಚಿಂತನೆ ಎಂಬ ಸಿಹಿ ಪಾಯಸವನ್ನು ಅದರಲ್ಲಿ ಹೇಗೆ ಸುರಿಯಲು ಸಾಧ್ಯ? ಆದ್ದರಿಂದ ನಿನ್ನ ಮನಸ್ಸೆಂಬ ಪಾತ್ರೆಯನ್ನು ಮೊದಲು ಶುದ್ಧ ಮಾಡು, ಆಗ ಭಕ್ತಿ ತಾನೆ ತಾನಾಗೇ, ಅದರಲ್ಲಿ ಇಳಿದು, ನಿನಗೆ ಭಗವಂತನ ದರ್ಶನವಾಗುತ್ತದೆ ಎಂದು ಹೇಳಿ ಅಲ್ಲಿಂದ ಮುಂದೆ ನಡೆದರು ಸಾಧುಗಳು. ಅವರ ಮಾತು ಅವಳ ಮನದೊಳಗೆ ನಾಟಿ, ದುಃಖ ಉಕ್ಕಿ ಬಂತು. ಮುಂದೆ, ತನ್ನ ಮನಸ್ಸನ್ನು ತಿದ್ದಿಕೊಳ್ಳುವ ಪ್ರಯತ್ನವನ್ನು ನಡೆಸಿದಳು.
ಸಾಧುಗಳ ಈ ಮಾತು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ಕೆಲವರ ಬಾಯಲ್ಲಿ ಯಾವಾಗಲೂ ಭಗವಂತನ ನಾಮಸ್ಮರಣೆಯ ಮಾತೇ ಬರುತ್ತಿರುತ್ತದೆ. ಆದರೆ ಮನಸ್ಸಿನೊಳಗೆ ಮಾತ್ರ, ಅಸೂಯೆ, ಅಹಂಕಾರ, ದ್ವೇಷವೆಂಬ ಬರೀ ಕೊಳಕೇ ತುಂಬಿರುತ್ತದೆ. ಮೇಲೆ ಮಾತ್ರ ತಾವು, ಪರಮಾತ್ಮನ ಮಹಾ ಉಪಾಸಕರು / ಭಕ್ತರೆಂದು ತೋರುತ್ತಾ, ಆ ಭಗವಂತನಾಗಲೇ ಇವರಿಗೆ ದರ್ಶನ ಕೊಟ್ಟಿರುವಂತೆ ಮಾತನಾಡುತ್ತಿರುತ್ತಾರೆ. ತಮ್ಮ ಮನಸ್ಸಿನ ಕೊಳಕು ಇವರಿಗೆ ಕಾಣಿಸಿರುವುದೇ ಇಲ್ಲ.
ಮನುಷ್ಯನ ಮುಕ್ತಿಗೂ, ಬಂಧನಕ್ಕೂ, ಮನಸ್ಸೇ ಮೂಲ ಕಾರಣ. ನಮ್ಮ ಮನಸ್ಸನ್ನು ಶುದ್ಧವಾಗಿಟ್ಟಿ ಕೊಳ್ಳಬೇಕು. ಹಾಗಾಗಿ ನಾವು ನಮ್ಮ ಮನಸ್ಸಿನತ್ತ ಸ್ವಲ್ಪ ಗಮನ ಹರಿಸಲೇ ಬೇಕು.
- ಕುಮಾರ್ ಜಂತಲಿ ಬೆಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ