ಅಯೋಧ್ಯೆಯ ಹೋರಾಟದ ತುಣುಕುಗಳು ಇತಿಹಾಸವನ್ನೇ ಸೃಷ್ಟಿಸಿದೆ : ನ. ಸೀತಾರಾಮ
ಪುತ್ತೂರು: ಅಯೋಧ್ಯೆಯ ಹೋರಾಟದ ಕಥೆಗಳನ್ನು ಆಲಿಸುವಾಗ ಮನದಲ್ಲಿ ಸಂತಸ ಮೂಡುತ್ತದೆ. ಆದರೆ ರಾಷ್ಟ್ರಗಳ ನಡುವೆ ನಡೆಯುವ ಹೋರಾಟಗಳು ಬೇಸರವೆನಿಸುತ್ತದೆ. ಸನಾತನ ಧರ್ಮವನ್ನು ಗಟ್ಟಿ ಮಾಡುವಂತಹ ಯುದ್ಧದ ವಾರ್ತೆಗಳು ಆತ್ಮಾನಂದದ ಕಡೆಗೆ ಕೊಂಡೊಯ್ಯುತ್ತದೆ. ಪ್ರಭು ಶ್ರೀರಾಮನ ಜನ್ಮಸ್ಥಳದ ಚ್ಯುತಿಗೆ ಇದ್ದ ಸವಾಲುಗಳು ಇಂದು ನಮ್ಮ ಜೀವನಕ್ಕೆ ಸ್ಫೂರ್ತಿ ಹಾಗೂ ವಿಶ್ವಕ್ಕೆ ರಾಮನ ಮೌಲ್ಯಗಳನ್ನು ಸಾರಿ ಹೇಳುತ್ತವೆ. ಹೀಗೆ ಅಯೋಧ್ಯೆಯ ಹೋರಾಟದ ತುಣುಕುಗಳು ಇತಿಹಾಸವನ್ನೇ ಸೃಷ್ಟಿಸಿದೆ ಎಂದು ಕರ್ನಾಟಕ ಪ್ರಾಂತದ ಸಹಸೇವಾ ಪ್ರಮುಖ್ ನ. ಸೀತಾರಾಮ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಐಟಿ ಕ್ಲಬ್, ವ್ಯವಹಾರ ಆಡಳಿತ ಸಂಘ, ನೇಚರ್ ಕ್ಲಬ್, ರೋವರ್ಸ್ ರೇಂಜರ್ಸ್ ಮತ್ತು ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ನಡೆದ ವಿದ್ಯಾರಾಮ ಸ್ಮರಣೆಯ ಜೊತೆಗೆ “ಅಯೋಧ್ಯೆಯ ಹೋರಾಟ” ಎಂಬ ವಿಚಾರವನ್ನು ಪ್ರಸ್ತುತ ಪಡಿಸಿದರು.
ಭಾರತೀಯರಾದ ನಾವು ನೀರಲ್ಲಿಯೂ ದೈವೀ ಸ್ವರೂಪ ಕಾಣುತ್ತೇವೆಯೇ ಹೊರತು ವೈಜ್ಞಾನಿಕತೆಯನ್ನಲ್ಲ. ರಾಮ ಎಲ್ಲರಲ್ಲಿಯೂ ಇದ್ದಾನೆ. ಪ್ರತೀ ಊರಿನಲ್ಲಿ ಶ್ರೀರಾಮನ ಭಜನಾ ಮಂದಿರ, ದೇವಾಲಯಗಳು ಇದೆ. ಆದರೆ ಈ ಹಿಂದೆ ಶ್ರೀರಾಮನ ಜನ್ಮ ಭೂಮಿಯ ಬಗ್ಗೆ ಪ್ರಶ್ನಿಸಿದರೆ ಯಾರೊಬ್ಬರಿಗೂ ತಿಳಿದಿರಲಿಲ್ಲ. ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯಲ್ಲಿ ಭಾವಪೂರ್ಣವಾಗಿ ತೊಡಗಿಸಿಕೊಳ್ಳಲು ನಾವು ಪೂರ್ವಜನ್ಮದ ಪುಣ್ಯ ಮಾಡಿದ್ದೇವೆ. ಭವ್ಯ ಭಾರತದ ಸನಾತನ ಹಿಂದೂ ಧರ್ಮವನ್ನು ಸಾರಿ ಹೇಳುವಲ್ಲಿ ಯುವ ಪೀಳಿಗೆಯ ಪಾತ್ರ ಮಹತ್ವದ್ದು. ಅಯೋಧ್ಯೆಗೆ ಕರಸೇವಕರಾಗಿ ತೆರಳಿದ ಮೊಟ್ಟ ಮೊದಲ ತಂಡ ಅದು ನಮ್ಮ ಮಂಗಳೂರು ವಿಭಾಗ ಎಂಬುದು ಹೆಮ್ಮೆಯ ಸಂಗತಿ ಎಂದು ತಮ್ಮ ಕರಸೇವೆಯ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪರೀಕ್ಷಾಂಗ ಕುಲಸಚಿವ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಹೆಚ್ ಜಿ ಶ್ರೀಧರ್ ವಹಿಸಿದ್ದರು. ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ ಎನ್, ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್, ವಿಶೇಷ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯಕ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ನೇಹಾ ಸ್ವಾಗತಿಸಿ, ಪ್ರಸಾದಿನಿ ವಂದಿಸಿದರು. ತೃತೀಯ ಬಿಎ ವಿದ್ಯಾರ್ಥಿನಿ ಅನನ್ಯ ಕಾಟೂರು ಕಾರ್ಯಕ್ರಮವನ್ನು ನಿರೂಪಿಸಿದರು.
ದೀಪ ಪ್ರಜ್ವಲನೆ:
ಶ್ರೀ ರಾಮೋತ್ಸವ ಎರಡನೇ ದಿನದ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳು ಹಾಗೂ ಕಾಲೇಜಿನಲ್ಲಿ 6 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಗಿರಿಜಾ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಕೊನೆಯಲ್ಲಿ ರಾಮ ಭಾವಪೂಜೆಯ ಮೂಲಕ ಕಾರ್ಯಕ್ರಮವು ಸಂಪನ್ನಗೊಂಡಿತು.
ಸನ್ಮಾನ:
ಇಂದಿನ ಕಾರ್ಯಕ್ರಮದಲ್ಲಿ ಗ್ರಂಥಾಲಯ ಸಹಾಯಕ ಶಿವಕುಮಾರ್ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಪ್ರಯೋಗಾಲಯ ಸಹಾಯಕ ಗಣೇಶ್. ಪಿ ಇವರಿಗೆ ಗೌರವ ಸಮರ್ಪಿಸಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ