‘ಶಕ್ತಿಇವಾಹ್ 2.0’ ಅಂತಾರಾಷ್ಟ್ರೀಯ ವಿದ್ಯುತ್ ವಾಹನ ತಂತ್ರಜ್ಞಾನ ಕುರಿತು 5 ದಿನಗಳ ಕಾರ್ಯಾಗಾರ
ನಿಟ್ಟೆ : ವಿದ್ಯುತ್ ಚಾಲಿತ ವಾಹನಗಳ ಬಳಕೆಯಿಂದ ನಮ್ಮ ಪರಿಸರದ ಸಂರಕ್ಷಣೆಗೆ ಹಾಗೂ ಇತರೆ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಅಪಾರ ನೆರವು ಲಭಿಸುತ್ತದೆ. ಸಾಂಪ್ರದಾಯಿಕ ಪೆಟ್ರೋಲ್ ಹಾಗೂ ಡೀಸೆಲ್ ಇಂಧನಗಳಿಂದ ಚಲಿಸುವ ವಾಹನಗಳಿಂದಾಗುತ್ತಿರುವ ಪರಿಸರದ ಮೇಲಣ ದುಷ್ಪರಿಣಾಮವನ್ನು ನಾವು ಗಣನೀಯವಾಗಿ ನಿಯಂತ್ರಿಸಲು ವಿದ್ಯುತ್ ವಾಹನಗಳ ಅಧಿಕ ಬಳಕೆ ಅನಿವಾರ್ಯ. ನಮ್ಮ ಭಾರತದಲ್ಲಿ ಕೇವಲ ಒಂದು ದಶಕದ ಹಿಂದೆ ವಿದ್ಯುತ್ ಚಾಲಿತ ವಾಹನ ಅಂದರೆ ಕೇವಲ ನೋಟಕ್ಕೆ ಮಾತ್ರ ಎಂಬ ಭಾವನೆ ಇತ್ತು. ಆದರೆ ಕ್ರಮೇಣ ವಿದ್ಯುತ್ ವಾಹನಗಳ ಮಾರಾಟದಲ್ಲಿ ಶೇಕಡ 82ರಷ್ಟು ಏರಿಕೆಯಾಗಿರುವುದು ಅವುಗಳ ಜನಪ್ರಿಯತೆಗೆ ಸಾಕ್ಷಿ’, ಎಂದು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ನುಡಿದರು.
ಅವರು, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗಗಳ ನೇತೃತ್ವದಲ್ಲಿ ಆಯೋಜಿಸಿದ್ದ ‘ಶಕ್ತಿಇವಾಹ್ 2.0’ ಕುರಿತಾದ ಅಂತಾರಾಷ್ಟ್ರೀಯ ವಿದ್ಯುತ್ ವಾಹನ ತಂತ್ರಜ್ಞಾನ ಕುರಿತಾದ 5 ದಿನಗಳ ಕಾರ್ಯಾಗಾರದ ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ‘ಬ್ಯಾಟರಿ ತಂತ್ರಜ್ಞಾನದಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದು ವಿದ್ಯುತ್ ವಾಹನಗಳ ಬೆಲೆಯನ್ನು ಕಡಿತಗೊಳಿಸುವ ದಿಶೆಯಲ್ಲಿ ಈ ಕಾರ್ಯಾಗಾರ ಸಾಕಷ್ಟು ಬೆಳಕು ಚೆಲ್ಲಿದೆ’, ಎಂದರು.
ಐದು ದಿನಗಳ ಮುನ್ನ ಈ ಕಾರ್ಯಾಗಾರವನ್ನು ಉದ್ಘಾಟಿಸಿದ್ದವರು ಟಾಟಾ ಎಲೆಕ್ಸಿಯ ಹಿರಿಯ ತಾಂತ್ರಿಕ ನಿರ್ವಾಹಕ ಡಾ. ಗೋಪಿನಾಥ್ ಸೆಲ್ವರಾಜ್ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಡಾ. ಎಸ್. ದಾಸಪ್ಪ. ಎಲೆಕ್ಟ್ರಿಕ್ ವಾಹನ ತಯಾರಿಕಾ ಘಟಕಗಳ ಹಲವಾರು ತಂತ್ರಜ್ಞರು ಕಾರ್ಯಾಗಾರವನ್ನುದ್ದೇಶಿಸಿ ತಜ್ಞ ಉಪನ್ಯಾಸಗಳನ್ನು ನೀಡಿದ್ದರು. ದೇಶದಾದ್ಯಂತ ಆಗಮಿಸಿದ್ದ 140ಕ್ಕೂ ಹೆಚ್ಚು ತಂತ್ರಜ್ಞರೂ ವಿದ್ಯಾರ್ಥಿಗಳೂ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಕಾರ್ಯಗಾರದ ಅಂಗವಾಗಿ ವಿದ್ಯುತ್ ವಾಹನಗಳ ಎಕ್ಸ್ಪೆÇ ಕೂಡ ಇತ್ತು. ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ತಯಾರಿಸುವ ಅನೇಕ ಘಟಕಗಳು ಈ ಎಕ್ಸ್ಪೆÇೀನಲ್ಲಿ ಪಾಲ್ಗೊಂಡಿದ್ದವು.
ಈ ಕಾರ್ಯಾಗಾರದಲ್ಲಿ ಸಂಸ್ಥೆಯ ಅಕಾಡೆಮಿಕ್ ಡೀನ್ ಡಾ|| ವಿ. ಶ್ರೀಧರ್; ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ. ಪ್ರೆಮಿಳಾ ಮನೋಹರ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಕಪಿಲನ್, ಪ್ರಾಧ್ಯಾಪಕರಾದ ಡಾ. ವಸುಧಾ ಹೆಗ್ಡೆ, ಡಾ. ಸಮನ್ವಿತಾ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ